Home / ಕವನ / ಕವಿತೆ / ಢಂಬ ಬದುಕಿನ ತುಂಬಾ

ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ
ಹೊಂದಿಕೊಳ್ಳುವಂತಿದ್ದರೆ
ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ
ಮಲ್ಲಿಗೆಯ ಮಂಪರೇ
ನೆಲಮುಗಿಲ ಹಬ್ಬಿನಿಂತಿದ್ದರೆ,
ಹೀಗೆಲ್ಲ ಆಗುವಂತಿದ್ದರೆ,

ಕನಸುಗಳ ಜೀವ ಚಿಗುತುಕೊಳ್ಳುವುದೇ
ಹಾಗೆ
ಗಾಜು ಗುಜ್ಜಿನ ಬೆಳಕಿಗಿಂತ
ಹನಿ ಬಿಂದು ಮಣ್ಣಿನೆಲದ
ಕಣಕಣ ವ್ಯಾಮೋಹಿಸಿಬಿಡುತ್ತದೆ.
ದಿನಕಳೆದಂತೆಲ್ಲಾ ಬೆಳಕು ಹಿಗ್ಗುತ್ತಲೇ
ಬಯಲ ಬಿದಿರು ಬಿಮ್ಮನೆ
ಆಗಸಕ್ಕೆ ಏಣಿಯಾಗುತ್ತದೆ.
ಆಶೆ ಸ್ಥಾವರದ ದಿಕ್ಕಿನೆಡೆಗೆ ಸಣ್ಣ ನೋಟ
ಚಿಮುಕಿಸಿದರೂ ಸಾಕು
ತುಂಡು ತುಂಡು ನಕ್ಷತ್ರಗಳು
ಫಳ್ಳನೆ ಹೊಳೆದಂತಾಗುವುದು. ಆ
ನಕ್ಷತ್ರಗಳೇ ನಾವಾಗುವಂತಿದ್ದರೆ,

ಢಂಬ ಬದುಕಿನ ತುಂಬಾ
ಚಕಮಕಿ ಚೆಲ್ಲಿ ಬಿದ್ದರೂ ಜೀವ ತಹತಹ
ಅದೇಕೋ ನಿಲ್ಲುವುದೇ ಇಲ್ಲ
ನಾದದ ತಂಬೂರಿ ಮೀಟಿದಂತೆಲ್ಲಾ
ದಣಿವು ದುಮ್ಮಾನ ಬದಿಗೊತ್ತಿ
ಮಿಡುಕುವ ಮನಗಳು
ಉಕ್ಕಿದ ತೆನೆಗಳ ಬಳುಕಾಟಕ್ಕೆ
ಹೊಸೆದುಕೊಂಡರೆ
ಉದ್ದಕ್ಕೂ ಹಾಸಿ ಬೀಸುವ
ಮಲಯಪರ್ವತದ
ಕುಳಿರ್‍ಗಾಳಿ ಎದೆಯನ್ನೆ ಪುಷ್ಪವಾಗಿಸುತ್ತದೆ.
ಪುಷ್ಪವೇ ನಾವಾಗುವಂತಿದ್ದರೆ,

ನಾಳೆ ಬೀಳುವ ಎಲೆಗೂ ಗಾಳಿ
ಕುಲುಕಿಸಿ ಮೋಡಿ, ಮಗುವಿನ
ಕಿಲಕಿಲ ನಗು ಬೊಚ್ಚು ಬಾಯಿಯಲ್ಲೂ
ಮುದ್ದಾದ ಮಲ್ಲಿಗೆಯನ್ನೆ ಅರಳಿಸಿಬಿಡುತ್ತದೆ.
ಹಸಿರ ಕನಸೇ ಹಾಗೆ
ಕದಪು ಕೆಂದಾವರೆಯಾಗಿ ವಿನ್ಯಾಸಗೊಳ್ಳುತ್ತದೆ
ಮಣ್ಣೊಳಗೆ ಹೂಳಿದರೂ ಬೀಜ
ಚಿಗುರಾಗಿ ಹೊರಗಿಣುಕಿತು.
ಹೊಲದ ಅಂಚಿಗೆ ಅರೆಬರೆಯ ಬದುವು
ಇದ್ದರೂ ಅಂತರ್‍ಗತ ಜಿನುಗು
ಉಕ್ಕಿಸಿ ಬಿಡುತ್ತದೆ ಹಸಿರು
ನಾವೇ ಹಸಿರಾಗುವಂತಿದ್ದರೆ

ಪುಣ್ಯಕೋಟಿಯ ಕೆಚ್ಚಲು ಹಿಗ್ಗಿದಷ್ಟೂ
ಕರುವಷ್ಟೇ ಅಲ್ಲ,
ಕಾಳಿಂಗನ ಕರೆಮೊಗೆಯೂ ಹೀರಿ ಉಕ್ಕಿತು
ಪ್ರೀತಿ ಹೊಳೆವ ತಾರೆ ಹೂ ಹಸಿರು,
ಉಸಿರು ಬಸಿರು
ಪ್ರೀತಿಗೆ ಬೆತ್ತಲಾಗದಿದ್ದರೆ
ಬೆತ್ತಲೆ ಪದವೇ ಬಯಲಲ್ಲಿ ನಿಂತಿತು
ಬಯಲೇ ನಾವಾಗುವಂತಿದ್ದರೆ,
ನಾವೇ ಬಯಲಾದರೆ… ಬೆಳಕಾಗುವಂತಿದ್ದರೆ…
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...