Home / ಕವನ / ಕವಿತೆ / ನವೋದಯದ ನಲವು : ಜಿ ಎಸ್ ಎಸ್

ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ
ಸೀಳುತ್ತಾ ಮುನ್ನುಗ್ಗುತ್ತಿತ್ತು
ನವ್ಯದ ಹಡಗು

ಆಹಾ! ಏನು ಬಿಂಕ, ಬೆಡಗು, ಬಿನ್ನಾಣ
ಕೋಡುಗಲ್ಲಿನ ಮೇಲೆ
ಕಡಲ ಹಕ್ಕಿಗಳಂತೆ ಕೂತು ನೋಡಿದೆವು.

ಕಾರಿರುಳು-
‘ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ’
ನೂರು ತಾರೆ ಬೆಳಕ ಬೀರಲು
ಪುಟ್ಟ ದೋಣಿಯಲಿ ಕೂತು
ರಾತ್ರಿ-ಹಗಲು ರಾಕ್ಷಸ ಅಲೆಗಳನ್ನು ತಳ್ಳುತ್ತಾ
ಹರಸಾಹಸದಿಂದ ದಡ ಸೇರಿದೆವು.

ಮುಸ್ಸಂಜೆ-
ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
‘ದೇವರ ರುಜು’
ಪರವಶತೆಯಿಂದ ನೋಡಿದೆವು.
ಕಣಿವೆಯ ಮುದುಕ
ಕೈ ಮರವಾದ; ಮುನ್ನಡೆದೆವು.
‘ಮೂಡಲ ಮನೆಯಲ್ಲಿ ಮುತ್ತಿನ ನೀರು
ಗಿಡಗಂಟೆಗಳ ಕೊರಳಲ್ಲಿ ಹಕ್ಕಿಗಳ ಹಾಡು’
ತಲೆದೂಗಿದೆವು.

ಶಾನುಭೋಗರ ಮಗಳು
ಕಾಲಿಗೆ ನೀರಿತ್ತು ಕೈತುತ್ತು ನೀಡಿದಳು;
‘ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ’ ತಲೆಬಾಗಿದೆವು.

ಹಾದಿಯ ತುಂಬಾ
ನಗುತ್ತಿತ್ತು ಏಳುಸುತ್ತಿನ ಮಲ್ಲಿಗೆ
‘ಹಚ್ಚನೆ ಹಸುರ ಗಿಡದಿಂದೆಂತು
ಮೂಡಿತ್ತೋ ಬೆಳ್ಳಗೆ’
-ಅನತಿ ದೂರದಲ್ಲೇ ಕಲ್ಲು ಬಂಡೆಯನ್ನೇರಿ
ಅದಾರೋ… ಯಾರವರು, ಯಾರು?
ಎದೆತುಂಬಿ ಹಾಡುತ್ತಿದ್ದರು.

ಹಮ್ಮು-ಬಿಮ್ಮು ಸೋಕದ ಹಾಡು
ನೊಂದ ಜೀವರಿಗೆ ತಂಪನೀಯುವ ಹಾಡು
ಪ್ರೀತಿ-ಸ್ನೇಹಗಳ ಪಸರಿಸುವ ಹಾಡು
ಎಲ್ಲೋ ಅಳುವ ಮಗುವನೂ ಸಂತೈಸುವ ಹಾಡು
ನವ-ನವೀನ ಭಾವದ ಹಾಡು.

ಹಾಡಿನ ಹಾಡಿಯಲ್ಲಿ ಬೀಡುಬಿಟ್ಟು
ಹಾಡಿಗೆ ನಮ್ಮನ್ನೇ ನಾವು ಕೊಟ್ಟು ಕೊಂಡೆವು
ನೂರು ಭಾವದ ಬಾವಿ ಮೊಗೆ ಮೊಗದು
ಸಿಹಿನೀರ ಕುಡಿದೆವು

ಕಡಲನೀಜುವೆನೆಂಬ ಮರುಳ ಹಡಗು
ತನಗೆ ತಾ ಹೊರೆಯಾಗಿ ತಾನೆ ಮುಳುಗುತ್ತಿತ್ತು…
ಅಲೆಯ ಮೇಲೊಂದು ತಾವರೆಯ ಎಲೆ
ಎಲೆಯ ಮೇಲೊಂದು ಪುಟ್ಟ ಹಣತೆ
ತೇಲುತ್ತಿತ್ತು ತನ್ನ ಪಾಡಿಗೆ ತಾನೇ
ನೀಲ ಮೌನದಲ್ಲಿ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...