Home / ಕವನ / ಕವಿತೆ / ರಾತ್ರಿಗೆ

ರಾತ್ರಿಗೆ

ನಿನ್ನ ನಾನು ಪ್ರಿತಿಸುವೆನು
ಶ್ಯಾಮ ಮಧುರ ಯಾಮಿನಿ
ನಿನಗಾಗಿಯೆ ಹಾತೊರೆವೆನು
ಸ್ವಪ್ನ ಲೋಕ ಸ್ವಾಮಿನಿ.

ನೀ ಬಂದರೆ ಇಳೆಗಿಳಿವುದು
ಅತುಲ ದಿವ್ಯ ಶಾಂತಿಯು
ನಿನ್ನಿರುಳಲಿ ಕರುಳಿಗೆಲ್ಲಿ
ಸಂಸಾರದ ಭ್ರಾಂತಿಯು

ಉಕ್ಕಿಸುತ್ತ ಕಾಳ್ಗಡಲನು
ಬ್ರಹ್ಮಾಂಡವ ಮುತ್ತಿದೆ
ಬಾನ್ಬಯಲಲಿ ಹಣ್ಣಿಸಿರುವ
ರವಿ ತೇಜವ ಮುಕ್ಕಿದೆ.

ಅಂಧಂತಮವೆಂದು ನಿನ್ನ
ಕರೆದರೇನು ರಜನಿಯೆ
ನಿನ್ನೊಡಲಿದೆ ದೀಪ್ತಿಮಂತ-
ತಾರಾಗೃಹ ರಾಶಿಯೆ.

ಪ್ರತಿ ಜೀವದ ಪ್ರತ್ಯಾಸೆಯು
ನಿನ್ನೆಡೆಯಲಿ ಬೆಳೆಯಿತು
ಈ ಲೋಕವು ಸ್ವರ್ಲೋಕದ
ಸುಖ ಸ್ವಪ್ನವ ಸವಿಯಿತು.

ಅಜ್ಞಾನದ ಕದಡೆಲ್ಲವು
ನೀ ಕರುಣಿಸೆ ತಿಳಿಯಿತು
ನಿನ್ನುಡಿಯಲಿ ಋಷಿವರರಿಗೆ
ಸದ್ದರ್ಶನ ದೊರೆಯಿತು.

ಅರ್ತರ ಮೊರೆ, ದೀನರ ದಯೆ,
ಸೋತವರಿಗೆ ಆಸರೆ
ಮಾದೇವನು ಮರೆತವರಿಗು
ನೀ ಮಮತೆಯ ಹೆದ್ದೊರೆ.

ಮಾದಾಯಿಯೆ ನಿನ್ನೊಲವಿನ
ಹಾಲ್ಬಲವನು ಪಡೆಯಲು.
ವಿಸ್ತಾರಿತ ಹೃತ್ಕುಮುದದ
ಹೂಸೊದೆಯನು ಸವಿಯಲು

ಈ ಮೌನದ ಹಿಮಶೃಂಗಕೆ
ಈ ಶಾಂತಿಯ ಗಂಗೆಗೆ
ಓಡೋಡುತ ನಾ ಬಂದೆನು
ತೃಷಿತಾತ್ಮದ ತುಷ್ಟಿಗೆ.

ನೀ ಬೀಸಿದ ನಿದ್ದೆಯ ಬಲೆ
ಸವಿಕನಸಿನ ಸಂಕಲೆ
ಹರಿದೊಗೆದೆನು ಜಾಗರಿಸುತ-
ಲೀನನಾದೆ ನಿನ್ನೊಳೆ.

ಇಲ್ಲಿ ನಾನು ಕಾಣಲಿಲ್ಲ
ನಿಜ ಮರೆಸುವ ಕಲೆಯನು
ಸುಳ್ಳು ಸುಖದ ಸವಿ ಮಬ್ಬಿನ
ಸೆರೆಹಿಡಿಯುವ ಬಲೆಯನು

ನಿಂತೆ ನಿನ್ನ ಈ ವಿಶಾಲ-
ಅಂತರಂಗ ಸಂಮುಖ
ಕಂಡೆ ನಾನು ಈ ಭುವನದ
ಭವ್ಯವಾದ ಶ್ರೀಮುಖ.

ಹೃದಯದಲ್ಲಿ ಹುದುಗಿರಿಸಿದ
ಭಾವಲತೆಯು ನೆಗೆದಿತು
ಹೂವಿಸುತ್ತ ತೇಲಿಸಿತೊ
ಗಂಧ ಕವನ ಮೆಲ್ಲಿತು.

ಜಗದ ಗಾಯದಿಂದ ಬಸಿವ
ಕರುಣಾಜಲ ಹೊಮ್ಮಿತು
ಎಂಟು ದಿಕ್ಕಿನಿಂದ ಹರಿವ
ಗಾಳಿಯಲ್ಲಿ ತುಂಬಿತು.

ಪತಿತ ಶಪ್ತ ಪಾಪಾತ್ಮರ
ನಿಟ್ಟುಸಿರೂ ಮೊರೆಯಿತು
ನಿನ್ನದೆ ಬಾಗಿಲವ ತಟ್ಟಿ
ಆಸರೆಯನು ಕೇಳಿತು.

ಮುರಿದೊಲವಿನ ಕನಿಕರವೂ
ನಿನ್ನ ಮುಖದಿ ಮೂಡಿತು
ನೊಂದವರಾ ಕಣ್ಣೀರೂ
ನಿನ್ನೆವೆಯಿಂದಿಳಿಯಿತು.

ಕರುಣೆಯಲ್ಲಿ ಕಂಡರಿಸಿದ
ಶ್ಯಾಮನ ಮಧುಮೂರ್ತಿಯು
ನಿನ್ನದೆಯಲಿ ಮಿಂಚಿತದೊ
ಅತಿ ಬಂಧುರ ಜ್ಯೋತಿಯು.

ಸುಳಿಗಾಳಿಯ ಕೊರಳಿನಲ್ಲಿ
ಮುರಲಿ ಗೀತ ಹೊಮ್ಮಿತು
ಜಗದಾತ್ಮದ ಮೂಕ ಮೌನ
ಪ್ರಾರ್ಥನೆಯಲ್ಲರಳಿತು

ಬಾನ್ನೆಲದಲಿ ಸೂಸಿತೊಂದು
ಭಾವಲಹರಿಯದ್ಭುತ
ಪಂಚಕರಣ ಹರಣಗಳನು
ಕಣ ಕಣದಲಿ ಮೀಟುತ

ನವಲೋಕದ ನವತೇಜದ
ಬೀಜಾಂಕುರವಾಯಿತು
ಆ ವಿಭವದ ಉನ್ಮಾದವು
ಎಲ್ಲೆಲ್ಲೂ ತೋರಿತು.

ನನ್ನೆದೆಯನು ಮುಟ್ಟಿ ತಾಯೆ
ಆ ಆಸೆಯ ಚಿಗುರಿಸು
ಹಗೆ ಕೊಳೆಗಳ ತೊಳೆದು ತಾಯೆ
ಹೊಸ ಕೆಳೆಗಳ ಬೆಳೆಯಿಸು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...