Home / ಕವನ / ಕವಿತೆ / ವಾಸ್ತವ

ವಾಸ್ತವ

ಚಿತ್ರ: ದೇವನಾಥ
ಚಿತ್ರ: ದೇವನಾಥ

ಪಾಪದವರು ನಾವು
ಅದೆಶ್ಟೋ ಕೋಪ, ತಾಪದಲಿ,
ಪಾಪದ ಕೊಡ ತುಂಬಿ, ತುಂಬಿ…
ಈ ಊರು, ಕೇರಿ, ಹರಿದಿದೆ!
ಎದುರು ಬಿಸಿಲಿಗೆ, ಕಬ್ಬಿಣದಾ ಅದಿರಾಗಿ, ಕಾದಿದ್ದೇವೆ!
ಹಾದು ಹೋಗುವವರ, ಕಾಲುಗಳ ಕಾದು ಕಾದು…
ಕಣ್ಣುಗುಡ್ಡೆ ಒಡೆದೂ…
ಬಳಲಿ ಬೆಂಡಗಿ, ಕರಕಾಗಿ, ಅಲ್ಲೆ ಕುಂತಿದ್ದೇವೆ!
ಕುಂತಿ ಪುತ್ರರಾಗಿ, ಭರತ, ಶತೃಜ್ಞರಾಗಿ-
ಸೂತಕವಿನ್ನು ಕಳೆದಿಲ್ಲ! ಅಡಿಗೆ ಮನೆಗೆ ಕರೆದಿಲ್ಲ!!
*  *  *

ಕರೆಬಾನಿಲೆದ್ದಿ, ತೊಳೆದ ಕೈಗಳ, ಈ ನೀಸುತನ
ಏಳುಕೆರೆ, ಸಪ್ತ ಸಾಗರದಲೆದ್ದಿ, ತೊಳೆತೊಳ್ದೆರಿನ್ನು ಕಳೆದಿಲ್ಲ!
ದೇಶ ವಿದೇಶದ, ಸುವಾಸನೆಯ ಸುಗಂಧ ದ್ರವ್ಯಲದ್ದಿ ತೀಡಿ, ತಿಕ್ಕಿದರೂ…
ಆ ಜಿಗುಟು, ಕಮಟು, ಮಡ್ಸು ವಾಸನೆಗೆ ವಿಮುಕ್ತಿಯಿಲ್ಲ!
ಶತಶತಮಾನದ ಈ ಶಾಪ, ಯಾವ ಜನ್ಮದಲ್ಲಂಟಿತೋ?!
ಹರಳಯ್ಯನಿಂದಾ ಮೊದಲುಗೊಂಡು,
ರೆಂಪಿಗೆಯಾಡಿಸಿದವರ ಪಾಡು,
ಹಾಡಾಗಿ, ಅರಣ್ಯರೋಧನವಾಗಿ, ಹರಿದಿದೆಯಲ್ಲಾ?!
ಕಲ್ಯಾಣದಣ್ಣಗಳಿರಾ…
ಚಪ್ಪಲಿ ಪೂಜೆ ಯಾಕಂದಿರಾ??
ಹರಳಯ್ಯ, ಕಲ್ಯಾಣಮ್ಮನ, ತೊಡೆ ಚರ್ಮದಿ, ಮಾಡಿದ ಕೆರಗಳಿಗೆ,
ಕರ ಮುಗಿದ, ಅಣ್ಣಬಸವಣ್ಣನವರು!!
ಈ ಮೆಟ್ಟು ಮೆಟ್ಟಿದ ತಪ್ಪಿಗೆ
ಕಾಲುರಿ, ಕಣ್ಣುರಿ, ಅಂಗಾಂಗ ಉರಿ ಉರಿ ಎದ್ದು…
ಕರೆಬಾನಿಲಿ ಮುಳುಗೆದ್ದು,
ಕೆರಗಳಿಗೆ ಮನ ತಂದ ಮಾನವಂತ!!
ಶೀಲವಂತನ ಮದುವೆಗೆ, ದಂಗೆ ಎದ್ದ ಜನ,
ಅದೇ ಕಾಲ್ಮರಿಗೆ, ಶರಣೆಂದದ್ದು ಸರಿಯೇ??
*  *  *

