Home / ಕವನ / ಕವಿತೆ / ನವೋದಯದ ನಲವು : ಜಿ ಎಸ್ ಎಸ್

ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ
ಸೀಳುತ್ತಾ ಮುನ್ನುಗ್ಗುತ್ತಿತ್ತು
ನವ್ಯದ ಹಡಗು

ಆಹಾ! ಏನು ಬಿಂಕ, ಬೆಡಗು, ಬಿನ್ನಾಣ
ಕೋಡುಗಲ್ಲಿನ ಮೇಲೆ
ಕಡಲ ಹಕ್ಕಿಗಳಂತೆ ಕೂತು ನೋಡಿದೆವು.

ಕಾರಿರುಳು-
‘ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ’
ನೂರು ತಾರೆ ಬೆಳಕ ಬೀರಲು
ಪುಟ್ಟ ದೋಣಿಯಲಿ ಕೂತು
ರಾತ್ರಿ-ಹಗಲು ರಾಕ್ಷಸ ಅಲೆಗಳನ್ನು ತಳ್ಳುತ್ತಾ
ಹರಸಾಹಸದಿಂದ ದಡ ಸೇರಿದೆವು.

ಮುಸ್ಸಂಜೆ-
ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
‘ದೇವರ ರುಜು’
ಪರವಶತೆಯಿಂದ ನೋಡಿದೆವು.
ಕಣಿವೆಯ ಮುದುಕ
ಕೈ ಮರವಾದ; ಮುನ್ನಡೆದೆವು.
‘ಮೂಡಲ ಮನೆಯಲ್ಲಿ ಮುತ್ತಿನ ನೀರು
ಗಿಡಗಂಟೆಗಳ ಕೊರಳಲ್ಲಿ ಹಕ್ಕಿಗಳ ಹಾಡು’
ತಲೆದೂಗಿದೆವು.

ಶಾನುಭೋಗರ ಮಗಳು
ಕಾಲಿಗೆ ನೀರಿತ್ತು ಕೈತುತ್ತು ನೀಡಿದಳು;
‘ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ’ ತಲೆಬಾಗಿದೆವು.

ಹಾದಿಯ ತುಂಬಾ
ನಗುತ್ತಿತ್ತು ಏಳುಸುತ್ತಿನ ಮಲ್ಲಿಗೆ
‘ಹಚ್ಚನೆ ಹಸುರ ಗಿಡದಿಂದೆಂತು
ಮೂಡಿತ್ತೋ ಬೆಳ್ಳಗೆ’
-ಅನತಿ ದೂರದಲ್ಲೇ ಕಲ್ಲು ಬಂಡೆಯನ್ನೇರಿ
ಅದಾರೋ… ಯಾರವರು, ಯಾರು?
ಎದೆತುಂಬಿ ಹಾಡುತ್ತಿದ್ದರು.

ಹಮ್ಮು-ಬಿಮ್ಮು ಸೋಕದ ಹಾಡು
ನೊಂದ ಜೀವರಿಗೆ ತಂಪನೀಯುವ ಹಾಡು
ಪ್ರೀತಿ-ಸ್ನೇಹಗಳ ಪಸರಿಸುವ ಹಾಡು
ಎಲ್ಲೋ ಅಳುವ ಮಗುವನೂ ಸಂತೈಸುವ ಹಾಡು
ನವ-ನವೀನ ಭಾವದ ಹಾಡು.

ಹಾಡಿನ ಹಾಡಿಯಲ್ಲಿ ಬೀಡುಬಿಟ್ಟು
ಹಾಡಿಗೆ ನಮ್ಮನ್ನೇ ನಾವು ಕೊಟ್ಟು ಕೊಂಡೆವು
ನೂರು ಭಾವದ ಬಾವಿ ಮೊಗೆ ಮೊಗದು
ಸಿಹಿನೀರ ಕುಡಿದೆವು

ಕಡಲನೀಜುವೆನೆಂಬ ಮರುಳ ಹಡಗು
ತನಗೆ ತಾ ಹೊರೆಯಾಗಿ ತಾನೆ ಮುಳುಗುತ್ತಿತ್ತು…
ಅಲೆಯ ಮೇಲೊಂದು ತಾವರೆಯ ಎಲೆ
ಎಲೆಯ ಮೇಲೊಂದು ಪುಟ್ಟ ಹಣತೆ
ತೇಲುತ್ತಿತ್ತು ತನ್ನ ಪಾಡಿಗೆ ತಾನೇ
ನೀಲ ಮೌನದಲ್ಲಿ…
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...