Home / ಲೇಖನ / ಹಾಸ್ಯ / ಅಯ್ಯೋ! ಇಲ್ಲೇ ಇದೆಯಲ್ಲಾ ಹಾಸನ ಬಸ್ ಸ್ಟ್ಯಾಂಡ್

ಅಯ್ಯೋ! ಇಲ್ಲೇ ಇದೆಯಲ್ಲಾ ಹಾಸನ ಬಸ್ ಸ್ಟ್ಯಾಂಡ್

೧೯೭೫ ನೇ ಇಸವಿ, ನವೆಂಬರ್ ೭ನೇ ತಾರೀಖು ತಾಳಿಕೋಟೆ ಯಿಂದ ಬಸ್ ಹತ್ತಿ ೮ನೇ ತಾರೀಖು ಇಂದಿನ ಹಾಸನದ ಹಳೆ ಬಸ್ ಸ್ಟಾಂಡ್ ನಲ್ಲಿ ಇಳಿದು. ಹಳೆ ಬಸ್ ಸ್ಟಾಂಡ್ ಅರ್‍ಧ ಮಾತ್ರ ಕಟ್ಟಲಾಗಿದ್ದು, ಇನ್ನರ್ಧ ಹುಲ್ಲು ಬೆಳೆ ಕೊಳಚೆಯ ಪ್ರದೇಶವಾಗಿತ್ತು. ಮಾತ್ರವಲ್ಲ ಎಲ್ಲಿ ಅಕ್ಕಪಕ್ಕದ ಮನೆ ಕೆಲವು ಜನಗಳು ಅಲ್ಲಿಯೇ ಪಾಯಿಖಾನೆಯನ್ನು ಮಾಡುತ್ತಿದ್ದರು. ನಾನೋ.. ಮೊದಲಿನಂತೆ ಪಂಚೆ ಹಾಕಿಕೊಂಡು, ಜುಬ್ಬ ಧರಿಸಿಕೊಂಡು, ತಲೆ ಮೇಲೆ ಟೊಪಿಗೆಯನ್ನು ಇಟ್ಟುಕೊಂಡು ಬಂದಿದ್ದೆ. ಜೊತೆಗೆ ಮೊದಲಿನಿಂದಲೂ ಬಳಸ್ತ ಇದ್ದ ಪುಸ್ತಕ, ಬಟ್ಟೆ ಬರವೆ ಇದ್ದ ಟ್ರಂಕ್‍ನ್ನು ಕೈಯಲ್ಲಿ ಹಿಡಿದುಕೊಂಡು ಮಾಸಲು ಬಟ್ಟೆಯಲ್ಲಿ ಸುಸ್ತಾದ ಮುಖದೊಂದಿಗೆ ಬಸ್‍ಸ್ಟಾಂಡ್ನ ಮೇಲಕ್ಕೆ ಬಂದೆ.

