Home / ಕವನ / ಕವಿತೆ / ಬೇಕು-ಬೇಡ

ಬೇಕು-ಬೇಡ

ಬೇಕೆಂಬುವ ಬಡತನವ
ನ್ನೇಕೆ ಕರೆದುಕೊಳುವೆ?
ಬೇಡದೆ ಬಹ ಬಲುಧನವ
ನ್ನೇಕಕಟಾ ಕಳೆವೆ?
ಹಗಲ ಕುಮುದದಿಂದುಭಿಕ್ಷೆ,
ಶಿಶಿರಾಂತದ ಸುಮೋಪೇಕ್ಷೆ
ನೆರೆಯಲೆಂದುಮಳವೆ? ೭

ಬೇಕೆನೆ ನೀನೊಮ್ಮೆ ಬಳಿಕ
ಬೇಕೆನುವೆಲ್ಲವಂ-
ಬೇಡುವುದಿನ್ನೇಕೆ ತುಳುಕ
ಲಂಬುಧಿ ಸಲಿಲವಂ?
ಬೇಡುವಂತೆ ಬಡವನಾದೆ-
ಜಲಧಿಗೆ ಜಲಮೊಳವೆ ನಾದೆ
ಬಾಡಬಾನಲವಂ? ೧೪

ಬೇಕೆನುವೊಡನಿತ್ತೆ ಮೂಢ
ಮನಸೆ ಸಂಚಕರಂ
ಸ್ವನಾಶಕಿದೊ ನೆಗಳ ಬೀಡ
ನಳಿನಕೊಡ್ಡಿ ಕರಂ!
ನಳಿನವೊ ಅಳಿಯಾಸೆಯಲ್ಲಿ,
ಕರವೊ ನೆಗಳ ದಾಡೆಯಲ್ಲಿ-
ತೆರಳಲುಂಟೆ ತೆರಂ? ೨೧

ಬೇಕೆಂಬುದಣಂ ಸಮನಿಸೆ,
ತಟ್ಟನೊಡಕು ಬಿಟ್ಟೆ;
ಬಯಕೆಯೊಡನೆ ಬಯಕೆ, ಮನಸೆ,
ಎದೆಗೆ ನುಗ್ಗಿ ಕೆಟ್ಟೆ-
ಎಡೆಯೆಡೆಯಿಂದೊಸರುವಂದು,
ಕೊರೆದು ಬರುವ ನೆರೆಯ ಮುಂದು
ನಿಲಲಾಪುದ ಕಟ್ಟೆ? ೨೮

ಬೇಕೆಂಬುದು ದಕ್ಕಲಂತು
೧ಗೆಯ್ವ ನಾವನಲಂ?
ಮನದ ತೃಷ್ಣೆಗಡಸನೆಂತು
ಭೂಯೋ ಮೃಗಜಲಂ?
ಆಸೆಯ ನೆರಳಾ ನಿರಾಸೆ,
ಕುಡಿಯಲಾರದಾ ಪಿಪಾಸೆ-
ಪೆರತೇಂ ಪ್ರತಿಫಲಂ? ೩೫

ಬೇಕೆಂಬುದು ದಕ್ಕದೂಡನೆ
ಮಸಗನಾವ ನರಂ?
ಮರದ ಹಿಂದೆ ಮರವ ಸುಡನೆ
ಕೆರಳೆ ವನಜ್ವರಂ?
ವನದಗ್ನಿಯಿನೆಂತು ವನಂ,
ಮನದಗ್ನಿಯಿನಂತು ಮನಂ
ಭಸ್ಮಮೆ ಸತ್ವರಂ. ೪೨

ಬೇಕೆಂಬುವ ಬಲೆಯ ನೇದು
ಕಾದು ಬಯಕೆಯನ್ನ,
೨ನೆರವ ಸುಳಿವ ಕಂಡು ಹಾದು
ಜೇಡನುರುಳುವನ್ನ,
ಬಯಕೆಯ ಮೇಣ್ನೆರವ ನಡುವೆ
ಜಗುಳುವೆ ನೀನೆನಿತೊ ತಡವೆ
ಕಾಂಬ ಗುರಿಯ ಮುನ್ನ! ೪೯

