Home / ಲೇಖನ / ಇತರೆ / ಡಾ|| ಲೋಹಿಯಾ, ಸಿವಿಲ್ ಕಾಯ್ದೆ ಸರ್ವೋಚ್ಛ ನ್ಯಾಯಾಲಯ, ಇಸ್ಲಾಂ ಇತ್ಯಾದಿ

ಡಾ|| ಲೋಹಿಯಾ, ಸಿವಿಲ್ ಕಾಯ್ದೆ ಸರ್ವೋಚ್ಛ ನ್ಯಾಯಾಲಯ, ಇಸ್ಲಾಂ ಇತ್ಯಾದಿ

ಚಿತ್ರ ಸೆಲೆ: ಕಲ್ಚರಲ್ ಇಂಡಿಯಾ.ನೆಟ್
ಚಿತ್ರ ಸೆಲೆ: ಕಲ್ಚರಲ್ ಇಂಡಿಯಾ.ನೆಟ್

ಭಾರತದ ಜೀವಂತ ಶಕ್ತಿಯಾಗಿ ಪ್ರವಹಿಸಬೇಕಾಗಿದ್ದ ಡಾ|| ರಾಮ ಮನೋಹರ ಲೋಹಿಯಾ ಕೇವಲ ಒಂದು ನೆನಪಾಗಿ ಉಳಿಯುತ್ತಿರುವುದು ನಮ್ಮ ಭವಿಷ್ಯದ ಕರಾಳತೆಯನ್ನು ಸೂಚಿಸುತ್ತಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲ ಜ್ವಲಂತ ಸಮಸ್ಯೆಗಳನ್ನು ಕುರಿತು ಅವರು ಅಂದೆ ಅದಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಲ್ಲಿ ಅತಿ ಮುಖ್ಯವಾದುವುಗಳೆಂದರೆ ಕಾಮನ್ ಸಿವಿಲ್ ಕೋಡ್, ಭಾಷಾ ಮಾಧ್ಯಮ ಹಾಗೂ ಗ್ರಾಮೀಣ ಅಭಿವೃದ್ಧಿ. ಕರ್ನಾಟಕದಲ್ಲೂ ಇಂದು ಮೊಳಕೆಯೊಡೆಯುತ್ತಿರುವ ಜಿಲ್ಲಾ ಪರಿಷತ್ ಕಾಯ್ದೆ ಅವರ “ಭಾರತದ ರೈತ” ಚಿಂತನೆಯ ಫಲವೆ.

ಸಂವಿಧಾನದ ೪೪ ನೇ ಪರಿಚ್ಛೇದದಲ್ಲಿ ದೇಶದಾದ್ಯಂತ ಒಂದೇ ರೀತಿಯ ಸಿವಿಲ್ ಕಾಯ್ದೆ ಅಗತ್ಯವನ್ನು ಎತ್ತಿ ಒತ್ತಿ ಹೇಳಿದವರು. ತಾವು ಲೋಕಸಭೆ ಅಭ್ಯರ್ಥಿಯಾಗಿದ್ದಾಗ ಹೆಚ್ಚು ಮುಸಲ್ಮಾನರಿರುವ ಕ್ಷೇತ್ರದಲ್ಲಿ ಅದರ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟು ಆ ಕ್ಷೇತ್ರದಲ್ಲಿ ಬಹು ಮತಗಳಿಸಿದವರು. ಅದರೆ ನೆಹರೂರವರ ರಾಜಕೀಯ ಕಣ್ಣುಮುಚ್ಚಾಲೆಯಾಟದಲ್ಲಿ ಈ ಗುರುತರ ಸಮಸ್ಯೆ ಬರಿಯ ಗಾಳಿಮಾತಾಗಿ ತೂರಿಹೋಗಿ ಇಂದು ಅದೇ ದೇಶದ ದೊಡ್ಡಗಾಳಿಯಾಗಿ ಕಾಡುವ ಪರಿಸ್ಥಿತಿಯುಂಟಾಗಿದೆ. ಸರ್ವೋಚ್ಛ ನ್ಯಾಯಾಲಯ ನೀಡಿದ ಮಾನವೀಯ ಮೌಲ್ಯದ ತೀರ್ಪಿನ ವಿರುದ್ಧ ಅದರ ನೆಪವೊಡ್ಡಿ ಮತ್ತೆ ಇಸ್ಲಾಂ ಮತೀಯ ಮನಸ್ಸುಗಳು ದೇಶವನ್ನು ಕತ್ತಲೆಯ ಕೂಪಕ್ಕೆ ತಳ್ಳಲು ಸಿದ್ದವಾಗುತ್ತಿವೆ. ತಮ್ಮ ಕ್ರೂರ ಒತ್ತಡದಿಂದ ಶಹಬಾನು ಬೇಗಂ ಪರಿಹಾರದ ತೀರ್ಪು ಬೇಡ ಎಂದು ತನ್ನ ಇಚ್ಚೆಯ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮಾಡಿವೆ.

