Home / ಕವನ / ಕವಿತೆ / ಒಂದು ಸಲ ಹೀಗಾಯಿತು

ಒಂದು ಸಲ ಹೀಗಾಯಿತು

ಕಲ್ಲಿನಂತಿದ್ದ ಹಲ್ಲನ್ನು
ಕಾಣದ ಕ್ರಿಮಿಗಳು ತಿಂದು
ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು.
ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ
ನಿಂತರೆ ನೋವು, ಕೂತರೆ ನೋವು
ಮುಖ ಬಾತು ಮೂತಿ ಕುಂಬಳಕಾಯಾಯಿತು.
ಕಂಡ ಸ್ನೇಹಿತರೆಲ್ಲ ಕಷ್ಟಪಟ್ಟು ಗುರುತಿಸಿ
“ಏನೋ ಹನುಮಂತರಾಯ
ಹೆಸರು ನಿಜಮಾಡಿಕೊಂಡೆಯಲ್ಲೋ
ಯಾರ ಪ್ರಸಾದವಪ್ಪಾ” ಎಂದು ಕಿಚಾಯಿಸಿದರು!
ವಿಚಾರವೆಲ್ಲ ತಿಳಿದು –
“ಹಲ್ಲಿನ ಹಳ್ಳ ಮುಚ್ಚಿಸಿಬಿಡು ಅಥವಾ
ಹಾಳು ಹಲ್ಲೇ ಕಿತ್ತಿಸಿಬಿಡು
ಜೊತೆಗೇ ವಕ್ರ ಹಲ್ಲೆಲ್ಲ ಎತ್ತಿಸಿಬಿಡು!”
ಡೆಂಟಿಸ್ಟ್ ಜವರಪ್ಪ ಗೊತ್ತಲ್ಲ
ಮಹಾಪ್ರಚಂಡ
ಪಿಯುಸಿಲಿದ್ದಾಗಲೇ ಮೆಡಿಕಲ್ ಸೀಟು ಗಿಟ್ಟಿಸಿ
ತೊಂಬತ್ನಾಲ್ಕು ಪರ್ಸೆಂಟಿಗೇ ಟಾಂಗು ಕೊಟ್ಟ ಪಿಂಡ!
ಬಹಳ ವರ್ಷ ಓದಿದ್ದಾರೆ
ಬಹಳ ಪರೀಕ್ಷೆ ಬರೆದಿದ್ದಾರೆ
ಬಂದ ಕೇಸು ಎಂಥದೇ ಇರಲಿ
ಚೂರೂ ಉಳಿಯದಂತೆ ಕೀಳುತ್ತಾರೆ
ಹೋಗು, ಇಡಿಯ ಬಾಯೇ ಸರಿ ಮಾಡುತ್ತಾರೆ”
ಅಂತ ನಗುತ್ತ ಸಲಹೆ ಕೊಟ್ಟು
ಟಾಟಾ ಗುಡ್‌ಬೈ ಫೇರ್‌ವೆಲ್ ಎಲ್ಲ ಕಿರಿಚಿ ಹೋದರು.
ಬೆಳಿಗ್ಗೆ ಎದ್ದವನೇ ಡಾಕ್ಟರಲ್ಲಿಗೆ ಓಡಿದೆ.
ಸೋಡಾ ಸೀಸೆ ಕನ್ನಡಕದ
ಸೇಡಿನ ಛಾಯೆ ಮುಖದ
ಆರಡಿ ಸೈಂಧವ ಡಾಕ್ಟರನ್ನು ನೋಡಿ
ಒಳಗೇ ಜೀವ ನಡುಗಿತು.
ಬ್ಯಾಸ್ಕೆಟ್‌ಬಾಲ್‌ ಕ್ಯಾಪ್ಟನ್ನಿನಂತಿದ್ದ ಡಾಕ್ಟರು
ಕುರ್ಚಿಗೆ ನನ್ನನ್ನು ತಳ್ಳಿ
ಕಣ್ಣೆತ್ತರಕ್ಕೇರಿಸಿಕೊಂಡರು
ಮರದ ಸಣ್ಣ ಸುತ್ತಿಗೆ ಎತ್ತಿಕೊಂಡು
ತಲೆಗೆ ಸರ್ಚ್‍ಲೈಟ್ ಬಿಟ್ಟರು.
ಸುತ್ತಿಗೆಯಿಂದ ಮೆತ್ತಗೆ ನೆತ್ತಿ ಮೇಲೆ ಬಡಿದರು
ಕತ್ತಿನ ಕೆಳಗೆ ಬಡಿದರು
ಕುತ್ತಿಗೆ ಪಕ್ಕ ಬಡಿದರು.
ಗಾಬರಿಯಾಗಿ ‘ಡಾಕ್ಟರೇ!’ ಎಂದೆ.
‘ಯೋಚನೆ ಬೇಡಿ ಎಲ್ಲ ನಿರ್ನಾಮ ಮಾಡಿಬಿಡುತ್ತೇನೆ’ ಎಂದರು
‘ಅಲ್ಲಲ್ಲ ಡಾಕ್ಟರೇ, ಇಲ್ಲಿ ಹಲ್ಲು’ ಎಂದೆ.
‘ಹಯ್ಯೋ ಅಜ್ಞಾನವೆ!
ಅಲ್ಲಿಗೆ ಇಲ್ಲಿಗೆ ಹಲ್ಲಿಗೆ
ನಡುನೆತ್ತಿಯಿಂದ ಎಲ್ಲೆಂದರಲ್ಲಿಗೆ
ಎಲ್ಲದಕ್ಕೂ ಸಂಬಂಧವಿದೆ ಇವರೆ
ಇಲ್ಲಿ ತಟ್ಟಿದರೆ ಅಲ್ಲಿ ಅಲುಗಬೇಕು, ಕೇಳಿಲ್ಲವಾ
You cannot stir a stone
without disturbing a star’ ಎಂದರು!
ಒಳ್ಳೆ ಗ್ರಹಚಾರವಾಯಿತಲ್ಲ ಎನ್ನಿಸಿತು.
ಚಾಕು ಸೂಜಿ ಕತ್ತರಿ ಎಲ್ಲ
ನನ್ನೆದುರೇ ಕುದಿಸಲು ಹಾಕಿ
ಕೂತಿರಿ ಹೊರಗೆ ಮತ್ತೆ ಕರೆಯುತ್ತೇನೆ ಒಳಗೆ
ಎಂದರು ಡಾಕ್ಟರು.
ಅದುರುವ ಎದೆ ಹಿಡಿದು ಕೂತು
ಎದುರಿಗಿದ್ದ ಪೇಪರ್ ಎತ್ತಿಕೊಂಡರೆ
ಮುಖಪುಟದಲ್ಲೇ ವೈದ್ಯರ ಚಳುವಳಿ
ಕ್ಯಾಪಿಟೇಷನ್ ರದ್ದು ಮಾಡಿ ಕತ್ತೆಗಳನ್ನು ಹೊರದೂಡಿ
ಎಂಬ ದಪ್ಪಕ್ಷರದ ಕಳಕಳಿ!

ಪರಿಸ್ಥಿತಿ ಅರ್ಥವಾಯಿತು.
ಕುದಿಯುವ ಪದಾರ್ಥಗಳನ್ನು ಬದಿಯಲ್ಲಿದ್ದವರಿಗೆ ಬಿಟ್ಟು
ಹೇಳದೆ ಕೇಳದೆ ಡಾಕ್ಟರಿಗೆ
ಹಾರಿ ಹೊರಬಂದೆ ಬೀದಿಗೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...