ಬೇಕೆನುವಂತಿಹುದೆ ೩ದಕ್ಕು?
ನೀನೊಲ್ಲದನಾಂತೆ-
ಬೆಣ್ಣೆ ಗೆಂದು ನೆಗೆದ ಬೆಕ್ಕು
ಸುಣ್ಣ ಮುಕ್ಕಿದಂತೆ.
ಬಯಕೆಗೆ ಮುಂಗಂಡುದೊಂದು,
ಬೇಡುವ ಕೆಯ್ಗಡೆದುದೊಂದು-
ಬಯಕೆಯುದ್ದ ಚಿಂತೆ. ೫೬

ಬೇಕೆಂಬುದೆ ಮನದ ದ್ಯೂತ-
ಸುಖವೆ ಈಡಿಗಲ್ಲ?
ಗೆಲ್ಲಲೊಂದು ದಾಯ, ಸೋತ
ದಾಯದೆಣಿಕೆ ಇಲ್ಲ,
ಎರಗದು ಬಗೆದಂತೆ ದಾಯ,
ಇನ್ನು ಬಯಸಲಿನ್ನಪಾಯ-
ಸೋತು, ಸೋತೆ ಎಲ್ಲ! ೬೩

ಬೇಕೆಂಬವಗವನಪೇಕ್ಷೆ
ತುಷಾಗ್ನಿಯವ್ಯಯಂ;
ಬಯಕೆಯೆ ಗಡ ಮನದ ಶಿಕ್ಷೆ,
ತುಷ್ಟಿಯಾತ್ಮಜಯಂ.
ಬಾಳೆಯ ಕೇಡದರ ಗೊನೆಯೆ,
೪ಹೇಸರ ಕೇಡದರ ೫ತನೆಯೆ
ಬಯಕೆ ಮನಃಕ್ಷಯಂ. ೭೦

ಬೇಕೆಂದುರೆ ದುಡಿದುದೆಲ್ಲ
ಗೆದ್ದಲ ಸಂಚಿತಂ,
ಹುತ್ತ ಮರೆಯ ನಿಯತಿಗಲ್ಲ
ಬಯಕೆಯುಪಾರ್ಜಿತಂ?
ಬೇಕೆಂದವನುಂಡನಿಲ್ಲ,
ಬೇಡದವಂ ಹಸಿದನಿಲ್ಲ-
ಬಗೆಯ ಪ್ರತೀಕೃತಂ ೭೭

ಬೇಡವೆನಲು ಕೆಟ್ಟೆನೆಂಬು
ದೇತರ ವಿಭ್ರಮಂ?-
ಬೆಳಕ ಬೇಡದಿರುಳ ತುಂಬು
ತಿದೆ ತಾರಾಕ್ರಮಂ
ಬೇಡದೆ ಬೇಕಾದುದಡೆಯೆ,
ಬೇಡದುದಂ ಬೇಡಿ ಪಡೆಯೆ
ಏಕೆ ವೃಥಾ ಶೃಮಂ? ೮೪

ಬೇಕು ಬೇಡವೆಂಬ ಭೇದ
ಸುಲಭಸಾಧ್ಯವಲ್ಲ
೬ಒಂದೆಳೆಯಪನಾದ ನಾದ
ಮರಿತ ಕವಿಯೆ ಬಲ್ಲ,
ಬೇಗೆಯ ಬರಸಿಡಿಲ್ವೊಡೆಯೆ,
ತೃಷಿತಮನ್ಯ ಹಕ್ಕಿ ಸಿಡಿಯೆ,
ಮಳೆಯ ಹಕ್ಕಿಯೊಲ್ಲ. ೯೧

ಬೇಕು ಬೇಡವೆಂಬುದಿದುವೆ
ಸುರಾಸುರಾಂತರಂ-
ಬೇಕೆಂಬುದು ಮನಸಿಗೊದವೆ
ಸುರನಾದನಸುರಂ.
ಸುರರಿದರಿಂ ಕೆಡೆದರಂತೆ,
ನಿನ್ನನಾಸೆ ಕೆಡಿಸದಂತೆ
ಕಾದಿರು ಜಾಗರಂ. ೯೮

