Home / ಬಾಲ ಚಿಲುಮೆ / ಕಥೆ / ಮಹಾ ಚತುರಕನ ಕಥೆ

ಮಹಾ ಚತುರಕನ ಕಥೆ

ಒಂದಾನೊಂದು ಕಾಡಿನಲ್ಲಿ ಮಹಾಚತುರಕನೆಂಬ ನರಿಯು ಇತ್ತು. ಒ೦ದು ದಿನ ಅದಕ್ಕೆ ತಾನಾಗಿ ಸತ್ತ ಆನೆಯ ಹೆಣವೊಂದು ಸಿಕ್ಕಿತು. ಅದು ಆ ಹೆಣದ ಸುತ್ತಲೂ ತಿರುಗಿ ನೋಡಿತು. ಆನೆಯ ಚರ್ಮವನ್ನು ಕತ್ತರಿಸುವುದಕ್ಕೆ ಅದರ ಕೈಯಲ್ಲಾಗದು. ಆದರೂ ಅದನ್ನು ತಿನ್ನಬೇಕೆಂಬ ಆಸೆ ಬಿಡಲೊಲ್ಲದು.
ಹೀಗೆ ಅದು ಅಲ್ಲಿಯೇ ಒದ್ದಾಡುತ್ತಿರುವಾಗ ಸಿಂಹವೊಂದು ಅತ್ತಕಡೆ ಬಂತು. ಆ ಮೃಗರಾಜನನ್ನು ಕಂಡು ನೆಲದ ಮಲಗಿ ನಮಸ್ಕರಿಸಿ, ಎದ್ದು ಕೈ ಮುಗಿದು ವಿನಯದಿಂದ ಹೇಳಿತು: “ಒಡೆಯ, ತಮ್ಮ ಪಾದದ ಸೇವಕನು ನಾನು” ತಾವು ಬಂದೀರಿ ಎಂದು ಈ ಆನೆಯನ್ನು ರಕ್ಷಿಸಿಕೊಂಡಿದ್ದೆನು. ಇದನ್ನು ದೇವರು ಒಪ್ಪಿಸಿಕೊಳ್ಳಬೇಕು” ಎಂದು ಮತ್ತೆ ಕೈ ಮುಗಿಯಿತು. ಹಾಗೆ ವಿನಯದಿಂದ ಹೇಳಿದ ನರಿಯನ್ನು ನೋಡಿ “ಎಲಾ, ನಾನು ಇನ್ನೊಬ್ಬರು ಹೊಡೆದ ಬೇಟೆಯನ್ನು ಯಾವಾಗಲೂ ತಿನ್ನುವವನಲ್ಲ. ಕೇಳಿಲ್ಲವೇ?
ಸಿಂಹವು ಮಾಂಸವ ತಿನ್ನುವ ಜಂತು ॥ 
ಹಸಿದರು ಹುಲ್ಲನು ತಿನ್ನುವುದಿಲ್ಲ ॥ 
ಒಳ್ಳೆಯಕುಲದವಗಾಪದ ಬಂದರು | 
ನೀತಿಯ ಮಾರ್ಗವ ಬಿಡುವುದೆ ಇಲ್ಲ ॥ ೨೯ ॥
ಅದರಿಂದ ಈ ಆನೆಯನ್ನು “ನೀನೇ ಪ್ರಸಾದವಾಗಿ ತೆಗೆದುಕೋ” ಎಂದ್ದು ಹೇಳಿತು. ನರಿಯು “ಒಡೆಯನು ಸೇವಕರಲ್ಲಿ ಯಾವಾಗಲೂ ಹೀಗೆಯೇ! ದೊಡ್ಡವರು ಎಂದಿಗೂ ತಮ್ಮ ದೊಡ್ಡ ಗುಣಗಳನ್ನು ಬಿಡುವುದಿಲ್ಲ. ಶಂಖವನ್ನು ಬೆಂಕಿಗೆ ಹಾಕಿ ಸುಟ್ಟರೆ ತಾನೇ ಕಪ್ಪಾದೀತೇ” ಎಂದು ಹೊಗಳಿತು. ಸಿಂಹವು ಪ್ರಸನ್ನವಾಗಿ ಹೊರಟು ಹೋಯಿತು.
