Home / ಕವನ / ಕವಿತೆ / ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ,
ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ,
ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ,
ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧||

ಯಾಜುಷ ಶಾಖೆಯ ಪ್ರಚುರ ವಿಪ್ರರ ವಂಶದಿ ಜನ್ಮಮಂತೆ, ಬೌ
ಧಾಯನ ಸೂತ್ರಮಂತೆ, ಸಿರಿ ಮಾಯಣನಾತ್ಮಜನಂತೆ, ಮೇಣ್‌ ಭರ
ದ್ವಾಜನ ಗೋತ್ರಮಂತೆ, ನಿಜಸೋದರ ಸಾಯಣನಂತೆ, ಕನ್ನಡಂ
ತಾಯ್ನುಡಿಯಂತೆ, ನೀನಖಿಲ ಕಲ್ಪಿಯ ಕಾನನಮಂತೆ, ಮಾಧವಾ ||೨||

ಶಕಸಮ ದಿಕ್ಶರದ್ವಿವಿಧು ಧಾತುವ ಮಾಧವ ಶುಕ್ಲಪಕ್ಷ ಸ
ಪ್ತಮಿ ರವಿವಾಸರಂ ಕದರಿ ಕನ್ನಡ ರಾಜ್ಯದ ಲಕ್ಷ್ಮಿ ತುಂಗಭ
ದ್ರಾತಟಕಾಚಿ ಬಂದಳೆ? ಗಡಾಕೆಯನಂದಿಗೆ ಹಿಂದುರಾಟ್‌ ಸುರ
ತ್ರಾಣನ ಗಂಡುಕೆಯ್ವಿಡಿಸುತಾದೆಯ ಕನ್ನಡ ನುಳ್ಪುರೋಹಿತಂ? ||೩||

ಕಿರುತಮ್ಮಂ ಬೆರಸೀ ಚತುಃಶ್ರುತಿಗೆ ವೇದಾರ್ಥಪ್ರಕಾಶಂ ನೆರ
ಳ್ಮರೆಯಿಂ ನೇಸರ ನೋಡುವಂತೆ ಮೆರಸಲ್‌ ಮೇಣೇಂ ಪ್ರಸಾದಂ ಚಿರಂ?
ಚತುರಾಸ್ಯಂ ಚತುರಾಸ್ಯದಿಂದೊರೆದುದನ್ನಾಸ್ಯದ್ವಯಂ ಸಾಧಿಸಲ್‌
ವಿಧಿಯೋ ವೇದವೊ ನಿಮ್ಮೂಳಂತು ನೆರೆವಂದೇಂ ಧನ್ಯಮೀ ಭಾರತಂ! ||೪||

ನಿಲಿಸಿ ಪರಾಶರಸ್ಮೃತಿಗೆ ನೀಂ ಕಲಿಕಾಲದಿ ಕೆತ್ತ ಕತ್ತಲಂ
ತೊಲಗಿಪ ಕೆಯ್ವೆಳಂಕ ಮಿರುಟೀಕೆಯ, ಮಾಣಿಸಿದೆಮ್ಮ ಮುಗ್ಗುರಂ
ಅಭಿನವ ಕಾಲಿದಾಸನೆನೆ ಶಂಕರದಿಗ್ವಿಜಯಂ ನೆಗಳ್ಚಿ, ಮೇಣ್‌
ನಿರವಿಸಿ ಧಾತುಜಾತದರಿವಂ ನುಡಿಯಾಗರವಂ ಬಿದಿರ್ಚಿದೈ! ||೫||

ಸರ್ವಧರ್ಮಸಮಾನದೃಷ್ಟಿಯೆ ಸರ್ವದರ್ಶನಸಂಗ್ರಹಂ
ಕಾಣಿಸಿತೆ? ವ್ಯವಹಾರ ಕಾಲಾಚಾರವಿವು ತರಿಸಂದುವೆ?
ಐತರೇಯಕೆ ತೈತ್ತಿರೀಯಕೆ ಬಾಸಣಿಸಿ ಜತೆ ಭಾಷ್ಯಮಂ,
ಜೈಮಿನೀಯಕೆ ಬಾದರಾಯಣಕಿತ್ತೆ ತಿಳಿಗನ್ನಡಿಗಳಂ ||೬||

