Home / ಕವನ / ಕವಿತೆ / ಗೆಲುವು

ಗೆಲುವು


ನೋಡು ಗೆಳೆಯ ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ
ಬಿತ್ತಿರುವುದ ಬೆಳೆಯಲೆಂದು
ಗಾಳಿಮಳೆಯು ಜೀಕುತಿದೆ.
ಅದಕಂತೆಯೆ ಎದೆಯುದ್ದಕೆ
ಹೊಲದ ನಿಲುವು ತೂಗುತಿದೆ
ಕಾರ್‍ಗಾಲದ ಹೊಸ ಹೊಂಚಿದು;
ಕಾಲಪುರುಷನೊಳಸಂಚಿದು :
ಬಾನಂಗಳಕೇಳ್ವುದೆನಲು
ಮುಗಿಲೆ ನೆಲಕೆ ಬಾಗುತಿದೆ !
ನೋಡು, ಗೆಳೆಯ ! ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ.


ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
ಬಂತೆ ಕ್ರಾಂತಿಯೆಂದು ಹಿಗ್ಗಿ
ಲೋಕವೆಲ್ಲ ಕೇಳುತಿದೆ.
ನಲಿದು ಸತ್ಯ ಪಥವ ತೋರಿ
ಋಷಿವೃಂದವು ಬಾಳುತಿದೆ
ಸ್ವಾತಂತ್ರ್ಯದ ಸವಿಯುಸಿರಿದು
ಸಮತೆ ಹೊತ್ತ ಹೊಂಬಸಿರಿದು.
ಜಗವು- ಬರುವುದನ್ನು ನೆನೆದು
ಬಂದಿಹುದನು ತಾಳುತಿದೆ !
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.


ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
ಅಳಿಗಾಲವೆ ಇದು ಕೊನೆಯೆ ?
ಮುಂದುವರಿಸು ಹಾಡನು !
ಇಂದಿಗಿಲ್ಲಿ ಕಟ್ಟಿ ಬಿಡುವ
ನಾಡ ಕಟ್ಟು ಪಾಡನು !
ಇಂದಿನ ನುಡಿ ಗುಡುಗು ಸಿಡಿಲು
ಅದಕದೋ ! ಅವಿದ್ಯೆ ಮಡಿಲು.
ನಾಡೆದೆ ಮಂಥಿಸುತ್ತ ತರುವ
ಚಂದ್ರನಂಥ ಕೋಡನು !
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !


ನೋಡು ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
ನಾಡಿನೊಲವ ನಾಡ ಗೆಲುವ
ಕೊರಲತುಂಬ ಸಾರುತಿವೆ.
ಉಜ್ಜೀವನದುಡ್ಯಾಣದಿ
ತಮ್ಮನೆ ತಾವ್ ಮೀರುತಿವೆ :
ಇರಲಿದೆಮ್ಮ ಜೀವನ
ಆಗಲಿಂತು ವಾವನ
ನೋಡು! ದಿವ್ಯ ಭವ್ಯ ಶಕ್ತಿ
ಕಾಳನೊಡನೆ ಹೋರುತಿವೆ!
ಮತ್ತೆ ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...