ಬಾಳಿನ ಹಂಬಲು


ಕೂಸಿಗಂದು ಏನು ಬೇಡ,
ತಿಂಡಿ ಗೊಂಬೆ ಮುದ್ದು ಬೇಡ.
ಏನೊ ಅರಕೆ, ಏನೊ ಬೇನೆ,
ಅತ್ತು ಸೊರಗಿತು :
“ಅಮ್ಮ ಎಲ್ಲಿ ಹೋತು” ಎನುತ
ಅತ್ತು ಸೊರಗಿತು.

ಅಳುವ ಕೇಳಿ ಬಂದ ತಾಯ
ಅಮೃತಸ್ಪರ್‍ಶಕಾರೆ ಗಾಯ,
ತೊಯ್ದ ಕಣ್ಣ ಬಿಚ್ಚಿ, ಸುಳಿಸಿ,
ತೊಂದು ನಗೆಯನು-
“ನಿನ್ನ ನುಳಿಯೆ ಬಾಳು ಶೂನ್ಯ!”
ಎನುವ ನಗೆಯನು.


ಕೂಸು ಬೆಳೆದು ಆದ ರಾಮು,
ಇಂದು ನೆರೆಯ ಮನೆಯ ಶಾಮು
ರಾಮನೊಂದೆ ಬಯಕೆ, ಕನಸು,
ಬಾಳ ಧ್ಯೇಯವು ;
ಆಸೆಗಳಿಗೆ ಕಲ್ಪತರುವು,
ನೋವಿಗಮೃತವು.

ಒಂದೆ ಜೀವದೆರಡು ಕವಲು;
ರಾಮ-ಶಾಮು: ಹಾಡು-ಹೊಳಲು.
ತುಂಬುಗಣ್ಣೊಳವನ ರಾಮು
ಸೆರೆಯಕೊಳುವನು:
“ನಿನ್ನ ನುಳಿಯೆ ಬಾಳು ಬಯಲು”
ಎಂದುಕೊಳುವನು.


ರಾಮುವೀಗ ರಾಮರಾಯ!
ಏನು ಠೀವಿ! ಎಂಥ ಪ್ರಾಯ!
ನಿತ್ಯ ಕನಸುಕಾಂಬ ತೆರದ
ನೋಟದಲೆತವು;
ಒಲುಮೆನೆರೆಗೆ ಸಿಲುಕಿದವನ
ಮನದ ಸೆಳೆತವು!

ಇಂದು ಸರಳೆ ಅವನ ಜಗವ
ತುಂಬಿ, ಬಾಳ ಸೂರೆಗೊಳುವ-
ಳಾತ್ಮವನ್ನೆ ಮೀಸಲಿಟ್ಟು
ರಾಮು ಒಲಿವನು;
“ಸುಳಿದೆ, ಸರಳ, ಬಾಳ ಟೊಳ್ಳು
ತುಂಬಿ”ತೆನುವನು.


ಸರಳೆ ರಾಮರೊಲುಮೆ ಸೂತ್ರ
ಹಸುಳೆ ಕಿಟ್ಟು, ಮೊದಲು – ಚಿತ್ರ!
ರಾಮಗದರ ಬಾಳ ಗುಟ್ಟು
ಅರ್‍ಥವಾಗದು:
“ನಮ್ಮ ಪ್ರೇಮಕಡ್ಡಬಂದ
ಗಂಡವೇನಿದು?”

ಒಂದು ದಿನದಿ ಕೂಸು ತನ್ನ
ಬೆಳಕೆ ದ್ರವಿಸಿ ಹರಿವ ಕಣ್ಣ
ಮೊಗದಿ ನೆಟ್ಟು, ಅವನ ಬೆರಳ
ಬಾಯಿಗೊಯ್ಯಲು,
ರಾಮನೆಂದ, “ತೀರಿತಿಂದು
ಬಾಳ ಹಂಬಲು!”


ರಾಮರಾಯನೆಂಥ ಮನುಜ!
ಸಿರಿಯ ಘೃಣೆಯ ಹಿರಿಯ ಕಣಜ!
ಏನು ಪ್ರತಿಭೆ, ಎಂಥ ವಿನಯ!-
ಯಶದ ಹೊಗಳದು.
ಆತನೊಂದೆ ಬಯಕೆ ಒಲಿದು
ಬರುವ ಮೊಳಗದು.

ಜಸದ ಹೆಣ್ಣು ಒಲಿದು ನಗಲು,
ನಗೆಯು ಮೊಗದಿ ಬಿಂಬಿಸಿರಲು,
ಬಾಳ ಸಂಜೆಯಲ್ಲಿ ಯಶಕೆ
ರಾಮರಾಯರು,
“ಬಂದೆ, ಬಾಳು ಪೂರ್ಣವಾಯ್ತು”
ಎಂದು ನುಡಿದರು.


“ಇಲ್ಲಿ ಹಳ್ಳ, ಅಲ್ಲಿ ತಿಟ್ಟು”
ಎನುತ ಕೋಲ ಹಿಡಿದು ಪುಟ್ಟು
ನಡೆಸುತಿರುವ ಪಲಿತ ಶಿರದ
ತಾತ-ರಾಯರು!
ಕೂಸಿಗಿಂತ ತ್ರಾಣಿಯಲ್ಲ
ಪಾಪ!-ರಾಯರು.

ಒಂದು ದಿನದೊಳಿರುಳಿನಲ್ಲಿ
ಕಿರಣವೊಂದು ಹೊನ್ನ ಚೆಲ್ಲಿ,
ಬಾಳ ಸೆರೆಯ ಬೆಳಗೆ, ತಾತ
ಚಕಿತರಾದರು:
“ಬಂದು ಬಾಳಿಗರ್‍ಥವಿತ್ತೆ,
ಮೃತ್ಯು” ಎಂದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲಿ ತಾ ಮೈನೆರದು
Next post ಅನಾಥ ಬಂಧು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…