Home / ಲೇಖನ / ಇತರೆ / ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು

ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು

ಡಿಸೆಂಬರ್ ೧೯. ಊರು, ಚಳ್ಳಕೆರೆಯ ಸಮೀಪದ ದೊಡೇರಿ. ಆಶ್ರಮ. ರಾತ್ರಿ ಹನ್ನೊಂದು ದಾಟಿತ್ತು. ಹೊಸ್ತಿಲು ಹುಣ್ಣಿಮೆ. ಉತ್ತರ ಕರ್ನಾಟಕದಲ್ಲಿ ಒಂದೊಂದು ಹುಣ್ಣಿಮೆಗೂ ಒಂದೊಂದು ಹೆಸರಿದೆ. ಈ ಹೆಸರುಗಳು ಯಾಕೆ ಬಂದವೋ? ತುಮಕೂರಿನ ಬಳಿ ಆಕಾಶದ ಅಂಚಿನಲ್ಲಿ ಕಂಡಿದ್ದ ಚಂದ್ರ ಈಗ ಸುಮಾರಾಗಿ ನೆತ್ತಿಯ ಮೇಲೆ ಬಂದಿದ್ದಾನೆ. ನನ್ನೆದುರಿಗೆ ಮುಳ್ಳು ತಂತಿಯ ಬೇಲಿ, ಅವುಗಳಾಚೆ ನನ್ನ ಕಣ್ಣೆತ್ತರಕ್ಕೆ ಬೆಳೆದು ನಿಂತ ಸಾಲು ಸಾಲು ಸಾಲು ಸೂರ್ಯಕಾಂತಿ ಗಿಡಗಳು. ಒಂದೊಂದು ಗಿಡಕ್ಕೆ ಮುಖದಗಲ ಒಂದೊಂದು ಹೂವು. ಹಗಲಿನಲ್ಲಿ ಕಾಣುವಷ್ಟೇ ಪ್ರಖರವಾದ ಚಿನ್ನಹಳದಿ ಬಣ್ಣ. ಬೆಳುದಿಂಗಳಲ್ಲಿ ಹೂವಿನ ದಳಗಳ ಅಂಚು ಮಾತ್ರ ಹಗಲಿನಲ್ಲಿ ಕಾಣುವುದಕ್ಕಿಂತ ಕೊಂಚ ಹೆಚ್ಚು ಮೃದುವಾಗಿರುವಂತೆ ಅನ್ನಿಸುತ್ತಿದೆ. ಸುರೇ – ಪಾನ, ಸೂರ್ಯನ್ನೆ ಕುಡಿದು ಬೆಳೆದ ಹೂಗಳೋ! ನಡು ನೆತ್ತಿಗೆ ಸಮೀಪ ಬಂದಿರುವ ತಿಂಗಳ ಬೆಳಕಿನಲ್ಲಿ ಪ್ರತಿಯೊಂದು ಗಿಡದ ಬುಡದಲ್ಲೂ ಒಂದೊಂದು ನೆರಳು. ಒಂದೊಂದು ನೆರಳಿಗೆ ಒಂದೊಂದು ಹೂವು.

ಚಪ್ಪಲಿಯನ್ನು ಕಾರಿನಲ್ಲೇ ಬಿಟ್ಟಿದ್ದೆ. ಮರಳು, ಕಲ್ಲು ಹರಳು – ನೆಲ ಅಂಗಾಲ ಚರ್ಮಕ್ಕೆ ಗೊತ್ತಾಗುತ್ತಿತ್ತು. ‘ಮಾಗಿಯ ಹುಲ್ಲಿನ ಎಸಳ ಮೇಲಿನ ಇಬ್ಬನಿ ತಗುಲಿದಾಗ ಆದ ಪುಳಕ’. ವಚನಕಾರನೊಬ್ಬ ತನಗಾದ ಅನುಭವದ ಅಚ್ಚರಿಯನ್ನು ಹೇಳಿಕೊಂಡಿದ್ದ ನೆನಪು ಅಂಗಾಲ ಚರ್ಮದಲ್ಲೂ ಅಡಗಿದ್ದು ತಟ್ಟನೆ ಅರಳಬಹುದಲ್ಲ. ಆ ಮಾತು ಈ ಮಾತು ನೆನಪಿಗೆ ಬರದೆ ಏನೂ ಅನುಭವ ಆಗುವುದೇ ಇಲ್ಲವೇ?

