Home / ಕವನ / ಕವಿತೆ / ವಾಸ್ತು ಗಿಡ

ವಾಸ್ತು ಗಿಡ


ಅವರ ಬಂಗಲೆಯ ಹಜಾರದ
ನೀರ ಬೋಗುಣಿಯಲಿ ನೆಟ್ಟ
ಅಲ್ಲಲ್ಲ… ಇಟ್ಟ
ಅದು ವಾಸ್ತು ಗಿಡವಂತೆ.
ನಿಂತಿದೆ ತಾನೇ,
ದಯನೀಯವಾಗಿ.
ಅದರ ಮೊಗದ ತುಂಬಾ ದುಗುಡ
ಈಗಲೋ ಆಗಲೋ
ಕಟ್ಟೆ ಒಡೆವಂತೆ.

ದಿಕ್ಕೆಟ್ಟು ನಿಂತ
ಜೀವಂತ ಗಿಡವೂ
ಒಂದು ಬೆದರುಬೊಂಬೆ!
ಅವರ ಷೋಕೇಸಿನ
ನಿರ್ಗಂಧ ಪ್ಲಾಸ್ಟಿಕ್‌ ಹೂವು
ನಿಸ್ತೇಜ ಫಲಕಗಳ ಜೊತೆಗೆ.

‘ಈ ಗಿಡಕ್ಕೆ
ಮಣ್ಣು ಬೇಡ
ಬಿಸಿಲೂ ಬೇಡ
ಗೊಬ್ಬರವೂ ಹಾಕಬೇಕಿಲ್ಲ
ಕಳೆಯೂ ಬೆಳೆಯುವುದಿಲ್ಲ
ಕೊಳೆಯುವುದೂ ಇಲ್ಲ.
ಪಾತಿ ಮಾಡಬೇಕಿಲ್ಲ.
ಮಣ್ಣು ಹದ ಮಾಡುವಂತಿಲ್ಲ
ಕ್ರಿಮಿ ಕೀಟದ ಸೊಂಕಿಲ್ಲ
ಇರುತ್ತದೆ ಇದ್ದಂತೆ ಹೀಗೇ……
ಅಂಟಿಯೂ ಅಂಟದಂತೆ
ಆದರೂ ಮನೆಗೇ ಅದೃಷ್ಟ’

ಅವರ ಹೆಮ್ಮೆಯ ವ್ಯಾಖ್ಯಾನ.

ಅಲ್ಲಿ ಇದ್ದಷ್ಟೂ ಹೊತ್ತು
ವಾಸ್ತುಗಿಡದ ನಿಟ್ಟುಸಿರು
ಬಿಗಿದು ಕಟ್ಟಿತ್ತು ನನ್ನುಸಿರು.

ವಾಪಸ್ಸು ಹೊರಟವಳಿಗೆ
ಅವರಿಂದ ಅದೇ ಗಿಡದ
ಒಂದು ಟಿಸಿಲು ಉಡುಗೊರೆ

‘ನೀರಲ್ಲಿ ಬಿಸಾಕಿದರೂ ಸಾಕು
ಬೇರೇನೂ ಬೇಕಿಲ್ಲ
ಅನಾಯಾಸ ಅದೃಷ್ಟ’

‘ಇದ್ದಂತೆಯೇ ಇರಲು!’

ನನ್ನ ಪಿಸುಗು
ಅವರ ತಲುಪಲೇಯಿಲ್ಲ.

ಹೊರಗೆ ಬಂದದ್ದೇ
ಬಟ್ಟಂಬಯಲಿನಲಿ
ಮಣ್ಣು ಕೆತ್ತಿ ಪಾತಿ ಮಾಡಿ
ಬೇರನೂರಿ ಗಿಡನೆಟ್ಟೆ
ನಾನೇ ಮಣ್ಣಿನಲಿ
ಊರಿಕೊಂಡಂತೆ.

ಕ್ಷಣಾರ್ಧದಲ್ಲಿ
ಜಡ ಗಿಡಕ್ಕೆ ಜೀವ ಮೂಡಿ
ನೂರಾರು ಕೊಂಬೆ
ಸಾವಿರಾರು ಎಲೆ ಚಿಗುರೊಡೆದು…

ನಗು
ಈಗಷ್ಟೇ…
ವಾಸ್ತು ಅಳೆಯಲು ಹೊರಟಿದೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...