Home / ಕವನ / ಕವಿತೆ / ಹಿಮ್ಮಾಗಿಯ ಮಾಂದಳಿರು

ಹಿಮ್ಮಾಗಿಯ ಮಾಂದಳಿರು

ರಾಜ್ಯನೀಗಿ ಪಲಿತ ಮಾಗಿ
ನಡೆದ ವಾನಪ್ರಸ್ಥನಾಗಿ;
ಹೇಽಮಂತ ತಪಸ್ಸಾರ
ಚೈತ್ರ ಗಾದಿಗಿನ್ನೂ ಬಾರ;
ಅಂಥ ಸಂಽದಿಗ್ಧ ಸಮಯ.
ಆಳ್ವರಿಲ್ಲದಿಳೆಯ ಪರಿಯ-
ನೆಂತು ಪೇಳ್ವೆ? ಬಾನೊ ಬಯಲು,
ಶಿಶಿರಶರಣವಾದ ನೆಳಲು,
ದಹನನಿಪುಣ ಕಠಿನತಪನ,
ನೀರಸತರು ನಿಬಿಡ ವಿಪಿನ,
ಹಸುರ ಹೆಸರ ಕಾಣದಿರುವ
ನೆಲವು, ಕಜ್ಜವಿಲ್ಲದಲೆವ
ಅಲಸ ತುಂಟ ಬಂಟ ಗಾಳಿ-
ಇಂತಿಳೆ ನಿರ್ವೇದ ತಾಳಿ
ಒಂದು ಬೇನೆಯೊಳಗಿರಲ್ಕೆ;
ಅಚರಜೀವ ಸೇರಿರಲ್ಕೆ
ನಿದ್ದೆ ಚಿಪ್ಪ; ತೋಪಿನೊಳಗೆ,
ರಸವಿಹೀನ ಮಾವಿನೊಳಗೆ-
ಮಧುವಿನೊಲುಮೆಗನಸು ಸುಳಿದು
ಮರದ ಜಾಡ್ಯವನ್ನು ತಿವಿದು
ತನ್ನ ಹಾಸವೊಂದನಿಳಿಸಿ
ಮಾಯವಾದ ಪರಿಯ ನೆನೆಸಿ-
ತರಳ ತಳಿರ ಗೊಂಚಲೊಂದು,
ಒಂಟಿಯಾಗಿ, ನೋಡಲೊಂದು
ಚೋದ್ಯವಾಗಿ, ಕುಣಿಯುತಿತ್ತು.
ನೋಟ ಕಟ್ಟಿತೆನ್ನನು.

ಇಂತಾ ಜಡಲೋಕದಲ್ಲಿ,
ಸುಸ್ಥಿರ ಚಿರ ಶೂನ್ಯದಲ್ಲಿ,
ತನ್ನ ಹರುಷವೊಂದನರಿತು,
ಸುತ್ತಣಂದಿನಿರವ ಮರೆತು,
ದಿಟ್ಟ ಮುಗುದ ಮಗುವಿನಂತೆ
ಭಯದ ಲೇಶವಿಲ್ಲದಂತೆ,
ವನದ ನೀರಸತ್ವ ಹರಿವ
ತೀರ ಮುನ್ನ ಎದ್ದು ನಲಿವ
ತಳಿರ ತೊಂಗಲನ್ನು ನೋಡಿ
ಮನದೊಳೊಗೆದ ಭಾವಮೋಡಿ-
ಗಿಂತು ನಾನು ರೂಪುಗೊಟ್ಟು
ನುಡಿದೆ: “ಆವ ಪಂಥ ತೊಟ್ಟು,
ಕಿಸಲಯ ಶಿಶು, ಜನ್ಮವಡೆದೆ?
ಆರ ಆಣೆಯಿಂದ ಚಿಗಿದೆ?
ಆವ ಶಿವದ ಬೇಹುಗಾರ?
ಆವ ಕಣಸಿನೋಲೆಕಾರ?
ಆವ ಜೋಯಿಸವನು ಜಗದಿ
ಸಾರ ಬಂದೆ ನೀನು ಜವದಿ?
ಸುತ್ತ ಶೂನ್ಯ ಕಾಣದೇನು?
ಶ್ರಾಂತಮೌನ ಕೇಳದೇನು?
ಇಂಥ ತಮದ ಹೊರಳಿಯಲ್ಲಿ
ಎದ್ದು ಮುದ್ದು ನಗೆಯ ಚೆಲ್ಲಿ
ನವೋದಯದ ಕಣಿಯ ನೀನು
ಸಾರೆ ವ್ಯರ್ಥವಾಗದೇನು?
ಜೋಕೆ, ಜೋಕೆ, ಚೂತಡಿಂಭ,
ನಿನ್ನ ಕಂಡರಯ್ಯೊ ಎಂಬ
ಒಬ್ಬ ಕೂಡ ಇಲ್ಲದಿಂದು
ನೀನು ನನ್ನಿ ಬೆಳಕ ತಂದು
ತಮವ ಕೆಣಕೆ ಮುಳಿವುದೇನೊ?
ನಿನ್ನ ತುತ್ತುಗೊಂಬುದೇನೊ
ವನದ ನೀರಸತ್ವ?- ಜೋಕೆ!”
ಎಂದು ಮಡಿದೊಂದು ಭಯಕೆ
ನುಡಿಯ ನೀಡಿ ನಡೆದೆನು.