ಊರುಕೇರಿ, ಜಗಲಿ ಮೇಲೆ…
ಸಣ್ಣ, ದೊಡ್ಡವರ, ಕಾಲ ಕೆಳಗೆ, ಕಣ್ಣಸೆಳೆವ,
ಗುಡಿ, ಚರ್ಚು, ಮಸೀದಿ, ಅಡಿಗೆ ಮನೇಲಿ,
ಕಾಲ ಮೇಲೆ ಕಾಲನೇರಿ, ಮೆರೆವ ಕಾಲ್ಮಾರಿಗಳೇ…
ನಾವಿನ್ನೂ ಹೊರಗೇ ಊರ ಹೊರಗೇ…!!
ಕೆರಗಳಿಗೆ, ಕರ ಮುಗಿವ, ಹಿರಿಜನರೇ…
ಈ ಹರಿಜನರ, ಕಡೆಗಣಿಸಿರುವುದು, ಸರಿಯೇ??
ಓ… ಹರಿಯೇ… ಇದು ಸರಿಯೇ?!
ಯುಗ ಯುಗಳೆ ಕಳೆದರೂ…
ಕೆರಗಳ ಪರ್‍ಯಾಯವೆಲ್ಲಿದೆ ಹೇಳಿ??
ಕೆರಗಳ ಮಾಡಿದವರ,
ಕರ ಪಿಡಿದು, ಎತ್ತಿದವರುಂಟೇ??
ಪುರಾಣ, ಪುಣ್ಯಪುರುಷರು ಕೆರಗಳಿಗೆ ಕರಮುಗಿದು,
ಗದ್ದುಗೆ ಮೇಲಿಟ್ಟು, ಪೂಜಿಸಿ ಪುನೀತರಾಗಿದ್ದು ಸುಳ್ಳೇ??
ಕೆರಗಳಿಗೆ ಗುಡಿಕಟ್ಟಿ, ಕರ ಮುಗಿವದು ತಿಳಿಯದೇ?
ಅಣ್ಣ ಬಸವಣ್ಣ, ಕೆರಗಳ ಶಿರದಲಿ ಹೊತ್ತು, ಮೆರೆದಾಡಿದ್ದು ಪುರಾಣವೇ??
ಸಭೆ, ಸಮಾರಂಭ, ವಿಧಾನ ಸೌಧದಲಿ…
ಕೆರಗಳು ಕರದಲ ರಂಗೇರಿ, ಹಾರಾಡಿ, ತೂರಾಡಿದಾಗ,
ಮಾದಿಗರ ಶ್ರಮ ಸಾರ್ಥಕವಾಗಿ, ಧನ್ಯರಾಗಿ…
ಪುಟ್ಟ ಕಂದನ ಎತ್ತಿ, ಮುದ್ದಾಡಿದ ಖುಷಿ ಕೇರಿಗರಿಗೆ!!
*  *  *

ಈ ನಮ್ಮ ಹೊಲಸು ಕೆರಗಳಿಗೆ
ಕಡೆಯಾದ ಬುದ್ಧಿ ಕಂಡು ಕೆರಳಿ, ಇವರ…
ಕಿತ್ತೋದ ಕೆರಗಳೆಂಬೆ!
ಸವಕಲು ಮನಸ್ಸೆಂಬೆ!
ಕಿಲುಬುಗಟ್ಟಿದ ಜನರೆಂಬೆ…
…ಮುಳ್ಳುರೆಂಬೆಯೆಂಬೆ!!
ಮಟ ಮಟ ಮಧ್ಯಾನದ ಮಾದಿರೆಂಬೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...