Home / ಕವನ / ಕವಿತೆ / ನವಿಲು ಗದ್ದೆ

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ
ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ?
ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ
ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ.

ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು
ನೆತ್ತರಲಿ ತೊಯ್ದವರು ಯಾರೊ ಕಾಣೆ
ಬೆವರು ಬಸಿಯುತ್ತ ಬೆಳೆದಂಥ ಬೆಳಕನ್ನು
ಕತ್ತಲಲಿ ಕದ್ದವರು ಯಾರೊ ಕಾಣೆ.

ಕತ್ತಿಕಾಳಗದಲ್ಲಿ ತತ್ತಿಯಿಟ್ಟಿತು ಸೇಡು
ಸತ್ತುಹೋಯಿತು ಪ್ರೀತಿ ಮಣ್ಣಿನಲ್ಲಿ
ಬೀದಿಬೀದಿಯ ತುಂಬ ಹರಿದು ಬಂದಿತು ನೋವು
ಹೆಪ್ಪುಗಟ್ಟಿತು ಇಲ್ಲಿ ಕಣ್ಣಿನಲ್ಲಿ.

ಹರಿವ ನದಿಯಲ್ಲಿ ಬೆವರು, ಉರಿವ ಬಿಸಿಲಲ್ಲಿ ಬೆವರು
ಕವಿದ ಕತ್ತಲೆಯಲ್ಲಿ, ಸೂರ್ಯ ಬೆತ್ತಲೆಯಲ್ಲಿ
ಎಲ್ಲಿ ನೋಡಿದರಲ್ಲಿ ಬೆವರ ಬರಹ
ಜೀವಸಾಗರವನ್ನು ಕುಡಿವ ದಾಹ.

ಬೆವರು ಬಂದೀತೆಂದು ಬತ್ತಿ ಹೋಗುತ್ತಿದೆ-
ಹತ್ತಿ ಉರಿಯುವ ಹುತ್ತ ಈ ಜೀವಸಾಗರ;
ಒಂದೊಂದು ಅಲೆಯು ಮಿಡಿನಾಗರ!

ಇಲ್ಲ, ಬೆಳಗಿನ ಜಾವಕ್ಕೆ ಕಾಯುವ ಬೆವರಿಗೆ
ಇಲ್ಲಿ ಜೀವ ಕೊಡುವುದಿಲ್ಲ.
ಸೂರ್ಯ ಕಣ್ತೆರೆದು ನೋಡುವುದಿಲ್ಲ;
ಸಮುದ್ರ ಕಡೆಯುವುದಿಲ್ಲ.
ಅಮೃತದ ಹನಿ ಉಕ್ಕುವುದಿಲ್ಲ.
ಕಡೆಗೆ ಬೇಡಿದರೂ ಬರುವುದಿಲ್ಲ-
ಒಂದು ಹನಿ ಕಣ್ಣೀರು;
ಬೆವರ ಬೆತ್ತಲು ಮಾಡಿ
ಕದ ಮುಚ್ಚಿ ಕೂತ ಕತ್ತಲ ಕಾರುಬಾರು.

ಬನ್ನಿ ಗೆಳೆಯರೇ ಕತ್ತಲಲ್ಲೇ ಬೆಳೆಯೋಣ
ನಮ್ಮ ನಮ್ಮ ಮನಸುಗಳನ್ನು
ನಮ್ಮ ನಮ್ಮ ಕನಸುಗಳನ್ನು
ಗಾಯಗೊಂಡ ಹೂವುಗಳನ್ನು
ಸಾಯಗೊಡದ ನೋವುಗಳನ್ನು
ಬೆಳೆಯೋಣ, ಬೆಳೆಯುತ್ತ ಬೆಳೆಯುತ್ತ
ಬೆಳಕಾಗೋಣ-
ನವಿಲುಗದ್ದೆಯ ಗರಿಯಾಗೋಣ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...