Home / ಕವನ / ಕವಿತೆ / ಅಹಲ್ಯೆ

ಅಹಲ್ಯೆ

ಇಂದ್ರ:

ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ
ಬಾರಿಬಾರಿಗು ಜೀವದ ಪವಾಡ ಕೋರಿ
ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು
ನಿಂತಿದ್ದ ಒಡಲು ಇಂದು ಕೇವಲ ಕಲ್ಲು
ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ
ಒಬ್ಬಾತನ ಸ್ನೇಹದಲಿ ಇನ್ನೊಬ್ಬನ ಮೋಹ
ಹಿಡಿಯಬಯಸಿದವಳೆ ಎರಡನೊಮ್ಮೆಲೆ
ಎಳಸಿದವಳೆ ಕೇಳು ನನ್ನ ಕರೆ! ಏಳು
ಎದ್ದೇಳು ನಿದ್ದೆಯಿಂದ ಹುಟ್ಟು ಶಿಲೆಯೊಳಗಿಂದ
ನಡೆಯಲಿ ಪಾದ ಕೇಳಿಸಲಿ ಕಂಠದ ನಾದ
ಮರ್ತ್ಯದ ಸಕಲ ಸಾರ ಪಡೆಯೆ ಆಕಾರ
ಎಲೆ ಚೆಲುವೆ ನೀ ಯಾರ ಕಾಯುತಿರುವೆ
ಯಾವ ಯುಗದ ದೈವ ಕೊಡುವುದು ಜೀವ?

ಆಹಲ್ಯೆ:

ಪಾಷಾಣವೆಂಬ ಸ್ಥಿತಿ ಎಷ್ಟೊಂದು ಕಠಿಣ-
ವೆಂಬುದನು ಯಾರಿಗೆ ತಿಳಿಸುವೆನು ಹೇಗೆ!
ಚಲಿಸಲಾರೆನು ಕೈಯ ಸ್ಪಂದಿಸದು ಹೃದಯ
ತಡವಲಾರದ ಬೆರಳು ಸರಿಸಲಾರದ ಕುರುಳು
ಯುಗವೆ ಕಳೆದಿದೆ ಮೈಯ ಹೊರಳಿಸದೆ
ಮಾತು ಮರೆತಿರುವೆ ಇದ್ದರೂ ಇರದಿರುವೆ
ತೆರೆದು ಮಳೆಬಿಸಿಲಿಗೆ ಬಿದ್ದರೂ ಹೀಗೆ
ಮುದುಡುವಂತಿಲ್ಲ ಬಾಡುವಂತಿಲ್ಲ
ಸಕಲ ದಾಹಗಳನೊಮ್ಮೆಲೆ ತಣಿಸಿದಂತಿದೆ ದೇಹ
ಅಹ್! ಇನ್ನೇಕೆ ಮಾತು ದಾಹದ ಕುರಿತು?
ನೆನಪುಗಳಿರದ ಯಾವ ಭಯವೂ ಇರದ
ಎಷ್ಟೊಂದು ಮಾಗಿ ಮೈಮೇಲೆ ಸಾಗಿ
ಇನ್ನೊಂದು ಯುಗದಲ್ಲಿ ಎಷ್ಟೊಂದು ಮನದಲ್ಲಿ
ಏಳಲೇಕೆ ಇಂಥ ಗತಿ ಮತ್ತೆ ಬೇಕೆ?

ಗೌತಮ:

ಇಷ್ಟು ಬೇಗನೆ ಮೂಡಿತೆ ಮುಂಜಾನೆ-
ಯೆಂದು ಬರಿಗಾಲಿನಲಿ ನಿದ್ದೆಗಣ್ಣಿನಲಿ
ನದಿಯ ತೀರಕೆ ಬಂದು ಎಂದಿನಂತೆಯ ಮಿಂದು
ನೋಡಿದರೆ ರಾತ್ರಿ. ಇನ್ನೂ ಮೂರನೆ ಪಹರೆ
ಕೋಳಿ ಕೂಗಿದ ಸದ್ದು ಕಿವಿಯಾರೆ ಕೇಳಿದ್ದು
ಸುಳ್ಳಿರಬಹುದೆ? ಅಹ ಮೋಸ ಹೋದೆ-
ನೆಂದು ಮರಳಿದರೆ ಮನೆಗೆ ಏನದು ಒಳಗೆ
ಯಾಕೆ! ನನ್ನ ನಾನೆ ಕಂಡು ಬೆಚ್ಚೆದೆನೆ
ನಿಂತಿದ್ದ ನಿಚ್ಛಾರೂಪಿ ತದ್ವತ್‌ಸ್ವರೂಪಿ
ಕತ್ತಲಿನ ಮರೆಯಲ್ಲಿ ನನ್ನನಣಕಿಸುವ ರೀತಿಯಲಿ
ಸ್ವಂತ ಬಯಕೆಗಳಭಿವ್ಯಕ್ತಿಯಂತೊಬ್ಬ ವ್ಯಕ್ತಿ!
ಸಿಡಿದೆದ್ದ ಕೋಪವೆ ಕೈಬಿಟ್ಟ ಶಾಪವೆ
ಹಿಂದೆ ಬರುವುದೆಂತು ತುಟಿಮೀರಿದ ಮಾತು
ಕಲ್ಲಾದವನು ನೀನಲ್ಲ ನಾನು!

