Home / ಕವನ / ಕವಿತೆ / ಹಾಡಬೇಕು

ಹಾಡಬೇಕು

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು
ಮನಸಿನ ಮೂಸೆಯ ಭಾವದ ಕುದಿಗಳು
ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ||

ಅಂತರಂಗದಲಿ ರಿಂಗಣಗುಣಿಯುತ
ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು
ಒಳ ತಲ್ಲಣಗಳ ಪಲ್ಲವಿ ನರಳುತ
ಹೂವು ಅರಳಬೇಕು ಸುಗಂಧ ಸುತ್ತ ಹರಡಬೇಕು        ||೧||

ಎಲ್ಲ ದಿಕ್ಕುಗಳ ಎಲೆ ಕಡ್ಡಿಗಳನು
ತಂದು ಹೆಣೆಯಬೇಕು ಕನಸಿನ ಗೂಡು ಕಟ್ಟಬೇಕು
ಆಶೆಯ ಮರಿಗಳ ಹಸಿವು ನೋವುಗಳ
ಅಳುವು ನಿಲ್ಲಬೇಕು ನಗುವಿನ ಹಕ್ಕಿ ಹಾಡಬೇಕು          ||೨||

ಛಿದ್ರ ಭಿದ್ರ ತುಂಡುಗಳ ಜೋಡಿಸುತ
ಕನ್ನಡಿ ನಗಬೇಕು ತಿಳಿವಿನ ಬಿಂಬ ಕಾಣಬೇಕು
ಸಂದು ಗೊಂದುಗಳ ಕಂದಕ ಸೆರೆಗಳ
ತೂರಿ ಚಿಮ್ಮಬೇಕು ಹಾಡಿನ ಹೊಳೆಯು ಹೊಮ್ಮಬೇಕು  ||೩||

ಹರಿದು ಕೊಳೆಯುವೀ ಎಳೆಗಳ ಕಲೆಸುತ
ಬಟ್ಟೆ ನೇಯಬೇಕು ಬಾಳಿಗೆ ಬಟ್ಟೆದೋರಬೇಕು
ಗೊಬ್ಬರ ಕೊಳೆಗಳ ಈ ನೆಲದಿಂದಲೆ
ಗಿಡವು ಮೂಡಬೇಕು ಜೀವನ ರಸಫಲ ಬಿಡಬೇಕು       ||೪||

ದಿನ ದಿನ ಸಾಗುವ ಸಂಜೆ ಬೆಳಗುಗಳ
ಬಣ್ಣ ಬಳಸಬೇಕು ಸಂಧ್ಯಾ ರಾಗ ಹರಿಯಬೇಕು
ಮುದಿ ಸಂಜೆಗೆ ಹಸುಗಂದನ ಎಳೆ ನಗೆ
ಬೆಸುಗೆಯಾಗಬೇಕು ಚೇತನ ಸೆಲೆಯು ಸದಾ ಬೇಕು    ||೫||

ಹೇಡಿತನದ ಹುಳು ಹತ್ತಿದ ಜೀವಕೆ
ಜೀವ ಸತ್ವ ಬೇಕು ಹಾಡಿನ ಶಕ್ತಿ ತುಂಬಬೇಕು
ದೇಶದ ಹೃದಯವು ದುಡಿಯುವ ಕೈಗಳ
ನಾಡಿ ಹಿಡಿಯಬೇಕು, ಜನಮನದಾಳ ಮಿಡಿಯಬೇಕು   ||೬||

ಕಣ್ಣೀರಿನ ಧಾರೆಗಳನು ಒರೆಸುವ
ಕೈಯಿದಾಗಬೇಕು ದುಡಿಯುವ ಕೈಗೆ ಬಾಗಬೇಕು
ಒಣಗಿದ ಮರುಭೂಮಿಗಳೆದೆಯೊಳಗಡೆ
ಒಲವು ಹರಿಯಬೇಕು ಹಿಗ್ಗಿನ ತೋಟವರಳಬೇಕು         ||೭||

ದುಷ್ಟ ಶಕ್ತಿಗಳ ಮುಳ್ಳುಕಳ್ಳಿಗಳ
ಕೊಚ್ಚಿ ಹಾಕಬೇಕು ಹಾಡಿದು ಕತ್ತಿಯಾಗಬೇಕು
ಮೋಸ ವಂಚನೆಯ ಸ್ವಾರ್ಥ ಚಿಂತನೆಯ
ಕಸವ ಸುಡಲು ಬೇಕು ಬೆಂಕಿಯು ಹಾಡಿದಾಗಬೇಕು       ||೮||

ದುರ್ಬಲರಿಗೆ ಬಲವೀಯುತ ಕೊಬ್ಬಿದ
ಖೂಳರೆದೆಗೆ ಬಾಣಾ ಸಾರ್ಥಕ ಹಾಡಿನ ಪರಿ ಕಾಣಾ
ದಿನ ದಿನ ಹೊಸ ಹೊಸ ಚೆಲುವನು ತಾಳುತ
ಹಾಡು ಕುಣಿಯಬೇಕು ಕಾಲದ ಹೆಜ್ಜೆ ಮೇಳಬೇಕು
*****************

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...