ತನ್ನ ಗಂಡ ಮಹಮ್ಮದ್ ಅಮೀದ್ ಖಾನ್ ವಿರುದ್ಧ ಶಹಬಾನುಬೇಗಂ ಜೀವನಾಂಶಕ್ಕಾಗಿ ದಂಡ ಪ್ರಕ್ರಿಯಾ ಸಂಹಿತೆ ಪ್ರಕರಣ ೧೨೫ ರ ರೀತ್ಯಾ ಅರ್ಜಿ ಹಾಕಿ, ಅದು ಆಕೆಯ ಪರ ಆಗಿ ಅದರ ವಿರುದ್ಧ ಗಂಡ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಅದು ಕ್ರಿಮಿನಲ್ ಅಪೀಲ್ ನಂ ೧೦೩/ ೧೯೮೧ ರಲ್ಲಿ ನೊಂದಾವಣಿಯಾಗಿ ವಾದ ಪ್ರತಿವಾದದ ನಂತರ ದಿನಾಂಕ ೨೩- ೪- ೮೫ ರಂದು ಶಹಬಾನೊಬೇಗಂ ಪರವಾಗಿಯೇ ತೀರ್ಮಾನವಾಗಿರುತ್ತೆ.

ಶಹಬಾನೊ ಗಂಡ ವೃತ್ತಿಯಲ್ಲಿ ವಕೀಲ. ಅವರ ಮದುವೆ ಆದದ್ದು ೧೯೩೨ ರಲ್ಲಿ. ಅವರಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು. ಆತನಿಗೆ ವರ್ಷಕ್ಕೆ ೬೦ ಸಾವಿರದಷ್ಟು ಆದಾಯವಿದೆ. ೧೯೭೫ ರಲ್ಲಿ ಗಂಡ ಹೆಂಡತಿಯನ್ನು ಆಕೆಯ ೬೨ ನೇ ಮುದಿ ವಯಸ್ಸಿನಲ್ಲಿ ಮನೆಯಿಂದ ಹೊರ ದೂಡಿದ. ೧೯೭೮ ರ ಏಪ್ರಿಲ್‌ನಲ್ಲಿ ಶಹಬಾನೊ ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಅರ್ಜಿ ಹಾಕಿದಳು. ೬-೧೧- ೭೮ ರಂದು ಗಂಡ ‘ತಲಾಖ್’ ಹೇಳಿ ವಿವಾಹ ವಿಚ್ಛೇದನೆ ಮಾಡಿದ.

