ಅವನೊಬ್ಬ ಜಟ್ಟಿ, ಕುಸ್ತಿಮಾಡಿ ಜೀವಿಸುತ್ತಿದ್ದ. ಅವನಿಗೆ ತನ್ನ ಪ್ರತಿಯೊಂದು ಅಂಗವೂ ಅತ್ಯಂತ ಪ್ರಿಯ. ಮಾಂಸಖಂಡಗಳನ್ನು ಬಲಿಷ್ಟಿಸಿಕೊಂಡು ಸಂತಸ ಪಡುತ್ತಿದ್ದ. ಅವನಿಗೆ ಉಕ್ಕಿನಂತಹ ಮೂಳೆಯಿದ್ದರೂ, ಅತಿನಾಜೂಕಾದ ಹಲ್ಲುಗಳಿದ್ದವು. ಕುಸ್ತಿ ಮಾಡುವಾಗಲೆಲ್ಲಾ ಬಹಳ ಜಾಗರೂಕತೆ ವಹಿಸುತ್ತಿದ್ದ. ಅವನು ಹೂಂ ಕರಿಸಿ ಕುಸ್ತಿಗೆ, ಪ್ರತಿಸ್ಪರ್ಧಿಗೆ ಆಹ್ವಾನವೀಯುವಾಗ ಅವನ ಹಲ್ಲುಗಳನ್ನು ಕಡಿದು ಕಟಕಟವೆಂದು ಶಬ್ದ ಮಾಡುತ್ತಿದ್ದ. ಅವನಿಗೆ ದೇಹವೇ ದೈವವಾಗಿತ್ತು. ದೇಹದ ತಾಕತ್ತು ಅವನ ಸಂಪತ್ತಾಗಿತ್ತು. ದೇಹವನ್ನು ಬೆಳೆಸುವುದರಲ್ಲಿ ಅವನ ಆಹಾರದ ಪಾತ್ರ ಹಿರಿದಾಗಿತ್ತು. ಆಹಾರವನ್ನು, ಹಸಿ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ತಿನ್ನುವಾಗ, ಅವನು ಹಲ್ಲುಗಳನ್ನು ಪೂಜಿಸಿ, ಗಲ್ಲಕ್ಕೆ ಅರಸಿನ ಕುಂಕುಮ ಹಚ್ಚುತ್ತಿದ್ದ. ಅವನು ಪ್ರತಿಸ್ಪರ್ಧಿಯ ಮೇಲೆ ಹಲ್ಲು ಕಿರಿದ ಅಂದರೆ ಪ್ರತಿಸ್ಪರ್ಧಿ ತರತರನಡುಗುತ್ತಿದ್ದ. ಅವನ ಹೊಟ್ಟೆ ಗೂಡಾಣವಾಗಿ ಬೆಳೆಯಲು, ತೋಳು ಕಬ್ಬಿಣವಾಗಲು, ತನ್ನ ಹಲ್ಲಿನ ಪಾತ್ರ ಅತಿದೊಡ್ಡದೆನ್ನುತ್ತಿದ್ದ.
ತಾನು ಮೆಲ್ಲುವ ಎರಡುನೂರು ಟನ್ ಆಹಾರವನ್ನು ಭಂಜಿಸಿ ಭಕ್ಷಿಸಲು ಹಲ್ಲುಗಳ ಕಾರಖಾನೆಯೇ ಕಾರಣವೆನ್ನುತ್ತಿದ್ದ. ಒಮ್ಮೆ ದುರಾದೃಷ್ಟವಶಾತ್ ಕುಸ್ತಿಯಾಡುವಾಗ ಪ್ರತಿ ಸ್ಪರ್ಧಿಯಿಂದ ಹೊಡೆಸಿಕೊಂಡು ಇವನ ಮುಖವು ಕಂಭಕ್ಕೆ ತಗುಲಿ ಮುಂದಿನ ಎರಡು ಹಲ್ಲು ಅಲುಗಾಡಿ ಬಿದ್ದವು. ಜಟ್ಟಿಗೆ ಅತೀವ ಸಂಕಟವಾಯಿತು. ಅವನು ನಂಬಿದ್ದ ದೈವ ಕೈ ಬಿಟ್ಟಂತೆ ಭಾಸವಾಯಿತು. ಕೈಕಾಲಲ್ಲಿ ಶಕ್ತಿ ಕುಗ್ಗಿದಂತಾಯಿತು. ಹಲ್ಲನ್ನು ಬಿಸಾಡಲು ಅವನಿಗೆ ಮನಬರಲಿಲ್ಲ. ಹಲ್ಲಿನಲ್ಲಿ ತನ್ನ ಆರಾಧ್ಯ ದೈವವನ್ನು ಕೊರೆದು ಅದಕ್ಕೆ ಸ್ವರ್ಣ ಕವಚ ಹಾಕಿ ತನ್ನ ಕೊರಳಿಗೆ ಪದಕವಾಗಿ ಹಾಕಿಕೊಂಡ.
ಇದನ್ನು ನೋಡಿದ ಅವನ ಗೆಳೆಯ ಅವನನ್ನು ಉಪೇಕ್ಷೆ ಮಾಡಿದ. “ಹಲ್ಲಿನಲ್ಲಿದ್ದ ಶಕ್ತಿ ನಿನ್ನಲ್ಲಿ ಇಲ್ಲದಿದ್ದರೆ ನೀನು ನಾಲಾಯಕು”-ಎಂದ. ಅವನ ನುಡಿಗಳು ಅವನ ಮರ್ಮವನ್ನು ಭೇಧಿಸಿದವು. ತನ್ನ ಆರಾಧ್ಯ ಹಲ್ಲಿನ ಝೆನ್ ಧ್ಯಾನ ಮಾಡುತ್ತಾ, ಮಾಡುತ್ತಾ ಅವನಿಗೆ ಮತ್ತೆ ಹಲ್ಲು ಹುಟ್ಟಿತು. ಧ್ಯಾನದಲ್ಲಿ ನೆನೆದದ್ದು ನನಸಿನಲ್ಲಿ ಸಾಕಾರವಾಯಿತು. ಚಿಂತನೆಯಲ್ಲಿ ಚಿಲುಮೆ ಚಿಮ್ಮಿತು. ದೃಷ್ಟಿ ನೆಟ್ಟಲ್ಲಿ ಸೃಷ್ಟಿ ಎಂಬ ಅರಿವಾಯಿತು.
ಗೆಳೆಯನಿಗೆ ಇವನ ಅಪಾರ ಧ್ಯಾನ ಶಕ್ತಿಯಲ್ಲಿ ನಂಬಿಕೆ ಮೂಡಿತು.
*****

















