Home / ಲೇಖನ / ಇತರೆ / ಸಣ್ಣ ತಪ್ಪುಗಳು

ಸಣ್ಣ ತಪ್ಪುಗಳು

ಪ್ರಿಯ ಸಖಿ,

ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ಬಿಚ್ಚಿದ ನಂತರ ಯಾವುದೇ ಪ್ರಾಣಿಗಾದರೂ ಹಿಂಸೆ ಮಾಡುವುದು ಎಂತಹಾ ಪಾಪವೆಂದು ತಿಳಿಹೇಳಿದ. ಆ ಕ್ಷಣಕ್ಕೆ ಹುಡುಗಿಗೆ ಅಪ್ಪನ ಮೇಲೆ ಕೋಪ ಬಂದರೂ ಪ್ರಾಣಿ ಹಿಂಸೆ ಪಾಪವೆಂಬ ಪಾಠವನ್ನು ಅವಳು ಬದುಕಿನುದ್ದಕ್ಕೂ ಮರೆಯಲಿಲ್ಲ. ಪ್ರಾಣಿಯನ್ನು ಹಿಂಸಿಸುವ ಮನಸ್ಸಾದೊಡನೆ ಅಂದು ತಂದೆ ತನ್ನ ತಪ್ಪಿಗೆ ನೀಡಿದ ಶಿಕ್ಷೆಯೂ ನೆನಪಾಗುತ್ತಿತ್ತು ಅವಳಿಗೆ. ಹಾಗೇ ಇನ್ನೊಂದು ಸಂದರ್ಭ ಕುಖ್ಯಾತ ಕಳ್ಳನೊಬ್ಬನ ವಿಚಾರಣೆ ನಡೆಯುತ್ತಿತ್ತು. ನೀನು ಕಳ್ಳತನ ಮಾಡಲು ಮೂಲ ಕಾರಣರ್‍ಯಾರು ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ಕಳ್ಳ ನನ್ನ ತಾಯಿ ಎಂದ. ನ್ಯಾಯಾಧೀಶರಿಗೆ ಆಶ್ಚರ್ಯವಾಯಿತು. ಯಾವ ತಾಯಿ ತನ್ನ ಮಗನಿಗೆ ಕಳ್ಳತನ ಮಾಡೆಂದು ಹೇಳುಕೊಡುತ್ತಾಳೆ ಎಂದು ಕೊಳ್ಳುತ್ತಾ ಹೇಗೆ ? ಎಂದರು. ಅದಕ್ಕೆ ಆ ಕಳ್ಳ, ಚಿಕ್ಕಂದಿನಲ್ಲಿ ಅಮ್ಮ ಬೀದಿಯಲ್ಲಿ ಎತ್ತಿಕೊಂಡು ಹೋಗುವಾಗ ತಪ್ಪೆಂದು ಅರಿಯದೇ ಪಕ್ಕದಲ್ಲಿ ಬಾಳೆಹಣ್ಣು ಬುಟ್ಟಿಯಿಂದ ಕೊಂಡು ಹಾದುಹೋಗುತ್ತಿದ್ದವನಿಂದ ಒಂದು ಬಾಳೆಹಣ್ಣು ಕದ್ದೆ. ನನ್ನ ತಾಯಿ ಅದಕ್ಕೇ ಏನೂ ಹೇಳಲಿಲ್ಲ. ತಿನ್ನು ಎಂದಳು. ಅಂದು ಅವಳು ನನಗೆ ಎರಡೇಟು ಬಿಗಿದು ನೀನು ಮಾಡಿದ್ದು ತಪ್ಪೆಂದು ತಿಳಿ ಹೇಳಿದ್ದರೆ ನಾನಿಂದು ಇಷ್ಟು ದೊಡ್ಡ ಕಳ್ಳನಾಗಿರುತ್ತಿಲೇ ಇಲ್ಲ ಎಂದ.

