Home / ಕವನ / ಕವಿತೆ / ಕ್ರೀಟದೇವಿ

ಕ್ರೀಟದೇವಿ

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ
ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,-
ಶರದೃತುವಿನಾರಂಭದಲ್ಲಿ!

ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ,
ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ
ಸಿಂಗರಿಸಿ ಮ೦ಜಿನಂತಹ ಸೀಕರವನೇಳು ಬಣ್ಣಗಳಿಂದ.
ದಿಕ್ಕಿಲ್ಲದೆ ಬಳ್ಳಿವಳ್ಳಿಯಾಗಿ ತೇಲುತಿದೆ ಬೆಳ್ಳಿಯ ಬುರುಗು!

ನೋಡುತೀ ಬೆಳ್ಳಿಯ ಕೆನೆಯನು-ಫೇನವನು-
ಹುಟ್ಟುಕಡೆಯಲೊಡೆದು ಬರುವ ವಿಮಲೋದಕವನು-
ನೋಡಿದಲ್ಲೆಲ್ಲ ಕೆನೆವಾಲಂತೆ ಥಳಥಳಿಸುವ ಸಮುದ್ರವನು,-
ನೆನೆಯುವೆನು ಹಿರಿಯರೊರೆದೊಂದು ಮಾತ:
ಕ್ಷೀರಸಾಗರವದು ಕನಸಲ್ಲ! ಕಣ್ಣಿನ ಬದುಕು!
ಸೂರ್ಯನಾರಾಯಣನ ಪದತಲದಿ ಪವಡಿಸಿಹ ಕ್ಷೀರಸಾಗರವ ಕಾಣು!

ಈ ಹಾಲ್ಗಡಲ ಹೃದಯ ಕಮಲವು ಬಿರಿಯೆ ಹಿಂದೊಮ್ಮೆ
ಮೆಲ್ಲನದರೊಳಗಿಂದ ಜನಿಸಿದೆ ಮಾಲಕುವಿುಯಂತೆ:
ವರಿಸಿದೆ ದೇವನ, ಹರಿಸಿದೆ ನಿನ್ನಣುಗರನು: ಓ ಕ್ರೀಟದೇವಿ!
ನಿನ್ನರಿಗಳಳಿದರೆಲೆ ಕ್ರಿಮಿಕೀಟಕಗಳಂತೆ!

ಹಬ್ಬಿತು ನಿನ್ನ ಕೀರ್ತಿ ಸಪ್ತಸಮುದ್ರಗಳ ದಾಟಿ;
ಉಳಿದ ನೆಲದಣುಗರು ನಿದ್ದೆ ತಿಳಿದೇಳುವ ಮುನ್ನ
ಕಟ್ಟಿದರು ನಿನ್ನ ಕುವರರು ಕೊತ್ತಳದ ಕೋಟೆಗಳನು,-
ಜನರ ಕಟ್ಟುಪಾಡನು, ಸುಖವನು, ಶಾಂತಿಯನು,-
ಆಳಿದರು ನೂರು ಪಟ್ಟಣಗಳನು, ಬಾಳಿದರು ವೈಭವದಿ,-
ಹೋಮರನು ಒಪ್ಪುವಂತೆ!

ಇ೦ದಿಗೋ! ಆವರಿಸಿಹುದು ಹಿಮವು ನಿನ್ನ ಪರ್ವತಾವಳಿಗಳನ್ನು:
ಮಣ್ಣುಗೂಡಿಹುದಿಂದು ಗಳಿಸಿದ ಘನೈಶ್ವರ್ಯವೆಲ್ಲ:
ನೆಟ್ಟಿಹರು ಬೆಳಕು-ನಿಲ್ಗಂಬವನೊಂದ ನಿನ್ನ ತಲೆಯ ಮೇಲೆ,
ಮರೆಯಾಗದಿರಲೆಂದು ಹಿಂದೆ ನೀನೂರಿದಾ ನೆನಹು.
ಸಾಮ್ರಾಜ್ಯ ಮದದಿ ನಿನ್ನ ಲೆಕ್ಕಿಸದೆ ಮುಂದೆ ಸಾಗಿರುವವರ
ಸೊಕ್ಕಿಳಿಯಬಹುದೆಂದು ಮಂಜುದುಟಿಯ ಮುಗುಳ್ನಗೆಯಿಂದ ಸೂಚಿಸಿ
ಕರಾಳ ಕಾಲದುಶ್ಶಾಸನನ ತೋಳ್‌ ತಕ್ಕೆಗೆ ಸಿಲುಕಿ ಬಣ್ಣಗುಂದಿ
ಬಿಳುಪೇರಿ ನಿಲ್ಲಲಾರದೆ ನಿಂತಿರುವೆ ಮರೆಮಾಚಿ ನಾಚಿ ಓ! ಕ್ರೀಟದೇವಿ!
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...