ಅಲ್ಲಿ ಹತ್ತಾರು ಆಟೋಗಳು ನಿಂತಿದ್ದು, ಚಾಲಕರು ನನ್ನನ್ನು ಉತ್ತರಕರ್ನಾಟಕದ ಯಾವುದೋ ಹಳ್ಳಿಯ ಗಮಾರ್‌ನೆಂದು ತಿಳಿದುಕೊಂಡು “ಏ ಬಾರಯ್ಯ…. ಬಾ… ಬಾ.. ನನ್ನಾಟೋ ಇದೆ.. ನನ್ನಾಟೋ ಇದೆ” ಎಂದು ಕರೆಯಲಾರಂಭಿಸಿದರು. ಸಂಭಾವಿತ ನಂತೆ ಕಂಡ ಒಬ್ಬ ಆಟೋ ಚಾಲಕನ ಆಟೋ ಹತ್ತಿದ, ಆಟೋ ಹತ್ತಿದ್ದು ಕೂಡ ನನಗೆ ಹೊಸ ಅನುಭವವಾಗಿತ್ತು. ಆಟೋದವನಿಗೆ ಅಡ್ರೆಸ್‍ನ ಚೀಟಿ ತೋರಿಸಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ ವನ್ನು ಹುಡುಕುತ್ತಾ, ಸರ್ಕಾರಿ ಕಲಾ ಕಾಲೇಜಿನತ್ತ ಹೋದ. ಅಲ್ಲಿ ಇಳಿದು ಕೇಳಿದಾಗ, “ಅಲ್ಲೆ ಇತ್ತಲ್ಲಾ… ನೀವು ತಣ್ಣೀರುಹಳ್ಳದ ದಿಕ್ಕಿನಡೆ ಹೋಗಿ” ಅಂದರು. ಅಲ್ಲಿಂದ ಹೊಸ ಲೈನ್ ರಸ್ತೆ ಮಾರ್‍ಗವಾಗಿ ತಣ್ಣೀರಹಳಕ್ಕೆ ನನ್ನನ್ನು ಕರೆದು ಕೊಂಡು ಬಂದ. ಅಲ್ಲಿ ಇಳಿದು, ಜಿಲ್ಲಾ ಕೇಂದ್ರ ಗ್ರಂಥಾಲಯ ಎಲ್ಲಿದೆ? ಎಂದು ಯಾರನ್ನೋ ಕೇಳಿದ. ನಾನು ಕಣ್ಣರಳಿಸದೆ.. ಮೂಕನಾಗಿ ಇದನ್ನೆಲ್ಲಾ ಪಿಕಪಿಕನೆಂದು ನೋಡುತ್ತಾ ಕುಳಿತಿದ್ದೆ. “ಏನಪ್ಪಾ… ಅಲ್ಲೇ ಬಿಟ್ಟುಬಂದ್ಯಲ್ಲೋ.. ಜಿಲ್ಲಾ ಕೇಂದ್ರ ಗ್ರಂಥಾಲಯ ಜೂಬ್ಲಿ ಮೈದಾನದಲ್ಲಿದ್ಯಲ್ಲೋ.. ಅಲ್ಲಿಗೆ ಹೋಗು” ಎಂದು ಧಬಾಯಿಸಿದ.

ಜೂಬ್ಲಿ ಮೈದಾನದ ಪರಿಚಯ ಇಲ್ಲದ ಆಟೋದವನು ಜೂಬ್ಲಿ ಮೈದಾನ ಕೇಳುತ್ತಾ, ಕೇಳುತ್ತಾ, ಸಂತ ಫಿಲೋಮಿನಾ ಶಾಲೆ ಹತ್ತಿರ ಬಂದು ಸುಸ್ತಾಗಿ ಇಳಿದು ನಿಂತ. ಅಲ್ಲಿ ತಿರುಗಾಡುತ್ತಾ ನಿಂತಿದ್ದ ಒಬ್ಬ ಪೊಲೀಸ್ ಹತ್ತಿರಕ್ಕೆ ಬಂದಾಗ “ಸಾರ್ ಜೂಬ್ಲಿ ಮೈದಾನ ಎಲ್ಲಿದೆ?” ಎಂದು ಆಟೊದವ ಕೇಳಿದ. “ಎಂಥಾ ದಡ್ಡ ಶಿಖಾಮಣಿನೋ ನೀನು, ಯಾರು ನಿಂಗೆ ಆಟೋಟ್ರೈನಿಂಗ್ ಕೊಟ್ರು? ಬಸ್‌ಸ್ಟಾಂಡ್ ಪಕ್ಕದಲ್ಲೇ ಇದ್ಯಲ್ಲೋ ಬೂಬ್ಲಿ ಮೈದಾನ” ಎಂದು ಪೋಲೀಸ್‌ನವ ಧಬಾಯಿಸಿದ.

ಆಗ ಆಟೋವನ್ನು ತಿರುಗಿಸಿಕೊಂಡು, ನಾವು ಹತ್ತಿದ ಮೊದಲ ಸ್ಥಳದಲ್ಲೇ ಹಾಯ್ದು, ಇನ್ನೊಂದು ಸಲ ಮತ್ತೊಬ್ಬರಿಗೆ ಕೇಳಿದಾಗ ಅದೇ ನೋಡಿ ಜೂಬ್ಲಿ ಮೈದಾನ, ಅದೇ ಗ್ರಂಥಾಲಯ ಎಂದು ತೋರಿಸಿದರು. ಶಿವಾ… ಶಿವಾ ಎಂದು ನಾನು ಕೆಳಗಿಳಿದು ಸಮಯ ನೋಡಿದೆ.