ನಿಶ್ವಸಿತೋಚ್ಛ್ವಸಿತದಂತೆ
ದ್ವಯಮಿದು ಸಂತತಂ-
ಬೇಕೆಂಬುದನುಳಿದ ಮುಂತೆ
ಬೇಡವಹುದೆ ಹಿತಂ?
ಬೇಕೆಂಬುದನೆದೆಯಿನೂದಿ,
ಬೇಡೆನೆಂಬುದೆದೆಗೆ ಸೇದಿ,
ಬಾಳವಿಶಂಕಿತಂ ೧೦೫

ಬೇಡಿದೆಯೇಂ ಕುಡಿವ ಜಲವ,
ಜೀವನಾನಿಲವಂ?
ತ್ರಿದಶಾಧಿಕ ಮನೋಬಲವ
ನವನಿಯ ನಿಲಯವಂ?
ನವನವೀನ ಭಾವನವಂ?
ನಿರವಶೇಷ ಜೀವನವಂ?
ತನುವನನೂನವಂ? ೧೧೨

ಬೇಡದೆ ಪಡೆದಿನಿತನೆಲ್ಲ,
ನಿನಗಿನ್ನೇನರಕೆ೭?
ನಿರಂತರ ವಸಂತವಿಲ್ಲ
ಜಗದೊಳೊಗೆದ ಮರಕೆ;

ಹೊತ್ತರಿತವನಿತ್ತ ಮುನ್ನ
ಬಗ್ಗಿಸುವುದೆ ಸುಗಿಯನ್ನ
ಮರದೆನಿತ್ತೊ ೮ಎರಕೆ? ೧೧೯

ಬೇಡದೆ ನಿನಗವಂ ನೀಡ
ಲಿದೇಂ ಬಯಸಿ ಬಂತೆ?
ಅಯ್ದನೆ ಗಾಲಿಯಂ ಪೂಡ
ಲಯ್ದಿತೆ ರಥ ಮುಂತೆ?
ಸಾಕೆ ನಿನ್ನ ಕಿರಿಯ ಸೇರೆ
ಸದಾ ಸುರಿಯೆ ಸುಧಾಧಾರೆ,
ಹಿಡಿವೆ ಎನಿತನಂತೆ? ೧೨೬

ಬೇಡದಯ್ದುದಳಿಯುವಂದು
ಹಲುಬಲುಂಟೆ ಜನಂ?
ಬಂದಂತೆಯೆ ಪೋದುದೆಂದು
ತಿಳಿಯಬಾರ ಮನಂ?
ಬೇಡದೆ ಬರುವಸ್ತೋದಯ,
ಏತವಿಳಿತ, ರಿತುಪರ್ಯಯ
ಮರುಗಿಸಿತಾವನಂ? ೧೩೩

ಇತ್ತವನದನೆತ್ತಲವಂ
ನಿನಗೇತರ ಭಯಂ?
ಒತ್ತರಿಸಲು ಬಿತ್ತಿದವಂ
ಮುಂಬೆಳೆ ನಿಶ್ಚಯಂ.
ಮಗುವ ಮುನ್ನ ಹಾಲನೀಯೆ,
ಬಲ್ಲನವನೆ? ಹೆರುವ ತಾಯೆ?-
ನೀಗು ಯೋಚನೆಯಂ ೧೪೦

ನದಿಯನಬ್ಧಿ ನೆರೆವುದೆಂತು
ನುಸುಳಿ ನದೀಮುಖಂ,
ಬಯಕೆಯ ಸಂಕಟದೊಳಂತು
ನಿನಗವನುನ್ಮುಖಂ;
ಬೇಕೆಂಬುವ ನಡುದಂಡೆಯ
ಹರಿವ ಮುನ್ನವನ ಕಂಡೆಯ?-
ಬಯಕೆ ಪರಾಙ್ಮುಖಂ. ೧೪೭

ತತ್ತಿಯ ಕತ್ತಲೆಗೆ ಸೊಕ್ಕಿ
ಹೊರಡದ ಮರಿಯನ್ನ
ಕಿರಿಚುವೊಡಂ ತಾಯಿ ಕುಕ್ಕಿ
ಹೊಂದಿಪಂತೆ ತನ್ನ,
ಬೇಕೆಂದುದನಲ್ಲಗಳೆದು,
ನಿಷ್ಠುರ ಕೃಪೆಯಿಂದ ತಳೆದು
ಕೊಳುವನವಂ ನಿನ್ನ. ೧೫೪

