ದೆವ್ವದ ಉಪದೇಶ

ಈಗ ಕೂಡ ಒಮ್ಮೊಮ್ಮೆ
ದೆವ್ವ ಮನೆಗೆ ಬರುತ್ತವೆ ;
ಬರೀ ಕೈಲಿ ಬರುವುದಿಲ್ಲ
ಏನೋ ವಾರೆಂಟ್ ತರುತ್ತವೆ
ನಟ್ಟ ನಡೂರಾತ್ರಿ ;
ಡೈರಿ ಬರೆದ ದಿನವಂತೂ
ಅವು ಬರುವುದು ಖಾತ್ರಿ –
ಝಡತಿಯ ದಂಡದ ಹಾಗೆ,
ಮಿಡತೆಯ ಹಿಂಡಿನ ಹಾಗೆ,
ಕುಕ್ಕಿ ಕುಕ್ಕಿ ಗುಟ್ಟ ಬಗೆವ
ಮರಕುಟುಕನ ಹಾಗೆ.

ದೆವ್ವಕ್ಕ ಕಿಚ್ಚೇ ಕಣ್ಣು
ಧಗ ಧಗ ಜ್ವಲಿಸುತ್ತವೆ;
ಚಿತ್ತದ ಪಾತಾಳಗಳೂ
ಅವಕ್ಕೆ ತೆರೆಯುತ್ತವೆ;
ಒಳಗೇ ಆಡುವ ಆಸೆಯ
ಕಬ್ಬಿನ ಆಲೆಗಳು,
ಬೆಳಕೇ ಹಾಯದ ಕಾಮದ
ನಿಗೂಢ ಕಾಡುಗಳು,
ಮೈ ಕೈ ಕಾಯಿಸಬಾರದ
ಗಂಜಿಯ ಬೇಯಿಸಬಾರದ
ಹೆಣಕ್ಕೆ ಹಚ್ಚಿದ ಕಿಚ್ಚಿನ
ಮೈಲಿಗೆ ಜ್ವಾಲೆಗಳು,
ಕಾಣುತ್ತವೆ ಆ ಕಣ್ಣಿಗೆ ಎಲ್ಲಾ ಲೀಲೆಗಳೂ!

ಈ ಸಲ ಬಂದಾಗ ದೆವ್ವ
ಏನೋ ನಕ್ಷೆ ತಂದವು :
‘ಈ ಕನ್ನಡಿ ತಗೊ ಮಗನೇ
ಮುಖ ನೋಡಿಕೊ’ ಎಂದವು.
ಅದೋ, ರಸ್ತೆನಕ್ಷೆ. ಅಲ್ಲಿ
ರಾಜಮಾರ್ಗ ಮೂರು,
ಆ ದಾರಿಗೆ ಚಿಗುರಿದ್ದ
ಸೊಟ್ಟಾಪಟ್ಟ ಬೆಳಿದಿದ್ದ
ಹಾಸುಹೊಕ್ಕು ಹೆಣೆದಿದ್ದ
ಕಾಲುದಾರಿ ನೂರು.
ರಾಜಮರ್‍ಗ ಒಂದರಲ್ಲೂ
ಹೆಜ್ಜೆಯ ಗುರುತಿಲ್ಲ,
ದಾರಿಯೆ ಸಮೆದಿಲ್ಲ ;
ಕುರುಚಲು ತುಂಬಿದೆ ಯಾರೂ
ನಡೆಯಲು ಬಳಸಿಲ್ಲ.
ಕೆದರಿದ್ದರೂ ಮಣ್ಣು ಅದು
ಮಳೆ ಬಿದ್ದದ್ದಕ್ಕೆ.
ಹುಳು ಹರಿದದ್ದಕ್ಕೆ:
ಉತ್ತಿದ್ದಕ್ಕಲ್ಲ ಅಥವಾ
ಬಿತ್ತಿದ್ದಕ್ಕಲ್ಲ.

ಕಾಲುದಾರಿ ರೀತಿಯೋ
ಗೀಚಿ ಬರೆವ ಸ್ಲೇಟು:
ನಿರಂಕುಶ ಅಭಿವ್ಯಕ್ತಿ
ಲಂಡನ್ ಹೈಡ್‌ಪಾರ್ಕು:
ಸ್ಪಾಟ್‌ಲೈಟ್‌ ಸುಳಿವೇ ಇಲ್ಲದ
ಚಂಬಲ್ ಕಣಿವೆ,
ಬೇಕಾಬಿಟ್ಟಿ ಒಟ್ಟಿದ
ಒಣಹುಲ್ಲಿನ ಬಣವೆ;
ಎಲ್ಲಿಂದ ಎಲ್ಲಿಗೋ ಜಿಗಿದು
ಸುರಂಗ ಗಟಾರದಲ್ಲಿ ಮುಗಿದು
ಒಬ್ಬನೇ ಸಮೆಸಿದ ದಾರಿ
ಎಲಾ ಗಡಿ ಮೀರಿ,
ಪರಮಪದದ ದ್ವಾರದಿಂದ
ಪ್ರತಿಸಲವೂ ಜಾರಿ.
ಶಹಭಾಶ್ ಎಂದವು ದೆವ್ವ,
ಸುಮ್ಮನೆ ಮುಖ ನೋಡಿದೆ.
“ಸುಳ್ಳು ಬದುಕು ಯಾಕಪ್ಪಾ”
ಎಂದವು. ಹಲ್ಕಿರಿದೆ.
“ಎಲ್ಲಾ ಡೈರಿ ಸುಟ್ಟು ಬಿಡೊ
ನಿಜದ ಬದುಕನ್ನೊಪ್ಪಿಬಿಡೊ
ಢೋಂಗಿ ಬದುಕು ಯಾಕೋ ಮಗನೆ”
ಎಂದವು. ಮುಖ ಬಿಗಿದೆ.
ಎಲ್ಲೋ ಹಾಳು ಸಹವಾಸ
ಮೂಲಕ್ಕೇ ಮೋಸ ;
ತಾನೇ ದೆವ್ವ, ಮಾಡುವುದೋ
ನೀತಿಯ ಉಪದೇಶ
ಎನ್ನಿಸಿದ್ದೇ ಒಳಗೊಳಗೇ
ಉಕ್ಕಿತು ಕುದಿಕೋಪ
ಎದ್ದು ಹೋಗಿ ದೆವ್ವಗಳನು
ಒದ್ದು ಹೊರಗೆ ಹಾಕಿದೆ,
ಕದ ಕಿಟಕಿಯ ಜಡಿದೆ :
ಆತ್ಮಕಥೆಯ ರೇಷ್ಮೆವಸ್ತ್ರ
ನೇಯಲೆಂದು ಡೈರಿ ಹಿಡಿದು
ಒಳಕೋಣೆಗೆ ನಡೆದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬತ್ತಿ
Next post ಬಯಸಿ ಬಂದೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…