Home / ಕವನ / ಕವಿತೆ / ಚಂದನಶಿಲ್ಪ

ಚಂದನಶಿಲ್ಪ

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ
ಪಾದಕ್ಕೆ ಕಮಲ ನೆತ್ತಿಗೆ ಚಂದ್ರ,
ನಿಂತ ನಿಲುವು ರಾಗವೋ ವಿರಾಗವೋ
ರವಿಯೇ ತಾರ ಬುವಿಯೇ ಮಂದ್ರ,
ಕೆಳೆಗೆ ಬೆಳೆದ ಗಿಡಮರಗಳ ನಡುವೆ
ಊಳುವ ಗಾಳಿಯ ಕರುಣಾಕ್ರಂದ,
ಕೊಂಚ ಗದ್ಯ ಇನ್ನೆಲ್ಲ ಪದ್ಯ
ಮರ ಹಿಡಿದ ಫಲವಲ್ಲ ಅಲ್ಲಲ್ಲೇ ನೈವೇದ್ಯ,
ಹಗಲು ಬಿಸಿಲ ಸ್ನಾನ
ರಾತ್ರಿ ಚಿಕ್ಕೆ ಹೊತ್ತ ಕತ್ತಲ ಛತ್ರಿಯಡಿಗೆ
ತಣ್ಣಗೆ ಕಲ್ಲಿನೆದೆಯೊಳಗೆ
ಕೊತ ಕೊತ ಕುದಿಯುವ
ಪೂರ್ವ ಭವಗಳ ಪಾಪಧ್ಯಾನ,
ದೂರಕ್ಕೆ ದೇವರು ಕಲ್ಲು ಸೆಟೆದಂತೆ ಕಾಣುತ್ತಾರೆ;
ಪರೀಕ್ಷಿಸಿ ನೋಡಿ
ನಡುವೆ ಹಠಾತ್ತನೆ ಬೆಚ್ಚುತ್ತಾರೆ.

ವಿಂಧ್ಯಗಿರಿ ದೇವರಿಗೆ ಬಂಧನವಿಲ್ಲದ ಮನೆ
ಅದರ ಇಲ್ಲದ ಬಾಗಿಲನ್ನು
ಹಗಲು ಬಿಚ್ಚುತ್ತದೆ ರಾತ್ರಿ ಮುಚ್ಚುತ್ತದೆ,
ಬಹಳ ಹಿಂದೆ ಅವರ
ಬೆಲ್ಲದ ಗಲ್ಲವನ್ನ ಬೆಳಕಿನ ಇರುವೆ ಕಚ್ಚಿ
ಸುಖದ ನೋವ ಚುಚ್ಚಿ
ಮಣ್ಣು ನರಳಿತು, ಹಣ್ಣು ಮಾಯಿತು;
ಹೊಕ್ಕಳ ಕೆರಳು ಸತ್ತು ಮುಖದಲ್ಲಿ
ಮಕ್ಕಳ ನಗೆ ಹುಟ್ಟಿತು
ಆಗಿಂದ ಅದು

ಬೆಳೆದೇ ಬೆಳೆದು ಬೆಳೆದೇ ಬೆಳೆದು
ಬಂದವರ ಎದೆಯಲ್ಲಿ ಅಕ್ಕಿ ಚೆಲ್ಲುತ್ತದೆ,
ಸಿಕ್ಕಿ ಬಿದ್ದಿದ್ದರೆ ಅಲ್ಲಿ ತಿನ್ನುವ ಹಕ್ಕಿ
ಫಕ್ಕನೆ ಹಿಡಿದು ಮುಗಿಲಿಗೆ ಹಾರಿಸುತ್ತದೆ.