ದಂಡ ಪ್ರಕ್ರಿಯಾ ಸಂಹಿತೆ ಪ್ರಕರಣ ೧೨೫ ರ ಸಾರಾಂಶ ಇಷ್ಟು. ಸಂಪಾದನೆ ಇರುವ ಯಾವುದೇ ಮನುಷ್ಯ ಜೀವನಾಂಶವನ್ನು ಮಾಡಿಕೊಳ್ಳಲಾಗದ ತನ್ನ ಹೆಂಡತಿಯನ್ನು, ಮಕ್ಕಳನ್ನು ತಂದೆ ತಾಯಿಗಳನ್ನು ರಕ್ಷಣೆ ಮಾಡಲು ಅಥವಾ ಜೀವನಾಂಶ ಕೊಡಲು ಕಡೆಗಣಿಸಿದರೆ, ಆ ಸಾಕ್ಷ್ಯಾಧಾರದ ಮೇಲೆ ರೂ ೫೦೦/= ಮೀರದಂತೆ ಮ್ಯಾಜಿಸ್ಟ್ರೇಟರು ಆ ವ್ಯಕ್ತಿಗೆ ಜೀವನಾಂಶವನ್ನು ಕೊಡುವಂತೆ ಆದೇಶಿಸಬಹುದು.

ಮಾನವೀಯ ಮೌಲ್ಯವನ್ನು ಮನಗಂಡ ಕಾನೂನು ರಚನಾಕಾರರು ಅಮಾನವೀಯ ಸಂದರ್ಭಗಳಲ್ಲಿ ಅಬಲರ ಸಹಾಯಕ್ಕಾಗಿ ಈ ಅವಕಾಶವನ್ನು ಮಾಡಿದ್ದಾರೆ. ದಂಡ ಪ್ರಕ್ರಿಯಾ ಸಂಹಿತೆಯ ರಚನಾಕಾರರಾದ ‘ಸರ್ ಜೇಮ್ಸ್ ಫಿಟ್ಸ್’ ಪ್ರಕರಣ ೧೨೫ ಅನ್ನು ರಚಿಸಿದ ಹಿನ್ನೆಲೆ ಬಗ್ಗೆ “ತಿರುಪೆ ಸ್ಥಿತಿಯನ್ನು ತಪ್ಪಿಸುವ ಅಥವಾ ಅಂಥಹ ಪರಿಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ತಾಳಲು” ಎಂದು ವಿವರಣೆ ಕೊಟ್ಟಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶ್ರೀ ಸಿಕ್ರಿಯವರು ೧೯೭೦ ರಲ್ಲಿ ಪ್ರಕರಣ ೧೨೫ ಅನ್ನು ಕುರಿತು “ಇದು ಎಲ್ಲ ಮತಾನುಯಾಯಿಗಳಿಗೂ ಅನ್ವಯಿಸುತ್ತದೆ; ಮತ್ತು ಇದು ಯಾರೊಬ್ಬರ ವೈಯಕ್ತಿಕ ಮತಕ್ಕೂ, ಸಂಬಂಧ ಪಟ್ಟುದಲ್ಲ” ಎಂದು ಅದೇಶವಿತ್ತಿದ್ದಾರೆ. ಇದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸಿ ಅನುಸರಿಸತಕ್ಕದ್ದಾಗಿದೆ.

