ಆಶಯ

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು
ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು
ನಂಬಿಕೆಯ ನೇತೃದಲಿ ನೋಡುತಲು, ಜೀವನದ
ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ,
ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ
ಸಾರುತಲಿ ಪಾಡುತಲಿ, ಮಾನವನು ತಾನ್ಪಡೆದ
ಜನ್ಮಸಾರ್ಥಕವೆಂದು ಜಡನಂತೆ ಮರುಳಾಗಿ
ವಿಶ್ವನಿಯಮದ ಎದುರು ಪಕ್ಕಮಿಲ್ಲದ ಪಾತೆ-
ಯಂತೆ ಸೇರ್ವನು ಸೋಲ ಸುರಂಗವನ್ನು!

ಕಾಲಪುರುಷನು ತಾಳ್ದ ಅನುಭವವೆ ಅದು ಚಿತ್ರ!
ಎಲ್ಲಿಂದೆಲಿಗೆ ಹಾಯ್ದು ಎಂತೆಂಥಾ ಭೀಕರದ
ನೋಟವನು, ಜನತೆಗಳ ಭಾಗ್ಯ ದೌರ್ಭಾಗ್ಯಗಳ
ಜೀವನವ ನೋಡಿ ಕನಿಕರಗೊಂಡು, ಮನಸಿನಾ
ಭಿತ್ತಿಯಲಿ ಆ ಹಾಳೂಬಾಳಿನಾ ಬೇಗುದಿಯ
ಚಿತ್ರವನು, ಆ ಕಾಲ ಮಹಿಮಾ ಮಹತ್ವವನು
ಒಂದಾಗಿ, ಗುರುಜನರ ನೃಪಜನದ ತತ್ವದಿಂ
ಆಳ್ಕೆಯಿಂ ಬಗೆ ಬಗೆಯ ಸೋಗನ್ನು ಜಗಪಡೆದ
ತೆರವನ್ನು ನೋಡುತೋಡುತ ಸಾರ್ವುದಾಹಾ!

ಎನ್ನೆದೆನ್ನದುವೆಂದು ಔತ್ಕೃಷ್ಟ್ಯವಾದದಲಿ,
ಒಲ್ಮೆ ನಲ್ಮೆಯ ಸುಖನು ಎಂಬ ವಿಚಾರದಲಿ,
ರಸಿಕ ಜೀವನ ತಾಳ್ವ ಮೋಹ ಸಂಘಟನೆಯಲಿ,
ಸಮರನಾದದಿ ಏಳ್ವ ಜನದ ತಳಮಳದಲ್ಲಿ,
ವೈರಾಗ್ಯ ಜೀವನವು ಪಡೆವ ಸಾರ್ಥಕದಲ್ಲಿ,
ಮನಕೆ ತೋರುವವೊಂದು ವಿಸ್ಮಯಾಂತಕವಾದ-
ಧ್ವನಿಯ ಲೋಕಕೆ ಸಾರ್ವ ಮಂಗಲಾಮಂಗಲವೊ
ಹೇಳ ಬಲ್ಲವರಾರು?  ಹೃದಯಾದಾವೇಶವನು
ಅನುಭವವೆ ಒಪ್ಪಿಸುವುದು ಕಾಣ್ಕೆಯಾಗಿ!

ಲೇಖನಿಯನುರುಳಿಸೆನು ಕವಿಯೆಂಬ ಹೆಮ್ಮೆಯಲಿ,
ಪಾಡ್ದನಿಯನೊಪ್ಪಿಸೆನು ಗಮಕಿಯೆಂಬರ್ಥದಲಿ,
ಜಗದಿರವ ಚಿತ್ರಿಸೆನು ಚಿತ್ರಿಕನ ರೀತಿಯಲಿ,
ತತ್ವಗಳ ನೊರೆಯೆನಾ ತಾತ್ವಿಕನ ಸೂಕ್ತಿಯಲಿ,
ಎಮ್ಮೆ ಜೀವದ ಛಾಯೆ ಪರರ ಬಾಳಿನ ಮಾಯೆ
ಹಾಸುಹೊಕ್ಕಾಗಿ ತರಂಗಗಳ ತಲ್ಪದಲಿ
ಬಿದ್ದುರುಳುವುದ ಕಂಡು ಮನವಾರೆ ಸೋಲುತಲಿ
ನೀಳ್ಗತೆಯ ಕಿರಿದಾಗಿ ವಿಷಯಗಳ ಲಘುವಾಗಿ
ಅಂಧ ಸಾಧಕನಂತೊರೆಯಲಿಳಿದೆನೊರ್ವ!

ಬ್ರಹ್ಮಾಂಡ ನೆಲಗಟ್ಟು ಪ್ರೇಮದಾಧಾರದಲಿ
ವಿಶ್ವನಿಯಮದ ಬಲವು ಪ್ರೇಮಸುಧೆ ಧಾರೆಯಲಿ,
ಮಾನವನ ವ್ಯವಹಾರ ಪ್ರೇಮ ಪೋಷಾಕಿನಲಿ,
ಜೀವಿಗಳ ಸ್ವಾತಂತ್ರ್‍ಯ ಪ್ರೇಮಪ್ರಲಾಪದಲಿ-
ಅಡಗಿರಲು, ಈರೇಳು ಲೋಕದಾ ಘಟನೆಯಲಿ
ಪ್ರೇಮಜಾಲದಿ ಏಳ್ವ ಪ್ರಣಯಧೂಮದ ರೂಪ
ಅದೆಂತು ವೈಚಿತ್ರ್‍ಯ!  ಎಂತು ಮನೋಹರವು!!
ಎನ್ನ ಸೊಲ್ಲನು ಇಲ್ಲಿ ತದ್ವಿಶೇಷದಿ ಚೆಲ್ಲಿ
ನೋಟಕರ ಹಾಯೆಣಿಸಲಸದಳವೊ!

ಮನಸಿಜನ ಮಾಯೆಯಲಿ ಜನದಲಿಹ ಮೋಹದಲಿ
ಕವಿಪಾಕವೊಸರುವುದು ಆತ್ಮರಸಬಟ್ಟಲಿಂ!
ಸುಖದ ದುಃಖದ ಬೇರೆ ಪಾಲು ಎರಡನು ಮಾಡಿ
ಸೋಗಿನನುಭವದಲ್ಲಿ ಸವಿದು ಸವಿಕಹಿಯನ್ನು
ನೋಡಿ ಲೋಕದ ಬಗೆಯ ಚಿತ್ರಿಸಿಡುತಲಿ ವಿಧವ-
ಹಾಹಾಕಾರದ ಕಾಣ್ಕೆ ಗುಣದ ದೋಷದ ಪೂಣ್ಕೆ
ಒಂದನೊಂದರಲಿಟ್ಟು, ತನ್ನ ಇರವನು ತನ್ನ
ಬುದ್ಧಿಬಲದಿಂ ಬೆಳಗಿ ಆದರ್ಶ ಜೀವನಕೆ
ಆಧಾರನಾಗಿರಲು ಸಲ್ವುದೆನಿತೊ!
*****

ಪುಸ್ತಕ: ಸೂರ್ಯ ಕಾಂತಿ

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