Home / ಕವನ / ಕವಿತೆ / ಭಯ ಪುರಾಣ

ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು
ಬಂಗಾರ ಬೆರಳುಗಳಿಂದ ಅಲಂಕರಿಸಿ
ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ
ಮಾರಿ ಕಾಲರಾ ಭಯ, ರೋಗ ರುಜಿನ ಭಯ
ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು
ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು
ಬಿದ್ದು ಬೇಡುತ್ತೇವೆ
ಕತ್ತಲೆಯು ಕತ್ತಲೆಯನ್ನು ಹಡೆದಂತೆ
ಭಯವು ಭಯವನ್ನೇ ಹಡೆಯುತ್ತ ಹಡೆಯುತ್ತ
ದೇಶದಲ್ಲೆಲ್ಲಾ ಭಯದ ಹುಳುಗಳೇ ತುಂಬಿವೆ
ಭಯದ ಕೊಳ ಪಾಚಿಗಟ್ಟಿದೆ
ಅದರಲ್ಲೇ ಶಾಶ್ವತ ಕೊಳೆಯಲು
ಭಯಾನಕ ಅದ್ಭುತ ಗೊಳ್ಳು ಪುರಾಣಗಳು ಸಂಕೀರ್ತನೆಗಳು
ಕೊಳೆ ಹೊಳೆ ನಿರಂತರ ಹರಿದಿವೆ
ಭಯದಿಂದ ಅದನ್ನು ಕೇಳುತ್ತ ಕೇಳುತ್ತ
ಪ್ರಶ್ನೆ ಮಾಡುವ ಶಕ್ತಿ ಸತ್ತು ಹೋಗಿದೆ
ಭಯದ ಪಾಳುಬಾವಿ ಎಂದೆಂದೂ ಬತ್ತದಂತೆ
ವಟಗುಟ್ಟುವ ಕಪ್ಪೆಗಳು ಹೊಟ್ಟೆ ಬೆಳೆಸಿಕೊಳ್ಳುತ್ತವೆ
ಶರಣಾಗಿ ತಲೆಬಾಗದವರನ್ನು
ರಕ್ತ ಕಾರಿಸಿ ಕೊಲ್ಲುತ್ತವೆ
ಅವರ ಮಕ್ಕಳ ಮರಿ ಕಬಳಿಸುತ್ತವೆ
ಎಂದೇನೇನೋ ನಿಗೂಢ ಭಯಗಳು
ರಾಜ ಮರ್ಯಾದೆಯ ಷೋಡಶೋಪಚಾರ ಶೃಂಗಾರಗಳೆಲ್ಲ
ದೇವರೆಂಬ ಗೊಂಬೆಗಳಿಗೆ ಬೇಕು
ಹೆಣ ಸಿಂಗಾರವಲ್ಲದೆ ಬೇರೆ ಫಲವಿಲ್ಲ
ಹೊಗಳಿಕೆಗೆ ಬಾಯಿ ಬಿಡುವ ಅವು
ತೆಗಳುವವರ ಶಿಕ್ಷಸದೆ ಬಿಡುವುದಿಲ್ಲ
ಅವನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಕೀರ್ತನೆ
ವಾದ್ಯಗಳ ಮೊರೆತ ಬೆಂಕಿಹಾರಾಟ
ಮುಂತಾದ ಭಯಾನಕಗಳು
ಕುರಿ ಕೋಣಗಳ ಬಲಿಯನ್ನು
ಕೆಲವು ಕೇಳುತ್ತವೆ ಶಾಖಾಹಾರಿಗಳು
ಇನ್ನೂ ಕೆಲವು ಸಸ್ಥಾಹಾರಿಗಳು
ಅವಕ್ಕೆ ನವರಸ ಭಕ್ಷ್ಯ ಭೋಜ್ಯಗಳು ಬೇಕು
ದೈವ ಸಾಕ್ಷಾತ್ಕಾರಕ್ಕೆ ತಾವೇ ಪರವಾನಿಗೆದಾರರೆಂದು