ಅವನನಲ್ಲದಾವುದೆಲ್ಲ
ಮನಸೆ ಬೇಡಲಿಲ್ಲ?
ಕತ್ತಿಯ ಬಿಟ್ಟೊರೆಯಿನಲ್ಲ
ಕಾದಲೆಲ್ಲಿ ಗೆಲ್ಲ?
ಬೇಡಿದೆ ನೀನವನನೆಂದು
ನೀಡೊಡೆಯಾ ನಿನ್ನನೆಂದು?-
ತನ್ನನಿತ್ತನಲ್ಲ? ೧೬೧

ತನ್ನನೆ ತಾನೀಯೆ ನಿನಗೆ,
ಇನ್ನೇಂ ನಿನಗಿಲ್ಲ?
ಮನಸೆ, ಬೇಡುವೊಡಿನ್ನೆನಗೆ
ಬೇಕೆನು ನೀನೆಲ್ಲ-
‘ಎಲ್ಲವೆನಲು ನೀನೆ ಬೇಕು,
ಇಲ್ಲವೆನಲು ನೀನೆ ಸಾಕು’-
ಇದೆ ಸಿದ್ಧಿಯ ಪಲ್ಲ. ೧೬೮

ನಿನ್ನನೊಲ್ಲದೆದೆಯೊಳಲ್ಲ
ಬಯಕೆಳೆಯೊಡೆಯ ಬಂತು?
ಶಮಿಯೊಳಲ್ಲದಗ್ನಿಯೆಲ್ಲ
ಮರಹೊಳಿರುವುದೆಂತು?
ಯಾವ ಸವುದೆಯಾದಡೇನು?
ಬೆಳಗುವುದೊಂದೇ ಕೃಶಾನು
ಬೆಳಗಿಸೆಹೆಯನಂತು! ೧೭೫

ಬೇಕೆನುವ ಸದಾ ದರಿದ್ರ
ನೆನ್ನ ಮನದ ಪುಟ್ಟಿ
ತುಂಬ ನೀಡ ಸದಾ ಭದ್ರ
ನಿನ್ನ ನೆನವ ತುಟ್ಟಿ ೯-
ಪಡೆದೊಲು ನೀ ಕೊಳುವನೆನ್ನ,
ಪಡೆವೊಲು ನಾ ಕೊಡುವ ನಿನ್ನ,
ಸೆಳೆಯೂ ಎದೆದಿಟ್ಟಿ ೧೮೨

ಬೇಡದೆನಗೆ ದಕ್ಕಿದುದೆನೆ
ನಿನ್ನ ದಯಾಧನಂ,
ಬೇಡದೆನಗೆ ಸಿಕ್ಕುವುದೆನೆ
ನಿನ್ನಯ ದರ್ಶನಂ;
ದಕ್ಕಿದುದೆನಗಿರಿಸುವಂತೆ,
ಸಿಕ್ಕುವುದನ್ನರಸುವಂತೆ
ಸಾಗಿಸು ಜೀವನಂ. ೧೮೯

ಬೇಡೊಡೆಯಾ ಬೇಕೆಂಬುವ
ತುಂಬಿಯ ೧೦ಬೆಚ್ಚರಂ,
ನೀಡೊಡೆಯಾ ಸಾಕೆಂಬುವ
ತಾವರೆಯೆಚ್ಚರಂ;

ನಿನ್ನಡಿದಾವರೆಯೆದೆಯಲಿ
ಮನ್ಮನೋಭ್ರಮರಕದೆಯಲಿ
ತೃಷಾಂತಮಚ್ಚರಂ೧೧ ೧೯೬
*****
೧ ಅಲಂ ಗೆಯ್‌=ಸಾಕುಮಾಡು
೨ ನೆರವು=ನೆರವೇರಿಕೆ
೩ ದಕ್ಕುವಿಕೆ
೪ ಹೇಸರಕತ್ತೆ
೫ ಮೃಗಗಳ ಗಬ್ಬ
೬ ಎಳೆ=ತಂತಿ
೭ ಅರಕೆ=ಅಪೂರ್ಣತೆ
೮ ಎರಕೆ=ಯಾಚನೆ
೯ ತುಷ್ಟಿ
೧೦ ಭ್ರಮಣ
೧೧ ಆಚ್ಚರ (ಅಕ್ಷರ)=ನಾಶವಾಗದ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...