Home / ಕವನ / ಕವಿತೆ / ದನಿಗಳು

ದನಿಗಳು

ನಡುರಾತ್ರಿಯ ನಾಭಿಯಲ್ಲಿ
ನೆಲ ಜಲ ಮಾತಾಡಿತ ?
ಹಗಲಿನ ಹದ್ದುಗಳು ಹಾರಿ
ಹಮ್ಮಿಗೆ ಗದ್ಗದ ಮೂಡಿ
ತರ್ಕ ಚಿತೆಗೆ ಬಿದ್ದಿತ ?
ತಳದ ಹುತ್ತ ಬಾಯಿ ತೆರೆದು
ನಿದ್ದೆಯಿದ್ದ ನಾಗರಾಗ
ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ ಚೆಲ್ಲಿತ ?
ಬಾನಿನ ಮಹೇಂದ್ರಕಾಯ
ಅಸಂಖ್ಯ ನೇತ್ರವ ಬಿಚ್ಚಿ
ಉಳುಕಿದ ಮಣ್ಣೆದೆಯನ್ನು ಚಂದ್ರಹಸ್ತ ಸವರಿತ ?

ಬಂದಿರೇ, ಆಹ!
ಬನ್ನಿರೇ
ಏಕಾಂತಕ್ಕೆಳೆವ ಒಗಟುಗಳೇ
ಬಗೆಹರಿಯದ ಜಿಗಟುಗಳೇ
ಯಾಕೆ ಹೀಗೆ ಕಾಡುತ್ತೀರಿ ?
ಮೋಡದಲ್ಲಿ ನಿಧಾನ ಮೂಡುವ ಅರ್ಥಾತೀತ ಗೂಢಗಳೆ
ಹೊಳೆ ಬೆಟ್ಟ ಬಿಕ್ಕಿದ ಅನುಕ್ತ ಗಾಢಗಳೆ
ನೇಗಿಲು ಹೂಡುತ್ತೀರಿ ಯಾಕೆ ಎದೆಗೆ ನಿಷ್ಕರುಣಿಗಳೆ?
ನಿದ್ದೆ ಹಬ್ಬದ ನೋವ ಬೆಳೆಯುತ್ತೀರಿ ಯಾಕೆ ?
ತಬ್ಬಿದ ಮಣ್ಣಿನ ಸುಖಕ್ಕೆ ಮುಳಿಯುತ್ತೀರಿ ಯಾಕೆ ?
ನಿಂತ ಮುಖ ನಿಂತಂತೆ ಚಲಿಸುವ ನೀವು
ದಯಾಕ್ಷಿ ಭಯಗಳೆ
ರಾಕ್ಷಸ ನಯಗಳೆ
ಲಕ್ಷಣಗೆರೆ ದಾಟಿಸಬರುವಿರೆ ?
ವ್ಯವಹಾರ ಕೊಯಿಲಾಗುವ ಮುನ್ನ
ಮಳೆ ನಷ್ಟದಲ್ಲಿ ಹುಟ್ಟುವ
ಹೆಸರಿಲ್ಲದ ಇಷ್ಟಗಳೆ
ಯಾಕೆ ಕಾಡುತ್ತೀರಿ ಹೀಗೆ ?
ಕಾಡಿ, ಮುಖ ದೀನಮಾಡಿ
ಬೇಡುವ ಧಾಟಿಯಲ್ಲಿ ನೀಡಿಬಿಡುತ್ತೀರಿ ಹೇಗೆ ?

ಉರಿವ ಹಗಲ ಆರಿಸಿದ
ಇರುಳ ಪನ್ನೀರೇ ಘನಿಸಿತೆ ?
ಕಿರುತಿಂಗಳ ಕೊರಗುಬೆಳಕಲ್ಲಿ ಮುಗಿಲು
ಮುಡಿಗಡ್ಡದ ಮುನಿಗಳ ರೂಪಿಸಿತೆ ?
ಮುನಿಗಳೆ!
ಪಾತಾಳ ಜಯಿಸಿದ ದನಿಗಳೆ
ನಿಮ್ಮ ಕೈಕಾಲಿಗೆ ನೀರೆರೆಯಲಿ ಹೇಗೆ
ಕಲಿತ ವೇದಾಂತವೆಲ್ಲ ಬಚ್ಚಲ ಕೊಚ್ಚೆ;
ನಿಮಗೆ ಏನ ತೊಡಿಸಲಿ ಹೇಗೆ
ನಕ್ಷತ್ರಗಂಗೆ ಉದ್ದಸಾಲದ ಕಚ್ಚೆ;
ಕ್ಷಣಸತ್ಯದ ಹೆಣ ಮೆಟ್ಟಿ ಬರುವ
ಅಮೂರ್ತ ಗುರಿಗಳೆ
ಕಡಲೊಡಲಿಗೆ ತಣ್ಣಗೆ ಹರಿದು
ಗಿರಿನೆತ್ತಿ ಕಾರುವ ವಿರೋಧದುರಿಗಳೆ
ಕೋಟ್ಯಂತರ ಇಳೆಕಣಗಳ ಗುಡಿಸುವ ಬರಲುಗಳೆ
ಮಣ್ಣನಾಲಿಗೆಯಿಂದ ಹಿಡಿಯಲಿ ಹೇಗೆ ?
ನಿಮ್ಮನ್ನು ಹಿಡಿಯದ ನುಡಿ
ಬರಿ ನಾದದ ಬೇಗೆ.

ಗೋಳದ ಗುರುತ್ವದಾಚೆಗೆ
ಗಿರಿತೂಕವೆ ಜಳ್ಳು,
ಬೆಳಕಿನ ವೇಗಕ್ಕೆಳೆದರೆ
ಕಾಯದ ರೂಪವೆ ಸುಳ್ಳು,
ಬಣ್ಣಗಳೋ ಕಣ್ಣ ಭ್ರಮೆ
ಕಣ್ಣೋ ಅದಕ್ಕೆ ನಲಿಯುವ ಬೆಳ್ಳು,
ಇಲ್ಲಿಯ ಹಗಲು ಎಲ್ಲಿಗೊ
ಇರುಳೂ ಅಲ್ಲವಾಗಿ
ಈವರೆಗೆ ಕಂಡದ್ದೆಲ್ಲ
ಕಾಣದ್ದರ ನೆರಳು.

ಎಂಬ ಬಗೆ ಕವಿಸುವ
ಕವಿಸಿ ಕುದಿಸುವ
ಕುದಿಸಿ ಉದಿಸುವ ಧಗ ಧಗ ಚಂದ್ರರೆ
ಸತ್ಯದ ಮೈಯಲ್ಲಿ ಸುಳಿಯುವ
ಸುಳ್ಳಿನ ಚಹರೆ ನೀಡಿ ಯಾಕೆ
ಶಂಕೆಯಲ್ಲಿ ಅದ್ದುತ್ತೀರಿ ?
ಬೆಳಕು ಹರಿಯಲು ಕರಗುವ
ಅಸ್ಪಷ್ಟ ಚೀರುಗಳೆ
ಅಯ್ಯೋ!
ಯಾಕೆ ಹಾಗೆ ತೀರುತ್ತೀರಿ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...