Home / ಕವನ / ಕವಿತೆ / ಕಲಿಸಿದರು

ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು
ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ
ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು
ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು

ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು
ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು
ಮಲ್ಲಿಗೆಯಾಗೆಂದು ಕಲ್ಲ ಕೆಳಗಪ್ಪಚ್ಚಿಗಿಕ್ಕಿದರು
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡೆಂದು
ಮೀಸೆ ಹೊತ್ತ ಮುಖಕ್ಕೆ ಮಸಿ ಹಚ್ಚಿದರು
ವಿಷವಿಕ್ಕಿದವಗೆ ಷಡ್ರಸವನಿಕ್ಕೆಂದು ಮನೆಹಾಳತನವ ಬೋಧಿಸಿದರು
ಒದೆಸಿಕೊಂಡರೂ ಅಳುನುಂಗಿ ನಗು ಎಂದು
ಅಳುಬುರುಕುತನವ ಕಲಿಸಿದರು

ಉಗುಳಿದರೆ ಒರೆಸಿಕೊಂಡು ಹೊಗಳೆಂದು
ಬೊಗಳುಸನ್ನಿತನವ ಕಲಿಸಿದರು
ಕೋಡಿದ್ದರೂ ತಿವಿಯದೆ ತಲೆಹಾಕುವುದ ಕಲಿಸಿದರು
ಗಂಡ ಬೇರನ್ನು ಕೊಟ್ಟು ಕಸಿ ಮಾಡಿ
ನರಹಿಚುಕಿ ಜೀವಧಾತು ಹರಿಯದೆ ಬರಲಾಗಿಸಿ
ಕೆಂಡ ಕೆರಳದಂತೆ ತಣ್ಣೀರು ಹಾಕಿ
ಷಂಡತನವ ಕಲಿಸಿದರು ನಮ್ಮವರು

ತಲೆ ಪಂಜರಪಕ್ಷಿಗೆ ಗಿಳಿಯೋದಿಸಿ
ಮೂಗುಹಿಡಿಸಿ ಜಪ ಮಾಡ ಕಲಿಸಿದರು
ತೀರ್ಥಕುಡಿಸಿ ಮಬ್ಬೇರಿಸಿ ಗೂಡಿನಲ್ಲಿಹಪರವೆಂದು ಕೂಡಿಹಾಕಿ
ಬಯಲಾಗಸದ ತಿಳಿಹೊಳೆಯ ಗಿರಿನೀರ ತನಿವಣ್ಣ ರಸಗಳಿಗೆಲ್ಲ
ಎರವಾಗಿಸಿ ಬಂದೋಬಸ್ತಾಗಿ ಬಂಧಿಸಿದರೋ ನಾಗರಿಕ ನೆರಳಲ್ಲಿ
ಕತ್ತಿಕೋಲು ಕುಣಿದಾಡುವ ಗೊಂಡಾರಣ್ಯದಲ್ಲಿ
ಮುಳ್ಳುಗಳೆದ್ದೆದ್ದು ಕಣ್ಣು ಚುಚ್ಚುವಲ್ಲಿ
ಕೋರೆ ಹಲ್ಲುಗಳು ಮಸೆಯುವಲ್ಲಿ ಕೆನ್ನಾಲಿಗೆ ಚಾಚಿದಲ್ಲಿ
ಕಲ್ಲು ಗುಂಡು ಸದಾ ಸುರಿಯುವಲ್ಲಿ
ಬೋಳಾಗಿಸಿ ಬಿಳಿಚು ಮಲ್ಲಿಗೆಯಾಗಿಸಿ
ಬಾಳಾ ಬಾಳೆಂದು ಕಲಿಸಿಬಿಟ್ಟರು ನಮ್ಮವರು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...