Home / ಕವನ / ಕವಿತೆ / ನಾವಾಡಿಗ!

ನಾವಾಡಿಗ!

ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು?

ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು,
ತಡೆಯದಲೆ ತೋರು ನೀ ತಡಿಯ ತಲುಪುವ ಹದನು !


‘ನನ್ನ ನುಡಿ ಮನ್ನಿಸದೆ ಬೀಳದಿರು ! ಈ ಹೊಳೆ-
ಮುನ್ನ ಬಲ್ಲಿದರ ಹಲವರ ಬಳಲಿಸಿಹುದೋ!’
ಎನ್ನುತೆಳ್ಚರಿಸಿರುವ ನಿನ್ನ ನುಡಿ ಹೀಗಳೆದು
ನನ್ನ ಬಲುಹಿನ ಗರುವದಲಿ ಹೊಳೆಗೆ ಹಾರಿಹೆನು!


‘ನಸುವೇಳೆ ತಾಳು, ನಾ ಹೇಳುವುದ ನೀ ಕೇಳು!
ಗಸಣೆಗೊಳಿಸದೆ ಹೊಳೆಯ ದಾಂಟಿಸುವೆ’ ಎಂದೆಯೈ!
ಕಸಕೆ ಸರಿಯೆಣಸಿದೆನು ನಿನ್ನ ನಲ್‌ನುಡಿಗಳನು,
ಮಸಣದೀ ದಾರಿಯೊಳು ಅಡಿಗಳನು ಚೆಲ್ಲಿಹೆನು.


‘ಬೀಳದಿರು, ಬೀಳದಿರು! ಹಿಂದಿರುಗು, ಸರಿ, ಮರಳು!
ಕೇಳೆನ್ನ ವಚನ ಬಾಳುವೆ ಬಹಳ ದಿವಸಗಳು!’
ಹೇಳಿದೆಯೊ ಇಂತು ನಡುಹೊಳೆಯ ಸೇರುವ ವರೆಗು-
ಮೂಳ ನಿಜ ನಾನು ಗಣಿಸದೆ ಹೊಳೆಯ ಹೊಕ್ಕಿಹೆನು!


ನನ್ನ ತೋಳುಗಳ ತಿರುಳನ್ನು ತೊರೆಯನ್ನೀಸಿ
ನಿನ್ನೆದುರು ತೋರಿಸುತ ಮೂದಲಿವೆನೆಂದಿದ್ದೆ;
ಮುನ್‌ನೋಡಿ ತಿಳಿಯದೇ ಬನ್ನದಲಿ ಬಿದ್ದಿಹೆನು,
ಮನ್ನಿಸೆನ್ನಯ ಮೊರೆಯ ಅಣ್ಣ ನಾವಿಕ, ಪೊರೆಯೊ!


ಬಡಿದಾಡಿ ನೀರಿನೊಳು ಬಳಲಿಹವು ಕೈ ಕಾಲು;
ಅಡಿಗಡಿಗೆ ಮೂಗು-ಕಣ್-ಕಿವಿಗಳಿಗೆ ನೀರೇರಿ,
ಕುಡಿಯುತಲಿಹೆ ಒಡಲು ಒಡೆಯುವೊಲು ಕದಡನ್ನು
ನಡುಹೊಳೆಗೆ ಬರಲೀಗ, ದಡದಡಿಸುತಿಹೆನು!


ಕ್ರೂರಜಲಜಂತುಗಳು ನೀರಸುಳಿ ತೆರೆತೆರೆಯು
ತೋರೆ ಭೀತಿಯೊಳು ಗುಡುಗಾಡುತಿದೆ ನನ್ನೆದೆಯು!
ಧೀರ, ನಿನ್ನಯ ನುಡಿಯ ಮಾರಿ ನಾ ನಡೆದುದನು
ತಾರದೆಯೆ ಮನದಲ್ಲಿ ತಾರಿಸುವುದೆನ್ನನು!


ಮೂಢನೊಬ್ಬನು ಹಿರಿಯರಾಡಿದುದನೆಣಿಸದೇ
ಖೋಡಿನಂದದಿ ನಡೆದು ಕೇಡಿಗೊಳಗಾಗಿರಲು,
ಖೋಡಿಗಳೆದವ ನಮ್ಮ ನುಡಿಯನೆಂದಾತನನು
ನೋಡಿಯೂ ನೋಡದಾ ತೆರ ಸುಮ್ಮಗಿರುವರೆ ?


ಹಲವು ಸಲ ದಾಂಟಿಹೆಯೊ, ಹೊಳೆಯಾಳ ತಿಳಿದಿಹೆಯೊ,
ಸುಲಭದಲಿ ಹಲವು ಜನರನು ಪಾರು ಮಾಡಿಹೆಯೊ!
ತಲುಪಿಸೈ ತಡಿಗೆನ್ನ ಚೆಲುವ ಅಂಬಿಗರಣ್ಣ,
ಬಲುಮೆಯಿಂದಲಿ ನನ್ನ ಬಳಗದೊಳು ಕೂಡಿಸೈ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...