ನನ್ನೆಳೆಯ ದಿನಗಳಲ್ಲಿ ಕೂಡಿ ಹಾಡಿದ ತಂಗಿ
ನನ್ನ ಕಣ್ಮರೆಯಾಗಿ ಹೋದೆಯಲ್ಲ;
ಮಾತು ಮಾತಿಗೆ ಹೂವ ಸುರಿಸಿ ನಗಿಸುವ ಜೀವಿ
ಬಾಳುದ್ದಕೂ ನೆನವೆ ನಿಂತಿತಲ್ಲ.
ಭೂದೇವಿ ಮಂದಿರದ ಗರ್ಭಗುಡಿ ಬಾಗಿಲಲಿ
ತೋಳ ತೊಟ್ಟಿಲದಲ್ಲಿ ಹೊತ್ತು ನಿಂದು
ದೈನ್ಯದಲಿ ಕೈಚಾಚಿ ಅವಳೆದೆಯ ಉಡಿಯಲ್ಲಿ
ಮಲಗಿಸಿದೆ ಕಾಪಾಡು ನಿನ್ನದೆಂದು.
ಕಾಲನಾರಾಧನೆಯ ಮೊದಲನೆಯ ಬಲಿದಾನ
ನೀನಾದೆ ಶ್ರೀಗೌರಿ ನೆಲವ ಸೇರಿ;
ನಮಗೆಲ್ಲ ಅಗಲಿಸಿತು ಮಣ್ಣಿನಲಿ ಮಲಗಿಸಿತು
ನಿನ್ನುಸಿರ ರಸವನ್ನು ಸಾವು ಹೀರಿ.
ಕಣ್ಣೀರಿನೆಣ್ಲೆಯಲಿ ಆಶೆ ದೀಪವ ಉರಿಸಿ
ನಿನ್ನ ಗೋರಿಯ ಮೇಲೆ ಇಟ್ಟು ಬಂದೆ.
ನಿನ್ನಾಸೆ ನನ್ನಾಸೆ ಕೈಗೂಡಿ ಬರಲೆಂದು
ನಿನ್ನ ಆಶೀರ್ವಾದ ಹೊತ್ತು ತಂದೆ.
*****

