ಮರುದಿನ ನಾ ತೋಪಿನೊಳಗೆ
ಹೋಗುತಿರಲು, ಮರದ ಕಡೆಗೆ
ದೃಷ್ಟಿ ಹೊರಳೆ, ಚಕಿತನಾಗಿ
ಕಂಡೆ, ಸುರುವ ಸುಂಡಿ ಹೋಗಿ
ಜೋಲು ಬಿದ್ದ ಮಾಂಽದಳಿರ.
ಹುಟ್ಟೆ, ಅರಿಯದಿದ್ದ ಸ್ಥವಿರ
ಮಾವು, ಕಂದನಳಿವನರಿತು
ಕೊರಗುವಂತೆ ತೋರುತಿತ್ತು.
ಬಂಜೆಬಾಳೆ ತನಗೆ ನಿಯತಿ-
ನಿಯಮವೆಂದು ಇದ್ದ ಪ್ರಕೃತಿ
ಇಂದು ಸತ್ವವರಿತ ಕುತ್ತು
ವನದೊಳೆದ್ದು ಕಾಣುತಿತ್ತು.
ಅರಿತ ಶೂನ್ಯ ಮರೆತ ಶೂನ್ಯ-
ಕಿಂತ ಹೆಚ್ಚು ಭೀಮಶೂನ್ಯ-
ವಾಗಿ ಭಯವ ಬೀರುತಿತ್ತು.
ನನ್ನಿತೋರೆ ತನುವ ತೆತ್ತು
ತಾರಿ ಆರಿಹೋದ ಚಿಗುರ
ಕಂಡು ನಾನು, ದುಗುಡ ಹಗುರ-
ವಾಗಲೊಂದು ಬಗೆಯ ನಗೆಯ
ನಕ್ಕು- ಭಾವವೇನೊ ಅರಿಯ-
ಲಾರೆ; ಶಕುನ ಫಲಿಸಿತೆಂದೊ,
ನಿಯತಿ ನೀತಿ ಇಂತೆ ಎಂದೊ,
ಇಂಥ ಅಳಲ ನುಡಿಯೆ ನಗೆಯೆ
ತಕ್ಕುದೆಂದೊ, ಏನೊ ಅರಿಯೆ-
ಅಂತು ನಕ್ಕು, ತಳಿರಿಗೊಂದು
ಚರಮಗೀತ ಹಾಡಲೆಂದು
ಬಯಸಿ, ಇಂತು ನುಡಿದೆ ನಾನು:

