Home / ಕವನ / ಕವಿತೆ / ಬಾಳಿನ ಹಂಬಲು

ಬಾಳಿನ ಹಂಬಲು


ಕೂಸಿಗಂದು ಏನು ಬೇಡ,
ತಿಂಡಿ ಗೊಂಬೆ ಮುದ್ದು ಬೇಡ.
ಏನೊ ಅರಕೆ, ಏನೊ ಬೇನೆ,
ಅತ್ತು ಸೊರಗಿತು :
“ಅಮ್ಮ ಎಲ್ಲಿ ಹೋತು” ಎನುತ
ಅತ್ತು ಸೊರಗಿತು.

ಅಳುವ ಕೇಳಿ ಬಂದ ತಾಯ
ಅಮೃತಸ್ಪರ್‍ಶಕಾರೆ ಗಾಯ,
ತೊಯ್ದ ಕಣ್ಣ ಬಿಚ್ಚಿ, ಸುಳಿಸಿ,
ತೊಂದು ನಗೆಯನು-
“ನಿನ್ನ ನುಳಿಯೆ ಬಾಳು ಶೂನ್ಯ!”
ಎನುವ ನಗೆಯನು.


ಕೂಸು ಬೆಳೆದು ಆದ ರಾಮು,
ಇಂದು ನೆರೆಯ ಮನೆಯ ಶಾಮು
ರಾಮನೊಂದೆ ಬಯಕೆ, ಕನಸು,
ಬಾಳ ಧ್ಯೇಯವು ;
ಆಸೆಗಳಿಗೆ ಕಲ್ಪತರುವು,
ನೋವಿಗಮೃತವು.

ಒಂದೆ ಜೀವದೆರಡು ಕವಲು;
ರಾಮ-ಶಾಮು: ಹಾಡು-ಹೊಳಲು.
ತುಂಬುಗಣ್ಣೊಳವನ ರಾಮು
ಸೆರೆಯಕೊಳುವನು:
“ನಿನ್ನ ನುಳಿಯೆ ಬಾಳು ಬಯಲು”
ಎಂದುಕೊಳುವನು.


ರಾಮುವೀಗ ರಾಮರಾಯ!
ಏನು ಠೀವಿ! ಎಂಥ ಪ್ರಾಯ!
ನಿತ್ಯ ಕನಸುಕಾಂಬ ತೆರದ
ನೋಟದಲೆತವು;
ಒಲುಮೆನೆರೆಗೆ ಸಿಲುಕಿದವನ
ಮನದ ಸೆಳೆತವು!

ಇಂದು ಸರಳೆ ಅವನ ಜಗವ
ತುಂಬಿ, ಬಾಳ ಸೂರೆಗೊಳುವ-
ಳಾತ್ಮವನ್ನೆ ಮೀಸಲಿಟ್ಟು
ರಾಮು ಒಲಿವನು;
“ಸುಳಿದೆ, ಸರಳ, ಬಾಳ ಟೊಳ್ಳು
ತುಂಬಿ”ತೆನುವನು.


ಸರಳೆ ರಾಮರೊಲುಮೆ ಸೂತ್ರ
ಹಸುಳೆ ಕಿಟ್ಟು, ಮೊದಲು – ಚಿತ್ರ!
ರಾಮಗದರ ಬಾಳ ಗುಟ್ಟು
ಅರ್‍ಥವಾಗದು:
“ನಮ್ಮ ಪ್ರೇಮಕಡ್ಡಬಂದ
ಗಂಡವೇನಿದು?”

ಒಂದು ದಿನದಿ ಕೂಸು ತನ್ನ
ಬೆಳಕೆ ದ್ರವಿಸಿ ಹರಿವ ಕಣ್ಣ
ಮೊಗದಿ ನೆಟ್ಟು, ಅವನ ಬೆರಳ
ಬಾಯಿಗೊಯ್ಯಲು,
ರಾಮನೆಂದ, “ತೀರಿತಿಂದು
ಬಾಳ ಹಂಬಲು!”


ರಾಮರಾಯನೆಂಥ ಮನುಜ!
ಸಿರಿಯ ಘೃಣೆಯ ಹಿರಿಯ ಕಣಜ!
ಏನು ಪ್ರತಿಭೆ, ಎಂಥ ವಿನಯ!-
ಯಶದ ಹೊಗಳದು.
ಆತನೊಂದೆ ಬಯಕೆ ಒಲಿದು
ಬರುವ ಮೊಳಗದು.

ಜಸದ ಹೆಣ್ಣು ಒಲಿದು ನಗಲು,
ನಗೆಯು ಮೊಗದಿ ಬಿಂಬಿಸಿರಲು,
ಬಾಳ ಸಂಜೆಯಲ್ಲಿ ಯಶಕೆ
ರಾಮರಾಯರು,
“ಬಂದೆ, ಬಾಳು ಪೂರ್ಣವಾಯ್ತು”
ಎಂದು ನುಡಿದರು.


“ಇಲ್ಲಿ ಹಳ್ಳ, ಅಲ್ಲಿ ತಿಟ್ಟು”
ಎನುತ ಕೋಲ ಹಿಡಿದು ಪುಟ್ಟು
ನಡೆಸುತಿರುವ ಪಲಿತ ಶಿರದ
ತಾತ-ರಾಯರು!
ಕೂಸಿಗಿಂತ ತ್ರಾಣಿಯಲ್ಲ
ಪಾಪ!-ರಾಯರು.

ಒಂದು ದಿನದೊಳಿರುಳಿನಲ್ಲಿ
ಕಿರಣವೊಂದು ಹೊನ್ನ ಚೆಲ್ಲಿ,
ಬಾಳ ಸೆರೆಯ ಬೆಳಗೆ, ತಾತ
ಚಕಿತರಾದರು:
“ಬಂದು ಬಾಳಿಗರ್‍ಥವಿತ್ತೆ,
ಮೃತ್ಯು” ಎಂದರು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...