Home / ಕಥೆ / ಸಣ್ಣ ಕಥೆ / ಮಾರನಾಯಕನ ವಧೆ

ಮಾರನಾಯಕನ ವಧೆ

ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟೆಯ ಸಮೀಪಕ್ಕೆ ಅವರು ಬಂದರು. ಅಲ್ಲಿ ಕರೆಕಟ್ಟೆಯ ಮೇಲೆ ಅವರು ಇರುತ್ತಿರಲು, ವೀರಶೈವ ಕುಲದ ಕೆಲವು ಹೆಂಗಸರು ನೀರಿಗಾಗಿ ಅಲ್ಲಿಗೆ ಬಂದಿದ್ದು ಮಾತನಾಡಿಕೊಳ್ಳುತ್ತಿತ್ತುದನ್ನು ಕಿವಿಗೊಟ್ಟು ಕೇಳಿದರು. ಅವರ ಮಾತುಗಳಿಂದ ಅವರ ಕುಲದಲ್ಲಿ ಹುಟ್ಟಿ, ಶ್ರೇಷ್ಠವೆನಿಸಿದ್ದ ಕನ್ನಿಕೆಯೊಬ್ಬಳು ನೀಚಕುಲದವನೊಬ್ಬನನ್ನು ಮದುವೆ ಮಾಡಿಕೊಳ್ಳುವ ಸಂದರ್ಭವೊದಗಿತ್ತೆಂದು ತಿಳಿಯ ಬಂತು. ಸೋದರರು ಕುತೂಹಲದಿಂದ ಏನೆಂದು ವಿವರವನ್ನು ಕೇಳಿದರು; ಆ ಹೆಂಗಸರನ್ನು ಸಮಾಧಾನ ಮಾಡಿ ತಾವು ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಮಾಡಿದ ವಿಚಾರದಲ್ಲಿ ಈ ವಿವರವು ತಿಳಿಬಂದಿತು.

ಆ ಪ್ರದೇಶದ ಒಡೆಯನಿಗೆ ಚಿತ್ತಸ್ವಾಸ್ಥ್ಯ ತಪ್ಪಿತ್ತು; ಆತನಿಗೆ ಒಬ್ಬಳೇ ಮಗಳಿದ್ದಳು. ಈ ಸ್ಥಿತಿಯನ್ನು ಕಂಡು ನರೆಯಲ್ಲಿದ್ದ ಕಾರುಗಹಳ್ಳಿಯ ಪಾಳಯಗಾರನಾಗಿದ್ದ ಮಾರನಾಯಕನೆಂಬ ದೂತನು “ಆ ಕುಮಾರಿಯನ್ನು ನನಗೆ ವಿವಾಹಮಾಡಿಕೊಟ್ಟು ಹದನಾರನ್ನು ಬಿಟ್ಟು ಕೊಡಲಿ; ಇಲ್ಲವಾದರೆ ಯುದ್ಧಕ್ಕೆ ಸಿದ್ಧನಾಗಲಿ” ಎಂದು ಹೇಳಿಕಳುಹಿಸಿದ್ದನು. ಬೇರೆ ಗತಿಯಿಲ್ಲದ ಹದನಾರಿನವರು ವಿವಾಹಕ್ಕೆ ಸಮ್ಮತಿ ಕೊಟ್ಟಿದ್ದರು. ಹೀಗಿರಲು ವಿಜಯ ಕೃಷ್ಣರ ಉತ್ಸುಕತೆಯ ಮಾತು ತಿಳಿಯಿತು. ಆಗ ಅರಮನೆಯವರು ಅವಮಾನವನ್ನು ತಪ್ಪಿಸಿಕೊಳ್ಳುವ ಆಸೆಯಿಂದ ಆ ರಾಜಕುವರರನ್ನು ಕರೆಸಿ ಎಲ್ಲವನ್ನೂ ತಿಳಿಸಿದರು. ಸೋದರರಿಬ್ಬರು ಎಲ್ಲವನ್ನೂ ಅರಿತು ಕೋಟೆಯನ್ನು ರಕ್ಷಿಸಲು ಇದ್ದ ಅನುಕೂಲಗಳನ್ನೆಲ್ಲ ಪರೀಕ್ಷಿಸಿದರು ಕಡೆಗೆ ಹೊರಗಡೆ ಏನನ್ನೂ ತೋರ್ಪಡಿಸದೆ ವಿವಾಹದ ಕೆಲಸವನ್ನು ಎಂದಿನಂತೆ ನಡೆಸುವ ಹಾಗೆ ನಟಿಸುತ್ತಿರಬೇಕೆಂದು ಹೇಳಿಕೊಟ್ಟರು.

ವಿವಾಹದ ದಿನವು ಸಮೀಪವಾಯಿತು. ಮಾರನಾಯಕನ ಅಟ್ಟಹಾಸದಿಂದಲೂ ಗರ್ವದಿಂದ ಒಂದು ಅರಮನೆಯನ್ನು ಹೊಕ್ಕು, ಮದುವೆಯ ಔತಣಕ್ಕೆ ಸಿದ್ಧನಾದನು. ಮಾರನಾಯಕನೂ ಆತನ ಮುಖ್ಯಾಧಿಕಾರಿಗಳೂ ಒಂದು ತೊಟ್ಟಿಯಲ್ಲಿ ಊಟಕ್ಕೆ ಕುಳಿತರು. ಆತನ ಅನುಚರರಿಗೆ ಬೇರೊಂದು ತೊಟ್ಟಿಯಲ್ಲಿ ಅಣಿ ಮಾಡಿತ್ತು. ಅದೇ ವೇಳೆಯಲ್ಲಿ ಹದನಾರಿನ ಶೂರರನ್ನಾರಿಸಿಕೊಂಡು ಗೋಪ್ಯವಾಗಿ ಹೊಂಚುಹಾಕುತ್ತಿದ್ದ ವಿಜಯ ಕೃಷ್ಣರಿಬ್ಬರೂ ಒಳ್ಳೆ ಸಮಯ ಬಂದಕೂಡಲೆ ಅಕಸ್ಮಾತ್ತಾಗಿ ನುಗ್ಗಿ, ಮಾರನಾಯಕನ ಮೇಲೂ ಆತನ ಮುಖ್ಯಾಧಿಕಾರಿಗಳ ಮೇಲೂ ಹಾರಿಬಿದ್ದು ಇರಿದು ಕೊಂದುಬಿಟ್ಟರು. ಮಾರನಾಯಕನ ಇತರ ಅನುಚರರು ತಮ್ಮ ಧಣಿಯು ಹತನಾದುದನ್ನು ತಿಳಿದು ದಿಕ್ಕು ತೋಚದವರಾಗಿ ನಿರ್ಬಂಧಕ್ಕೆ ಸಿಕ್ಕಿದರು.

ಕೂಡಲೆ ವಿಜಯ ಕೃಷ್ಣರಿಬ್ಬರು ಹದನಾರಿನ ಸೈನ್ಯವನ್ನು ಸಿದ್ದಮಾಡಿಕೊಂಡು ಕಾರುಗಹಳ್ಳಿಯ ಕಡೆಗೆ ಹೊರಟು ಸುಲಭವಾಗಿ ಆ ಕೋಟೆಯನ್ನು ಹಿಡಿದುಕೊಂಡರು. ಏಕೆಂದರೆ ಅಲ್ಲಿದ್ದವರು ಹಟಾತ್ತಾಗಿ ಬಂದೊದಗಿದ ಈ ವಿಪತ್ತನ್ನು ಎದುರಿಸಲಾರದಿದ್ದುದಲ್ಲದೆ ಮಾರನಾಯಕನು ಮೃತನಾದನೆಂದು ತಿಳಿದು ಖಿನ್ನರಾಗಿದ್ದರು. ಕಾರುಗಹಳ್ಳಿಯನ್ನು ವಶಪಡಿಸಿಕೊಂಡ ಕೂಡಲೆ ರಾಜಕುವರರಿಬ್ಬರೂ ಹದನಾರಿಗೆ ಹಿಂತಿರುಗಿದರು. ಅಲ್ಲಿಯ ರಾಜಕುಮಾರಿಯು ಸಂತೋಷದಿಂದ ವಿಜಯನ ಕೊರಳಿಗೆ ಹೂಮಾಲೆಯನ್ನು ಹಾಕಿ ವರಿಸಿ ಮದುವೆಯಾದಳು. ಈ ವಿಜಯನೇ ಒಡೆಯರ ವಂಶದ ಮೂಲಪುರುಷನಾದ ಯದುಒಡೆಯರು.
*****
[ಮಿಲ್ಕ್ಸ್ ಸಾಹೇಬಕ ಗ್ರಂಥದಾಧಾರ; ಈ ವೃತ್ತಾಂತದಲ್ಲಿ ವಂಶರತ್ನಾಕರ, ವಂಶಾವಳಿಗಳಿಗಿಂತಲೂ ವಿಲ್ಕ್ಸ್ ರವರ ಲೇಖನದಲ್ಲಿಯೇ ಹೆಚ್ಚು ಸತ್ಯಾಂಶವಿರಬಹುದನ್ನುವುದಕ್ಕೆ ಕಾರಣವುಂಟು. ಇದರ ವಿಮರ್ಶೆಗೆ ಹೊಸ ಗೆಜೆಟಿಯರ್ ೨ನೇ ಸಂಪುಟದ ಕಡೆಯ ಭಾಗವು ಉಪಯುಕ್ತವಾದುದು.]

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...