Home / ಕವನ / ಕವಿತೆ / ಬಾಳಿನ ಹಂಬಲು

ಬಾಳಿನ ಹಂಬಲು


ಕೂಸಿಗಂದು ಏನು ಬೇಡ,
ತಿಂಡಿ ಗೊಂಬೆ ಮುದ್ದು ಬೇಡ.
ಏನೊ ಅರಕೆ, ಏನೊ ಬೇನೆ,
ಅತ್ತು ಸೊರಗಿತು :
“ಅಮ್ಮ ಎಲ್ಲಿ ಹೋತು” ಎನುತ
ಅತ್ತು ಸೊರಗಿತು.

ಅಳುವ ಕೇಳಿ ಬಂದ ತಾಯ
ಅಮೃತಸ್ಪರ್‍ಶಕಾರೆ ಗಾಯ,
ತೊಯ್ದ ಕಣ್ಣ ಬಿಚ್ಚಿ, ಸುಳಿಸಿ,
ತೊಂದು ನಗೆಯನು-
“ನಿನ್ನ ನುಳಿಯೆ ಬಾಳು ಶೂನ್ಯ!”
ಎನುವ ನಗೆಯನು.


ಕೂಸು ಬೆಳೆದು ಆದ ರಾಮು,
ಇಂದು ನೆರೆಯ ಮನೆಯ ಶಾಮು
ರಾಮನೊಂದೆ ಬಯಕೆ, ಕನಸು,
ಬಾಳ ಧ್ಯೇಯವು ;
ಆಸೆಗಳಿಗೆ ಕಲ್ಪತರುವು,
ನೋವಿಗಮೃತವು.

ಒಂದೆ ಜೀವದೆರಡು ಕವಲು;
ರಾಮ-ಶಾಮು: ಹಾಡು-ಹೊಳಲು.
ತುಂಬುಗಣ್ಣೊಳವನ ರಾಮು
ಸೆರೆಯಕೊಳುವನು:
“ನಿನ್ನ ನುಳಿಯೆ ಬಾಳು ಬಯಲು”
ಎಂದುಕೊಳುವನು.


ರಾಮುವೀಗ ರಾಮರಾಯ!
ಏನು ಠೀವಿ! ಎಂಥ ಪ್ರಾಯ!
ನಿತ್ಯ ಕನಸುಕಾಂಬ ತೆರದ
ನೋಟದಲೆತವು;
ಒಲುಮೆನೆರೆಗೆ ಸಿಲುಕಿದವನ
ಮನದ ಸೆಳೆತವು!

ಇಂದು ಸರಳೆ ಅವನ ಜಗವ
ತುಂಬಿ, ಬಾಳ ಸೂರೆಗೊಳುವ-
ಳಾತ್ಮವನ್ನೆ ಮೀಸಲಿಟ್ಟು
ರಾಮು ಒಲಿವನು;
“ಸುಳಿದೆ, ಸರಳ, ಬಾಳ ಟೊಳ್ಳು
ತುಂಬಿ”ತೆನುವನು.


ಸರಳೆ ರಾಮರೊಲುಮೆ ಸೂತ್ರ
ಹಸುಳೆ ಕಿಟ್ಟು, ಮೊದಲು – ಚಿತ್ರ!
ರಾಮಗದರ ಬಾಳ ಗುಟ್ಟು
ಅರ್‍ಥವಾಗದು:
“ನಮ್ಮ ಪ್ರೇಮಕಡ್ಡಬಂದ
ಗಂಡವೇನಿದು?”

ಒಂದು ದಿನದಿ ಕೂಸು ತನ್ನ
ಬೆಳಕೆ ದ್ರವಿಸಿ ಹರಿವ ಕಣ್ಣ
ಮೊಗದಿ ನೆಟ್ಟು, ಅವನ ಬೆರಳ
ಬಾಯಿಗೊಯ್ಯಲು,
ರಾಮನೆಂದ, “ತೀರಿತಿಂದು
ಬಾಳ ಹಂಬಲು!”


ರಾಮರಾಯನೆಂಥ ಮನುಜ!
ಸಿರಿಯ ಘೃಣೆಯ ಹಿರಿಯ ಕಣಜ!
ಏನು ಪ್ರತಿಭೆ, ಎಂಥ ವಿನಯ!-
ಯಶದ ಹೊಗಳದು.
ಆತನೊಂದೆ ಬಯಕೆ ಒಲಿದು
ಬರುವ ಮೊಳಗದು.

ಜಸದ ಹೆಣ್ಣು ಒಲಿದು ನಗಲು,
ನಗೆಯು ಮೊಗದಿ ಬಿಂಬಿಸಿರಲು,
ಬಾಳ ಸಂಜೆಯಲ್ಲಿ ಯಶಕೆ
ರಾಮರಾಯರು,
“ಬಂದೆ, ಬಾಳು ಪೂರ್ಣವಾಯ್ತು”
ಎಂದು ನುಡಿದರು.


“ಇಲ್ಲಿ ಹಳ್ಳ, ಅಲ್ಲಿ ತಿಟ್ಟು”
ಎನುತ ಕೋಲ ಹಿಡಿದು ಪುಟ್ಟು
ನಡೆಸುತಿರುವ ಪಲಿತ ಶಿರದ
ತಾತ-ರಾಯರು!
ಕೂಸಿಗಿಂತ ತ್ರಾಣಿಯಲ್ಲ
ಪಾಪ!-ರಾಯರು.

ಒಂದು ದಿನದೊಳಿರುಳಿನಲ್ಲಿ
ಕಿರಣವೊಂದು ಹೊನ್ನ ಚೆಲ್ಲಿ,
ಬಾಳ ಸೆರೆಯ ಬೆಳಗೆ, ತಾತ
ಚಕಿತರಾದರು:
“ಬಂದು ಬಾಳಿಗರ್‍ಥವಿತ್ತೆ,
ಮೃತ್ಯು” ಎಂದರು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್