Home / ಕವನ / ಕವಿತೆ / ದೆವ್ವದ ಉಪದೇಶ

ದೆವ್ವದ ಉಪದೇಶ

ಈಗ ಕೂಡ ಒಮ್ಮೊಮ್ಮೆ
ದೆವ್ವ ಮನೆಗೆ ಬರುತ್ತವೆ ;
ಬರೀ ಕೈಲಿ ಬರುವುದಿಲ್ಲ
ಏನೋ ವಾರೆಂಟ್ ತರುತ್ತವೆ
ನಟ್ಟ ನಡೂರಾತ್ರಿ ;
ಡೈರಿ ಬರೆದ ದಿನವಂತೂ
ಅವು ಬರುವುದು ಖಾತ್ರಿ –
ಝಡತಿಯ ದಂಡದ ಹಾಗೆ,
ಮಿಡತೆಯ ಹಿಂಡಿನ ಹಾಗೆ,
ಕುಕ್ಕಿ ಕುಕ್ಕಿ ಗುಟ್ಟ ಬಗೆವ
ಮರಕುಟುಕನ ಹಾಗೆ.

ದೆವ್ವಕ್ಕ ಕಿಚ್ಚೇ ಕಣ್ಣು
ಧಗ ಧಗ ಜ್ವಲಿಸುತ್ತವೆ;
ಚಿತ್ತದ ಪಾತಾಳಗಳೂ
ಅವಕ್ಕೆ ತೆರೆಯುತ್ತವೆ;
ಒಳಗೇ ಆಡುವ ಆಸೆಯ
ಕಬ್ಬಿನ ಆಲೆಗಳು,
ಬೆಳಕೇ ಹಾಯದ ಕಾಮದ
ನಿಗೂಢ ಕಾಡುಗಳು,
ಮೈ ಕೈ ಕಾಯಿಸಬಾರದ
ಗಂಜಿಯ ಬೇಯಿಸಬಾರದ
ಹೆಣಕ್ಕೆ ಹಚ್ಚಿದ ಕಿಚ್ಚಿನ
ಮೈಲಿಗೆ ಜ್ವಾಲೆಗಳು,
ಕಾಣುತ್ತವೆ ಆ ಕಣ್ಣಿಗೆ ಎಲ್ಲಾ ಲೀಲೆಗಳೂ!

ಈ ಸಲ ಬಂದಾಗ ದೆವ್ವ
ಏನೋ ನಕ್ಷೆ ತಂದವು :
‘ಈ ಕನ್ನಡಿ ತಗೊ ಮಗನೇ
ಮುಖ ನೋಡಿಕೊ’ ಎಂದವು.
ಅದೋ, ರಸ್ತೆನಕ್ಷೆ. ಅಲ್ಲಿ
ರಾಜಮಾರ್ಗ ಮೂರು,
ಆ ದಾರಿಗೆ ಚಿಗುರಿದ್ದ
ಸೊಟ್ಟಾಪಟ್ಟ ಬೆಳಿದಿದ್ದ
ಹಾಸುಹೊಕ್ಕು ಹೆಣೆದಿದ್ದ
ಕಾಲುದಾರಿ ನೂರು.
ರಾಜಮರ್‍ಗ ಒಂದರಲ್ಲೂ
ಹೆಜ್ಜೆಯ ಗುರುತಿಲ್ಲ,
ದಾರಿಯೆ ಸಮೆದಿಲ್ಲ ;
ಕುರುಚಲು ತುಂಬಿದೆ ಯಾರೂ
ನಡೆಯಲು ಬಳಸಿಲ್ಲ.
ಕೆದರಿದ್ದರೂ ಮಣ್ಣು ಅದು
ಮಳೆ ಬಿದ್ದದ್ದಕ್ಕೆ.
ಹುಳು ಹರಿದದ್ದಕ್ಕೆ:
ಉತ್ತಿದ್ದಕ್ಕಲ್ಲ ಅಥವಾ
ಬಿತ್ತಿದ್ದಕ್ಕಲ್ಲ.

ಕಾಲುದಾರಿ ರೀತಿಯೋ
ಗೀಚಿ ಬರೆವ ಸ್ಲೇಟು:
ನಿರಂಕುಶ ಅಭಿವ್ಯಕ್ತಿ
ಲಂಡನ್ ಹೈಡ್‌ಪಾರ್ಕು:
ಸ್ಪಾಟ್‌ಲೈಟ್‌ ಸುಳಿವೇ ಇಲ್ಲದ
ಚಂಬಲ್ ಕಣಿವೆ,
ಬೇಕಾಬಿಟ್ಟಿ ಒಟ್ಟಿದ
ಒಣಹುಲ್ಲಿನ ಬಣವೆ;
ಎಲ್ಲಿಂದ ಎಲ್ಲಿಗೋ ಜಿಗಿದು
ಸುರಂಗ ಗಟಾರದಲ್ಲಿ ಮುಗಿದು
ಒಬ್ಬನೇ ಸಮೆಸಿದ ದಾರಿ
ಎಲಾ ಗಡಿ ಮೀರಿ,
ಪರಮಪದದ ದ್ವಾರದಿಂದ
ಪ್ರತಿಸಲವೂ ಜಾರಿ.
ಶಹಭಾಶ್ ಎಂದವು ದೆವ್ವ,
ಸುಮ್ಮನೆ ಮುಖ ನೋಡಿದೆ.
“ಸುಳ್ಳು ಬದುಕು ಯಾಕಪ್ಪಾ”
ಎಂದವು. ಹಲ್ಕಿರಿದೆ.
“ಎಲ್ಲಾ ಡೈರಿ ಸುಟ್ಟು ಬಿಡೊ
ನಿಜದ ಬದುಕನ್ನೊಪ್ಪಿಬಿಡೊ
ಢೋಂಗಿ ಬದುಕು ಯಾಕೋ ಮಗನೆ”
ಎಂದವು. ಮುಖ ಬಿಗಿದೆ.
ಎಲ್ಲೋ ಹಾಳು ಸಹವಾಸ
ಮೂಲಕ್ಕೇ ಮೋಸ ;
ತಾನೇ ದೆವ್ವ, ಮಾಡುವುದೋ
ನೀತಿಯ ಉಪದೇಶ
ಎನ್ನಿಸಿದ್ದೇ ಒಳಗೊಳಗೇ
ಉಕ್ಕಿತು ಕುದಿಕೋಪ
ಎದ್ದು ಹೋಗಿ ದೆವ್ವಗಳನು
ಒದ್ದು ಹೊರಗೆ ಹಾಕಿದೆ,
ಕದ ಕಿಟಕಿಯ ಜಡಿದೆ :
ಆತ್ಮಕಥೆಯ ರೇಷ್ಮೆವಸ್ತ್ರ
ನೇಯಲೆಂದು ಡೈರಿ ಹಿಡಿದು
ಒಳಕೋಣೆಗೆ ನಡೆದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...