ಇಸ್ಲಾಂನ ಷರಿಯತ್ ಪ್ರತಿಪಾದಕರು ಅನವಶ್ಯಕ ಗೊಂದಲವನ್ನುಂಟುಮಾಡಿ ತಮ್ಮ ಮತೀಯ ಕ್ರೂರತೆಗೆ ಒತ್ತು ಕೊಡುತ್ತಿದ್ದಾರೆ. ಮಾನವೀಯ ದೃಷ್ಟಿಯಿಂದ ಇದು ಸಲ್ಲದು. ಇಸ್ಲಾಂನಲ್ಲಿ ಕೂಡ, ಈ ಕಾನೂನಿಗೆ ಅನುಗುಣವಾಗಿಯೆ ವ್ಯಾಖ್ಯೆ ಇದೆ. ದಿವ್ಯ ಕುರಾನಿನ ೬೫ ನೆ ಸೂರದ ೭ನೇ ಆಯತ್‌ನಲ್ಲಿ (ಸಂಪತ್ತಿನಲ್ಲಿ) ಸುಭಿಕ್ಷೆಯುಳ್ಳವರು ತಮ್ಮ ಸುಭಿಕ್ಷೆಗನುಸಾರ ವೆಚ್ಚ ಮಾಡಲಿ. ಮತ್ತು ಯಾರಿಗೆ ಜೀವನಾಧಾರ ಮಿತವಾಗಿಯೇ ಕೊಡಲ್ಪಟ್ಟಿರುವುದೋ, ತನಗೆ ಅಲ್ಲಾಹನು ದಾನವಿತ್ತುದಕ್ಕೆ, ಅನುಸಾರವಾಗಿಯೇ ಅವನು ವೆಚ್ಚ ಮಾಡಲಿ. ಅವನಿಗೆ ಕೊಟ್ಟಿರುವುದಕ್ಕಿಂತ ಹೆಚ್ಚಾಗಿ ಯಾವನ ಮೇಲೂ ಅಲ್ಲಾಹನು ಹೊಣೆಯ ಹೊರೆ ಹಾಕುವುದಿಲ್ಲ. ಕ್ಲಿಷ್ಟತೆಯ ನಂತರ ಸದ್ಯವೇ ಸೌಲಭ್ಯವನ್ನು ಅಲ್ಲಾಹನು ಮಾಡಿಕೊಡುವನು” ಅತ್ತಲಾಕ್ನಲ್ಲಿ ವಿವಾಹ ವಿಚ್ಛೇದನ ಮಾಡಿಕೊಂಡ ಸ್ತ್ರೀಯರ ಜೀವನಾಂಶದ ಬಗ್ಗೆ “ಸುಭಿಕ್ಷೆಯುಳ್ಳವರು ತಮ್ಮ ಸುಭಿಕ್ಷೆಗನುಸಾರ ವೆಚ್ಚ ಮಾಡಲಿ” ಎಂದು ಸ್ಪಷ್ಟವಾಗಿ ಹೇಳಿದೆ. ಕಾನೂನು ಸಹ ಗರಿಷ್ಟ ಮಿತಿಯನ್ನು ರೂ ೫೦೦/= ಕ್ಕೆ ನಿಗಧಿ ಪಡಿಸಿದೆ.

ಷರಿಯತ್ ಪ್ರತಿಪಾದಕರು “ಇದ್ದತ್”ನ ರಕ್ಷೆ ಪಡೆದು (ಇದ್ದತ್ ಬಂದರೆ ಕಾಲಾವಧಿ. ಗೃಹಣಿಯರ ಇದ್ದತ್ ಮೂರು ಋತುಸ್ರಾವ, ದಾಸಿ-ಆಕೆ ಋತು ಸ್ರಾವವುಳ್ಳವಳಾಗಿದ್ದರೆ. ಎರಡು ಋತು ಸ್ರಾವಗಳು ಮತ್ತು ಋತು ಸ್ರಾವ ಇಲ್ಲದೆ ಅವಸ್ಥೆಯಲ್ಲಿದ್ದರೆ ಕೇವಲ ಒಂದೂವರೆ ತಿಂಗಳು- ದಿವ್ಯ ಕುರಾನ್ ಪುಟ-೧೦೭೭). ಇದ್ದತ್‌ನ ಕಾಲಾವಧಿಯ ನಂತರ ತಾವು ಜೀವನಾಂಶ ಕೊಡಲು ಬದ್ಧರಲ್ಲ ಎಂದು ವಾದ ಹೂಡುತ್ತಿದ್ದಾರೆ.