ಅದು ಅತ್ತ ಹೋದಮೇಲೆ ಹುಲಿಯು ಬಂತು. ಆದನ್ನು ಕಂಡು ನರಿಯು ಯೋಚಿಸಿತು: “ಭಾರಿಯ ಭೂತವೊಂದನ್ನು ನಮಸ್ಕಾರ ಮಾಡಿ ಕಳುಹಿಸಿಯಾಯಿತು. ಅದು ಹೋಯಿತು  ಎನ್ನುವುದರೊಳಗಾಗಿ ಇನ್ನೊಂದು ಬಂತಲ್ಲಾ! ಇದನ್ನು ತಪ್ಪಿಸುವುದೆಂತು? ಇದು ಶೂರನು. ಇದರಲ್ಲಿ ಭೇದೋಪಾಯ ಬಿಟ್ಟರೆ ಇನ್ನು ಯಾವುದೂ ಸಿದ್ಧಿಸುವುದಿಲ್ಲ. ಎಂತಹ ಸರ್ವಗುಣಸಂಪನ್ನನಾದರೂ ಭೇದಕ್ಕೆ ಸಿಕ್ಕಿಹೋಗುವನು. ಗುಂಡು ಗುಂಡಗೆ ಕಲ್ಲಿನ ಹಾಗೆ ಗಟ್ಟಿಯಾಗಿರುವ ಮುತ್ತನ್ನು ಕೂಡಾ ಕೊರೆದು ಮಾಲೆ ಮಾಡುವುದಿಲ್ಲವೆ? ಇರಲಿ,” ಎಂದುಕೊಂಡು ಗರ್ವದಿಂದ ತಲಯೆತ್ತಿಕೊಂಡು ನಿಂತು – “ಏನು ಮಾವ, ಬೇಕೆಂದು ಸಾವನ್ನು ಹುಡುಕಿ ಕೊಂಡು ಬಂದೆಯಾ? ಈ ಆನೆಯನ್ನು ಹೊಡೆದುರುಳಿಸಿ ಸಿಂಹವು ಮಿಂದು ಬರುವೆನೆಂದು ನದಿಗೆ ಹೋಗಿದೆ. ಹೋಗುವಾಗ ನನ್ನನ್ನು ಕರೆದು, “ಹುಲಿಯೇನಾದರೂ ಬಂದರೆ ನನಗೆ ಗುಟ್ಟಾಗಿ ಬಂದು ಹೇಳು. ಹಿಂದೆ ನಾನು ಹೊಡೆದ ಆನೆಯನ್ನು ಒಂದು ಹುಲಿ ತಿಂದು ಬಿಟ್ಟಿತು. ಅಂದಿನಿಂದ ನನಗೆ ಹುಲಿಗಳ ಮೇಲೆ ವೈರ ಬಂದಿದೆ. ಈ ವನದಲ್ಲಿರುವ ಹುಲಿಗಳನ್ನೆಲ್ಲ ಧ್ವಂಸ ಮಾಡಬೇಕು ಎಂದಿದ್ದಾನೆ. ಈ ಕಾಡಿನಲ್ಲಿ ಹುಲಿಗಳೇ ಇರಕೂಡದು ಎಂದು ಹೇಳಿ ಹೋಗಿದೆ:” ಎಂದಿತು. ಹುಲಿಗೆ ಹೆದರಿಕೆಯಾಗಿ, “ತಮ್ಮ, ನನ್ನನ್ನು ಉಳಿಸು, ನಾನು ಬಂದಿದ್ದೆನೆಂದೂ ಸಿಂಹಕ್ಕೆ ಹೇಳಬೇಡ.” ಎಂದು ಕಾಲಿಗೆ ಬುದ್ಧಿ ಹೇಳಿತು.
ಅದು ಹೋದಮೇಲೆ ಒಂದು ಚಿರತೆ ಬಂತು. “ಪಟ್ಟೆಯವನು ಹೋದ ಚುಕ್ಕಿಯವನು ಬಂದ. ಇದಕ್ಕೂ ಹಲ್ಲು ಗಟ್ಟಿ. ಇದರಿಂದ ಈ ಆನೆಯ ಚರ್ಮ ಕತ್ತರಿಸಬೇಕು. ಇದಕ್ಕೊಂದು ಉಪಾಯ ಮಾಡುವೆನು” ಎಂದು ಅದರ ಹತ್ತಿರ ಹೋಗಿ ಹೇಳಿತು: “ಭಾವ, ನಿನ್ನನ್ನು ನೋಡಿ ಬಹಳ ದಿನವಾಯಿತು. ಏಕೆ ಮುಖ ಒಣಗಿಸಿಕೊಂಡಿದ್ದೀಯೆ? ಹಸಿದಿದ್ದೀಯೇನು? ಹಾಗಾದರೆ ಬಾ, ನನ್ನ ಅತಿಥಿಯಾಗಿರು. ಈ ಆನೆಯನ್ನು ಸಿಂಹವು ಕೆಡವಿದೆ. ನಾನೇ ಇದಕ್ಕೆ ಕಾವಲು. ‘ಸಿಂಹವು ಬರುವುದರೊಳಗಾಗಿ ನೀನು ತೃಪ್ತಿಯಾಗಿ ತಿಂದು ಹೋಗು?’ ಎಂದಿತು. ಅದು “ಭಾವ, ಈ ಸಿಂಹದ ಊಟವು ನನಗೆ ಬೇಡ. “ಬದುಕಿದ್ದರೆ ಭದ್ರ ಬರದೇ ಹೋದೀತೆ?” ಕೇಳಿಲ್ಲವೆ?