ಪ್ರಿಯ ಸಖಿ, ಎರಡೂ ಸಂದರ್ಭಗಳನ್ನೂ ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಸಣ್ಣ ತಪ್ಪಿಗೂ ಕೂಡ ಬದುಕಿನಲ್ಲಿ ಒಂದು ಮಹತ್ವವಿದೆ ಎಂದು ಅರ್ಥವಾಗುತ್ತದೆ. ಸಾಮಾನ್ಯವಾಗಿ ನಾವು ಸಣ್ಣ ತಪ್ಪುಗಳನ್ನೆಂದೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಅದೇನು ದೊಡ್ಡ ಅಪರಾಧವೇ? ಮುಂದೆ ಈ ತಪ್ಪು ಮಾಡದಿದ್ದರಾಯಿತು. ಅಥವಾ ತಪ್ಪುಗಳಾಗ್ತಾ ಇರ್ತಾವೆ. ಅದೇನು ಶಿಕ್ಷೆಯಿಂದಲೇ ಸರಿಹೋಗಬೇಕೆ? ಎಂದುಕೊಳ್ಳುತ್ತೇವೆ. ಆದರೆ ಸಣ್ಣ ತಪ್ಪಿಗೆ ನಾವು ನೀಡಿದ ಕ್ಷಮೆ ಕೂಡ ಮುಂದೆ ಬೃಹದಾಕಾರವನ್ನು ತಾಳಬಹುದೆಂಬುದು ಕಳ್ಳನ ಪ್ರಸಂಗದಿಂದ ತಿಳಿಯುತ್ತದೆ. ಹಾಗೇ ಸಣ್ಣ ತಪ್ಪಿಗೂ ನೀಡಿದ ಶಿಕ್ಷೆಯಿಂದ ಮತ್ತೆಂದೂ ಅಂತಹ ತಪ್ಪು ಸಣ್ಣದಿರಲಿ, ದೊಡ್ಡದಿರಲಿ ಶಿಕ್ಷೆ ಅನಿವಾರ್ಯ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಇದು ಬೇರೆಯವರ ವಿಷಯಕ್ಕೆ ಮಾತ್ರವಲ್ಲ ನಮ್ಮ ವಿಷಯಕ್ಕೆ ಕೂಡ ನಮ್ಮಿಂದ ಸಣ್ಣ ತಪ್ಪಾದರೂ ನಮಗೆ ನಾವೇ ಅದಕ್ಕೆ ಶಿಕ್ಷೆ ವಿಧಿಸಿಕೊಳ್ಳಬೇಕು. ಹೀಗಾದಾಲೇ ನಾವು ತಪ್ಪುಗಳಿಂದಲೂ ಪಾಠ ಕಲಿಯಲು ಸಾಧ್ಯ. ಇದೇನು ಸಣ್ಣ ತಪ್ಪು ಬಿಡು. ಎಂದು ನಮ್ಮನ್ನು ನಾವೇ ಕ್ಷಮಿಸಿಕೊಂಡರೆ ಅದನ್ನೆಲ್ಲ ಮರೆತುಬಿಡುತ್ತೇವೆ. ಆ ತಪ್ಪಿನಿಂದ ಏನನ್ನೂ ಕಲಿಯುವುದೇ ಇಲ್ಲ. ಮುಂದೆ ಪಶ್ಚಾತ್ತಾಪ ಪಡಲೂ ಸಾಧ್ಯವಿಲ್ಲದಂತಹ ದೊಡ್ಡ ತಪ್ಪುಗಳು ಈ ಸಣ್ಣ ತಪ್ಪಿನ ಅಡಿಪಾಯದ ಮೇಲೆಯೇ ಆಗುತ್ತಾ ಹೋಗುತ್ತವೆ. ಸಖಿ, ಮಕ್ಕಳಿಗೆ, ಬದುಕಿನ ಮೌಲ್ಯಗಳ ಕುರಿತು ಒಂದು ಶಿಸ್ತುಬದ್ಧ ಚೌಕಟ್ಟು ಹಾಕಿಕೊಡಲು ಸಣ್ಣ ತಪ್ಪುಗಳನ್ನು ಗಮನವಿಟ್ಟು ನೋಡಿ ತಿಳುವಳಿಕೆ ಹೇಳುವುದು, ಕೆಲವೊಮ್ಮೆ ಶಿಕ್ಷೆ ನೀಡುವುದು ಅನಿವಾರ್ಯವಾಗಿರುತ್ತದೆ. ಹಾಗೇ ನಾವೇ ಮಾಡಿದ ತಪ್ಪುಗಳಿಗೂ ಸಹ ಶಿಕ್ಷೆ ವಿಧಿಸಿಕೊಂಡು, ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾ ಮಾಡಿದ ತಪ್ಪನ್ನು ಎಂದಿಗೂ ಮರೆಯದೇ ಮುಂದೆ ದೊಡ್ಡ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದು ಜಾಣರ ಲಕ್ಷಣ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...