Home / ಕವನ / ಕವಿತೆ / ರಾತ್ರಿಗೆ

ರಾತ್ರಿಗೆ

ನಿನ್ನ ನಾನು ಪ್ರಿತಿಸುವೆನು
ಶ್ಯಾಮ ಮಧುರ ಯಾಮಿನಿ
ನಿನಗಾಗಿಯೆ ಹಾತೊರೆವೆನು
ಸ್ವಪ್ನ ಲೋಕ ಸ್ವಾಮಿನಿ.

ನೀ ಬಂದರೆ ಇಳೆಗಿಳಿವುದು
ಅತುಲ ದಿವ್ಯ ಶಾಂತಿಯು
ನಿನ್ನಿರುಳಲಿ ಕರುಳಿಗೆಲ್ಲಿ
ಸಂಸಾರದ ಭ್ರಾಂತಿಯು

ಉಕ್ಕಿಸುತ್ತ ಕಾಳ್ಗಡಲನು
ಬ್ರಹ್ಮಾಂಡವ ಮುತ್ತಿದೆ
ಬಾನ್ಬಯಲಲಿ ಹಣ್ಣಿಸಿರುವ
ರವಿ ತೇಜವ ಮುಕ್ಕಿದೆ.

ಅಂಧಂತಮವೆಂದು ನಿನ್ನ
ಕರೆದರೇನು ರಜನಿಯೆ
ನಿನ್ನೊಡಲಿದೆ ದೀಪ್ತಿಮಂತ-
ತಾರಾಗೃಹ ರಾಶಿಯೆ.

ಪ್ರತಿ ಜೀವದ ಪ್ರತ್ಯಾಸೆಯು
ನಿನ್ನೆಡೆಯಲಿ ಬೆಳೆಯಿತು
ಈ ಲೋಕವು ಸ್ವರ್ಲೋಕದ
ಸುಖ ಸ್ವಪ್ನವ ಸವಿಯಿತು.

ಅಜ್ಞಾನದ ಕದಡೆಲ್ಲವು
ನೀ ಕರುಣಿಸೆ ತಿಳಿಯಿತು
ನಿನ್ನುಡಿಯಲಿ ಋಷಿವರರಿಗೆ
ಸದ್ದರ್ಶನ ದೊರೆಯಿತು.

ಅರ್ತರ ಮೊರೆ, ದೀನರ ದಯೆ,
ಸೋತವರಿಗೆ ಆಸರೆ
ಮಾದೇವನು ಮರೆತವರಿಗು
ನೀ ಮಮತೆಯ ಹೆದ್ದೊರೆ.

ಮಾದಾಯಿಯೆ ನಿನ್ನೊಲವಿನ
ಹಾಲ್ಬಲವನು ಪಡೆಯಲು.
ವಿಸ್ತಾರಿತ ಹೃತ್ಕುಮುದದ
ಹೂಸೊದೆಯನು ಸವಿಯಲು

ಈ ಮೌನದ ಹಿಮಶೃಂಗಕೆ
ಈ ಶಾಂತಿಯ ಗಂಗೆಗೆ
ಓಡೋಡುತ ನಾ ಬಂದೆನು
ತೃಷಿತಾತ್ಮದ ತುಷ್ಟಿಗೆ.

ನೀ ಬೀಸಿದ ನಿದ್ದೆಯ ಬಲೆ
ಸವಿಕನಸಿನ ಸಂಕಲೆ
ಹರಿದೊಗೆದೆನು ಜಾಗರಿಸುತ-
ಲೀನನಾದೆ ನಿನ್ನೊಳೆ.

ಇಲ್ಲಿ ನಾನು ಕಾಣಲಿಲ್ಲ
ನಿಜ ಮರೆಸುವ ಕಲೆಯನು
ಸುಳ್ಳು ಸುಖದ ಸವಿ ಮಬ್ಬಿನ
ಸೆರೆಹಿಡಿಯುವ ಬಲೆಯನು

ನಿಂತೆ ನಿನ್ನ ಈ ವಿಶಾಲ-
ಅಂತರಂಗ ಸಂಮುಖ
ಕಂಡೆ ನಾನು ಈ ಭುವನದ
ಭವ್ಯವಾದ ಶ್ರೀಮುಖ.

ಹೃದಯದಲ್ಲಿ ಹುದುಗಿರಿಸಿದ
ಭಾವಲತೆಯು ನೆಗೆದಿತು
ಹೂವಿಸುತ್ತ ತೇಲಿಸಿತೊ
ಗಂಧ ಕವನ ಮೆಲ್ಲಿತು.

ಜಗದ ಗಾಯದಿಂದ ಬಸಿವ
ಕರುಣಾಜಲ ಹೊಮ್ಮಿತು
ಎಂಟು ದಿಕ್ಕಿನಿಂದ ಹರಿವ
ಗಾಳಿಯಲ್ಲಿ ತುಂಬಿತು.

ಪತಿತ ಶಪ್ತ ಪಾಪಾತ್ಮರ
ನಿಟ್ಟುಸಿರೂ ಮೊರೆಯಿತು
ನಿನ್ನದೆ ಬಾಗಿಲವ ತಟ್ಟಿ
ಆಸರೆಯನು ಕೇಳಿತು.

ಮುರಿದೊಲವಿನ ಕನಿಕರವೂ
ನಿನ್ನ ಮುಖದಿ ಮೂಡಿತು
ನೊಂದವರಾ ಕಣ್ಣೀರೂ
ನಿನ್ನೆವೆಯಿಂದಿಳಿಯಿತು.

ಕರುಣೆಯಲ್ಲಿ ಕಂಡರಿಸಿದ
ಶ್ಯಾಮನ ಮಧುಮೂರ್ತಿಯು
ನಿನ್ನದೆಯಲಿ ಮಿಂಚಿತದೊ
ಅತಿ ಬಂಧುರ ಜ್ಯೋತಿಯು.

ಸುಳಿಗಾಳಿಯ ಕೊರಳಿನಲ್ಲಿ
ಮುರಲಿ ಗೀತ ಹೊಮ್ಮಿತು
ಜಗದಾತ್ಮದ ಮೂಕ ಮೌನ
ಪ್ರಾರ್ಥನೆಯಲ್ಲರಳಿತು

ಬಾನ್ನೆಲದಲಿ ಸೂಸಿತೊಂದು
ಭಾವಲಹರಿಯದ್ಭುತ
ಪಂಚಕರಣ ಹರಣಗಳನು
ಕಣ ಕಣದಲಿ ಮೀಟುತ

ನವಲೋಕದ ನವತೇಜದ
ಬೀಜಾಂಕುರವಾಯಿತು
ಆ ವಿಭವದ ಉನ್ಮಾದವು
ಎಲ್ಲೆಲ್ಲೂ ತೋರಿತು.

ನನ್ನೆದೆಯನು ಮುಟ್ಟಿ ತಾಯೆ
ಆ ಆಸೆಯ ಚಿಗುರಿಸು
ಹಗೆ ಕೊಳೆಗಳ ತೊಳೆದು ತಾಯೆ
ಹೊಸ ಕೆಳೆಗಳ ಬೆಳೆಯಿಸು!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...