Home / ಲೇಖನ / ಇತರೆ / ಹಸಿವು

ಹಸಿವು

face-867521__180ಪ್ರಿಯ ಸಖಿ,

ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸುತ್ತದೆ. ಹೌದು ಅವರು ಏನನ್ನೂ ಸೇವಿಸದೇ ಹನ್ನೆರಡು ಗಂಟೆಗಳೇ ಕಳೆದಿವೆ. ಆದರೆ ಹಸಿವು ಎಂದು ಬಾಯಿಬಿಟ್ಟು ಹೇಳುವುದಾದರೂ ಹೇಗೆ? ಸತ್ತವನು ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಹತ್ತಿರದ ಸಂಬಂಧಿ.

ಆ ಸಮಯದಲ್ಲಿ ಕಿಚ್ಚಿನಂತೆ ಸುಡುತ್ತಿರುವ ಹಸಿವನ್ನು ಬೈಯ್ದುಕೊಳ್ಳುವವರೇ ಹೆಚ್ಚು. ಇಷ್ಟೆಯೇ ಸಂಬಂಧಗಳನ್ನು ಕಳೆದುಕೊಂಡಾಗಿನ ನೋವಿನ ತೀವ್ರತೆ ಅವನನ್ನು ಮಣ್ಣು ಮಾಡಿ ಬಂದೊಡನೆ ಹಸಿವು ಕಾಡಲು ಪ್ರಾರಂಭಿಸಿಬಿಡಬೇಕೆ? ಹಸಿವಿನ ಮುಂದೆ ನೋವು ಎರಡನೇ ಸ್ಥಾನಕ್ಕೆ ಹೋಯಿತೇ? ಹಾಗಿದ್ದರೆ ಇಲ್ಲಿ ಎಲ್ಲಕ್ಕಿಂತಾ ಮುಖ್ಯವಾದದ್ದು ಹಸಿವು ಮಾತ್ರವೇ? ಬೇರೆಲ್ಲದ್ದಕ್ಕೂ ಇಲ್ಲಿ ಅರ್ಥವೇ ಇಲ್ಲವೇ? ಬದುಕಲು ತಿನ್ನುವುದು, ತಿನ್ನಲು ಬದುಕುವುದು, ಇವೆರಡರ ನಡುವಿನ ವ್ಯತ್ಯಾಸದ ಗೆರೆ ಪ್ರಾರಂಭವಾಗುವುದು ಎಲ್ಲಿಂದ? ಎಂಬುದು ಮನದ ಪ್ರಶ್ನೆಗಳು. ನೋವಿದೆಯೆಂದು ಎಷ್ಟು ದಿನ ಉಪವಾಸವಿರಲು ಸಾಧ್ಯ? ನೋವಿನ ತೀವ್ರತೆ ಹಸಿವಿನ ತೀವ್ರತೆಯನ್ನು ಭಂಗಿಸಲು ಸಾಧ್ಯವೇ? ಎಂಬುದು ಬುದ್ಧಿಯ ತರ್ಕ.

ಸಖಿ, ನಾವು ಮರೆತಿದ್ದೇವೆ. ಹಸಿವು ದೇಹಕ್ಕೆ ಸಂಬಂಧಿಸಿದ್ದು, ನೋವಿದೆಯೆಂದು ಏನೂ ತಿನ್ನದಿರಲಾಗುವುದಿಲ್ಲ ಎಂಬ ವಿವೇಚನೆ ಬುದ್ಧಿಗೆ ಸಂಬಂಧಿಸಿದ್ದು. ದೇಹ, ಬುದ್ಧಿ, ಮನಸ್ಸು, ಮೂರೂ ಬೇರೆ ಬೇರೆಯಾದದ್ದೆಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹಾಗೇ ದೇಹದ ಹಸಿವಿಗೂ ಬುದ್ಧಿ, ಮನಸ್ಸುಗಳಿಗೂ ನೇರ ಸಂಬಂಧವಿಲ್ಲದಿದ್ದರೂ ನಾವು ಮೂರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತೇವೆ! ಬುದ್ಧಿಯ ಹಸಿವು, ಮನಸ್ಸಿನ ಹಸಿವುಗಳು ಇದ್ದರೂ  ಅದಕ್ಕೆ ದೇಹದ ಹಸಿವಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ನಾವು ಕೊಡುವುದಿಲ್ಲ. ಏಕೆಂದರೆ ದೇಹದ ಹಸಿವು ಜೀವಕ್ಕೆ ಮೂಲವಾದುದು ಅದನ್ನು ಹಿಂಗಿಸಲೇಬೇಕು. ಅದು ಅನಿವಾರ್ಯ. ಆದರೆ ಬುದ್ಧಿಯ ಹಸಿವು; ಮನಸ್ಸಿನ ಹಸಿವುಗಳನ್ನು ಹಿಂಗಿಸಲೇಬೇಕಾದ ಅನಿವಾರ್ಯತೆ ಇಲ್ಲವೆಂದೇ ಅದು ಹಿಂದಕ್ಕೆ ತಳ್ಳಲ್ಪಟ್ಟಿದೆ.

ಬುದ್ಧಿಯ ಹಸಿವು ಇಂಗಿಸಲು ವಿಚಾರಗಳ, ಚಿಂತನಗಳ ಅವಶ್ಯಕತೆ ಇರುವಂತೆ ಮನಸ್ಸಿನ ಹಸಿವು ಇಂಗಿಸಲು ಪ್ರೀತಿ, ಅಕ್ಕರೆ, ಅಭಿಮಾನ, ಸ್ನೇಹ ಮುಂತಾದ ಭಾವನೆಗಳ ಅವಶ್ಯಕತೆ ಇದೆ. ಆದರೆ ದೇಹದ ಹಸಿವನ್ನು ಪೂರೈಸುವುದೇ ಮುಖ್ಯವಾಗಿ ಮಿಕ್ಕ ಹಸಿವು ಗೌಣವಾಗುತ್ತದೆ.

ಆದರೆ ಬರಿಯ ದೇಹದ ಹಸಿವನ್ನಷ್ಟೇ ಹಿಂಗಿಸಿ ಇದೇ ಬದುಕೆಂದುಕೊಂಡು ಆಯುಷ್ಯವನ್ನು ಕಳೆದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವೇನಿದೆ? ಬುದ್ಧಿಯ ಹಸಿವೂ
ಮನಸ್ಸಿನ ಹಸಿವೂ ನಮ್ಮನ್ನು ಸುಡಬೇಕು. ಅದನ್ನು ಹಿಂಗಿಸಿಕೊಳ್ಳಲು ನಾವೂ ಪ್ರಯತ್ನಿಸಬೇಕು. ಆಗ ಬದುಕು ಸಾರ್ಥಕ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...