“ಹೇಽ ಮುಕ್ತ ಚೂತಸೂನು,
ಅರಿವುಗೆಟ್ಟು ಭ್ರಾಂತವಾದ,
ಕರಣವುಡುಗಿ ಶ್ರಾಂತವಾದ
ಉದಾಸೀನ ಲೋಕದಲ್ಲಿ,
ನೀರಸತ್ವದುಲ್ಬದಲ್ಲಿ
ಮಧುವು ರೂಪುಗೊಂಬ ಶುಭದ,
ನವೋದಯವು ಬೆಳೆವ ಶಿವದ,
ಸುದ್ದಿ ಸಾರೆ ತುಡಿದುಕೊಂಡು,
ಸುಪ್ತವನದಿ ಜನುಮಗೊಂಡು-

“ವಿಷಯ ಸುಖದ ಅಮಲಿನಲ್ಲೊ,
ಮುದದ ನೆಳಲ ಬೇಟೆಯಲ್ಲೊ,
ಭವದಿ ತೊಳಲಿದಳಲಿನಲ್ಲೊ,
ಅಜ್ಞಾನದ ಜಾಡ್ಯದಲ್ಲೊ,
ಬಳಲಿ ಕೆಡೆದ ಲೋಕದೊಳಗೆ –
ತಾನು ಕಂಡ ಶಿವದ ನೆಲೆಗೆ
ಪ್ರಗತಿರಥವನೆಳೆಯೆ ತುಡಿದು
ತ್ಯಾಗ ತಪದ ಹಗ್ಗ ಹಿಡಿದು
ಭೇರಿ ಹೊಡೆದು ನಿಲ್ಲುವ ಧೀರ
ಕರ್ಮಶೂರ ಕಣಸುಗಾರ
ಆತ್ಮವಂತ ಯೋಗಿಯಂತೆ,
ತಪೋವಂತ ಚಾಗಿಯಂತೆ –

“ದೂರ ದೂರ ದೂರದಲ್ಲಿ
ಪುಣ್ಯಲಬ್ಧ ದೃಷ್ಟಿಯಲ್ಲಿ
ಕಂಡ ಕಣಸ, ಮಂದಿ ಮುಂದು-
ವರಿದು ಕಾಂಬ ಮುನ್ನ, `ಇಂದು
ಭಾವಗೀತಗಳಲಿ ಹಾಡಿ
ತೋರ್ಪೆ’ನೆಂದು ಪಂಥ ಹೂಡಿ
ಭಾವಸೋಮಮತ್ತನಾಗಿ
ಬರುವ ಕವಿಗೆ ಸಾಟಿಯಾಗಿ-

“ದ್ವೇಷ ರಾಗ ರತಿಯ ನೆರೆಯ,
ಅಹಂಕಾರಕೆಸರ ಹೊರೆಯ
ಬಾಳಹೊನಲ ಸನಿಯಕಂದು
ಹಾದಿಕಾರನಾಗಿ ಬಂದು,
ತನ್ನ ತೃಷೆಯ ತಣಿಸೆ ಬಯಸಿ,
ಕೆಸರ ಕಂಡು ಕುಡಿಯ ಹೇಸಿ,
‘ಹೊನಲು ತಿಳಿದ ಮೇಲೆ ಬರುವ’
ಎಂದು ದೇವ ದಾಟಿ ನಡೆವ
ಒಂದು ಗಳಿಗೆಯೊಳಗೆ ಜಲದಿ
ಸುಳಿವ ಅವನ ನೆಳಲ ತೆರದಿ-

“ಎನ್ನ ಅರಿವ ಬಯಲಿನೊಳಗೆ
ಭಯದ ಕಾರಮುಗಿಲು ಮಸಗೆ,
ಆಸೆ ಪವನ ಬೀಸುತಿರಲು,
ಮುದದ ವಿಂಚು ಮಿಂಚುತಿರಲು,
ಅಳಲ ಗುಡುಗು ಗುಡುಗುತಿರಲು,
ಕ್ರಾಂತಿ ಶಾಂತಿಯಪ್ಪ ಮೊದಲು,
ನನ್ನ ಕವಿಯು ಹುಚ್ಚನಂತೆ
ತರುವ ಭಾವದೀಪದಂತೆ-

