Home / ಲೇಖನ / ಇತರೆ / ನಿಜದ ಬೆಳಕು ಮೂಡಲಿ

ನಿಜದ ಬೆಳಕು ಮೂಡಲಿ

ಚಿತ್ರ: ಬರ್ಬರ ಅಲೇನ್
ಚಿತ್ರ: ಬರ್ಬರ ಅಲೇನ್

ಪ್ರಿಯ ಸಖಿ,
ಬೆಳಕಿನ ಹಬ್ಬ ದೀಪಾವಳಿಯನ್ನು ಮಾಮೂಲಿನಂತೆ ಉತ್ಸಾಹ, ಸಡಗರದಿಂದ ಆಚರಿಸಿ, ಮುಗಿಸಿದ್ದೇವೆ.  ಅಂಧಕಾರವನ್ನು ತೊಡೆದು ಬೆಳಕನ್ನು ಮೂಡಿಸುವ ಸಂಕೇತವನ್ನು ಒಳಗೊಂಡಿರುವ ದೀಪಾವಳಿಯನ್ನು ನಾವು ಇತರ ಹಬ್ಬಗಳಂತೆಯೇ ಅತ್ಯಂತ ಸಾಂಪ್ರದಾಯಿಕವಾಗಿ, ರೂಢಿಗತ ಶೈಲಿಯಲ್ಲಿ ಅಚರಿಸುತ್ತೇವೆ.

ತಲೆಗೆ ನೀರೆರೆದುಕೊಂಡು, ಹೊಸ ಬಟ್ಟೆ ಉಟ್ಟು, ಪೂಜೆ ಮಾಡಿ, ದೇವಸ್ಥಾನಗಳಿಗೆ ಭೇಟಿ ನೀಡಿ, ಸಿಹಿ ಮಾಡಿಕೊಂಡು ಉಂಡು, ಒಂದಿಷ್ಟು ಪಟಾಕಿ ಸುಟ್ಟರೆ ಹಬ್ಬ ಮುಗಿದಂತೆಯೇ!

ಆದರೆ ಪ್ರತಿಯೊಂದು ಹಬ್ಬದಾಚರಣೆಯ ಮೂಲದಲ್ಲಿ ಒಂದು ತತ್ವವಿರುತ್ತದೆ. ಅದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅದನ್ನು ಅನುಸರಿಸುವ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಅದೇ ಹಬ್ಬಗಳಿಗೆ ನಾವು ನಿಜಕ್ಕೂ ನೀಡುವ ಬೆಲೆ.

ದೀಪಾವಳಿ ಎಂದರೆ ದೀಪಗಳ ಸಾಲು ಎಂದು ಅರ್ಥ. ದೀಪಾವಳಿಗೆ ಪೌರಾಣಿಕ, ಸಾಂಪ್ರದಾಯಿಕ ಹಿನ್ನೆಲೆ ಏನೇ ಇದ್ದರೂ ಅದಕ್ಕಿರುವ ತಾತ್ವಿಕ ಹಿನ್ನೆಲೆ ಮಹತ್ವದ್ದಾಗಿದೆ. ಅದರಲ್ಲೂ ಪ್ರಸ್ತುತ ಸಮಾಜದಲ್ಲಿರುವ ಅಶಾಂತಿ, ಅನೀತಿ, ಹಿಂಸೆ, ಕ್ರೌರ್ಯ ಇತ್ಯಾದಿ ಕತ್ತಲನ್ನು ತೊಲಗಿಸಲು ಎಷ್ಟೊಂದು ದೀಪಗಳ ಸಾಲನ್ನು ನಾವು ಬೆಳಗಿಸಬೇಕಿದೆ. ಪ್ರೀತಿಯ ದೀಪ, ಕರುಣೆಯ ದೀಪ, ಸ್ನೇಹದ ದೀಪ, ಮಮತೆಯ ದೀಪ, ಧರ್ಮದ ದೀಪ, ಕ್ಷಮೆಯ ದೀಪ, ಶಾಂತಿಯ ದೀಪ… ಇತ್ಯಾದಿ ದೀಪಗಳಿಂದ ಹೊರಹೊಮ್ಮುವ ಬೆಳಕಿನಿಂದ ನಮ್ಮ ಮನದ ಅಂಧಕಾರವನ್ನು ತೊಡೆದುಕೊಳ್ಳಬೇಕಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸೂ ಕತ್ತಲಿನ ಕೂಪವಾಗಿದೆ. ಆದರೆ ಬೆಳಕಿನ ಕಿಡಿಯೂ ಆಳದಲ್ಲಿ ಎಲ್ಲೋ ಇದ್ದೇ ಇದೆ. ಆ ಬೆಳಕಿನ ಕಿಡಿಯನ್ನು ಕತ್ತಲ ಗೋಡೆಗಳನ್ನೊಡೆದು ಹೊರತರುವ ಗುರುತರ ಜವಾಬ್ದಾರಿ  ಈಗ ನಮ್ಮ ಮೇಲಿದೆ.

