Home / ಕಥೆ / ಸಣ್ಣ ಕಥೆ / ಪಂಜುಗಳ ಯುದ್ಧ

ಪಂಜುಗಳ ಯುದ್ಧ

ಚಿಕ್ಕದೇವರಾಜ ಒಡೆಯರು ರಾಜರಾದಮೇಲೆ ಮರಾಟೆಯವರು ದಂಡೆತ್ತಿ ಬರುವುದಕ್ಕೆ ಮೊದಲಾಯಿತು. ಪಟ್ಟಕ್ಕೆ ಬಂದ ಮೇಲೆ ರಾಜರು ತಮ್ಮ ದಳವಾಯಿ ಕುಮಾರಯ್ಯನನ್ನೂ ಆತನ ಮಗ ದೊಡ್ಡಯ್ಯನನ್ನೂ ತಿರುಚನಾಪಳ್ಳಿಯನ್ನು ಗೆಲ್ಲಲು ಕೊಟ್ಟು ಕಳುಹಿಸಿದರು. ಆಗ ಅಕಸ್ಮಾತ್ತಾಗಿ ಮರಾಟೆಯವರ ಒಂದು ದಂಡು ನುಗ್ಗಿ ಬಂದು ಶ್ರೀರಂಗಪಟ್ಟಣದ ಸಮೀಪದಲ್ಲಿ ಕಲಸಗೆರೆ ಕೊತ್ತತ್ತಿ ಎಂಬ ಗ್ರಾಮದ ಬಳಿ ಮೈದಾನದಲ್ಲಿ ಇಳಿದುಕೊಂಡರು.

ಒಡೆಯರು ಆಗಲೇ ದೊಡ್ಡಯ್ಯನನ್ನು ಕೆಲವು ಸೇನೆಯೊಡನೆ ಶ್ರೀರಂಗಪಟ್ಟಣಕ್ಕೆ ಕಳುಹಿಸುವಂತೆ ದಳವಾಯಿ ಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದರು. ದೊಡ್ಡಯ್ಯನು ಕಾವೇರೀ ಪುರದ ಕಣಿವೆಯ ಮಾರ್ಗವಾಗಿ ಬರುತ್ತಿದ್ದನು. ಅಷ್ಟರಲ್ಲಿ ಮೊರಾಟೆಯವರ ದಂಡು ಬಂದು ಪ್ರತ್ಯಕ್ಷವಾಗಲು ರಾಜರು ದೊಡ್ಡಯ್ಯನಿಗೆ “ಈ ಕಲಸಗೆರೆ ಕೊತ್ತತ್ತಿ ಗ್ರಾಮದ ಬಳಿ ಇಳಿದಿರುವ ಮರಾಟೆಯವರ ಸೈನ್ಯದ ಸಮೀಪಕ್ಕೆ ಯಾರೂ ಅರಿಯದಂತೆ ಸಂಚರಿಸತಕ್ಕದ್ದು; ಅಲ್ಲಿ ಸೇರಿದ ಕೂಡಲೆ ನಮ್ಮ ದಂಡಿನಲ್ಲಿರುವ ೨-೩ ಸಾವಿರ ದನದ ಕೊಂಬುಗಳಿಗೆ ಅಪಾಯವಿಲ್ಲದ ಹಾಗೆ ಪಂಜುಗಳನ್ನು ಕಟ್ಟಿ ಮೂರು ಕಡೆಯಿಂದಲೂ ಸೈನ್ಯವು ತಮ್ಮನ್ನು ಸುತ್ತಿಕೊಂಡಿತೆಂಬ ಭ್ರಾಂತಿಯು ಮರಾಟೆಯವರ ಮನಸ್ಸಿನಲ್ಲಿ ಹುಟ್ಟುವಂತೆ ಅವುಗಳನ್ನು ರಾತ್ರಿಯಲ್ಲಿ ಚದರಿಸತಕ್ಕದ್ದು; ಅವರು ಭ್ರಾಂತರಾದ ವೇಳೆಯಲ್ಲಿ ನೀವು ಅವರನ್ನು ತಾಗತಕ್ಕದ್ದು. ಸಮಯಕ್ಕೆ ಸಹಾಯಮಾಡುವಂತೆ ಶ್ರೀರಂಗಪಟ್ಟಣದಿಂದ ಬೇರೊಂದು ಸೈನ್ಯವನ್ನು ಕಳುಹಿಸುತ್ತಿದ್ದೇವೆ” ಎಂದು ಆಜ್ಞೆ ಮಾಡಿದರು. ದೊಡ್ಡಯ್ಯ ಮುಂತಾದ ಸೇನಾನಾಯಕರು ಅದರಂತೆಯೇ ದನಗಳಿಗೆ ಪಂಜುಗಳನ್ನು ಕಟ್ಟಿಸಿ ಮೂರು ದಿಕ್ಕಿಗೂ ಓಡಿಸಿ, ಉಳಿದ ದಿಕ್ಕಿನಿಂದ ಸಂಚರಿಸುತ್ತ ಮರಾಟೆಯವರ ಮೇಲೆ ಬಿದ್ದರು. ಮರಾಟೆಯವರಿಗೆ ದಿಕ್ಕು ತೋಚದಂತಾಗಿ ತಾರುಮಾರಾಗಿ ಪಲಾಯನಮಾಡಿದರು. ಬೆಳಕು ಹರಿದಾಗ ಅವರ ಉಗ್ರಾಣವೆಲ್ಲವೂ ದೊಡ್ಡಯ್ಯನ ಕೈಗೆ ಬಂತು. ಮರಾಟೆಯವರ ನಾಯಕರ ತಲೆಗಳನ್ನು ಕತ್ತರಿಸಿ ಸೈನಿಕರು ದೊಡ್ಡಯ್ಯನಿಗೆ ಸಮರ್ಪಿಸಿದರು. ದೊಡ್ಡಯ್ಯನು ಆ ತಲೆಗಳನ್ನು ತೆಗೆಸಿಕೊಂಡು ದೊರೆಗಳ ಸನ್ನಿಧಿಗೆ ಬಂದು ಅಡ್ಡ ಬಿದ್ದು ಎಲ್ಲ ಸಂಗತಿಯನ್ನೂ ಬಿನ್ನಯಿಸಿದನು. ಒಡೆಯರು ಆ ತಲೆಗಳಲ್ಲಿ ಶ್ರೀರಂಗಪಟ್ಟಣದ ಕೋಟೆ ಬಾಗಲಿಗೊಂದನ್ನೂ ಮೈಸೂರು ಕೋಟೆ ಬಾಗಲಿಗೊಂದನ್ನೂ ಕಟ್ಟಿಸಿದರು. ದೊಡ್ಡಯ್ಯ ಮುಂತಾದ ಸೇನಾ ನಾಯಕರಿಗೆ ಬಹಳ ಸನ್ಮಾನವು ದೊರೆಯಿತು.
*****
[ವಂಶರತ್ನಾಕರ, ಪುಟ ೧೦೮, ವಂಶಾವಳಿ ೧೧೪-೫, ವಿಲ್ಕ್ಸ್, ಪುಟ ೬೧]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...