ವಿನಾಕಾರಣ ಶಹಬಾನೋವನ್ನು ಮಹಮ್ಮದ್ ಅಮೀದ್‌ಖಾನ್ ೧೯೭೫ ರಲ್ಲಿ ಹೊರದೂಡಿದ್ದಾನೆ. ಏಪ್ರಿಲ್ ೧೯೭೮ ರಲ್ಲಿ ಆಕೆ ಅರ್ಜಿ ಸಲ್ಲಿಸಿದ್ದಾಳೆ. ೬-೧೧-೭೮ ರಲ್ಲಿ ಗಂಡ ವಿವಾಹ ವಿಚ್ಛೇದನ ಮಾಡಿದ್ದಾನೆ. ಆತನ ಉದ್ದೇಶ ‘ಇದ್ದತ್’ನ ರಕ್ಷೆಪಡೆದು ಜೀವನಾಂಶ ಕೊಡುವುದರಿಂದ ತಪ್ಪಿಸಿಕೊಳ್ಳುವುದು. ಈಗ ಮುಪ್ಪಾಗಿರುವ ೭೨ ವರ್ಷದ ಶಹಬಾನೊ ತನ್ನ ಜೀವನಕ್ಕೆ ಎಲ್ಲಿ ಹೋಗಬೇಕು? ತಿರುಪೆಗಿಳಿಯಬೇಕು! ಇದನ್ನು ತಪ್ಪಿಸಲೆಂದೆ ಪ್ರಕರಣ ೧೨೫ ಅನ್ನು ಮಾನವೀಯ ದೃಷ್ಟಿಯಿಂದ-ಸರ್ಕಾರದ ಜವಾಬ್ದಾರಿಯಾಗಿ- ರಚಿಸಲಾಗಿದೆ. ಷರಿಯತ್ ಪ್ರತಿಪಾದಕರು ಈ ಉದಾತ್ತ ಧ್ಯೇಯವನ್ನು ಅರ್ಥಮಾಡಿಕೊಳ್ಳಬೇಕು. ಮುದುಕಿಯಾಗಿರುವ ಶಹಬಾನೊ ಏನು ಮಾಡಬೇಕೆಂಬುದನ್ನು ಅವರ ಮಾನವೀಯ ಹೃದಯ ಮಿಡಿದು ನುಡಿಯಬೇಕು.

ಯಾವುದೇ ಧರ್ಮ-ಅದು ಧರ್ಮವಾಗಿದ್ದರೆ- ರಕ್ಷಿಸಬೇಕೇ ಹೊರತು ಶಿಕ್ಷಿಸಬಾರದು. ಅದು ಸ್ತ್ರೀಯರ, ಅಬಲರ, ವೃದ್ಧರ ಬಗ್ಗೆ ಕಾಠಿಣ್ಯವನ್ನು ತೊರೆದು ಹೆಚ್ಚಿನ ಕರುಣೆಯನ್ನು ಕೊಡಬೇಕು. “ವೇದ, ಬೈಬಲ್, ಖುರಾನ್ ಇತ್ಯಾದಿ ಧರ್ಮ ಶಾಸ್ತ್ರ ಗ್ರಂಥಗಳೆಲ್ಲ ಕೆಲವು ಪುಟಗಳು ಮಾತ್ರ, ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ” ಎನ್ನುವ ವಿವೇಕಾನಂದರ್ ವ್ಯಾಪಕವಾಣಿಯನ್ನ ಅರ್ಥಮಾಡಿಕೊಂಡು ಮುಂದುವರೆಯುವ ದೃಷ್ಟಿತಾಳಬೇಕು. ಬಂಧನದಲ್ಲಿರುವುದು ಬಲಿ, ಬೆಳವಣಿಗೆಯಲ್ಲ ಎನ್ನುವ ಅರಿವು ಅಗತ್ಯ.

