Home / ಕವನ / ಕವಿತೆ / ಚಿತ್ರದ ಅಂಗಡಿ

ಚಿತ್ರದ ಅಂಗಡಿ

ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು

ಅಮಾ, ಚಿತ್ರದ ಅಂಗಡಿ ನೋಡೆ !
ಸುಂದರ ಸೊಬಗಿನ ಅಂಗಡಿ ನೋಡೆ !
ಬಗೆ ಬಗೆ ಬಣ್ಣದ ಪಟಗಳ ನೋಡೆ !
ಭಾರತದೇಶದ ಚಿತ್ರವನೋಡೆ ! || ೧ ||

ಅಮ್ಮಾ, ಇಲ್ಲಿದೆ ಹೆಚ್ಚಿನ ಚಿತ್ರ !
ಸಕಲರ ಮನವನು ಸೆಳೆಯುವ ಚಿತ್ರ !
ಇದುವೇ ನಾ ಹಟ ಮಾಡಿದ ಚಿತ್ರ !
ಕನ್ನಡ ಕುವರರ ಹೆಮ್ಮೆಯ ಚಿತ್ರ ! || ೨ ||

ಸುಂದರ ಬನಗಳ ಚಿತ್ರಿಪ ಚಿತ್ರ !
ಗುಡ್ಡ ಬೆಟ್ಟಗಳು ತುಂಬಿಹ ಚಿತ್ರ !
ಗೋದಾವರಿ ಹೊಳೆ ಹರಿದಿಹ ಚಿತ್ರ !
ಕಾವೇರಿಯು ತಾ ಕಾಖವ ಚಿತ್ರ ! || ೩ ||

ಅಮಾ, ಇಲ್ಲಿಹ ಗುಡಿಗಳ ನೋಡು !
ಜಕ್ಕಣ ಶಿಲ್ಪಿಯ ಜಾಣ್ಮಯ ನೋಡು !
ವಿಜಯನಗರದಾ ವೈಭವ ನೋಡು !
ಹುಕ್ಕ ಬುಕ್ಕ ಮಾಧವರನು ನೋಡು ! || ೪ ||

ಅಮ್ಮಾ, ಕುಮಾರವ್ಯಾಸನ ಚಿತ್ರ !
ಕಲ್ಯಾಣದ ಆ ಬಸವನ ಚಿತ್ರ !
ಚೆನ್ನಮ್ಮನ ಕಿತ್ತೂರಿನ ಚಿತ್ರ !
ಬೆಳವಡಿ ರಾಣಿಯ ಶೌರ್ಯದ ಚಿತ್ರ ! || ೫ ||

ಅಮ್ಮಾ, ಇದದೋ ಹಳ್ಳಿಯ ಚಿತ್ರ !
ನೇಗಿಲ ಹೊಡೆಯುವ ಯೋಗಿಯ ಚಿತ್ರ !
ರಾಟಿಯ ತಿರುಗಿಹ ಭಗಿನಿಯ ಚಿತ್ರ !
ಖಾದಿಯ ಕೊಳ್ಳುವ ಜನಗಳ ಚಿತ್ರ ! || ೬ ||

ಅಮ್ಮಾ ! ಭೀಕರ ದೃಶ್ಯವಿದಲ್ಲೆ ?
ಬಡವನ ಗೋಳಿನ ಚಿತ್ರವಿದಲ್ಲೆ ?
ಹೊಲೆಯರೆಂದು ಸಲೆ ಹಳಿಯುವರಲ್ಲೆ ?
ದಾಸ್ಯದ ದಾಹದಿ ಬಳಲುವರಲ್ಲೆ ? || ೭ ||

ಅಮ್ಮಾ, ಇಲ್ಲಿಹ ನೋಟವಿದೇನು ?
ಕನ್ನಡದಮ್ಮನು ಅಳುತಿಹಳೇನು ?
ಕರುನಾಡಿನ ಜನ ಮಲಗಿಹುದೇನು ?
ಪರನಾಡಿನ ಜನ ಬರುತಿಹುದೇನು ? || ೮ ||

ಅಮ್ಮಾ, ಬೇಕಿದು ಚಿತ್ರವು ನೋಡು !
ಅಯ್ಯೋ ! ಮರಾಠ ಬಂದನು ನೋಡು !
ತೆಲುಗನು ಬಂದನು ಕೊಳ್ವನು ನೋಡು !
ಅಪ್ಪನ ಹುಡುಕುವ ಬೇಗನೆ ಓಡು || ೯ ||

ಅಪ್ಪಾ ! ಅಪ್ಪಾ !! ಎಲ್ಲಿಹೆ ಬಾರೊ !
ಪ್ರೀತಿಯ ಚಿತ್ರವ ಕೊಳ್ವರು ಬಾರೋ !!
ಕರ್ನಾಟಕವಿದು ಪೊಪುದು ಬಾರೋ !!!
ಕನ್ನಡಿಗನೆ ನೀ ಬೇಗನೆ ಬಾರೋ !!!! || ೧೦ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...