ನುಂಗುವಷ್ಟು ಕಚ್ಚಿಕೋ | ಅರಗುವಷ್ಟು ತಿಂದುಕೋ | 
ಬದುಕಬೇಕು ಎಂದರೆ | ಕೊನೆಗೆ ಅಹುದ ನೋಡಿಕೋ ॥ ೩೦ ॥ 
ಅದರಿಂದ, ನಾನು ಇನ್ನೆಲ್ಲಿಯಾದರೂ ಹೋಗುವೆನು.” ಎ೦ದಿತು.
ನರಿಯು ನಕ್ಕು ಹೇಳಿತು: “ಭಾವ, ನೀನೆಲ್ಲೋ ಹೇಡಿ ಸುಖವಾಗಿ ಊಟಮಾಡು. ನಾನು ದೂರದಲ್ಲಿ ನಿಂತು ನೋಡಿ ಕೂಂಡಿರುತ್ತೇನೆ. ಸಿಂಹವು ಇನ್ನೂ ದೂರದಲ್ಲಿ ಬರುತ್ತಿರುವಾಗಲೇ
ಹೇಳುತ್ತೇನೆ” ಎಂದು ಅದನ್ನು ಒಪ್ಪಿಸಿತು. ಅದು ಆಗಲೆಂದು ಆನೆಯನ್ನು ತಿನ್ನಲು ಮೊದಲು ಮಾಡಿತು. ಅದು ಚರ್ಮವನ್ನು ಕತ್ತರಿಸಿದೆಯೆಂದು ನಂಬಿಕೆಯಾದಮೇಲೆ, ದೂರದಲಿದ್ದ ನರಿಯು ಸಿಳ್ಳುಹಾಕಿ, ಕಣ್ಣುಹಾರಿಸಿ “ಬಂತು ಬಂತು” ಎಂದಿತು. ಅದನ್ನು ಕೇಳಿ ಚಿರತೆಯು ನೆಗೆದು ಹಾರಿ ಓಡಿತು.
ಆ ಮೇಲೆ ನರಿಯು ಬಂದು ಚಿರತೆಯು ಕೊರದಿದ್ದ ತೂತಿನಿಂದ ಮಾಂಸವನ್ನು ಎಳೆದು ತಿನ್ನುತ್ತಿದ್ದಾಗ ಇನ್ನೊಂದು ನರಿಯು ಬಂತು. ಅದನ್ನು ಕಂಡು, “ಸಮಶಕ್ತಿಯಿದು. ಇದನ್ನು ಪರಾಕ್ರಮದಿಂದಲೇ ಗೆಲ್ಲಬೇಕು.” ಎಂದು ನಿಶ್ಚಯಿಸಿಕೊಂಡು ಅದರ ಮೇಲೆ ಯುದ್ಧಕ್ಕೆ
ಹೋಯಿತು: ಅದರ ಮೇಲೆ ಬಿದ್ದು ಕಚ್ಚಿ ಗಾಯಮಾಡಿ ಓಡಿಸಿ ಬಂದು ಆನೆಯನ್ನು ತಿಂದುಕೊಂಡು ಸುಖವಾಗಿತ್ತು.
ನೀನೂ ಅದರಂತೆಯೇ ನಿನ್ನ ಜಾತಿಯವನಾದ ಹಗೆಯನ್ನು ಯುದ್ಧ ಮಾಡಿ ಸೋಲಿಸು. ಇಲ್ಲದಿದ್ದರೆ, ಅದೇ ನಿನ್ನನ್ನು ಹಾಳು ಮಾಡುವುದು, ಕೇಳಿಲ್ಲವೆ ?
ಹಸುವಿನಿಂದ ಹಾಲು ಮೊಸರು| ಜಪವು ತಪವು ಪಾರ್ವನಲ್ಲಿ ॥ 
ಹೆಣ್ಣಿನಲ್ಲಿ ಡಪಲತನವು | ಸ್ವಕುಲದಿಂದ ಭಯವು ತಪ್ಪದು ॥೩೧॥ 
ಮೊಸಳೆಯು:  ಅದು ಹೇಗೆ? ಸ್ವಕುಲದಿಂದ ಭಯವೆನ್ನುವುದು ಹೇಗೆ?” ಎನ್ನಲು, ಕಪಿಯು ಹೇಳತು:-
*****
ಚಿತ್ರಾಂಗನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...