Home / ಕವನ / ಕವಿತೆ / ಸಂಚಲನ

ಸಂಚಲನ

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ
ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ?
ಈ ಗಿಡಗಳು ಬಾಡಿ ಬರಲಾಗಿವೆ
ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ
ಸಫಲವಾಗುವುದು ಹೇಗೆ?

ಮಾನವರ ನಡುವೆ ಗೋಡೆ ಗೋಡೆಗಳು
ಸಂದುಗೊಂದುಗಳಲ್ಲೇ ನೋಟಗಳು
ಇವನೆಲ್ಲ ಕೆಡವಿ ಎಲ್ಲರೂ ಒಂದೇ
ಆಕಾಶ ನೋಡುತ್ತ ಬಯಲಲ್ಲಿ ಹಾಡುತ್ತ
ಕುಣಿಯುವಂತೆ ಮಾಡುವುದು ಹೇಗೆ?

ಈ ಬಂಡಿ ಮುಂದೆ ಹೋಗಲೇ ಒಲ್ಲದು
ಎತ್ತುಗಳು ನೆಲಕಚ್ಚಿ ಬಿದ್ದಿದೆ
ಇವುಗಳ ಬಾಲ ತಿರುವಿ ಮೇಲಕ್ಕೆಬ್ಬಿಸಿ
ಬಂಡಿ ಮುಂದೆ ಹೋಗಲು
ಎಳೆಯುವಂತೆ ಮಾಡುವುದು ಹೇಗೆ?

ಈ ಕಣ್ಣುಗಳು ಮತ ಧರ್ಮಗಳ
ಬಣ್ಣ ಗಾಜುಗಳಿಂದ ಅಲಂಕೃತವಾಗಿವೆ
ನೋಡಿದ್ದೆಲ್ಲ ಬಣ್ಣ ಬಣ್ಣ
ಗಾಜುಗಳ ಒಡೆದು ವರ್ಣರಹಿತವಾದ
ನಿಜ ಮಾನವನ ಎದೆಯಾಗಸವ
ನೋಡುವಂತೆ ಮಾಡುವುದು ಹೇಗೆ?

ಈ ಬಳ್ಳಿಗಳು ಅಲ್ಲಲ್ಲಿಗೆ ಅಲ್ಲಲ್ಲಿಗೆ
ಮುರುಟಿಕೊಂಡು ಸಂದುಗೊಂದುಗಳಲ್ಲಿ
ತೂರಿಕೊಳ್ಳುತ್ತಿವೆ ಕತ್ತಲಲ್ಲೇ ಸುತ್ತುತ್ತಿವೆ
ಇವು ಗಾಳಿ ಬೆಳಕುಗಳಿಗೆ
ಚಾಚಿಕೊಂಡು ಅಗಲ ಉದ್ದವಾಗಿ
ಹಬ್ಬುವಂತೆ ಮಾಡುವುದು ಹೇಗೆ?

ಈ ಹುಳುಗಳು ತಮ್ಮ ಸುತ್ತಲೇ ಸುತ್ತುತ್ತ
ತಮ್ಮ ಬಾಲಗಳ ತಾವೇ ನುಂಗುತ್ತ
ಒದ್ದಾಡುವುದ ಬಿಡಿಸಿ
ಮೈಸೆಟಸಿ ನೆಟ್ಟಗೆ ಮುಂದಕ್ಕೆ
ಸಾಗುವಂತೆ ಮಾಡುವುದು ಹೇಗೆ?

ಬಕಪಕ್ಷಿಗಳು ತೇಲುಗಣ್ಣು ಮಾಡಿಕೊಂಡು
ಗದ್ದುಗೆಯೇರಿ ಕುಳಿತುಕೊಂಡು
ಮೇಲುಮೇಲಕ್ಕೆ ಕೈ ಮಾಡಿ ಗುಂಡಿಗಳಲ್ಲಿ
ಎಲ್ಲ ಮೀನುಗಳ ಬಳಿಗೆ ಸೇರಿಸಿಕೊಂಡು
ತೇಲಾಡುವಂತೆ ಮಾಡುತ್ತಿವೆ
ಅವುಗಳನ್ನು ಬಿಡಿಸಿ ಹಾಯಾಗಿ
ಸಾಗರದಪಾರ ತಿಳಿ ಜಲದ ಮೇಲೆ
ಲೀಲಾಜಾಲವಾಗಿ ಈಜಾಡುವಂತೆ
ಮಾಡುವುದು ಹೇಗೆ?

ಕಟ್ಟಿದ ಸಂಕೋಲೆಗಳಿಂದ
ಕೆಸರೂಳಗೆ ಕಾಲುಗಳ ಕೀಳಲಾರದೆ
ಕೀಳಲು ಸೆಣಸಾಡುತ್ತ ಎಳೆದಾಡುವ
ಈ ಪ್ರಾಣಿಗಳ ಬೇಡಿಗಳ ಬಿಡಿಸಿ
ಗಟ್ಟಿ ನೆಲದ ಮೇಲೆ
ಓಡಾಡುವಂತೆ ಮಾಡುವುದು ಹೇಗೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...