Home / ಕವನ / ಕವಿತೆ / ಯೇಸು-ಕೃಷ್ಣ

ಯೇಸು-ಕೃಷ್ಣ

ರಾಗ ಬೇಹಾಗ- ತಾಳ ತ್ರಿವಟ

ಶ್ರೀ ಹರಿಯೇ ಬಳಲಿದೆ ಎಂತು
ನಮಗಾಗಿ ನರಲೀಲೆಯನಾಂತು! || ಪಲ್ಲ ||

ಶುಭಜನನಕೆ ಸೆರೆಗತ್ತಲೆಯೊ ಹಿತ
ವಾದುದು ೧ಮಂದೆಯ ಗೋದಲೆಯೊ?
೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ?
ಯಮುನೆಯೀಸೆ ತಂದೆಯ ತಲೆಯೊ? || ೧ ||

ಕೊಳಲ ಸೂಸಿ ಹಸು ಮೇಸಿದೆ, ಕೊಡತಿಯ
ಬಡಿದು ೩ಬಡಗಿಯಾ ಪಡಿದುಡಿದೆ;
೪ನಾಡನುಳಿದು ನಡುಗಡಲೊಳಗಡಗಿದೆ,
೫ಮುಡಿಯಿಡಲೆಡೆವಡೆಯದೆ ನಡೆದೆ. || ೨ ||

ರಾಧೆ ಬಿಗಿದ ಭುಜಬಂಧದ ಬಂದಿಯೊ?
೬ಮರಿಯಳ ಮುತ್ತುಗಳಂದುಗವೊ?
ಕುರುರಾಯನ ಹೆಡಮುರಿ ಕೇಯೂರವೊ?
೭ಮುಳ್ಳುಮುಕುಟ ಮುಡಿಸಿದ ಮೊಗವೊ? || ೩ ||

ಬಿಲ್ಲಿನ ಹಬ್ಬದ ಗೆಲ್ಲಿನ ಪಯಣಕೆ
೮ಮರಿಗತ್ತೆಯೆ ಮೆರತದ ರಥವೆ?
೯ಯೂದನ ಮುತ್ತಿನ ಸ್ವಾಗತವೆ? ಚೈ
ದ್ಯನ ಸೇಸೆಯ ಬಯ್ಯವಭೃಥವೆ ? ||೪||

ದುರುಪದಿಯರುವೆಯ ಕಾದಗೆ ಮಾರ್‍ಥಳ೧೦
ಮನೆಗೆಲಸದಿ ಬಲು ಬೇಸರವೆ?
ಭೀಷ್ಮನ ಶರದಿಂ ಸೋರ್‍ವೆದೆಯೊರಸದೆ
೧೧ಶಿಷ್ಯರ ಕಾಲ್ತೊಳೆವನಸರವೆ? ||೫||

೧೨ನಲವತ್ತು ದಿನದುಪೋಷ್ಯಕೆ ೧೩ಹಿಡಿ
ಯವಲಕ್ಕಿಯ ಪಾರಣೆ ಸಾಕೆ?
ವಿದುರನ ಕುಡುತೆಯ ಕುಡಿದ ತೇಗಿಗೆ ೧೪ಸ
ಮಾರ್‍ಯಳು ಮೊಗೆದಾ ಜಲವೇಕೆ? ||೬||

೧೫ಹರ್ಮೋನಲಿ ರೂಪಾಂತರವಾಂತಗೆ
೧೬ಮೂವತ್ತು ಬೆಳ್ಳಿಗಳ ಬೆಲೆಯೆ?
ಪಾರ್ಥನೀಕ್ಷಿಸಿದ ವಿಶ್ವಶರೀರಿಗೆ
೧೭ಜೋಡೆಲೆ ತುಳಸಿಯನಿತೆ ತೊಲೆಯೆ ? ||೭||

೧೮ಪಾಪದ ಸಾಲಕ ನೀರೆರೆದುದ ನಿಜ
ನೆತ್ತರಿಂದ ನಿರವಿಪ ತೆರವೆ?
ನಂಬಿದರೂಳಿಗಿ ಎಂದು ಸಾರೆ, ೧೯ಬಿಳಿ
ಕುದುರೆಯ ಕಿಳಿರಿನ ಡಂಗುರವೆ? ||೮||

