Home / ಬಾಲ ಚಿಲುಮೆ / ಕಥೆ / ಮಹಾ ಚತುರಕನ ಕಥೆ

ಮಹಾ ಚತುರಕನ ಕಥೆ

ಒಂದಾನೊಂದು ಕಾಡಿನಲ್ಲಿ ಮಹಾಚತುರಕನೆಂಬ ನರಿಯು ಇತ್ತು. ಒ೦ದು ದಿನ ಅದಕ್ಕೆ ತಾನಾಗಿ ಸತ್ತ ಆನೆಯ ಹೆಣವೊಂದು ಸಿಕ್ಕಿತು. ಅದು ಆ ಹೆಣದ ಸುತ್ತಲೂ ತಿರುಗಿ ನೋಡಿತು. ಆನೆಯ ಚರ್ಮವನ್ನು ಕತ್ತರಿಸುವುದಕ್ಕೆ ಅದರ ಕೈಯಲ್ಲಾಗದು. ಆದರೂ ಅದನ್ನು ತಿನ್ನಬೇಕೆಂಬ ಆಸೆ ಬಿಡಲೊಲ್ಲದು.
ಹೀಗೆ ಅದು ಅಲ್ಲಿಯೇ ಒದ್ದಾಡುತ್ತಿರುವಾಗ ಸಿಂಹವೊಂದು ಅತ್ತಕಡೆ ಬಂತು. ಆ ಮೃಗರಾಜನನ್ನು ಕಂಡು ನೆಲದ ಮಲಗಿ ನಮಸ್ಕರಿಸಿ, ಎದ್ದು ಕೈ ಮುಗಿದು ವಿನಯದಿಂದ ಹೇಳಿತು: “ಒಡೆಯ, ತಮ್ಮ ಪಾದದ ಸೇವಕನು ನಾನು” ತಾವು ಬಂದೀರಿ ಎಂದು ಈ ಆನೆಯನ್ನು ರಕ್ಷಿಸಿಕೊಂಡಿದ್ದೆನು. ಇದನ್ನು ದೇವರು ಒಪ್ಪಿಸಿಕೊಳ್ಳಬೇಕು” ಎಂದು ಮತ್ತೆ ಕೈ ಮುಗಿಯಿತು. ಹಾಗೆ ವಿನಯದಿಂದ ಹೇಳಿದ ನರಿಯನ್ನು ನೋಡಿ “ಎಲಾ, ನಾನು ಇನ್ನೊಬ್ಬರು ಹೊಡೆದ ಬೇಟೆಯನ್ನು ಯಾವಾಗಲೂ ತಿನ್ನುವವನಲ್ಲ. ಕೇಳಿಲ್ಲವೇ?
ಸಿಂಹವು ಮಾಂಸವ ತಿನ್ನುವ ಜಂತು ॥ 
ಹಸಿದರು ಹುಲ್ಲನು ತಿನ್ನುವುದಿಲ್ಲ ॥ 
ಒಳ್ಳೆಯಕುಲದವಗಾಪದ ಬಂದರು | 
ನೀತಿಯ ಮಾರ್ಗವ ಬಿಡುವುದೆ ಇಲ್ಲ ॥ ೨೯ ॥
ಅದರಿಂದ ಈ ಆನೆಯನ್ನು “ನೀನೇ ಪ್ರಸಾದವಾಗಿ ತೆಗೆದುಕೋ” ಎಂದ್ದು ಹೇಳಿತು. ನರಿಯು “ಒಡೆಯನು ಸೇವಕರಲ್ಲಿ ಯಾವಾಗಲೂ ಹೀಗೆಯೇ! ದೊಡ್ಡವರು ಎಂದಿಗೂ ತಮ್ಮ ದೊಡ್ಡ ಗುಣಗಳನ್ನು ಬಿಡುವುದಿಲ್ಲ. ಶಂಖವನ್ನು ಬೆಂಕಿಗೆ ಹಾಕಿ ಸುಟ್ಟರೆ ತಾನೇ ಕಪ್ಪಾದೀತೇ” ಎಂದು ಹೊಗಳಿತು. ಸಿಂಹವು ಪ್ರಸನ್ನವಾಗಿ ಹೊರಟು ಹೋಯಿತು.
