Home / ಕವನ / ಕವಿತೆ / ನಿರೀಕ್ಷೆ

ನಿರೀಕ್ಷೆ

ಮೋಹನ


ಮೂರು ದಿನಗಳು ಜಾರಿದುವು, ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ! ನನ್ನವ
ಬಾರನೇಕೆನುತಿರುವೆನು.
ಬರುವೆನೆನ್ನುವ ಓಲೆಯಿಲ್ಲವ-
ನರುಹಿದೊಸಗೆಗಳಿಲ್ಲ,
ಬರುವನೆನ್ನುತ ಬಗೆಯಿದೇನೋ
ಮೊರೆಯುತಿದೆ ಸುಳ್ಳಲ್ಲ.
ಎಂತಲೇ ದಿನವೆಲ್ಲಾ….
ಎಂತಲೇ ದಿನವೆಲ್ಲ ಹೀಗೆಯೆ
ನಿಂತು ನಿರುಕಿಪೆನಲ್ಲಾ !


ಸದ್ದನಾವುದ ಕೇಳಿದರೆ ಜು-
ಮ್ಮೆದ್ದ ಮೈಮನದಿಂದ
ಎದ್ದು ನೋಡುವೆ ಇನಿಯನೆಂದೇ
ಹೊದ್ದಿದಾತುರದಿಂದ.
ಆತನಲ್ಲದೆ ಇರಲು ಬಯಕೆಯು
ಬೀತು ಬಳಲಿಕೆಯಾಂತು,
ಕಾತರದಿ ಬಂದೊಳಗೆ ಬೀಳುವೆ-
ಕಾಯ್ದ ಸುಯ್ಲಲಿ-ಸೋತು.
ಮತ್ತೆ ಆಶೆಯು ಕೂಗಿ ….
ಮತ್ತೆ ಆಶಯು ಕೂಗಿ ಕರೆಯಲು
ಒತ್ತಿ ಏಳುವೆ ಬೀಗಿ.


ದೂರ ಬರುತಿರಬಹುದು ನನ್ನಾ
ನೀರನೆಂಬ ವಿಚಾರದಿ,
ಏರಿ ನೆಲೆಮನೆ ಹುಬ್ಬಿನೊಳು ಕೈ-
ಯೂರಿ ನಿರುಕಿಪೆ ದೂರದಿ;
‘ಏನಿದಿವಳಾರನ್ನು ನೋಡುವ-
ಳೇನಿದಾತುರ?’ ಎನ್ನುತ
ಆಡುವುದೆ ಜನ ?-ಎಂದು ಸುತ್ತಲು
ನೋಡುವೆನು ನಾನಂಜುತ
ಬರಲಿರುವನವನೆಂದು….
ಬರಲಿರುವನೆಂಬೀ ಬಗೆಯ ಬರಿ-
ಮೊರೆತಕೇನೆನಲಿಂದು ?
* * *

ಮೂರು ದಿನಗಳು ಜಾರಿದುವು ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ? ನಲ್ಲನು
ಬಾರನೇಕೆನುತಿರುವೆನು.
ಮನವನ್ನೇತರೊಳೊ
ಹೆಣೆದವನ ಮರೆಯಲಿಕೆ
ಹಣುಗಿಯೇ ಹಣುಗುವೆನು, ಆದರೇನು !


ಕಿಡಗೇಡಿ ತಂಗಾಳಿ-
ಯೊಡನೆ ಬಂದಾ ನೆನಹು
ಒಡಲ ಜುಽಮ್ಮೆನಿಸಿ ನವಿರೇರಿಸುವುದು.
ಬೆಳುದಿಂಗಳೊಡಗೊಂಡು
ತಿಳಿಯದಂತೈತಂದು
ಕಳವಳವ ಕರುಳಿನೊಳಗೂರಿಸುವುದು.


ತನ್ನವಳ ಜೊತೆಗೂಡಿ
ಹಾಡುತಿಹ ಹಕ್ಕಿಯುಲಿ
ತನ್ನ ಮಟ್ಟಕೆ ಸುಮ್ಮನಿರಬಾರದೆ?
ನನ್ನ ದೇನಿರಲು ಬಹು-
ದನ್ನೆಯವು ! ಅವನ ನೆನ-
ಪನ್ನು ಕಿವಿಗೊತ್ತಿ ಕಾಡುವುದು ಬರಿದೆ.


ಸುಡಲಿ, ಬಂದಿತಿದೇಕೊ
ಜಡಿಯ ಮೋಡದ ಜಿನುಗು !
ಹಿಡಿದು ಬೆಸೆವುದು ಆತನಾಶೆಯೊಡನೆ,
ಇಡಿದ ಕತ್ತಲೆಯಿರುಳು
ಮಿಡುಕುತೊಬ್ಬಳೆ ಮಲಗಿ-
ದೆಡೆಗೆ ಕಳುಹುವುದವನ ಬಯಕೆಯನ್ನೇ.


ಮುಳಿಸು ಹೆಮ್ಮೆಗಳಲ್ಲಿ
ಮಾಡಿದಾ ನಿರ್ಣಯವು
ಗಳಿಗೆಯರೆಗಳಿಗೆಯೂ ನಿಲ್ಲದಿಹುದು.
ನನಗಿರುವ ಆತುರವು
ಇನಿಯಗೇಕಿರದೆಂದು
ಜಿನುಗಿ ನನ್ನೆದೆಯುಸಿರ ಚೆಲ್ಲುತಿಹುದು.


‘ಇನಿತೊಂದು ಹಲುಬಿ ಕಂ-
ಬನಿಯಿಡುವೆನವಗಾಗಿ
‘ನೆನಪಾದರೂ ಇಹುದೆ ನನ್ನದವಗೆ?’
ಎನುವ ಯೋಚನೆ ಬರಲು
ಮುನಿಸು ಮೊಗದೋರಿ ನಾ-
ನೆನುವೆ ‘ಇನಿತೇಕೆ ಮನದಳಲು ನನಗೆ ?’
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...