Home / ಕಥೆ / ಸಣ್ಣ ಕಥೆ / ಮಾರನಾಯಕನ ವಧೆ

ಮಾರನಾಯಕನ ವಧೆ

ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟೆಯ ಸಮೀಪಕ್ಕೆ ಅವರು ಬಂದರು. ಅಲ್ಲಿ ಕರೆಕಟ್ಟೆಯ ಮೇಲೆ ಅವರು ಇರುತ್ತಿರಲು, ವೀರಶೈವ ಕುಲದ ಕೆಲವು ಹೆಂಗಸರು ನೀರಿಗಾಗಿ ಅಲ್ಲಿಗೆ ಬಂದಿದ್ದು ಮಾತನಾಡಿಕೊಳ್ಳುತ್ತಿತ್ತುದನ್ನು ಕಿವಿಗೊಟ್ಟು ಕೇಳಿದರು. ಅವರ ಮಾತುಗಳಿಂದ ಅವರ ಕುಲದಲ್ಲಿ ಹುಟ್ಟಿ, ಶ್ರೇಷ್ಠವೆನಿಸಿದ್ದ ಕನ್ನಿಕೆಯೊಬ್ಬಳು ನೀಚಕುಲದವನೊಬ್ಬನನ್ನು ಮದುವೆ ಮಾಡಿಕೊಳ್ಳುವ ಸಂದರ್ಭವೊದಗಿತ್ತೆಂದು ತಿಳಿಯ ಬಂತು. ಸೋದರರು ಕುತೂಹಲದಿಂದ ಏನೆಂದು ವಿವರವನ್ನು ಕೇಳಿದರು; ಆ ಹೆಂಗಸರನ್ನು ಸಮಾಧಾನ ಮಾಡಿ ತಾವು ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಮಾಡಿದ ವಿಚಾರದಲ್ಲಿ ಈ ವಿವರವು ತಿಳಿಬಂದಿತು.

ಆ ಪ್ರದೇಶದ ಒಡೆಯನಿಗೆ ಚಿತ್ತಸ್ವಾಸ್ಥ್ಯ ತಪ್ಪಿತ್ತು; ಆತನಿಗೆ ಒಬ್ಬಳೇ ಮಗಳಿದ್ದಳು. ಈ ಸ್ಥಿತಿಯನ್ನು ಕಂಡು ನರೆಯಲ್ಲಿದ್ದ ಕಾರುಗಹಳ್ಳಿಯ ಪಾಳಯಗಾರನಾಗಿದ್ದ ಮಾರನಾಯಕನೆಂಬ ದೂತನು “ಆ ಕುಮಾರಿಯನ್ನು ನನಗೆ ವಿವಾಹಮಾಡಿಕೊಟ್ಟು ಹದನಾರನ್ನು ಬಿಟ್ಟು ಕೊಡಲಿ; ಇಲ್ಲವಾದರೆ ಯುದ್ಧಕ್ಕೆ ಸಿದ್ಧನಾಗಲಿ” ಎಂದು ಹೇಳಿಕಳುಹಿಸಿದ್ದನು. ಬೇರೆ ಗತಿಯಿಲ್ಲದ ಹದನಾರಿನವರು ವಿವಾಹಕ್ಕೆ ಸಮ್ಮತಿ ಕೊಟ್ಟಿದ್ದರು. ಹೀಗಿರಲು ವಿಜಯ ಕೃಷ್ಣರ ಉತ್ಸುಕತೆಯ ಮಾತು ತಿಳಿಯಿತು. ಆಗ ಅರಮನೆಯವರು ಅವಮಾನವನ್ನು ತಪ್ಪಿಸಿಕೊಳ್ಳುವ ಆಸೆಯಿಂದ ಆ ರಾಜಕುವರರನ್ನು ಕರೆಸಿ ಎಲ್ಲವನ್ನೂ ತಿಳಿಸಿದರು. ಸೋದರರಿಬ್ಬರು ಎಲ್ಲವನ್ನೂ ಅರಿತು ಕೋಟೆಯನ್ನು ರಕ್ಷಿಸಲು ಇದ್ದ ಅನುಕೂಲಗಳನ್ನೆಲ್ಲ ಪರೀಕ್ಷಿಸಿದರು ಕಡೆಗೆ ಹೊರಗಡೆ ಏನನ್ನೂ ತೋರ್ಪಡಿಸದೆ ವಿವಾಹದ ಕೆಲಸವನ್ನು ಎಂದಿನಂತೆ ನಡೆಸುವ ಹಾಗೆ ನಟಿಸುತ್ತಿರಬೇಕೆಂದು ಹೇಳಿಕೊಟ್ಟರು.