ಅದು ಅತ್ತ ಹೋದಮೇಲೆ ಹುಲಿಯು ಬಂತು. ಆದನ್ನು ಕಂಡು ನರಿಯು ಯೋಚಿಸಿತು: “ಭಾರಿಯ ಭೂತವೊಂದನ್ನು ನಮಸ್ಕಾರ ಮಾಡಿ ಕಳುಹಿಸಿಯಾಯಿತು. ಅದು ಹೋಯಿತು  ಎನ್ನುವುದರೊಳಗಾಗಿ ಇನ್ನೊಂದು ಬಂತಲ್ಲಾ! ಇದನ್ನು ತಪ್ಪಿಸುವುದೆಂತು? ಇದು ಶೂರನು. ಇದರಲ್ಲಿ ಭೇದೋಪಾಯ ಬಿಟ್ಟರೆ ಇನ್ನು ಯಾವುದೂ ಸಿದ್ಧಿಸುವುದಿಲ್ಲ. ಎಂತಹ ಸರ್ವಗುಣಸಂಪನ್ನನಾದರೂ ಭೇದಕ್ಕೆ ಸಿಕ್ಕಿಹೋಗುವನು. ಗುಂಡು ಗುಂಡಗೆ ಕಲ್ಲಿನ ಹಾಗೆ ಗಟ್ಟಿಯಾಗಿರುವ ಮುತ್ತನ್ನು ಕೂಡಾ ಕೊರೆದು ಮಾಲೆ ಮಾಡುವುದಿಲ್ಲವೆ? ಇರಲಿ,” ಎಂದುಕೊಂಡು ಗರ್ವದಿಂದ ತಲಯೆತ್ತಿಕೊಂಡು ನಿಂತು – “ಏನು ಮಾವ, ಬೇಕೆಂದು ಸಾವನ್ನು ಹುಡುಕಿ ಕೊಂಡು ಬಂದೆಯಾ? ಈ ಆನೆಯನ್ನು ಹೊಡೆದುರುಳಿಸಿ ಸಿಂಹವು ಮಿಂದು ಬರುವೆನೆಂದು ನದಿಗೆ ಹೋಗಿದೆ. ಹೋಗುವಾಗ ನನ್ನನ್ನು ಕರೆದು, “ಹುಲಿಯೇನಾದರೂ ಬಂದರೆ ನನಗೆ ಗುಟ್ಟಾಗಿ ಬಂದು ಹೇಳು. ಹಿಂದೆ ನಾನು ಹೊಡೆದ ಆನೆಯನ್ನು ಒಂದು ಹುಲಿ ತಿಂದು ಬಿಟ್ಟಿತು. ಅಂದಿನಿಂದ ನನಗೆ ಹುಲಿಗಳ ಮೇಲೆ ವೈರ ಬಂದಿದೆ. ಈ ವನದಲ್ಲಿರುವ ಹುಲಿಗಳನ್ನೆಲ್ಲ ಧ್ವಂಸ ಮಾಡಬೇಕು ಎಂದಿದ್ದಾನೆ. ಈ ಕಾಡಿನಲ್ಲಿ ಹುಲಿಗಳೇ ಇರಕೂಡದು ಎಂದು ಹೇಳಿ ಹೋಗಿದೆ:” ಎಂದಿತು. ಹುಲಿಗೆ ಹೆದರಿಕೆಯಾಗಿ, “ತಮ್ಮ, ನನ್ನನ್ನು ಉಳಿಸು, ನಾನು ಬಂದಿದ್ದೆನೆಂದೂ ಸಿಂಹಕ್ಕೆ ಹೇಳಬೇಡ.” ಎಂದು ಕಾಲಿಗೆ ಬುದ್ಧಿ ಹೇಳಿತು.
ಅದು ಹೋದಮೇಲೆ ಒಂದು ಚಿರತೆ ಬಂತು. “ಪಟ್ಟೆಯವನು ಹೋದ ಚುಕ್ಕಿಯವನು ಬಂದ. ಇದಕ್ಕೂ ಹಲ್ಲು ಗಟ್ಟಿ. ಇದರಿಂದ ಈ ಆನೆಯ ಚರ್ಮ ಕತ್ತರಿಸಬೇಕು. ಇದಕ್ಕೊಂದು ಉಪಾಯ ಮಾಡುವೆನು” ಎಂದು ಅದರ ಹತ್ತಿರ ಹೋಗಿ ಹೇಳಿತು: “ಭಾವ, ನಿನ್ನನ್ನು ನೋಡಿ ಬಹಳ ದಿನವಾಯಿತು. ಏಕೆ ಮುಖ ಒಣಗಿಸಿಕೊಂಡಿದ್ದೀಯೆ? ಹಸಿದಿದ್ದೀಯೇನು? ಹಾಗಾದರೆ ಬಾ, ನನ್ನ ಅತಿಥಿಯಾಗಿರು. ಈ ಆನೆಯನ್ನು ಸಿಂಹವು ಕೆಡವಿದೆ. ನಾನೇ ಇದಕ್ಕೆ ಕಾವಲು. ‘ಸಿಂಹವು ಬರುವುದರೊಳಗಾಗಿ ನೀನು ತೃಪ್ತಿಯಾಗಿ ತಿಂದು ಹೋಗು?’ ಎಂದಿತು. ಅದು “ಭಾವ, ಈ ಸಿಂಹದ ಊಟವು ನನಗೆ ಬೇಡ. “ಬದುಕಿದ್ದರೆ ಭದ್ರ ಬರದೇ ಹೋದೀತೆ?” ಕೇಳಿಲ್ಲವೆ?
