Home / ಕವನ / ಕವಿತೆ / ಇದೊ, ಶ್ರಾವಣ ಬಂದಿದೆ!

ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ)

ಇದೊ, ಶ್ರಾವಣಬಂದಿದೆ ಭೂವನಕೆ,
ಜನಜೀವನ ಪಾವನ ಗೈಯಲಿಕೆ-
ಇದೊ, ಶ್ರಾವಣ ಬಂದಿದೆ ಭಾರತಕೆ !


ತೆರಳಿತು ವೈಶಾಖದ ಬಿರುಬಿಸಿಲು,
ಸರಿಯಿತು ಮೃಗಜಲದಾ ಹುಸಿಹೊನಲು ;
ಮರೆಯಾಯಿತು ಸುಟ್ಟುರೆಗಳ ಹೊಯಿಲು,
ಬರಿ ಬಾನೊಳು ತುಂಬಿದೆ ನೀರ್‌ ಮುಗಿಲು !
ಬರಗಾಲದ ಬಾಧೆಯ ಹಣಿಯಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ !


ಮುಂಗಾರಿನ ಕಾರ್‍ಮೋಡದ ಕೂಟ….
ಮುನ್ನೀರಲೆಗಳ ತಾಂಡವದಾಟ….
ಕಂಗೆಡಿಸುವ ಕೋಲ್ಮಿಂಚಿನ ಕಾಟ….
ಹಿಂಗಿದುವೋ ಸಿಡಿಲಿನ ಗುಡುಗಾಟ-
ಸಮಯೋಗದ ಸರಿಯನು ಸುರಿಸಲಿಕೆ
ಇದೊ, ಶ್ರಾವಣ ಬಂದಿದೆ ಭೂತಲಕೆ !


ಕಾಡುವ ತಗರಿನ ಕೊಂಬನು ಕಳೆದು….
ಹೋರುವ ಹೋರಿಯ ಹಮ್ಮನು ಹಿಳಿದು….
ಹೆಣ್‌-ಗಂಡನು ಹುರುಪಿಸಿ ಮನಸೆಳೆದು….
ರಣಹೇಡಿ ಏಡಿಯಾ ತಲೆ ತುಳಿದು….
ಮೃಗರಾಜನ ಮೈ ಗುಣ ಮೆರೆಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಬಾನೊಳು ತುಂಬಿದೆ ಜೀವನ ಜಲವು….
ಬುವಿಯೊಳು ತಂಗಿದೆ ಬೆಳಕಿನ ಬಲವು….
‘ಏಳಲಿ, ಏಳಲಿ, ಕೃಷಿಕರ ಕುಲವು’ …
ಗಾಳಿ ಕೂಗುತಿದೆ ಕೇಳದೆ ಉಲಿವು ?
ನಮ್ಮೆಲ್ಲರ ಹಸಿವನ್ನು ತಣಿಸಲಿಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ !


ಬರತ ತೊರೆಗಳದೊ, ಸೂಸಿ ಹರಿದಿವೆ….
ಅರತ ಕೆರೆಗಳಗೊ, ತುಂಬಿ ಮೆರೆದಿವೆ….
ಬರಡು ಬಳ್ಳಿ-ಗಿಡ ಚಿಗಿತು ನಗುತಿವೆ…
ಬರಿಹೊಲ-ನೆಲ ಸಸಿ-ಹಸಿರನುಗುತಿವೆ….
ಚೆಲುವಿಂಗೆ ಗೆಲವ ತಾನೀಯಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!


‘ಬಂದಿದೆ ಗೆಳೆಯರೆ ನಲ್ಮಳೆಗಾಲ….
‘ತಂದಿದೆ ಬಲ್‌ಬೆಳಸಿಗೆ ಹದಗಾಲ….
‘ಉಳುಮೆ-ಬಿಗೆಗೆ ಇದುವೆ ಸಕಾಲ….
‘ಕಳೆದುಕೊಳ್ಳದಿರಿ, ನಿಮ್ಮಯ ಪಾಲ’ –
ಇಂತೊರೆದು ಜಗವ ಜಾಗರಿಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!


ಶ್ರಾವಣದೀ ಶುಭಯೋಗವೆಂಧದೋ
ದೇವಭಾವ ತಲೆಯೆತ್ತಿ ನಿಂತುದೋ!
ಹಾವು-ಹುಳುವನೂ ದೇವರು ಎನುವ …
ಭಾವನೆಯಲಿ ಜನ ಪೂಜಿಸುತಿಹುದೊ ?
ಆ ದೇವನ ಮಹಿಮೆಯ ಗಾಯನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಕನಸಿರದಾ ನಿದ್ದೆ ಯನೋಡಿಸುತ….
ಮನದಾಶೆಗೆ ಕುಸುರನು ಮೂಡಿಸುತ…
ಮನುಕುಲವನೆ ಉಯ್ಯಲೆಯಾಡಿಸುತ…
ಕಣಸಿನ ಕತೆಗಳ ಕೊಂಡಾಡಿಸುತ-
ಸವಿಯೊಲವನು ಹಂಚುತ ಮನಮನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!


ಬರಲಿದೆ ಮಾನವಮಿಯ ಬಲರಾಗ
ಕರೆದಿದೆ ಗೆಲವಿನ ದಸರೆಯ ಭೋಗ….
ತರಲಿದೆ ಇದೆ ದೀವಳಿಗೆಯ ಯೋಗ….
ಬೆಳಕಿನ ರಾಜ್ಯವೆ ಇಳೆಯೊಳಗಾಗ..
ಆ ಬೆಳಕಿನ ದಾರಿಯ ತಿಳುಹಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
* * *

ಜನಜೀವನ ಪಾವನ ಗೈಯಲಿಕೆ
ಇದೊ, ಬಂದಿದೆ ಶ್ರಾವಣ ಭಾರತಕೆ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...