ಯಾವುದೇ ಒಂದು ದೇಶದ, ಜನತೆಯ ಆದರ್ಶಕ್ಕಾಗಿ, ಐಕ್ಯತೆಗಾಗಿ ಒಂದೇ ರೀತಿಯ ಸಿವಿಲ್ ಕಾಯ್ದೆಯ ಅನುಸರಣೆ ಅನಿವಾರ್ಯ. ಭಾರತದಲ್ಲಿ ವಾಸಿಸುವ ಪ್ರತಿ ಪ್ರಜೆಯೂ ತನ್ನ ಮತ್ತು ರಾಷ್ಟ್ರದ ಐಕ್ಯತೆಗಾಗಿ ಹಾಗೂ ಸೌಖ್ಯಕ್ಕಾಗಿ ಒಂದೇ ರೀತಿಯ ಸಿವಿಲ್ ಕಾಯ್ದೆಯನ್ನು ಒತ್ತಾಯಿಸಬೇಕು. ಕಾನೂನಿನಲ್ಲಿ, ಧರ್ಮ ಗ್ರಂಥಗಳಲ್ಲಿ ಸಿಗುವ ಯಾವುದೇ ಅವಕಾಶವನ್ನೂ ಅವನತಿಗಾಗಿ ಉಪಯೋಗಿಸಬಾರದು. ಆ ಹಿನ್ನೆಲೆಯಲ್ಲೆ ಸರ್ವೋಚ್ಛ ನ್ಯಾಯಾಲಯ “ನಮ್ಮ ಸಂವಿಧಾನದ ೪೪ ನೇ ಅನುಚ್ಛೇದ ಸತ್ತಪದಗಳಾಗಿ ಬಿದ್ದಿರುವುದು ಶೋಚನೀಯ” ಎಂದಿದೆ.

ರಾಷ್ತ್ರೀಯ ಭಾವೈಕ್ಯತೆಯ, ಹೆಚ್ಚಾಗಿ ಮಾನವೀಯ ದೃಷ್ಟಿಯಿಂದ ನಾವು ಅದನ್ನು ಅತ್ಯಂತ ಕಳಕಳಿಯ ಹೃದಯದಿಂದ ಸ್ವಾಗತಿಸಬೇಕಾಗಿದೆ.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದೆಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!”

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ.
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀ ಧರ್ಮಸೂತ್ರ!”

ಇಲ್ಲಿಯ ಮನು ಅಲ್ಲಿಯ ಮಹಮ್ಮದ್ ಪೈಗಂಬರ್; ಅವರೂ ಒಬ್ಬ ಯತಿ ಎನ್ನುವುದನ್ನು ನಾವು ಮರೆಯಬಾರದು. ನಿರಂತರ ವಿಕಾಸವಾಗುತ್ತಿರುವ ವಿಶ್ವದೊಂದಿಗೆ ನಮ್ಮ ಉಸಿರು ಸಾಗುತ್ತಿದೆ. ವಿಕಾಸವೆ ಜೀವನ. ವಿಶ್ವದ ವಿಕಾಸ ಉಸಿರಿನೊಂದಿಗೆ ಜೀವಂತವಾಗಿ ಸಾಗುತ್ತ “ನಾವು ಮಾನವ ವರ್ಗವನ್ನು ಎಲ್ಲಿ ವೇದ ಬೈಬಲ್ ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು” ಎಂದ ಶ್ರೀ ಸ್ವಾಮಿ ವಿವೇಕಾನಂದರ ಉನ್ನತ ನೆಲೆಗೆ ನಡೆದು ನಿಲ್ಲ ಬೇಕಾಗಿದೆ.

ಬಲವಂತವಾಗಿ ಉಣ್ಣಿಸುವ ಕಾಲಕ್ಕೆ ಕಾಯದೆ ಅವರು ಇವರು ಎನ್ನದೆ ಎಲ್ಲರೂ ಸೇರಿ ನಮಗಾಗಿ, ನಮ್ಮ ದೇಶಕ್ಕಾಗಿ ಅತ್ತ ಆದಷ್ಟು ಬೇಗ ಅಡಿ ಇಡೋಣ.
-೧೯೮೮
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...