ಮೆರೆಯುವ ಬಗೆಬಗೆಯ ಗುರು ಜಗದ್ಗುರುಗಳಿಗೆ
ಬುದ್ದೀ ಸ್ಥಾಮೀ ಎಂದು ಭಯದಿಂದ ಅಡ್ಡ ಬೀಳಬೇಕು
ರಾಜರ ಮೆರೆದಾಟ ವೈಭವಗಳೆಲ್ಲ ಈ ಸನ್ಯಾಸಿಗಳಿಗೂ ಬೇಕು
ಯಾವುದೋ ಪುಣ್ಯಾತ್ಮನ ಹೆಸರಿನಲ್ಲಿ ಮಠಗಳು
ಅವುಗಳಲ್ಲಿ ಗದ್ದುಗೆಯೇರಿದ ಹದ್ದುಗಳು ಮರ್ಕಟಗಳು
ಹೀಗೆ ಗುಡಿ ಮಠ ಜಾತ್ರೆ ಪೂಜೆ ಪುರಾಣಾದಿ
ಕೊಳಚೆಯ ಪ್ರವಾಹದಲ್ಲಿ ಮುಳಿಗೇಳುತ್ತ
ಮತ್ತೆ ಮತ್ತೆ ಮತ್ತೇರಿ ಮುಳುಗಿ
ಹೆಣಗಳಾಗಿ ಹೋಗಿರುವ ನನ್ನ ಜನರೇ
ಸಾಕಿನ್ನು ಭಯಾವಳಿ ಭವಾವಳಿಗಳ
ಬೆಂಡು ಬೆಂಡಾದ ತುಂಡು ತುಂಡಾದ ಬೀಳು ಬಾಳುಗಳು
ಭಯವನ್ನೇ ತುಂಬಿ ಬೆಳಸುತ್ತಾ ಬಂದ
ಪುರಾಣ ಕಂತೆಗಳ ಕಟ್ಟಿಟ್ಟು ಬಿಡಿ
ಇಲ್ಲಾ ತಿಪ್ಪೆಗೆಸೆದು ಬಿಡಿ
ಭಯದ ಕೋಟೆಗಳಂತಿರುವ ಗುಡಿ ಗುಂಡಾರಗಳ
ಮ್ಯೂಜಿಯಮ್ಮುಗಳಾಗಿ ಮಾಡಿ
ಗೊಂಬೆಗಳ ಮಕ್ಕಳಿಗೆ ಕಲೆಗಾಗಿ ತೋರಿಸಿ
ಜನರ ಭಯದ ಆಧಾರದ ಮೇಲೆ ಬೊಚ್ಚು ಬೆಳೆಸಿರುವ
ಮಠಾಧೀಶ್ವರ ಪೂಜಾರಿ ಬಾಬಾಗಳನ್ನಲ್ಲ
ಹೊಲ ಗದ್ದೆ ತೋಟ ಕಟ್ಟಡ ಕಾರ್ಖಾನೆಗಳಿಗೆ
ಎಳೆ ತಂದು ದುಡಿಯ ಹಚ್ಚಿರಿ ನಮ್ಮ ನಿಮ್ಮಂತೆ
ಜಾತ್ರೆ ಪರಿಷೆಗಳನ್ನೆಲ್ಲ ಜನ ಬಾಳಲು ನೆರವಾಗುವ
ಜಾನಪದ ಕುಶಲ ಕಲಾಮೇಳಗಳನ್ನಾಗಿ ಮಾಡಿ
ದೇವರು ಮೈಯಲ್ಲಿ ಬರುವ ಭಕ್ತಿಯಾವೇಶದ ಭ್ರಮಿಷ್ಟರನ್ನು
ಹುಚ್ಚಾಸ್ಪತ್ರೆಗಳಿಗೆ ಸೇರಿಸಿ ತಲೆ ಸರಿಮಾಡಿ
ಮಠಗಳನ್ನೆಲ್ಲಾ ಕಾಯಕ ಕೇಂದ್ರಗಳನ್ನಾಗಿ ಪರಿವರ್ತಿಸಿ
ಮಾನವ, ಮಾನವ ಚೈತನ್ಯ, ಮಾನವತೆಯನ್ನು ಬಿಟ್ಟು
ಬೇರೆ ದೇವರಿಲ್ಲ ಕಾಣಿರೋ .

ಭಯದ ಕೂಸುಗಳಾದ ಚಿಲ್ಲರೆ ದೇವರುಗಳನ್ನು
ಆ ಚಿಲ್ಲರೆಗಳ ಮೇಲೆ ಹೊಟ್ಟೆ ಹೊರೆಯುವ
ಪರೋಪಜೀವಿ ಬುರುಸುಗಳನ್ನು ಕೊಳೆಯನ್ನೆಲ್ಲ
ಸಾರಾಸಗಟಾಗಿ ತೊಳೆಯಿರಿ
ಭಯವಿಲ್ಲದ ಮಾನವರಾಗಿ ಬೆಳೆಯಿರಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...