ಕೂಸಿಗಂದು ಏನು ಬೇಡ,
ತಿಂಡಿ ಗೊಂಬೆ ಮುದ್ದು ಬೇಡ.
ಏನೊ ಅರಕೆ, ಏನೊ ಬೇನೆ,
ಅತ್ತು ಸೊರಗಿತು :
“ಅಮ್ಮ ಎಲ್ಲಿ ಹೋತು” ಎನುತ
ಅತ್ತು ಸೊರಗಿತು.

ಅಳುವ ಕೇಳಿ ಬಂದ ತಾಯ
ಅಮೃತಸ್ಪರ್‍ಶಕಾರೆ ಗಾಯ,
ತೊಯ್ದ ಕಣ್ಣ ಬಿಚ್ಚಿ, ಸುಳಿಸಿ,
ತೊಂದು ನಗೆಯನು-
“ನಿನ್ನ ನುಳಿಯೆ ಬಾಳು ಶೂನ್ಯ!”
ಎನುವ ನಗೆಯನು.


ಕೂಸು ಬೆಳೆದು ಆದ ರಾಮು,
ಇಂದು ನೆರೆಯ ಮನೆಯ ಶಾಮು
ರಾಮನೊಂದೆ ಬಯಕೆ, ಕನಸು,
ಬಾಳ ಧ್ಯೇಯವು ;
ಆಸೆಗಳಿಗೆ ಕಲ್ಪತರುವು,
ನೋವಿಗಮೃತವು.

ಒಂದೆ ಜೀವದೆರಡು ಕವಲು;
ರಾಮ-ಶಾಮು: ಹಾಡು-ಹೊಳಲು.
ತುಂಬುಗಣ್ಣೊಳವನ ರಾಮು
ಸೆರೆಯಕೊಳುವನು:
“ನಿನ್ನ ನುಳಿಯೆ ಬಾಳು ಬಯಲು”
ಎಂದುಕೊಳುವನು.


ರಾಮುವೀಗ ರಾಮರಾಯ!
ಏನು ಠೀವಿ! ಎಂಥ ಪ್ರಾಯ!
ನಿತ್ಯ ಕನಸುಕಾಂಬ ತೆರದ
ನೋಟದಲೆತವು;
ಒಲುಮೆನೆರೆಗೆ ಸಿಲುಕಿದವನ
ಮನದ ಸೆಳೆತವು!

ಇಂದು ಸರಳೆ ಅವನ ಜಗವ
ತುಂಬಿ, ಬಾಳ ಸೂರೆಗೊಳುವ-
ಳಾತ್ಮವನ್ನೆ ಮೀಸಲಿಟ್ಟು
ರಾಮು ಒಲಿವನು;
“ಸುಳಿದೆ, ಸರಳ, ಬಾಳ ಟೊಳ್ಳು
ತುಂಬಿ”ತೆನುವನು.


ಸರಳೆ ರಾಮರೊಲುಮೆ ಸೂತ್ರ
ಹಸುಳೆ ಕಿಟ್ಟು, ಮೊದಲು – ಚಿತ್ರ!
ರಾಮಗದರ ಬಾಳ ಗುಟ್ಟು
ಅರ್‍ಥವಾಗದು:
“ನಮ್ಮ ಪ್ರೇಮಕಡ್ಡಬಂದ
ಗಂಡವೇನಿದು?”

ಒಂದು ದಿನದಿ ಕೂಸು ತನ್ನ
ಬೆಳಕೆ ದ್ರವಿಸಿ ಹರಿವ ಕಣ್ಣ
ಮೊಗದಿ ನೆಟ್ಟು, ಅವನ ಬೆರಳ
ಬಾಯಿಗೊಯ್ಯಲು,
ರಾಮನೆಂದ, “ತೀರಿತಿಂದು
ಬಾಳ ಹಂಬಲು!”


ರಾಮರಾಯನೆಂಥ ಮನುಜ!
ಸಿರಿಯ ಘೃಣೆಯ ಹಿರಿಯ ಕಣಜ!
ಏನು ಪ್ರತಿಭೆ, ಎಂಥ ವಿನಯ!-
ಯಶದ ಹೊಗಳದು.
ಆತನೊಂದೆ ಬಯಕೆ ಒಲಿದು
ಬರುವ ಮೊಳಗದು.

ಜಸದ ಹೆಣ್ಣು ಒಲಿದು ನಗಲು,
ನಗೆಯು ಮೊಗದಿ ಬಿಂಬಿಸಿರಲು,
ಬಾಳ ಸಂಜೆಯಲ್ಲಿ ಯಶಕೆ
ರಾಮರಾಯರು,
“ಬಂದೆ, ಬಾಳು ಪೂರ್ಣವಾಯ್ತು”
ಎಂದು ನುಡಿದರು.


“ಇಲ್ಲಿ ಹಳ್ಳ, ಅಲ್ಲಿ ತಿಟ್ಟು”
ಎನುತ ಕೋಲ ಹಿಡಿದು ಪುಟ್ಟು
ನಡೆಸುತಿರುವ ಪಲಿತ ಶಿರದ
ತಾತ-ರಾಯರು!
ಕೂಸಿಗಿಂತ ತ್ರಾಣಿಯಲ್ಲ
ಪಾಪ!-ರಾಯರು.

ಒಂದು ದಿನದೊಳಿರುಳಿನಲ್ಲಿ
ಕಿರಣವೊಂದು ಹೊನ್ನ ಚೆಲ್ಲಿ,
ಬಾಳ ಸೆರೆಯ ಬೆಳಗೆ, ತಾತ
ಚಕಿತರಾದರು:
“ಬಂದು ಬಾಳಿಗರ್‍ಥವಿತ್ತೆ,
ಮೃತ್ಯು” ಎಂದರು.
*****