ಕೊಂಕಣದಂಕೆಯಲ್ಲಿ ತುಡುವೊಕ್ಕ ತುರುಂಕರ ನೂಂಕಿ, ಸಪ್ತಕೋ
ಟೀಶನ ದೇಗುಲಂ ನಿಲೆ ನಿಮಿರ್ಚಿಸಿ, ಗೋವೆಯ ಗೋವನಾಗಿ, ಮಾ
ರಾಯನ ಸಮ್ಮತಂ ಬೆರಸು ಪೋಗಿ ಜಯಂತಿಯನಾಳಿ, ಮುಂತೆ ಶೃಂ
ಗೇರಿಯ ಸೇರಿ, ನೀನಪರ ಶಂಕರನಂತೆಡೆಗೊಂಡೆ ಮಾಧವಾ ||೭||

ತುರುಕರ ದಿಂಡು ಗುಂಡಿಗೆಯ ಹಿಂಡಿದ ನಿನ್ನಯ ಬಾಹು ದಂಡಮಂ
ಪೊಗಳ್ವೆನೆ ? ಹಿಂದುಮುಂದರಿವ ಹೈಂದವ ಧರ್ಮಕೆ ಶಬ್ದ ಶಿಲ್ಪದಿಂ
ನಿಗಮದ ಗಂಗೆಗಾಗಮದ ಕಟ್ಟೆಯ ಕಟ್ಟಿದ ಬುದ್ದಿ ಶಕ್ತಿಯಂ
ಪೊಗಳ್ವೆನೆ ? ಚೋದ್ಯಮೇಂ — ಬಿಗುರ ಬೀರಿದ ಬೀರಮೊ? ಬಲ್ಲ ಬಿಜ್ಜೆಯೊ? ||೮||

ಬ್ರಹ್ಮಕ್ಷತ್ರಮೆ ಸಲ್ವುದೀ ಕಲಿಯುಗಕ್ಕೆಂದೇನದಂ ತಾಳ್ದಿದೈ?-
ಬ್ರಹ್ಮಜ್ಞಾನದೆ ಕಾಯೆ ತಾಯೆಳೆಯ ಧರ್ಮಗ್ಲಾನಿಯಿಂ ಹಾನಿಯಿಂ,
ಕ್ಷತ್ರತ್ರಾಣದೆ ಕಾದೆ ಮ್ಲೇಚ್ಛದಳವಂ ಮಾರ್ಕೊಂಡವರ್ಕೊಂಡುದಂ!-
ಬ್ರಹ್ಮಕ್ಷತ್ರ ಕುರಾರರಾಮನವತಾರಂ ನಿನ್ನೊಳೇಂ ಬೆತ್ತನೆ? ||೯||

ಜ್ಞಾನಮೆ ಮಾನವೀ ತನುಮನಾಂತುದೆ? ಭಕ್ತಿಯೆ ಭಿಕ್ಷವಾದುದೆ?
ವಾಣಿಯ ಜಾಣೆ ಆಣೆರಕಗೊಂಡುದೆ? ಗೆಲ್ಲಿನ ಬಲ್ಲೆ ಮೂಡಿತೆ ?
ಕನ್ನಡ ನಾಡೆ ತನ್ನ ಮನಮೊಟ್ಟಿಸಿ ಸೃಷ್ಟಿಸೆ ಸೃಷ್ಟಗಿತ್ತುದೆ?
ಧರ್ಮಮೆ ಕರ್ಮಮಾಗಿ ನೆರವೇರಿತೆ ನಿನ್ನಲಿ? ಪೇಳ ಮಾಧವಾ ||೧೦||