ಚಳಿಯಾಗುತ್ತಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ಉರಿಹಚ್ಚಿಕೊಂಡು, ಮೂರು ಮೂರು, ನಾಲೈದು ಜನ, ಬೆಳುದಿಂಗಳಲ್ಲಿ ಮಬ್ಬಾಗಿ ಕಾಣುವ ಕೊಳೆಯಾದ ಪಂಚೆ ಉಟ್ಟು, ಬೆಡ್ ಶೀಟು, ಟವಲು, ಕಂಬಳಿ ತಲೆ ತುಂಬ ಹೊದ್ದು, ಕುಕ್ಕುರುಗಾಲಲ್ಲಿ ಮುದುರಿ ಕುಳಿತು, ಕೈಗಳನ್ನು ಬೆಂಕಿ ಝಳಕ್ಕೆ ಒಡ್ಡಿಕೊಂಡು, ಇಡೀ ಲೋಕವೆಂದರೆ ಈ ಬೆಂಕಿ ಝಳದ ಹಿತವಾದ ಶಾಖ ಮಾತ್ರ ಎಂಬಂತೆ ಸುಮ್ಮನೆ ಕೂತಿದ್ದರು.

ನಾವು ಹೋದದ್ದು ದೊಡೇರಿಯ ಸಂತನ ಮಗನ ಮದುವೆಗೆಂದು. ಮದುವೆ ಇದ್ದದ್ದು ಮರುದಿನ ಇವತ್ತು ಯಾರು ಯಾರೋ ಸ್ವಾಮಿಗಳು ಬಂದಿದ್ದರು. ರಾತ್ರಿಯೆಲ್ಲ ಭಜನೆ ನಡೆಯುತ್ತಿತ್ತು. ಸಂತನ ಹೆಸರು ಮಲ್ಲಣ್ಣ. ಅವರ ಗುರು ಇಟ್ಟ ಹೆಸರು ಸತ್ ಉಪಾಸಿ. ಜನ ಪ್ರೀತಿಯಿಂದ, ಗೌರವದಿಂದ ಕರೆಯುವ ಹೆಸರು ಅಪ್ಪಾಜಿ. ಅವರ ಹೆಂಡತಿ ಎಲ್ಲರ ಪಾಲಿಗೆ ಅಮ್ಮ, ಈ ಅಪ್ಪಾಜಿ ಅಮ್ಮ ತಮ್ಮ ದೊಡ್ಡ ಮಗಳ ಮದುವೆ ಮಾಡಿದ್ದಾರೆ. ನಾಳೆ ಗಂಡುಮಗನ ಮದುವೆ. ಯಾವ ವಿಶೇಷವೂ ಇಲ್ಲದಿರುವುದೇ ಅಪ್ಪಾಜಿ ಅವರ ವಿಶೇಷ. ಹೊಲದ ಕೆಲಸ, ಗಾರೆಯ ಕೆಲಸ ಮಾಡಿಕೊಂಡಿದ್ದವರು. ತಮಗೆ ಆದ ಸಂಗತಿಗಳನ್ನು, ಅನುಭವಗಳನ್ನು, ಅವಮಾನಗಳನ್ನು, ಏನನ್ನು ಬೇಕಾದರೂ ಯಾವುದೇ ಸಂಕೋಚವಿಲ್ಲದೆ, ಇದೆಲ್ಲ ನನಗೆ ಆದದ್ದು ಎಂಬ ಹೆಮ್ಮೆಯೂ ಇಲ್ಲದೆ, ದಿನ ನಿತ್ಯ ಮಾತಾಡುವಷ್ಟೇ ಸಹಜವಾಗಿ ಮಾತಾಡುವವರು. ಅಥವ ಊಟ ಆಯಿತೆ? ಚೆನ್ನಾಗಿದ್ದೀರಾ ಎಂಬ ಮಾತು ಬಿಟ್ಟರೆ ನಾವಾಗಿ ಏನೂ ಕೇಳದಿದ್ದರೆ ಏನೂ ಆಗಿಲ್ಲವೆಂಬಂತೆ ಸಹಜವಾಗಿ ಸುಮ್ಮನೆ ಇರುವವರು. ಜನ ಅಮ್ಮ ಎಂದು ಕರೆಯುವ ಅವರ ಹೆಂಡತಿಯೂ ಅಷ್ಟೆ. ಅಗಲವಾದ ಗುಂಡು ಮುಖ, ತಲೆಯ ಮೇಲೆ ಹೊದ್ದ ಸೆರಗು. ಫಲವತ್ತಾದ ಎರೆ ನೆಲದ ಬಣ್ಣದ ಅಗಲ ಮುಖದ ಮೇಲೆ ಸದಾ ಇರುವ ಬೆಳುದಿಂಗಳಂಥ ನಗು. ಸುಮ್ಮನೆ ಇರುತ್ತಾರೆ. ಬರೀ ಮಾತಿಲ್ಲದೆ ಸುಮ್ಮನೆ ಇರುವುದಲ್ಲ, ಮನಸ್ಸಿನೊಳಗಿನಿಂದಲೂ ಸುಮ್ಮನೆ ಇದ್ದಾರೆ ಅನ್ನಿಸುವ ಹಾಗೆ ಸುಮ್ಮನೆ ಇರುತ್ತಾರೆ. ಸಂತನೊಬ್ಬ ಹೀಗೆ ಇರಬೇಕೆಂದು ಸಾಮಾನ್ಯವಾಗಿ ಕಲ್ಪಿಸಿಕೊಳ್ಳುತ್ತೇವಲ್ಲ ಹಾಗೆ ಇಲ್ಲವೇ ಇಲ್ಲ ಅವರಿಬ್ಬರೂ. ತಮ್ಮನ್ನು ತಾವು ಸಂತ ಎಂದೂ ಕರೆದುಕೊಳ್ಳುವುದಿಲ್ಲ. ಬಹಳ ಸಹಜವಾಗಿ ಇರುತ್ತಾರೆ. ಅದೇ ಅವರ ಅಸಾಮಾನ್ಯತೆ.

‘ಅಸಹಜಕ್ಕಲ್ಲದೆ ಲೋಕ ಭಜಿಸದು’. ಹೀಗಂದವನು ಅಲ್ಲಮಪ್ರಭು. ಜನಕ್ಕೆ ಸಂತನೊಬ್ಬ ಅತಿ ವಿಶೇಷವಾಗಿರಬೇಕೆಂಬ ಆಸೆ ನಮಗೆ ಇರುತ್ತದೆ. ಬಹುಶಃ ಇರುವುದನ್ನು ಇರುವಂತೆ ಕಾಣುವ ಸಾಮರ್ಥ್ಯ ಸಂತರಿಗೆ ಇರುತ್ತದೆ. ಉದ್ದೇಶರಹಿತರಾಗಿ ಏನೆಲ್ಲ ಮಾಡುತ್ತಾ ಆದರೆ ಏನೂ ಮಾಡದೆ ಸುಮ್ಮನೆ ಇರಬಲ್ಲವರು. ಅಸಾಮಾನ್ಯರಾಗುವ ಆಸೆ ಕೂಡ ಅವರಲ್ಲಿರುವುದಿಲ್ಲವೋ ಏನೋ. ಆದರೆ ನಾವೆಲ್ಲ ಬೇರೆ ಏನೋ ಆಗಬೇಕು, ಬೇರೆ ಥರ ಇರಬೇಕು ಅನ್ನುವ ಆಸೆ ಇಟ್ಟುಕೊಂಡವರು. ನಮ್ಮ ಮನಸ್ಸಿನ ತುಂಬ ಆಸೆಯ ನೆರಳುಗಳು.