ವಿಂಧ್ಯಗಿರಿ ದೇವರಿಗೆ ರೆಪ್ಪೆಯಿದೆ ಬಡಿಯುವುದಿಲ್ಲ
ಇರಿಯುವಂತೆ ದಿಟ್ಟಿ,
ಧಗಧಗ ಪ್ರಾಯ, ಸುಡುವುದಿಲ್ಲ;
ಪಂಚಾಗ್ನಿ ಮೆಟ್ಟಿದ ಜಟ್ಟಿ,
ಅವರಿಗೆ
ವಸ್ತ್ರ ಕತ್ತಲೆ ಬೆಳಕು ಬೆತ್ತಲೆ
ಸುಡುವ ಸೂರ್‍ಯ ತಂಪು ಕಿತ್ತಲೆ.
ಅಡ್ಡ ನೋಡಿದರೆ
ಮಲಗಿದ ದೇವರ ಎದೆಯಲ್ಲಿ ಅಲಗು
ಉದ್ದ ನೋಡಿದರೆ
ಸೆಟೆದ ವಿಗ್ರಹದ ಕಣ್ಣಲ್ಲಿ ಮಿನುಗು.

ನಡುರಾತ್ರಿ ಭೂಮಿಗೆ ಮಂಪರು:
ಬಾನು ತುಟಿತೆರೆದು
ದೇವಕನ್ಯೆಯರು ಇಳಿದು
ದೇವರ ಮೈಗೆ ಗಂಧ ತೊಡೆಯುತ್ತಾರೆ;
ಹೊಕ್ಕಳಿಗೆ ಮುತ್ತು ಸುರಿದು;
ತೊಡೆಗೆ ಲಟಿಗೆ ತೆಗೆದು
ಪಾದಕ್ಕೆ ದಿಂಡುರುಳಿ ಮುಳು ಮುಳು ಅಳುತ್ತಾರೆ;
ದೇವರ ಕಣ್ಣಲ್ಲಿ ಥಟ್ಟನೆ ದೀಪ ಹತ್ತಿ
ಅಳುವಂತೆ ಉರಿಯುತ್ತದೆ;
ಹದ್ದೊಳಗಿನ ಪಾಪ ಉದ್ದುದ್ದ ಬೆಳೆದು
ತುಟಿಗಳು ಚಲಿಸುತ್ತವೆ.
ಆದರೆ
ತಾವರೆ ಮೆಟ್ಟಿದವರು
ತಿಂಗಳು ಮುಡಿದವರು
ರಾಗಕ್ಕೆ ಮಂಗಳ ಹಾಡಿದವರು
ದೇವರು.
ಮಾತು ಹೊರಡುವ ಮುಂಚೆ ಅಲ್ಲೆ ಹೂತಂತಾಗಿ
ಮೊಳೆತ ಪ್ರಾಣದ ಆಸೆ ಕಮರುತ್ತದೆ,
ಗಾಳಿ
ಸಟೆದ ಕಲ್ಲಿನ ಸುತ್ತ ಚೀರುತ್ತದೆ.

ವಿಶಾಪದ ನಿರೀಕ್ಷೆಯಲ್ಲಿ ದೇವರು ನಿಂತಿದ್ದಾರೆ.
ಒಂದು ದಿನ
ಅಭಯಹಸ್ತ ಮೂಡುತ್ತದೆ
ನಿಜದ ಕೆಚ್ಚ ನೀಡುತ್ತದೆ
ಬಿಲ್ಲು ಬಾಣ ಕೈಗೆ ಕಲಿಸಿ
ಮೈರುಚಿಯನ್ನೆಲ್ಲ ಉರಿಸಿ
ಭಕ್ತವೃಂದ ಸುತ್ತ ಕೊರೆದ ಲಕ್ಷಣಗೆರೆ ಅಳಿಸುತ್ತದೆ;
ಮಾದ ಹುಣ್ಣು ಮತ್ತೆ ಜ್ವಲಿಸಿ
ಸತ್ತ ಕೆರಳು ತಿರುಗಿ ಜನಿಸಿ
ಶಾಪದ ಕೊನೆ ತರುತ್ತದೆ
ಅಸ್ತಿಕಗಣದ ಚೀತ್ಕಾರದ ನಡುವೆ
ದೇವಕವಚ ಸಿಡಿಯುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...