೨೦ಕಳ್ಳನೆಂಬ ಹಳಿ ಮೆರಸಲೇಂ ನೀ
೨೧ಕಳ್ಳರ ನಡು ತೂಗಾಡಿದೆಯಾ?
ಬೆರಳಲಿ ಬೇಡನ ಬಾಣ ಬೇಯುತಿರೆ,
೨೨ಸಿಲುವೆ ಮೊಳೆಗೆ ಕೆಯ್ನೀಡಿದೆಯಾ? ||೯||

೨೩ನಮ್ಮೊಳಗಣ ಸ್ವಾರಾಜ್ಯ ಸೇರಲೆಮ
ಗೂಡಿದೆ ೨೪ಪ್ರೇಮದ ೨೫ಮೆಲುನೊಗವಂ!
೨೬ ತನ್ನನೆ ಮರೆವೊಂದೆನ್ನುವ ಬದುಕಿನ
೨೭ಸೆಲೆಹಾಡಿಗೆ ನುಡಿಸಿದೆ ಜಗವಂ! ||೧೦||

ಯದುನಾಥನೆ ೨೮ಯೂದನಾಥನಲ್ಲವೆ?
ಕಾಲಗಳಿವು, ನಿನಗಳಿವಿಹುದೆ?
ದಿನವೆರಡರ ಭಾಸ್ಕರನೆರಡಹನೆ?
ನಿನ್ನಲಿ ಭೇದ ಬಗೆಯಬಹುದೆ? ||೧೧||

೨೯ಎಂದೆಂದಿಗೆ ಧರ್‍ಮ ಕುಂದಿ ಬಂದಪು
ದಧರ್‍ಮ ಮುಂದರಿನಂದಂದು
ಬಂದಪೆನೊಡಲಾಂತೆಂದಿಹೆ-ಮೆಯ್ಯೆನಿ
ತಾಂತು ಬಂದಪೆಯೊ ಇನುಮುಂದು! || ೧೨ ||
*****
೧ ಲೂಕ ೨ ೭
೨ ಮತ್ತಾಯ ೨ ೧೪
೩ ಮಾರ್‍ಕ ೪ ೩
೪ ಜರಾಸಂಧನ ಬಾಧೆಗಾಗಿ ಮಥುರೆಯನ್ನು ಬಿಟ್ಟು ದ್ವಾರಕೆಯಲ್ಲಿ ವಾಸ
೫ ಲೂಕ ೯ ೫೮
೬ ಲೂಕ ೭ ೩೮
೭ ಮತ್ತಾಯ ೨೭ ೨೯
೮ ಯೋಹಾನ ೧೨ ೪
೯ ಮತ್ತಯ್ ೨೬ ೪೯
೧೦ ಲೂಕ ೧೦ ೪೧
೧೧ ಯೋಹಾನ ೧೩ ೫
೧೨ ಮತ್ತಾಯ ೪ ೨
೧೩ ಕುಚೇಲನು ತಂದಿತ್ತ ಅವಲಕ್ಕಿ
೧೪ ಯೋಹಾನ ೪ ೭
೧೫ ಮತ್ತಾಯ ೧೭ ೨
೧೬ ಮತ್ತಾಯ ೨೬ ೧೫
೧೭ ಸತ್ಯಭಾಮೆ ಆಚರಿಸಿದ ದಾನವ್ರತದಲ್ಲಿ
೧೮ ಮತ್ತಾಯ ೩೬ ೨೮
೧೯ ಅರ್‍ಜುನನ ರಥದ ಬಿಳಿಕುದುರೆಗಳು
೨೦ ನವನೀತಚೋರ, ಸ್ಯಮಂತಕಹರ್‍ತಾ ಇತ್ಯಾದಿ
೨೧ ಮಾರ್ಕ ೧೫ ೨೭
೨೨ ಮಾರ್ಕ ೧೫ ೨೫
೨೩ ಲೂಕ ೧೭ ೨೧
೨೪ ಯೋಹಾನ ೧೩ ೩೪, ಮಾರ್ಕ ೧೨ ೩೦-೩೧
೨೫ ಮತ್ತಾಯ ೧೧ ೨೮-೨೯
೨೬ ಗೀತೆ ೧೮ ೬೬
೨೭ ಭಗವದ್ಗೀತೆ
೨೮ ಲೂಕ ೨೩ ೩೮
೨೯ ಗೀತೆ ೪

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...