ಅದು ನಾನು ಸಾಮಾನ್ಯವಾಗಿ ನೋಡಿರುವಂಥ ಮದುವೆಗಳಂತೆ ಇರಲಿಲ್ಲ. ಅಲ್ಲಿದ್ದ ನೂರಕ್ಕೆ ತೊಂಬತ್ತು ಜನ ಹಳ್ಳಿಯವರು. ಎಲೆ ಅಡಿಕೆ ಅಗಿದ ಬಾಯಿಗಳು, ಕಪ್ಪು ಮುಖ, ಇಷ್ಟೂ ಕೊಬ್ಬಿಲ್ಲದ ಮೀನುಖಂಡಗಳು, ಮೈಗೆ ಒಗ್ಗದೆ ಮುಜುಗುರ ಮಾಡುತ್ತಿರುವ ಅಪರೂಪಕ್ಕೆ ಒಗೆದ, ಅಥವ ಹೊಸತಾದ ಬಟ್ಟೆಗಳು, ಹಿಂದಿನ ರಾತ್ರಿ ಉರಿದು ಬೂದಿಯಾದ ಬೆಂಕಿ ಗುಪ್ಪೆಯಲ್ಲಿ ಬೂದಿ ಕೆದರುತ್ತ ಆಡುತ್ತಿರುವ ಮಕ್ಕಳು, ಸಂತನ ಬಗ್ಗೆ ಅವರಿಗೆಲ್ಲ ಭಕ್ತಿ ಇದೆಯೋ, ಭಯ ಇದೆಯೋ, ಅಥವ ಬದುಕಿನ ಅನೇಕ ವೈಪರೀತ್ಯಗಳನ್ನೆಲ್ಲ ಒಪ್ಪಿಕೊಂಡಂತೆ ಇದೂ ಇನ್ನೊಂದು ಎಂದು ಸುಮ್ಮನೆ ಇದ್ದಾರೋ? ಅವರ ನಡುವೆ ಮೊಳಕಾಲವರೆಗೆ ಟವಲಿನಂಥ ಕಾವಿ ಪಂಚೆ ಉಟ್ಟು, ತುಂಬು ತೋಳಿನ ಹಳೆಯ ಸ್ವೆಟರು ತೊಟ್ಟು, ಚಿಕ್ಕದಾಗಿ ಕತ್ತರಿಸಿದ ಬಿಳಿ ಬಿಳಿ ಕರಿ ಕರಿ ಕೂದಲು ಬಾಚಿಯೂ ಬಾಚದಂತೆ, ಸ್ನಾನ ಮಾಡಿದ್ದರೂ ಮಾಡಿಲ್ಲವೇನೋ ಎಂಬತಿರುವ ಮುಖ ಹೊತ್ತು, ಎರಡೂ ಕಂಕುಳಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು, ‘ಎಲ್ಲಾರ್‍ಗೂ ತಾಂಬೂಲಕೊಟ್ಟು, ಎಲ್ಲಾರ್‍ಗೂ ಅಂದ್ರೆ ಎಲ್ಲಾರ್‍ಗೂ ಕೈ ಮುಗ್ದು ನಮಸ್ಕಾರ ಮಾಡ್ಬೇಕು’ ಅಂತ ಹೆಂಗಸರಿಗೆ ಹೇಳುತ್ತಾ, ಬಸಿದ ಅನ್ನದ ರಾಸಿ ನೋಡುತ್ತಾ, ಕಾಲಿಗೆ ಬಿದ್ದವರ ನಮಸ್ಕಾರವನ್ನು ನಿಶ್ಚಲವಾಗಿ ನಿಂತು ಸ್ವೀಕರಿಸುತ್ತಾ, ಇಲ್ಲ ಸುಮ್ಮನೆ ಹೋಗಿಮೂಲೆಯ ಮೆಟ್ಟಿಲ ಮೇಲೆಕೂರುತ್ತಾ, ಎದ್ದು ಅಡ್ಡಾಡಿ ಹೋಗಿ ಮಂಚದ ಮೇಲೆ ಮಲಗುತ್ತಾ, ಆಗಾಗ ಎಲೆ ಅಡಿಕೆ ಜಗಿಯುತ್ತಾ, ಯಾವಾಗ ಬಂದ್ರಿ, ಚೆನ್ನಾಗದೀರಾ ಅಂತ ಎಲ್ಲರನ್ನೂ ಮಾತಾಡಿಸುತ್ತಾ ಇರುವ ಸಂತ, ಬೆಳಗಿನ ಎಳೆ ಬಿಸಿಲಲ್ಲಿ, ದೊಡ್ಡ ಬಯಲಲ್ಲಿರುವ ಪುಟ್ಟ ದೇವಾಲಯದ ಮೂಲೆಯಲ್ಲಿ ಕುಳಿತು ಕೈಗೆ ಬಳೆ ಇಡಿಸಿಕೊಳ್ಳುತ್ತಿರುವ ಸಂತ ಪತ್ನಿ. ಅದು ಆಶ್ರಮವಾದರೂ ನಾಲ್ಕೇ ಹೆಜ್ಜೆ ಆಚೆ ಬಂದು ನಿರಾಳವಾಗಿ ಬೀಡಿ ಸೇದುತ್ತಿರುವ ಬೊಚ್ಚುಬಾಯಿ ಮುದುಕ. ಸುಮಾರು ಸಾವಿರ ಜನ, ಅವರ ಲಯವೇ ಬೇರೆ. ಅವರ ನಡುವೆ ಗಾಯಕ್ಕೆ ಹಚ್ಚಿದ ಪ್ಲಾಸ್ಟರಿನಂತೆ ಎದ್ದು ಕಾಣುವ ಬೆಂಗಳೂರಿನಿಂದ ಹೋದ ನನ್ನಂಥವರು. ಅಲ್ಲಿ ಸೇರಿದ್ದ ಜನರ ಲೋಕದಲ್ಲಿ ನನ್ನಂಥವರಿಗೆ ಜಾಗವಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸಿನೊಳಗೆ ಕಟ್ಟಿಕೊಂಡಿರುವ ಲೋಕದಲ್ಲಿ ಈ ಜನದ ಬಗ್ಗೆ ವಿಚಾರ, ಅಭಿಪ್ರಾಯ, ತತ್ವಸಿದ್ಧಾಂತಗಳ ನೆರಳುಗಳಿವೆ. ಅವರಿಗೂ ನನ್ನಂಥವರು ನೆರಳುಗಳಾಗಿಯೇ ಕಾಣುತ್ತಿರಬಹುದು. ಸೂರ್ಯಕಾಂತಿಗೂ, ಬೆಳುದಿಂಗಳಲ್ಲಿ ಕಾಣುತ್ತಿರುವ ಅವುಗಳ ನೆರಳಿಗೂ ನನಗೂ ನಡುವೆ ಮುಳ್ಳುಬೇಲಿ, ಸೂರ್ಯನೇ ಇರಲಿ, ಚಂದ್ರನೇ ಇರಲಿ, ತನ್ನಪಾಡಿಗೆ ತಾನು ಇರುವ ಸೂರ್ಯಕಾಂತಿ. ಸರಿ, ತಪ್ಪು, ಸಮರ್ಥನೆ, ವಿರೋಧ, ಒಳಿತು, ಕೆಡುಕು, ಏನೂ ಇಲ್ಲದೆ ಸುಮ್ಮನೆ ಇರುವ ತೆಂಗು, ಬೆಳುದಿಂಗಳು, ಜೋಳ, ದೂರದಲ್ಲಿ ಗೋಪುರ, ಹತ್ತಿರದಲ್ಲಿ ಕೇಳುತ್ತಿರುವ ಭಜನೆ. ಇನ್ನೂ ಮನಸ್ಸು ತುಂಬಿಕೊಂಡಿರುವ ಸೂರ್ಯಕಾಂತಿಯ ನೆರಳುಗಳು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...