Home / ಕವನ / ಕವಿತೆ / ಅಮೃತ ಸ್ವಾತಂತ್ರ್‍ಯ

ಅಮೃತ ಸ್ವಾತಂತ್ರ್‍ಯ

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು
ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು?

ಜಾತಿ ಮತ ಪಂಥಗಳ ಭೇದಗಳನೆ ಹಿಡಿದು,
ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು,
ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ
ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ?

ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ
ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ
ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ-
ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ?

ಅರೆಹೊಟ್ಟೆ ತಿನ್ನುವುದೆ ನಿತ್ಯನಿಯಮವದಾಗೆ
ಇನ್ನು ಮಾರದೆ ಉಳಿಯೆ ಬಡತನದ ಬಿರುಬೇಗೆ
ಊರು ಕೇರಿಗಳೆಲ್ಲ ಭಿಕ್ಷುಕರ ಬೀಡಾಗೆ
ಸಾವು ಬದುಕಿನ ನರಕ ಸ್ವಾತಂತ್ರ್‍ಯವೆ?

ನಾಡ ಮಕ್ಕಳು ಮಂದಿ ಅಜ್ಞಾನದಲಿ ಮುಳುಗಿ
ಎಲ್ಲೊ ಹಲಕೆಲರು ಪಂಡಿತರೆನಿಸಿ ಬೆಳಗಿ
ಸ್ವಾರ್ಥಸಾಧಕರ ಪಡೆ ನಾಡೆಲ್ಲ ತಿರುಗುತಿರೆ
ಅವರ ತಾಳಕೆ ಕುಣಿಯೆ ಸ್ವಾತಂತ್ರ್‍ಯವೆ?

ಸಾಮ್ಯವಾದದ ಹೆಸರ ಹಲಗೆಯನು ಮುಂದಿಟ್ಟು
ವಿಜ್ಞಾನ ಯುಗವೆಂದು ಧರ್ಮವನು ಕಟ್ಟಿಟ್ಟು
ಪ್ರಾಚೀನ ಸಂಸ್ಕೃತಿಯ ಸುಟ್ಟು ಕರಿಬೊಟ್ಟಿಟ್ಟು
ಮುಂದುವರಿಯುವೆವೆನಲು ಸ್ವಾತಂತ್ರ್‍ಯವೆ?

ನಮ್ಮ ನಡೆ ನುಡಿ ನೋಟ ನಮ್ಮ ನಯ ನೀತಿ ನೆಲೆ
ನಮ್ಮ ನಾಡಿನ ಜ್ಞಾನ ಭಂಡಾರದತುಳ ಬೆಲೆ
ಧರ್ಮಬಾಹಿರ ಯಂತ್ರಜೀವನದಿನಾಗೆ ಕೊಲೆ
‘ನಾವು ನಾವಲ್ಲದಿಹ’ ಬದುಕು ಸ್ವಾತಂತ್ರ್‍ಯವೆ?

ತನ್ನ ನಂಬಿದ ಬೆಳಕ ಹಿಡಿದು ನಿಲಲಾಗದಿರೆ
ತನ್ನ ಕಾಣ್ಕೆಯ ಸತ್ಯ ನುಡಿಯಲನುವಿಲ್ಲದಿರೆ
ತನ್ನ ಇಚ್ಛೆಯ ಬಾಳ್ಕೆ ನಡೆಸಲೆಡೆಯಿಲ್ಲದಿರೆ
ದೊರೆತ ಸ್ವಾತಂತ್ರ್‍ಯವದು ಸ್ವಾತಂತ್ರ್‍ಯವೆ?

ದೇವನೆದುರಿನಲೆಲ್ಲ ಸರ್ವಸಮರೆನಿಸುತ್ತ
ಧರ್ಮ ನೆಲೆ ತಪ್ಪದೊಲು ಸಮತೆಯನು ಸಾಧಿಸುತ
ಇಹದ ಹಾಲಿಗೆ ಪರದ ಸಕ್ಕರೆಯ ಬೆರಸುತ್ತ
ಬಾಳಲಪ್ಪುದೆ ಅಮೃತ ಸ್ವಾತಂತ್ರ್‍ಯವಲ್ತೆ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...