ನಾವು ಬೆಳಕಿಗಾಗಿ ನಿರಂತರವಾಗಿ ಹೊರಗೆಲ್ಲಾ ಹುಡುಕುತ್ತಿರುತ್ತೇವೆ. ಬೆಳಕು ಇಲ್ಲವೆಂದು ಕೊರಗುತ್ತಿರುತ್ತೇವೆ. ಆದರೆ ನಿಜದ ಬೆಳಕನ್ನು ಕಂಡುಕೊಳ್ಳುವ ಆ ಬೆಳಕನ್ನು ಮನಮನದಲ್ಲೂ, ಮನೆಮನೆಯಲ್ಲೂ ತುಂಬುವ ಕೆಲಸ ಈಗ ಆಗಬೇಕಿದೆ. ಬೆಳಕು ನೀಡಬೇಕೆಂಬ ಅದಮ್ಯ ಬಯಕೆಯಿರುವ ಪುಟ್ಟ ಹಣತೆ, ತನ್ನ ಬುತ್ತಿಯನ್ನು ಸುಟ್ಟುಕೊಂಡು ಬೆಳಕು ಹಚ್ಚಿಕೊಳ್ಳುತ್ತದೆ. ತನ್ನನ್ನು ಸುಟ್ಟುಕೊಳ್ಳುತ್ತದೆ. ಅದು ನೀಡಿದ ಬೆಳಕಿನಿಂದ ಅದರ ಸುತ್ತಲೂ ಬೆಳಕು ಮೂಡುತ್ತದೆ.

ಸಖಿ, ಆದ್ದರಿಂದಲೇ ಮೊದಲು ನಮ್ಮ ಮನಗಳಲ್ಲಿ ಪುಟ್ಟ ಹಣತೆಗಳನ್ನು ಹಚ್ಚಿಕೊಳ್ಳೋಣ. ತನ್ಮೂಲಕ ಆ ಬೆಳಕು ನಮ್ಮ ಸುತ್ತಲೆಲ್ಲಾ ಬೆಳಕು ಮೂಡಿಸಿಯೇ ತೀರುತ್ತದೆ. ಆ ಅರಿವಿನ, ಜ್ಞಾನದ, ವಿವೇಕದ ಬೆಳಕಿನಲ್ಲಿ ಕತ್ತಲು ನಿಧಾನಕ್ಕೆ ಕರಗಿ ವಿಶ್ವದೆಲ್ಲೆಡೆ ಶಾಂತಿ ಮೂಡಲಿ. ಮನಮನವು ನಿತ್ಯ ದೀಪಾವಳಿ ಆಚರಿಸಲಿ. ಪ್ರೀತಿಯ ದೀಪಗಳು ಎಲ್ಲೆಡೆ ಬೆಳಗಲಿ ಆ ದೀಪದ ಬೆಳಕು ಮುಂದೆಯೂ ಆರದಿರಲಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...