Home / ಕವನ / ಕವಿತೆ / ಎಲೆ ಸಾವೇ ನೀನೇಕೆ ಜೀವಂತ?

ಎಲೆ ಸಾವೇ ನೀನೇಕೆ ಜೀವಂತ?

ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು
ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು
ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ
ಮೇಲೆ ನೋಡಿದರೆ ನಡುಗುತ್ತಿರುವ ಮೋಡ.

ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು
ಸಂತೆ ಗದ್ದಲದ ನಡುವೆ ಮೌನಕವಿತೆಗಳು
ರಕ್ಕೆ ಸುಟ್ಟ ಹಕ್ಕಿಯೊಳಗೆ ನಿಂತ ನಾದಗಳು
ಬೇರಲ್ಲೇ ಬೋರಲಾಗಿ ಬಿದ್ದ ಜೀವಬಳ್ಳಿಗಳು.

ಎಲ್ಲಿ ಹೋದರು ಅವರು ಎತ್ತಿ ಆಡಿಸಿದವರು?
ತೋಳ ತುಂಬ ಭಾವ ತುಂಬಿಕೊಂಡ ಜನರು!
ಬಂದೆಯಾ ಮಗುವೆ ಈ ನೆಲದ ನಗುವೆ
ಎನ್ನುತ್ತ ಮನದುಂಬಿ ಹಾಡಾಗಿ ಮಿಡಿದವರು
ಮನೆತನವ ಮೀರಿ ಗೆಳತನದ ಹಣತೆಯಲ್ಲಿ
ಉರಿದು ಕರಕಾದ ಹಟ್ಟಿಯ ಅಜ್ಜಂದಿರು
ಮುಟ್ಟಿ ಮಲ್ಲಿಗೆ ಮಾಡಿದವರು.

ಎಲೆ ಸಾವೇ ನೀನೇಕೆ ಜೀವಂತ?
ಎಲ್ಲರ ಜೀವ ಕಳೆಯುವ ಧಾವಂತ!
ಭೂಮಿಯೊಳಗಿಂದ ಎದ್ದುಬರುವೆ
ಆಕಾಶದಿಂದ ಬಿದ್ದು ಸುರಿವೆ
ಬೆಂಕಿಯಾಗಿ ಬಿರುಗಾಳಿಯಾಗಿ
ಹರಿವ ನೀರೊಳಗಿನ ಉರಿಯಾಗಿ
ಜೀವ ಕಳೆಯುತ್ತಲೇ ಜೀವಕಳೆಯಾಗುತ್ತಿರುವೆ.

ಹೊಕ್ಕುಳಲ್ಲಿ ಹುಟ್ಟಿದ ಸಾವೇ
ಬಳ್ಳಿಗೆ ಕೊಳ್ಳಿಯಿಡುವುದು ತರವೆ?
ಮಗುವಿನ ಮೊದಲ ಅಳು
ನಗುವಾಗುವ ಮೊದಲೇ
ಸಿಡಿಯಾಗಿ ಹಿಡಿಯುವ ಉಡವೇ,
ಬೆನ್ನು ಬಿಡದ ಬಾಳ ಗಡುವೇ,
ಮಾತುಗಳನ್ನು ಮೌನದಲ್ಲಿ ಒಸಗುತ್ತೀಯ
ನಗುವನ್ನು ನಡುವಲ್ಲೇ ಕತ್ತರಿಸುತ್ತೀಯ
ಹಾವಿನ ಸೇಡಿಗೆ ಹತ್ಯೆಯಾಗುತ್ತೀಯ
ನೋವಿನ ನೇಣಿಗೆ ಆತ್ಮಹತ್ಯೆಯಾಗುತ್ತೀಯ
ಪೊಲೀಸರ ಗುಂಡಾಗುತ್ತೀಯ
ಹೆಣ್ಣಿಗೆ ಗಂಡಾಗುತ್ತೀಯ
ಕುರ್ಚಿಯಲ್ಲಿ ಕೂತ ಭರ್ಜಿಯಾಗುತ್ತೀಯ
ಎಲ್ಲರೊಳಗಿದ್ದೂ ಎದುರುಬದರಾಗುತ್ತೀಯ
ನೀನಲ್ಲವೆ ನಿಜವಾದ ಆತ್ಮ!
ಸಾವಿಲ್ಲದ ಅಂತರಾತ್ಮ!

ಸಾವು ಶಿಖರವಾಗಿ ಪರ್ವತಾರೋಹಿಗಳೇ ಎಲ್ಲ
ಆಮ್ಲಜನಕ ಯಾರ ಬಳಿಯಲ್ಲೂ ಇಲ್ಲ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...