“ನೀರಸಾಮ್ರವನದ ಕವಿಯೆ,
ಸುಗ್ಗಿಬಿಂಬ, ಚೈತ್ರಶಿಖಿಯೆ,
ಒಂದು ಗಳಿಗೆ ಮೌನದಲ್ಲಿ
ಹಾಡುಗರೆದು, ತಿಮಿರದಲ್ಲಿ
ಬೆಳಕ ಸುಳಿಸಿ, ಶೂನ್ಯದಲ್ಲಿ
ಸುಗ್ಗಿ ಚಾಯೆ ತೋರಿ- ಇಲ್ಲಿ
ಕೊನೆಗೆ ನೊಂದು ನಂದಿಹೋದೆ,
ತಾರಿ ಆರಿ ಮಾಯವಾದೆ.
ಹೇ ರಸಾಲತರುಕಿಶೋರ,
ನನ್ನಿ ಕಾರ, ಕರ್ಮವೀರ,
ಇಂದು ನಿನ್ನ ಭೇರಿ ಹೊಳಲ
ಮುಂದೆ ಕೇಳಿ, ನಿದ್ದೆ ಇರುಳ
ಮುಸುಕನೊಗೆದು, ಜಾಡ್ಯ ಸಿಗಿದು,
ನಿನ್ನ ಗುಡಿಯನೆತ್ತಿ ಹಿಡಿದು,
ನೀನು ಕಂಡ ಕಣಸ ಕಂಡು,
ನಿನ್ನ ಹಾಡ ಹಾಡಿಕೊಂಡು,
ನವೋದಯದ ಜಯಕೆ ನಡೆವ
ವನವೆ ಇಂದು ನಿನ್ನ ಅಳಿವ
ತನ್ನ ಜಾಡ್ಯ ಮೌಢ್ಯದೊಳಗೆ
ಸಾಧಿಸಿಹುದು-ಗೊತ್ತು ನನಗೆ.
ಆದರೇನು,
ಆಮ್ರಸೂನು,
ನಿನ್ನ ಬಾಳು ಸಾರ್ಥ ಬಾಳು,
ಸಾವು ಬದುಕಿಗಿಂತ ಮೇಲು.
ನಿನ್ನ ಹುಟ್ಟಿನಿಂದ ವನದ
ಬಂಜೆಬಾಳು ಬೆಸಲೆಯಾಯ್ತು;
ನಿನ್ನ ಸಾವಿನಿಂದ ಜಗದ
ಮಾಗಿ ಸೆರೆಯು ಸಡಿಲವಾಯ್ತು;
ಇಂದು ನೀನು ಕೆಡೆದ ಇರುಳೆ
ಸುಪ್ತವನದ ಉದಯವಾಯ್ತು;
ಇಂದು ಬಿಗಿದ ನಿನ್ನ ಕೊರಳೆ
ನವೋದಯದ ಕಹಳೆಯಾಯ್ತು.
ಸೋತು ಗೆದ್ದ ಧೀರ ನೀನು!
ಸತ್ತು ಬದುಕಿದಮರ ನೀನು!
ಧನ್ಯ ನೀನು,
ಮಾನ್ಯ ನೀನು!”-

ಎಂದಾ ಜಡಲೋಕದಲ್ಲಿ
ಜಾಡ್ಯದೊಡನೆ ಸೆಣಸಿ ಹೋದ,
ಸುಸ್ಥಿರ ಚಿರ ಶೂನ್ಯದಲ್ಲಿ
ನಚ್ಚನೂಡಿ ನಂದಿಹೋದ,
ತಳಿರ ತೊಂಗಲನ್ನು ನೋಡಿ,
ಮನದೊಳೊಗೆದ ಭಾವ ಮೋಡಿ-
ಗಿಂತು ನಾನು ನುಡಿಯ ನೀಡಿ,
ಚರಮಗೀತವೊಂದ ಹಾಡಿ,

ಮನೆಗೆ ನಡೆದೆ ಮೆಲ್ಲನೆ-
ಮನದಿ ಮರುಗಿ ಮಣ್ಣನೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...