ಇಂದ್ರ:

ಬೆಳಕು ಮೂಡಿರಲಿಲ್ಲ ಕೋಳಿ ಕೂಗಿರಲಿಲ್ಲ-
ಕೂಗಿದುದು ಕಾಮ ಎಲೆ ಗೌತಮ
ಕೇಳು! ಕಾನನ ತುಂಬ ತುಂಬಿ ಕಡುಮೌನ
ನೆಲವೆಲ್ಲ ಹರಡಿದ್ದ ದಟ್ಟ ಎಲೆಗಳ ಮೆಲ್ಲ
ಸದ್ದಾಗದ ತರದಿ ಮೆಟ್ಟಿ ನಡೆದೆನು ಹಾದಿ
ಮಲಗಿದ್ದ ಮನದನ್ನೆ ಕಂಡ ಕನಸನ್ನೆ
ಹೊಕ್ಕವನು ನಾನು ತನುವಿರದವನು
ನನಗಿಲ್ಲ ನೆರಳು ನಾನು ಕೇವಲ ಮರುಳು
ಉದಯದ ಆಸೆಯಲಿ ಸಂಜೆಯ ನಿರಾಸೆಯಲಿ
ಕರೆದವಳು ಯಾರೀಕೆ ಅಂತರಂಗದ ಸನಿಯಕೆ
ನದಿಯೋ ಭೂಮಿಯೊ ಕೇವಲ ಕಲ್ಪನೆಯೊ
ನಾದವೊ ವರ್ಣವೊ ಸ್ಪರ್ಶದ ಸೆಳವೊ
ತಿಳಿಯಲಿ ಹೇಗೆ ತಿಳಿಯದೆ ಪಡೆಯಲಿ ಹೇಗೆ
ಪಡೆಯಲೆಂದೇ ಬಂದು ಪಡೆದುಕೊಂಡಂದು
ನನ್ನ ಕನಸನೆ ನಾನು ಒಡೆದುಕೊಂಡೆನೆ
ಹೇಳು ಮನವೆ ಇದು ಇನ್ನೊಂದು ದಿನವೆ?

ಕವಿ:

ದೈವವಿರಲಿಲ್ಲ ಯಾವ ದೇವರೂ ಬರಲಿಲ್ಲ
ಬಂದವನೊಬ್ಬ ಮಾನವ ಶಿಲೆಯಿಂದ ಶಿಲ್ಪವ
ತೆಗೆಯ ಬಯಸಿದನು, ಬಿಡಿಸಬಬಯಸಿದನು
ಶಾಪದ ಸರೆಯಿಂದ ಆ ಅಂಥ ಛಂದ
ಕಣ್ಣುಗಳೆಲ್ಲಿ ತುಟಿಗಳೆಲ್ಲಿ ತೋಳುಗಳೆಲ್ಲಿ
ಎಲ್ಲಿ ಮರ್ತ್ಯಕ್ಕೆ ಸ್ವರ್ಗವ ತಂದ ನಿಸರ್ಗ
ಎವೆಯದುರಿತೆ ಮುಟ್ಟಿದ ಕೈ ಕಂಪಿಸಿತೆ
ಉಳಿಯ ಹೊಡೆತವೊ ಅದು ನಾಡಿ ಮಿಡಿತವೊ
ಯಾರೂ ಇರದಲ್ಲಿ ಉತ್ತರಿಸುವವರಾರಿಲ್ಲ
ಅವರವರ ಭಾವಕ್ಕೆ ತಕ್ಕಂತೆ ರೆಕ್ಕೆ
ತೆರೆಯುವ ಮನಸ್ಸು ಹೂಡುವ ಪ್ರತ್ಯೇಕ ತಪಸ್ಸು
ಅದೋ ಅದೋ! ನೋಡಿ ಸಾವಿರ ಕಣ್ಣು ಒಮ್ಮೆಲೆ ಮೂಡಿ
ಆಹ! ಪ್ರತಿಯೊಂದು ಕಲ್ಪಕೂ ಪ್ರತ್ಯೇಕ ಶಿಲ್ಪ
ಪ್ರತಿಯೊಂದು ಅಬ್ದಕೂ ಅದರದೇ ಶಬ್ದ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್