ಕಾಲ ಕರುಳಿಲ್ಲದ ಕರೀ ಘಡವ,
ಕದಿಯುವುದರಲ್ಲಿ ಕತ್ತೆಭಡವ.
ಬಂತೆನ್ನಿ ಆಸಾಮಿ ಪಟ್ಟಿಗೆ
ಹಾರಿಸುತ್ತಾನೆ ಒಟ್ಟಿಗೆ:
ನಾಲಿಗೆಯಿಂದ ಮಾತು,
ಆಲಿಗಳಿಂದ ಬೆಳಕು,
ಎದೆಯಿಂದ ಚಿಲುಮೆ,
ಕೈಯಿಂದ ದುಡಿಮೆ.
ಹೀಗೆ ಕಿತ್ತು ಪಟ ಪಟ ಇಟ್ಟಿಗೆ
ತಳ್ಳಿಬಿಡುತ್ತಾನೆ ದೈತ್ಯ
ಬ್ರೂಸ್ಲೀಯನ್ನೂ ಸಹ
ಆರಡಿ ಅಗಲದ
ಮಣ್ಣಿನ ತೊಟ್ಟಿಗೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.