ಸತ್ಯದ ಭೂಮಿ, ಧರ್ಮದಮೃತಾಂಬುಧಿ ಶುಷ್ಕ ತುರುಷ್ಕ ಕಾನನಾ
ಭೀಲ ದವಾನಲಂ, ನಿಖಿಲ ಕನ್ನಡ ನಾಡಿನ ಸೂತಿಕಾನಿಲಂ,
ಶುದ್ಧ ಚಿದಂಬರಂ, ಬೆರೆಯೆ ಪಂಚತೆಗಂದಿಗತೀತ ಪಂಚಭೂ
ತಂ ನಿನತಾತ್ಮಮೊಂದಿ ಪರಮಾತ್ಮನನಾದುದಭಿನ್ನಮದ್ವಯಂ ||೧೧||

ಕಂತಿದೆ ನೀ ದಿನಾಂತದಿನನಂತೆನೆ, ನಿನ್ನಯ ಪಿಂತೆ ಕಾಂತಿಯಂ
ಕಾಣದ ಭಾರತಂ ಬರಬರುತ್ತ ನಿಶೀಥಕೆ ಮಾಸಿ ಬಂದುದೈ;
ರಾಮನ ಸಂಕದಿಂ ಕುಳಿರ ಶೃಂಗವರಂ ನಮಗಿಂದಿಗಿಲ್ಲಿ ನಿ
ನ್ನನ್ನವನೊರ್ವನುಳ್ಳಡೆಮಗಪ್ಪುದೆ ಈ ಬಡಪಾಡು ಮಾಧವಾ? ||೧೨||

ಪರಮಾಚಾರ್ಯನೆ, ನಿನ್ನ ಪುಣ್ಯತಿಧಿಯೊಳ್ನಾನೊಂದಿದಂ ಬೇಡುವೆಂ-
ಭವದಾವಾಸದ ಬ್ರಹ್ಮಧಾಮದಲಿ ಮುನ್ನೀಂ ಪುಟ್ಟಿದೀ ಭಾರತಂ
ಮರೆಯಲ್ಬೇಡೆಮಗಾಗಿ ಬೇಡೊಡೆಯನನ್ನಮ್ಲಾನ ಭಾಗ್ಯೋದಯಂ
ಬರಿಸಲ್ನೀನೆರೆವಂದು ನೀಡದವನಿನ್ನಾರ್ಗಂ ಗಡಾ ನೀಡುವಂ? ||೧೩||

ಶ್ರೀ ಕರ್ಣಾಟಕಮೇವರಂ, ನೆನವು ನಿನ್ನಾಚಾರ್ಯ ಮುನ್ನಾವರಂ,
ಹಿಂದೂದ್ಧರ್ಮಮಿದೇವರಂ, ಯಶಸು ನಿನ್ಮಾಚಾರ್ಯ ಮುನ್ನಾವರಂ,
ನಮ್ಮೀ ಭಾರತಮೇವರಂ, ಹೆಸರು ನಿನ್ನಾಚಾರ್ಯ ಮುನ್ನಾವರಂ-
ಸೂರ್ಯಾಚಂದ್ರಮರೇವರಂ, ನಿಲುವುವಿನ್ನಾಚಾರ್ಯ ಮುನ್ನಾವರಂ! ||೧೪||

ವಿಪುಲ ಜ್ಞಾನಮನಾಂತು ಸಲ್ಲಿಸಿದ ಮೇಧಾಶಕ್ತಿಗಂ, ಮ್ಲೇಚ್ಛರಂ
ಸದೆವೊಯ್ದದ್ಭುತ ಶೌರ್ಯಶಕ್ತಿಗೆ, ತಥಾ ಕರ್ಣಾಟ ವಾಸ್ತೂತ್ಸವಂ
ಗೆಯಿದಾತ್ಮೋಪಮ ಕರ್ತೃಶಕ್ತಿಗೆ, ಧುರಂ ತಾಳ್ದಾ ಬೃಹನ್ನೀತಿ ಶ
ಕ್ತಿಗೆ, ನಿನ್ನಕ್ಕೆಮ ಸರ್ವಶಕ್ತಿಗೆ ಸದಾ ಭದ್ರಂ ಶುಭಂ ಮಂಗಳಂ ||೧೫||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...