Home / ಕವನ / ಕವಿತೆ / ಅಮೃತ ಸ್ವಾತಂತ್ರ್‍ಯ

ಅಮೃತ ಸ್ವಾತಂತ್ರ್‍ಯ

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು
ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು?

ಜಾತಿ ಮತ ಪಂಥಗಳ ಭೇದಗಳನೆ ಹಿಡಿದು,
ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು,
ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ
ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ?

ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ
ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ
ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ-
ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ?

ಅರೆಹೊಟ್ಟೆ ತಿನ್ನುವುದೆ ನಿತ್ಯನಿಯಮವದಾಗೆ
ಇನ್ನು ಮಾರದೆ ಉಳಿಯೆ ಬಡತನದ ಬಿರುಬೇಗೆ
ಊರು ಕೇರಿಗಳೆಲ್ಲ ಭಿಕ್ಷುಕರ ಬೀಡಾಗೆ
ಸಾವು ಬದುಕಿನ ನರಕ ಸ್ವಾತಂತ್ರ್‍ಯವೆ?

ನಾಡ ಮಕ್ಕಳು ಮಂದಿ ಅಜ್ಞಾನದಲಿ ಮುಳುಗಿ
ಎಲ್ಲೊ ಹಲಕೆಲರು ಪಂಡಿತರೆನಿಸಿ ಬೆಳಗಿ
ಸ್ವಾರ್ಥಸಾಧಕರ ಪಡೆ ನಾಡೆಲ್ಲ ತಿರುಗುತಿರೆ
ಅವರ ತಾಳಕೆ ಕುಣಿಯೆ ಸ್ವಾತಂತ್ರ್‍ಯವೆ?

ಸಾಮ್ಯವಾದದ ಹೆಸರ ಹಲಗೆಯನು ಮುಂದಿಟ್ಟು
ವಿಜ್ಞಾನ ಯುಗವೆಂದು ಧರ್ಮವನು ಕಟ್ಟಿಟ್ಟು
ಪ್ರಾಚೀನ ಸಂಸ್ಕೃತಿಯ ಸುಟ್ಟು ಕರಿಬೊಟ್ಟಿಟ್ಟು
ಮುಂದುವರಿಯುವೆವೆನಲು ಸ್ವಾತಂತ್ರ್‍ಯವೆ?

ನಮ್ಮ ನಡೆ ನುಡಿ ನೋಟ ನಮ್ಮ ನಯ ನೀತಿ ನೆಲೆ
ನಮ್ಮ ನಾಡಿನ ಜ್ಞಾನ ಭಂಡಾರದತುಳ ಬೆಲೆ
ಧರ್ಮಬಾಹಿರ ಯಂತ್ರಜೀವನದಿನಾಗೆ ಕೊಲೆ
‘ನಾವು ನಾವಲ್ಲದಿಹ’ ಬದುಕು ಸ್ವಾತಂತ್ರ್‍ಯವೆ?

ತನ್ನ ನಂಬಿದ ಬೆಳಕ ಹಿಡಿದು ನಿಲಲಾಗದಿರೆ
ತನ್ನ ಕಾಣ್ಕೆಯ ಸತ್ಯ ನುಡಿಯಲನುವಿಲ್ಲದಿರೆ
ತನ್ನ ಇಚ್ಛೆಯ ಬಾಳ್ಕೆ ನಡೆಸಲೆಡೆಯಿಲ್ಲದಿರೆ
ದೊರೆತ ಸ್ವಾತಂತ್ರ್‍ಯವದು ಸ್ವಾತಂತ್ರ್‍ಯವೆ?

ದೇವನೆದುರಿನಲೆಲ್ಲ ಸರ್ವಸಮರೆನಿಸುತ್ತ
ಧರ್ಮ ನೆಲೆ ತಪ್ಪದೊಲು ಸಮತೆಯನು ಸಾಧಿಸುತ
ಇಹದ ಹಾಲಿಗೆ ಪರದ ಸಕ್ಕರೆಯ ಬೆರಸುತ್ತ
ಬಾಳಲಪ್ಪುದೆ ಅಮೃತ ಸ್ವಾತಂತ್ರ್‍ಯವಲ್ತೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...