Home / ಕಥೆ / ಕಿರು ಕಥೆ / ಬಸವನ ಹುಳುವಿಗೆ ಗರಿ

ಬಸವನ ಹುಳುವಿಗೆ ಗರಿ

ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳಸ್ತರದ ವಿದ್ಯಾರ್ಥಿಗಳನ್ನು ದಮನಿಸುವ ಮತ್ತು ಮೇಲುಸ್ತರದವರನ್ನು ವೈಭವೀಕರಿಸುವದರೊಂದಿಗೆ ಸ್ವಜನಪಕ್ಷಪಾತದಿಂದ ಹಾಲುಮನಸ್ಸಿನ ಮಕ್ಕಳ ನಡುವೆ ಗೋಡೆ ಎಬ್ಬಿಸುತ್ತಿದ್ದ. ನಿಂತ ನೀರಿನಂತಿದ್ದ ಅವನಿಗೆ ತನ್ನ ಕುಲಸ್ಥರೆಂದರೆ ಉತ್ಕಟ ಅಭಿಮಾನ, ಪ್ರೀತಿ, ತಮ್ಮ ಮೇಧಾವಿತನ ಹುಟ್ಟಿನಿಂದಲೇ ಬಂದದ್ದು. ತಮ್ಮ ಚತುರಮತಿಯಿಂದಲೇ ಈ ಭೂಮಿ ಉಸಿರಾಡುವುದೆಂದು ಅವರು ಮತ್ತೆ ಮತ್ತೆ ಮಾತಾಡಿ ಸಮರ್ಥಿಸಿಕೊಳ್ಳುವನು.

ದಲಿತ ಹುಡುಗನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಅವರ ಕಣ್ಣು ಕುಕ್ಕಿದ್ದ. ಶಿಕ್ಷಕ ತೀವ್ರ ತಳಮಳ ಅನುಭವಿಸುತ್ತಿದ್ದ. ಆ ಹುಡುಗ ಕಳೆದ ಜನ್ಮದಲ್ಲಿ ತಮ್ಮ ಕುಲಸ್ಥನೆ ಆಗಿರಬೇಕು ಅಥವಾ ಹುಟ್ಟುವಾಗ ಅಕಸ್ಮಿಕವಾಗಿ ಏರು ಪೇರಾಗಿರಬಹುದು ಎಂಬ ಅನುಮಾನದಿಂದ ಅವನನ್ನು ಗಮನಿಸುತ್ತಿದ್ದ. ಅವನು ತನ್ನನ್ನು ಕೀಳರಮೆಯಿಂದ ಕಾಣುತ್ತಿರುವ ಸೂಕ್ಷ್ಮವನ್ನು ಬದಿಗಿಟ್ಟು ಗುರು ಎಂಬ ಪೂಜ್ಯ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಿದ್ದ ಹುಡುಗ ಗೌರವದಿಂದ ನಮಸ್ಕರಿಸುತ್ತಿದ್ದ.

ಹುಡುಗನಿಗೆ ಊರ್ಧ್ವಮುಖಿಯ ತುಡಿತ. ಅದರ ಫಲವಂತಿಕೆಗಾಗಿ ಹಗಲಿರುಳು ಶ್ರಮಿಸುವನು. ಆದರೆ ಶಿಕ್ಷಕನ ಕ್ಷುದ್ರ ಮನಸ್ಸು ಪ್ರತಿಯೊಂದು ಪರೀಕ್ಷಗಳಲ್ಲಿ ಹುಡುಗನ ಪ್ರತಿಭೆಗೆ ಕಾಲ್ತೊಡಕಾಗುತ್ತಲೆ ಇತ್ತು. “ನೀನು ನೆಲದ ಮೇಲೆ ತೆವಳುವ ಬಸವನ ಹುಳದಂತೆ ಹುಡುಗ, ನಿನಗೆ ಗರಿಗಳು ಮೂಡುವುದಿಲ್ಲ ಆಕಾಶದಲ್ಲಿ ಹಾರಾಡುವ ಕನಸು ಕಾಣಬೇಡ” ಎಂದು ಪದೆಪದೇ ಅವನನ್ನು ಅವಮಾನಿಸುವನು.

ಕೊನೆಗೂ ಆ ಶಿಕ್ಷಕನ ನೀಚ ಪರಿಧಿಯಿಂದ ಹುಡುಗ ಪಾರಾದ. ಶಿಕ್ಷಕನೂ ಆ ಹುಡುಗನನ್ನು ಮರೆತ. ಆ ಶಿಕ್ಷಕ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಹುಡುಗ ಕಷ್ಟಪಟ್ಟು ಓದಿದ. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾದ. ಅಷ್ಟು ಹೊತ್ತಿಗೆ ಆ ಶಿಕ್ಷಕ ಬೇರೊಂದು ಶಾಲೆಯ ಮುಖ್ಯಾಧ್ಯಾಪಕನಾಗಿ ನಿವೃತ್ತಿಯ ಅಂಚು ತಲುಪಿದ್ದ.

ಸಾಹೇಬರು ಅಚಾನಕ್ಕಾಗಿ ಶಾಲೆಗೆ ಭೇಟಿಕೊಟ್ಟರು. ಅಲ್ಲಿನ ಅಸ್ತವ್ಯಸ್ತ ಪರಿಸರವನ್ನು, ಹುಡುಗರ ಅಶಿಸ್ತನ್ನು, ತರಗತಿಗಳ ದುರ್ಭಾಗ್ಯವನ್ನು, ಶಿಕ್ಷಕರ ಭಂಡತನವನ್ನು ಗಮನಿಸಿ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡರು. ಅವರು ಸಾಹೇಬರೆದುರಿಗೆ ಕೈ ಮುಗಿದುಕೊಂಡು ನಿಂತಿದ್ದರು. “ನೀವು ನನಗೆ ಕಲಿಸಿದ ಗುರುಳು. ನನಗೆ ಕೈ ಮುಗಿಯಬಾರದು” ಎಂದು ಅವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ ತಮ್ಮ ಪರಿಚಯ ಮಾಡಿಕೊಟ್ಟಿದ್ದರು ಸಾಹೇಬರು.

ಅವರನ್ನು ದಿಟ್ಟಿಸಿ ನೋಡುತ್ತಿದ್ದಂತೆ ಶಿಕ್ಷಕನಿಗೆ ಹಸಿಹಸಿ ನೆನಪು. ಅವನ ಪ್ರತಿಭೆಯನ್ನು ಕುಗ್ಗಿಸುತ್ತಿದ್ದರ ನೆನಪು. “ನಿಮಗೆ ಋಣಿಯಾಗಿರುವೆ ಗುರುಗಳೆ. ನಿಮ್ಮ ಪುಣ್ಯದಿಂದ ಈ ಬಸವನ ಹುಳುವಿಗೆ ಗರಿ ಮೂಡಿದವು” ಎಂದರು ಸಾಹೇಬರು. ಶಿಕ್ಷಕನ ತಲೆ ತಗ್ಗಿತು.

*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...