Home / ಕವನ / ಕವಿತೆ / ನಿರ್‍ದಯಿಗಳು

ನಿರ್‍ದಯಿಗಳು

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು
ಸಂತೋಷದ ತಮಟೆ ಬಾರಿಸಲಿಲ್ಲ
ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ
ಖರ್‍ಚು ಜಾಸ್ತಿ ಎಂದು ನೊಂದರು

ರ್‍ಯಾಂಕ್ ಪಡೆದಳೆಂದು ಬೀಗಿ
ತಮಟೆ ಬಾರಿಸಲಿಲ್ಲ
ಹೆಚ್ಚು ಓದಿದವನನ್ನು ಹುಡುಕಬೇಕಲ್ಲ
ಬೆವರಿಳಿಸತೊಡಗಿದರು.

ಮಗಳ ಮದುವೆ ಎಂದೇನು
ಸಂಭ್ರಮದ ತಮಟೆ ಬಾರಿಸಲಿಲ್ಲ
ವಸ್ತ್ರ ಒಡವೆ ಹಾಕಿ ಅಕ್ಷತೆ ಉದುರಿಸಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ಆರತಿ ಎತ್ತಿದರು.


ಮಗನನ್ನು ಕಸಿದುಕೊಂಡಳೆಂದು
ಉರಿಯ ತಮಟೆ ಬಾರಿಸಿದರಿಲ್ಲಿ
ಗಳಿಸಿದ್ದೆಲ್ಲ ಇವಳ ಬೆಡಗು ಬಿನ್ನಾಣಕ್ಕೆಂದು
ಚುಚ್ಚಿದರು ಕಣ್ಣೀರು ಹರಿಸಿದರು.

ಬಂದವಳು ಹೆಣ್ಣೆ ಹಡೆದಳೆಂದು
ವಂಶೋದ್ಧಾರಕರಿವರು ತಮಟೆ ಬಾರಿಸಿದರು
ಗಂಡುಮಗಳ ಹೆರಲಾರದ ಬಂಜೆ
ಎಂದೇ ಬಿರುದುಕೊಟ್ಟು ಬೆಂಕಿಹಚ್ಚಿದರು.
ಬೈಕು ಕಾರು ಓಡಿಸುವ ಗಂಡುಬೀರಿ
ಮನೆಯವರ ಸೇವೆಮಾಡದ ಸೊಕ್ಕಿನಾಕೆ
ಎಲ್ಲೆಲ್ಲೂ ತಮಟೆ ಬಾರಿಸುವವರು
ಅಡುಗೆಮನೆಯ ಕಟಕಟೆಯಲ್ಲಿ ನಿಲ್ಲಿಸಿ
ನೂರುಬೈಗುಳ ಹೂವೇರಿಸುತ
ಮನೆಮುರುಕಿ ಹಣೆಪಟ್ಟಿ ಕಟ್ಟುವರು

ತನ್ನದೇ ಕರುಳಿನ ಕುಡಿಯ ಹೆಮ್ಮೆಗೆ
ತಮಟೆ ಬಾರಿಸದ ಅಪ್ಪ ಅಮ್ಮ
ಕ್ಷಣಕ್ಷಣಕೂ ಅಪರಾಧಿ ಇವಳೆಂದು
ತಮಟೆ ಬಾರಿಸುವ ಮಾವ ಅತ್ತೆ


ಪ್ರೀತಿವಾತ್ಸಲ್ಯದ ಹೆಣ್ಣು ಜೀವ
ಸ್ವಾರ್‍ಥಿಗಳ ಕೈಗೊಂಬೆಯಾಗಿ
ನೊಂದು ಬೆಂದು ತಳಮಳಿಸಿ
ಒಂದೊಮ್ಮೆ ಅರ್ಥೈಸಿಕೊಳ್ಳದ
ಕಿವುಡ ನಾಟಕಕಾರರನು ದಾಟಿ
ಮರುಭೂಮಿಯಾಗಿಯೋ
ಜಲಪಾತವಾಗಿಯೋ
ಹೀಗೆ ಕಣ್ಮರೆಯಾಗುವಳು

ಆದರೂ ಮತ್ತೆ ಮತ್ತೆ ತಮಟೆಗಳು
ಹಲಗೆ ಕಹಳೆಯಾಗಿ ಬಾರಿಸುತ್ತಲೇ ಇರುತ್ತವೆ
ನಿರ್‍ದಯಿಗಳ ಬಾಯಲ್ಲಿ
ಇವಳು ಹೀಗೆ ಹಾಗೆ ಎಂದಾಗಲಿ
ಹೆಣ್ಣುಜೀವ ಮುತ್ತೈದೆಸಾವು ಎಂದಾಗಲಿ….
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...