Home / ಕವನ / ಕವಿತೆ / ನವೋದಯದ ನಲವು : ಜಿ ಎಸ್ ಎಸ್

ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ
ಸೀಳುತ್ತಾ ಮುನ್ನುಗ್ಗುತ್ತಿತ್ತು
ನವ್ಯದ ಹಡಗು

ಆಹಾ! ಏನು ಬಿಂಕ, ಬೆಡಗು, ಬಿನ್ನಾಣ
ಕೋಡುಗಲ್ಲಿನ ಮೇಲೆ
ಕಡಲ ಹಕ್ಕಿಗಳಂತೆ ಕೂತು ನೋಡಿದೆವು.

ಕಾರಿರುಳು-
‘ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ’
ನೂರು ತಾರೆ ಬೆಳಕ ಬೀರಲು
ಪುಟ್ಟ ದೋಣಿಯಲಿ ಕೂತು
ರಾತ್ರಿ-ಹಗಲು ರಾಕ್ಷಸ ಅಲೆಗಳನ್ನು ತಳ್ಳುತ್ತಾ
ಹರಸಾಹಸದಿಂದ ದಡ ಸೇರಿದೆವು.

ಮುಸ್ಸಂಜೆ-
ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
‘ದೇವರ ರುಜು’
ಪರವಶತೆಯಿಂದ ನೋಡಿದೆವು.
ಕಣಿವೆಯ ಮುದುಕ
ಕೈ ಮರವಾದ; ಮುನ್ನಡೆದೆವು.
‘ಮೂಡಲ ಮನೆಯಲ್ಲಿ ಮುತ್ತಿನ ನೀರು
ಗಿಡಗಂಟೆಗಳ ಕೊರಳಲ್ಲಿ ಹಕ್ಕಿಗಳ ಹಾಡು’
ತಲೆದೂಗಿದೆವು.

ಶಾನುಭೋಗರ ಮಗಳು
ಕಾಲಿಗೆ ನೀರಿತ್ತು ಕೈತುತ್ತು ನೀಡಿದಳು;
‘ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ’ ತಲೆಬಾಗಿದೆವು.

ಹಾದಿಯ ತುಂಬಾ
ನಗುತ್ತಿತ್ತು ಏಳುಸುತ್ತಿನ ಮಲ್ಲಿಗೆ
‘ಹಚ್ಚನೆ ಹಸುರ ಗಿಡದಿಂದೆಂತು
ಮೂಡಿತ್ತೋ ಬೆಳ್ಳಗೆ’
-ಅನತಿ ದೂರದಲ್ಲೇ ಕಲ್ಲು ಬಂಡೆಯನ್ನೇರಿ
ಅದಾರೋ… ಯಾರವರು, ಯಾರು?
ಎದೆತುಂಬಿ ಹಾಡುತ್ತಿದ್ದರು.

ಹಮ್ಮು-ಬಿಮ್ಮು ಸೋಕದ ಹಾಡು
ನೊಂದ ಜೀವರಿಗೆ ತಂಪನೀಯುವ ಹಾಡು
ಪ್ರೀತಿ-ಸ್ನೇಹಗಳ ಪಸರಿಸುವ ಹಾಡು
ಎಲ್ಲೋ ಅಳುವ ಮಗುವನೂ ಸಂತೈಸುವ ಹಾಡು
ನವ-ನವೀನ ಭಾವದ ಹಾಡು.

ಹಾಡಿನ ಹಾಡಿಯಲ್ಲಿ ಬೀಡುಬಿಟ್ಟು
ಹಾಡಿಗೆ ನಮ್ಮನ್ನೇ ನಾವು ಕೊಟ್ಟು ಕೊಂಡೆವು
ನೂರು ಭಾವದ ಬಾವಿ ಮೊಗೆ ಮೊಗದು
ಸಿಹಿನೀರ ಕುಡಿದೆವು

ಕಡಲನೀಜುವೆನೆಂಬ ಮರುಳ ಹಡಗು
ತನಗೆ ತಾ ಹೊರೆಯಾಗಿ ತಾನೆ ಮುಳುಗುತ್ತಿತ್ತು…
ಅಲೆಯ ಮೇಲೊಂದು ತಾವರೆಯ ಎಲೆ
ಎಲೆಯ ಮೇಲೊಂದು ಪುಟ್ಟ ಹಣತೆ
ತೇಲುತ್ತಿತ್ತು ತನ್ನ ಪಾಡಿಗೆ ತಾನೇ
ನೀಲ ಮೌನದಲ್ಲಿ…
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...