ವಿವಾಹದ ದಿನವು ಸಮೀಪವಾಯಿತು. ಮಾರನಾಯಕನ ಅಟ್ಟಹಾಸದಿಂದಲೂ ಗರ್ವದಿಂದ ಒಂದು ಅರಮನೆಯನ್ನು ಹೊಕ್ಕು, ಮದುವೆಯ ಔತಣಕ್ಕೆ ಸಿದ್ಧನಾದನು. ಮಾರನಾಯಕನೂ ಆತನ ಮುಖ್ಯಾಧಿಕಾರಿಗಳೂ ಒಂದು ತೊಟ್ಟಿಯಲ್ಲಿ ಊಟಕ್ಕೆ ಕುಳಿತರು. ಆತನ ಅನುಚರರಿಗೆ ಬೇರೊಂದು ತೊಟ್ಟಿಯಲ್ಲಿ ಅಣಿ ಮಾಡಿತ್ತು. ಅದೇ ವೇಳೆಯಲ್ಲಿ ಹದನಾರಿನ ಶೂರರನ್ನಾರಿಸಿಕೊಂಡು ಗೋಪ್ಯವಾಗಿ ಹೊಂಚುಹಾಕುತ್ತಿದ್ದ ವಿಜಯ ಕೃಷ್ಣರಿಬ್ಬರೂ ಒಳ್ಳೆ ಸಮಯ ಬಂದಕೂಡಲೆ ಅಕಸ್ಮಾತ್ತಾಗಿ ನುಗ್ಗಿ, ಮಾರನಾಯಕನ ಮೇಲೂ ಆತನ ಮುಖ್ಯಾಧಿಕಾರಿಗಳ ಮೇಲೂ ಹಾರಿಬಿದ್ದು ಇರಿದು ಕೊಂದುಬಿಟ್ಟರು. ಮಾರನಾಯಕನ ಇತರ ಅನುಚರರು ತಮ್ಮ ಧಣಿಯು ಹತನಾದುದನ್ನು ತಿಳಿದು ದಿಕ್ಕು ತೋಚದವರಾಗಿ ನಿರ್ಬಂಧಕ್ಕೆ ಸಿಕ್ಕಿದರು.

ಕೂಡಲೆ ವಿಜಯ ಕೃಷ್ಣರಿಬ್ಬರು ಹದನಾರಿನ ಸೈನ್ಯವನ್ನು ಸಿದ್ದಮಾಡಿಕೊಂಡು ಕಾರುಗಹಳ್ಳಿಯ ಕಡೆಗೆ ಹೊರಟು ಸುಲಭವಾಗಿ ಆ ಕೋಟೆಯನ್ನು ಹಿಡಿದುಕೊಂಡರು. ಏಕೆಂದರೆ ಅಲ್ಲಿದ್ದವರು ಹಟಾತ್ತಾಗಿ ಬಂದೊದಗಿದ ಈ ವಿಪತ್ತನ್ನು ಎದುರಿಸಲಾರದಿದ್ದುದಲ್ಲದೆ ಮಾರನಾಯಕನು ಮೃತನಾದನೆಂದು ತಿಳಿದು ಖಿನ್ನರಾಗಿದ್ದರು. ಕಾರುಗಹಳ್ಳಿಯನ್ನು ವಶಪಡಿಸಿಕೊಂಡ ಕೂಡಲೆ ರಾಜಕುವರರಿಬ್ಬರೂ ಹದನಾರಿಗೆ ಹಿಂತಿರುಗಿದರು. ಅಲ್ಲಿಯ ರಾಜಕುಮಾರಿಯು ಸಂತೋಷದಿಂದ ವಿಜಯನ ಕೊರಳಿಗೆ ಹೂಮಾಲೆಯನ್ನು ಹಾಕಿ ವರಿಸಿ ಮದುವೆಯಾದಳು. ಈ ವಿಜಯನೇ ಒಡೆಯರ ವಂಶದ ಮೂಲಪುರುಷನಾದ ಯದುಒಡೆಯರು.
*****
[ಮಿಲ್ಕ್ಸ್ ಸಾಹೇಬಕ ಗ್ರಂಥದಾಧಾರ; ಈ ವೃತ್ತಾಂತದಲ್ಲಿ ವಂಶರತ್ನಾಕರ, ವಂಶಾವಳಿಗಳಿಗಿಂತಲೂ ವಿಲ್ಕ್ಸ್ ರವರ ಲೇಖನದಲ್ಲಿಯೇ ಹೆಚ್ಚು ಸತ್ಯಾಂಶವಿರಬಹುದನ್ನುವುದಕ್ಕೆ ಕಾರಣವುಂಟು. ಇದರ ವಿಮರ್ಶೆಗೆ ಹೊಸ ಗೆಜೆಟಿಯರ್ ೨ನೇ ಸಂಪುಟದ ಕಡೆಯ ಭಾಗವು ಉಪಯುಕ್ತವಾದುದು.]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...