Home / ಕವನ / ಕವಿತೆ / ಅಶೋಕ ಚಕ್ರ

ಅಶೋಕ ಚಕ್ರ

ನೋಡದೊ ಸ್ವಾತಂತ್ರ್‍ಯಾಕಾಶದಲಿ
ಹಾರುತ್ತಿದೆ ನವ ರಾಷ್ಟ್ರಧ್ವಜವು!
ಹಾರಲಿ! ಏರಲಿ! ಈ ಹೊಸ ಬಾವುಟ!
ಚಿರ ಬಾಳಲಿ ನವ ಭಾರತ ಕೂಟ!

ಹಿಂದೂ ಮುಸ್ಲಿಮ ಸಿಕ್ಕರು ಒಂದು
ಹಿಂದೆ ಇಂದು ಮುಂದೆಂದೆಂದೂ-
ಇಂತು ಸಾರುತಿದೆ ಈ ಹೊಸ ಬಾವುಟ:
ಗೆಲ್ಲಲಿ ಎಲ್ಲರು ಒಂದೆನುವೀ ದಿಟ!

ಬಾರ ಬಾರ ಹರಿಕಾರ ಸಮೀರ
ತಾರ ತಾರ ಬಾವುಟಕ್ಕೆ ವಿಹಾರ
ತೋರ ತೋರ ಬಾವುಟದಾಕಾರ:
ಹಾಡಲಿ ಹರಸಲಿ ಲೋಕವಪಾರ!

ನಿಲ್ಗೆ ಚಂದ್ರತಾರಂಬರಮೀ ಧ್ವಜ
ಪುಣ್ಯಭೂಮಿಯಲಿ ನವ ಕಲ್ಪ ಕುಜ!
ತುಂಬಿ ಬಿಡುತಿರಲಿ ಫಲಪುಷ್ಪವ್ರಜ,
ಆಶ್ರಯ ಹೊಂದಲಿ ಸರ್ವಪ್ರಜಾ.

ಹಸುರು ಬಿಳಿಪು ಕೇಸರಿಗಳು ಕೂಡಿದ
ಮೂಬಣ್ಣದ ನಡುವೆಯಲದೊ ನೋಡು:
‘ಅಶೋಕ ಚಕ್ರ’ವು ಮೆರೆಯುತಿದೆ,
ಶಾಂತಿಯ ಯುಗವನು ತೆರೆಯುತಿದೆ.

ಅಂದು ಅಶೋಕನು ಧರಿಸಿದ ಚಕ್ರ:
ಯುದ್ಧವ ನಿಲಿಸಿದ ಶಾಂತಿಯ ಚಕ್ರ;
ಶಾಂತಿ ಪುಷ್ಟಿ ತುಷ್ಟಿಗಳನು ತುಂಬುವ,
ಭಗವಾನ್ ಬುದ್ಧನ ಧರ್ಮದ ಚಕ್ರ.

ಹಿಂದೆ ಕೃಷ್ಣನೇ ತೋರಿದ ದಾರಿ-
ಗಾಂಧಿ ಮಹಾತ್ಮರು ಎತ್ತಿಹಿಡಿದ ಗುರಿ-
ಸತ್ಯ ಅಹಿಂಸೆ ದಾನ ಧರ್ಮ ದಯೆ:
ಶೋಕವ ಹರಿಸುವ ‘ಅಶೋಕ’ ಚಕ್ರ.

ಯುದ್ಧವನೆಸಗದೆ, ಯಾರನು ಕೊಲ್ಲದೆ,
ಕೊಲ್ಲಬಂದವರ ರಕ್ತವ ಚೆಲ್ಲದೆ,
ಆಳರಸರ ಹೃದಯವ ಮಾರ್ಪಡಿಸಿದ
ದಿವ್ಯಮಂತ್ರವಿದು: ಅಶೋಕ ಚಕ್ರ.

ನಾಡಿನ ದಾಸ್ಯದ ಶೋಕವ ಕಳೆದು
ಹೆರರಿಗೆ ಶೋಕವ ತರುವುದನುಳಿದು
ಶಾಂತಿಯ ಬೆಳಸುವ ಧ್ಯೇಯವ ತಳೆದು
ತಿರುಗುತ ಬೆಳಗುತಲಿಹುದೀ ಚಕ್ರ.

ಭಾರತೀಯ ಸಂಸ್ಕೃತಿಗಿದೆ ಗುರುತು:
ಭೇದಭಾವಗಳನೆಲ್ಲರು ಮರೆತು
ಕೂಡಿ ಬಾಳೆ ಶೋಕವೆ ಹೊರತು:
ಆ ಬಾಳ ತರಲಿ ಈ ಶುಭ ಚಕ್ರ!

ಸತ್ಯ ಅಹಿಂಸೆಗಳಡಿಗಲ್ ಮೇಲೆ
ಸಮತೆಯ ಸೌಧವ ಕಟ್ಟಲು ನಾಳೆ
ಜನತೆಯ ಶೋಕವು ನೀಗುವುದಾಗಳೆ:
ಅದರ ಮುಂಗುರುಹು ಅಶೋಕ ಚಕ್ರ!

ಭಾರತ ಮಾತೆಗೆ ಕಿರೀಟವಿಟ್ಟು
ನಾಡಿಗೆ ನಲ್‌ನಗು ಮುಖವನು ಕೊಟ್ಟು
ವಿಶ್ವಕೆ ಶಾಂತಿಯ ಹರಕೆಯನಿಟ್ಟು
ತಿಗುತ್ತಿರಲಿ ಸನಾತನ ಚಕ್ರ!

ಎನಿತು ಸೂಳು ತಿರುಗಿದುದೀ ಚಕ್ರ,
ಎನಿತು ಸೂಳು ನಿಂತುದೊ ಈ ಚಕ್ರ;
ನಿಲ್ಲದೆ ತಿರುಗಲಿ ಅಶೋಕ ಚಕ್ರ,
ಗೆಲ್ಲಲಿ ಜಗವನೆ ಧರ್ಮದ ಚಕ್ರ!

ಶ್ರೀ ಕೃಷ್ಣ ಬುದ್ಧ ಅಶೋಕ ಗಾಂಧೀ
ಪ್ರಭೃತಿಪ್ರವರ್ತಿತ ಚಕ್ರಕ್ಕೆ ನಮೋ
ಧರ್ಮದ ಚಕ್ರಕೆ ನಮೋ ನಮೋ
ಅಶೋಕ ಚಕ್ರಕೆ ನಮೋ ನಮೋ

ಅಶೋಕ ಚಕ್ರಾಂಕಿತ ಧ್ವಜಕೆ ನಮೋ
ಭಾರತ ಮಾತೆಗೆ ನಮೋ ನಮೋ
ಭಾರತ ಜನತೆಗೆ ತೇಜವನೆರೆದು
ಸಲಹುವ ದೇವಗೆ ನಮೋ ನಮೋ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...