ನುಂಗುವಷ್ಟು ಕಚ್ಚಿಕೋ | ಅರಗುವಷ್ಟು ತಿಂದುಕೋ | 
ಬದುಕಬೇಕು ಎಂದರೆ | ಕೊನೆಗೆ ಅಹುದ ನೋಡಿಕೋ ॥ ೩೦ ॥ 
ಅದರಿಂದ, ನಾನು ಇನ್ನೆಲ್ಲಿಯಾದರೂ ಹೋಗುವೆನು.” ಎ೦ದಿತು.
ನರಿಯು ನಕ್ಕು ಹೇಳಿತು: “ಭಾವ, ನೀನೆಲ್ಲೋ ಹೇಡಿ ಸುಖವಾಗಿ ಊಟಮಾಡು. ನಾನು ದೂರದಲ್ಲಿ ನಿಂತು ನೋಡಿ ಕೂಂಡಿರುತ್ತೇನೆ. ಸಿಂಹವು ಇನ್ನೂ ದೂರದಲ್ಲಿ ಬರುತ್ತಿರುವಾಗಲೇ
ಹೇಳುತ್ತೇನೆ” ಎಂದು ಅದನ್ನು ಒಪ್ಪಿಸಿತು. ಅದು ಆಗಲೆಂದು ಆನೆಯನ್ನು ತಿನ್ನಲು ಮೊದಲು ಮಾಡಿತು. ಅದು ಚರ್ಮವನ್ನು ಕತ್ತರಿಸಿದೆಯೆಂದು ನಂಬಿಕೆಯಾದಮೇಲೆ, ದೂರದಲಿದ್ದ ನರಿಯು ಸಿಳ್ಳುಹಾಕಿ, ಕಣ್ಣುಹಾರಿಸಿ “ಬಂತು ಬಂತು” ಎಂದಿತು. ಅದನ್ನು ಕೇಳಿ ಚಿರತೆಯು ನೆಗೆದು ಹಾರಿ ಓಡಿತು.
ಆ ಮೇಲೆ ನರಿಯು ಬಂದು ಚಿರತೆಯು ಕೊರದಿದ್ದ ತೂತಿನಿಂದ ಮಾಂಸವನ್ನು ಎಳೆದು ತಿನ್ನುತ್ತಿದ್ದಾಗ ಇನ್ನೊಂದು ನರಿಯು ಬಂತು. ಅದನ್ನು ಕಂಡು, “ಸಮಶಕ್ತಿಯಿದು. ಇದನ್ನು ಪರಾಕ್ರಮದಿಂದಲೇ ಗೆಲ್ಲಬೇಕು.” ಎಂದು ನಿಶ್ಚಯಿಸಿಕೊಂಡು ಅದರ ಮೇಲೆ ಯುದ್ಧಕ್ಕೆ
ಹೋಯಿತು: ಅದರ ಮೇಲೆ ಬಿದ್ದು ಕಚ್ಚಿ ಗಾಯಮಾಡಿ ಓಡಿಸಿ ಬಂದು ಆನೆಯನ್ನು ತಿಂದುಕೊಂಡು ಸುಖವಾಗಿತ್ತು.
ನೀನೂ ಅದರಂತೆಯೇ ನಿನ್ನ ಜಾತಿಯವನಾದ ಹಗೆಯನ್ನು ಯುದ್ಧ ಮಾಡಿ ಸೋಲಿಸು. ಇಲ್ಲದಿದ್ದರೆ, ಅದೇ ನಿನ್ನನ್ನು ಹಾಳು ಮಾಡುವುದು, ಕೇಳಿಲ್ಲವೆ ?
ಹಸುವಿನಿಂದ ಹಾಲು ಮೊಸರು| ಜಪವು ತಪವು ಪಾರ್ವನಲ್ಲಿ ॥ 
ಹೆಣ್ಣಿನಲ್ಲಿ ಡಪಲತನವು | ಸ್ವಕುಲದಿಂದ ಭಯವು ತಪ್ಪದು ॥೩೧॥ 
ಮೊಸಳೆಯು:  ಅದು ಹೇಗೆ? ಸ್ವಕುಲದಿಂದ ಭಯವೆನ್ನುವುದು ಹೇಗೆ?” ಎನ್ನಲು, ಕಪಿಯು ಹೇಳತು:-
*****
ಚಿತ್ರಾಂಗನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...