Home / ಕವನ / ಅನುವಾದ / ವಿದಾಯ

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು)

ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು!
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ? ಬಾರೆಂದು ೫
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೧೦
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯಡೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, ೧೫
ಯಾರೆನ್ನರಿಯದೊಲೀಸುತಲಿ,
ಮೀಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೨೦

ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮೆಯ್ಮರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ ೨೫
ತೊದಲಾಡುನೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಿಕಿಗಳಿಂ
ಮಿಂಚುವೆ ಮಿಂಚಿನ ಮಿಟಕುಗಳಿಂ-
ಅಂದಿನ ನನ್ನಟ್ಟಸವನ್ನ
ಬಗೆಯಲಳನೆ ಅವ್ವಾ ನಿನ್ನ? ೩೦

ಮೀರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗವ್ವಾ ಎನುವೆನು ಬಾಗಿ,
ಅಳಲಿ ಬಳಲಿ ಕಡೆಯಲಿ ದಣಿದು ೩೫
ಪವಡಿಸುತಲೆ ನೀನರೆಮಣಿದು,
ಚಂದ್ರನ ಸೊದೆಗದಿರಾಗುನೆನು,
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು ೪೦

ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೊಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿಸುವೆನು ನಿದ್ದಿಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು ೪೫
ಹಸೆಯೊಳೆನ್ನ ತಡವರಿಪಂದು,
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೫೦

ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ ೫೫
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ.
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. ೬೦

ಹಬ್ಬದುಡುಗೆರೆಗಳನು ತಂದು
ನಮ್ಮಯ ಮನೆಗತ್ತಿಗೆ ಬಂದು,
ಅಕ್ಕಾ ಮಗುವೆಲ್ಲಿಹುದೆಂದು
ಕೇಳುವಳಾಕೆಗೆ ಪೇಳಂದು-
ಎಲ್ಲೆಲ್ಲಿಯು ನನ್ನ ಮಗುವಿಹುದು, ೬೫
ನೋಡೆನ್ನಯ ಕಣ್ಣುಲಿಯದು!
ಎನ್ನಯ ಮೊಲೆಯ ಕುಡಿಯುತಿಹುದು,
ಎನ್ನಂಕದಲಿದೊ ಕುಳಿತಿಹುದು!
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೭೦
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...