ಶಿವ-ಶಕ್ತಿಯ ಸಮ್ಮಿಲನದಿ ಕಿಡಿ ಸೂಸುವ ಬೆಳಕೆ
ಮನ ಮಂದಿರ ಜಗ ಬೆಳಗಲು ಬಾರೆನ್ನಯ ಮನಕೆ.
ರಸವಿಲ್ಲದ ಬರಿ ಬಾಳಿಗೆ ಕಡು ಹೇಸಿದೆ ಜೀವ
ಕಾರುಣ್ಯದ ನಿನ್ನೊಲವಿಗೆ ಕಾತರಿಸಿದೆ ಭಾವ.
ದಿನ ದಿನದಲಿ ತನುಮನದಲಿ ಪರಿಪರಿಯಲ್ಲಿ ಮರುಗಿ
ಕರುಳಿನ ಕರೆ ಮೊರೆಯಿಡುತಿರೆ ಕರುಳರಿಯದೆ ಕರಗಿ.
ನಿನ್ನೊಲುಮೆಯ ಎದೆ ಹಾಲಿನ ಮುಂದಾವುದು ಬೇಡ
ಬಾಳೊರತೆಯ ನಿರ್ಝರಿಣಿಯು ನಿನ್ನಿಂದಲೆ ನೋಡ.
ಬಾನ್ನೀಲಿಯ ಸೀಮಂತಿನಿ ಆಕಾರದ ಗಂಗೆ
ಮಾತಿಲ್ಲದ ಮಂದಾಕಿನಿ ಹರಿದೈತರು ತುಂಗೆ.
ಬೆಳುದಿಂಗಳ ಹೊಳೆ ಹರಿದಿರೆ ಈ ಭೂಮಿಯ ಸೇರಿ
ಆ ಹೊಳೆಯಲಿ ನೀ ಬರುವೆಯ ಹೊಂದೋಣಿಯನೇರಿ.
ಮಳೆ ಮುಗಿಲಿಗೆ ಚಳಿ ಚಿಮುಕಲು ಅದರಾತ್ಮವೆ ಕರಗಿ
ಇಳೆಗಿಳಿದಿರೆ ಹನಿಹನಿಯಲಿ ಬಾರೊಡನೆಯ ಸಾಗಿ.
ಹೂ ಹೂವಿನ ಮಕರಂದದ ರಸ ಜೇನನು ನೀಡಿ
ರಸಜೀವಿಯ ಎದೆಯರಳಿಸು ಸುಳಿಗಾಳಿಯ ಕೂಡಿ.
ರಸರೂಪಸಿ ಕಾವ್ಯಾಂಗನೆ ಕುಣಿದಾಡಲು ತಾನ
ಸಿರಿ ಕಿಂಕಿಣಿ ಝಣ ಝಣ ಝಣ-ನನ್ನಾತ್ಮವೆ ಮೌನ.
ರಸವಾಗಲಿ ವಿಷವಾಗಲಿ ನಿನ್ನೊಲುಮೆಯೆ ಬೇಕು
ಶ್ರೀಪೂರ್ಣೆಯೆ ಎಂದಾದರು ನಿನ್ನುಡಿಯೇ ಸಾಕು!
*****

