೧೧ ಗಂಟೆಯಾಗಿತ್ತು. “ಏನ್ರಿ… ಎಷ್ಟು ಕಷ್ಟ ಕೊಟ್ಬಿಟ್ರಲ್ಲಾ ನನಗೆ? ಸುಮಾರು ಒಂದಿಪ್ಪತ್ತು ಕಿ.ಮೀ. ಸುತ್ತಾಕಿಸಿದ್ರಲ್ಲಾ?” ಎಂದು ಹಣ ಕೊಡಲು ಜೋಬಿಗೆ ಕೈಹಾಕಿ ಹತ್ತು ರೂಪಾಯಿ ಹೊರತೆಗೆದೆ. ಅದಕ್ಕೆ ಅವನು ತಿರಸ್ಕರಿಸುತ್ತ, ನನ್ನ ಮೇಲೆ ಆಕ್ರಮಣ ಮಾಡುವಂತೆ ವರ್ತಿಸುತ್ತ, “ನಿನ್ನ ಜೋಬಿನಲ್ಲಿರೋ ಹಣ ತೆಗಿ, ಎಷ್ಟಿದೆ ನೋಡೋಣ?” ಎಂದು ದಭಾಯಿಸಿದ. ನಾನು ಇನ್ನೂ ಒಂದು ತಿಂಗಳಿಗೆ ಕರ್‍ಚಿಗೆಂದು ನೂರೈವತ್ತು ರೂಪಾಯಿ ಇಟ್ಟಿದ್ದೀನಿ ಎಂದು ತೆಗೆದು ತೋರಿಸಿದೆ. ಅವರು ತಕ್ಷಣ ಕೈಯಲ್ಲಿದ್ದ ಎಲ್ಲಾ ಹಣವನ್ನು ಕಿತ್ತುಕೊಂಡು, ನೂರೈವತ್ತು ರೂಪಾಯಿ ಚಾರ್‍ಜಾಗಿದ. ಪಾಪ ಊರಿಗೆ ಹೊಸಬ ಎಂದು ಐದು ರೂಪಾಯಿ ವಾಪಾಸ್ಸು ಕೊಡ್ತೀನಿ ಎಂದು ಕೈಗಿತ್ತು “ಬರ್ರ್ಽಽಽಽ…” ಎಂದು ಹೋದ. ನಾನು ಇಂಗು ತಿಂದ ಮಂಗ ನಂತಾಗಿ ಅರಿಯದ ಊರೊಳಗೆ ಅನಾಥನಾಗಿದ್ದೆ. ಗಂಟಲಿನ ತೇವಾಂಶ ಆರಿ ಹೋಗಿತ್ತು. ಮಾತನಾಡಲು ಶಕ್ತಿ ಬರಲಿಲ್ಲ. ಬೇಸರದಿಂದ ಹೀಗೆ ತಿರುಗಿ ನೋಡಿದೆ. ಅಲ್ಲೆ ಮೂಲೆಯಲ್ಲಿ ನೂರು ಮೀಟರ್ ಅಂತರದಲ್ಲಿಯೇ ಬಸ್‍ಸ್ಟಾಂಡ್ ಇತ್ತು, ಆಟೋಗಳು ನಿಂತಿದ್ದವು.

ಆಟೋ ಚಾಲಕನಿಗೆ ಜೂಬ್ಲಿ ಮೈದಾನ ಎಲ್ಲಿದೆ ಎಂದು ಗೊತ್ತಿತ್ತು ಇಲ್ಲವೋ? ಬಲ್ಲವರಾರು? ಅಂತೂ ಕೊಂಕಣ ಸುತ್ತಿಸಿ, ಮೈಲಾರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದ. ನಾನು ಐದು ರೂಪಾಯಿಯನ್ನು ಕಿಸೆಯಲ್ಲಿರಿಸಿಕೊಂಡು, ಭಾರವಾದ ಹೆಜ್ಜೆ ಯೊಂದಿಗೆ ಟ್ರಂಕ್ ಹೊತ್ತುಕೊಂಡು ಜಿಲ್ಲಾ ಕೇಂದ್ರ ಗ್ರಂಥಾಲಯ ಕ್ಕೆ ಮೊದಲ ದಿನದ ಸೇವೆಗಾಗಿ ಡ್ಯೂಟಿ ರಿಪೋರ್‍ಟ್ ಮಾಡಿಕೊಂಡೆ.
*****

ಅನುಭವದಾರತಿಯ ಬೆಳಗಿ,
ಅಜ್ಞಾನದ ಕತ್ತಲೆಯ
ಓಡಿಸಬೇಕಯ್ಯ!
ಅನುಭವದಾರತಿಯ ಬೆಳಗಿ,
ಸುಳ್ಳು ಸೊಡರುಗಳನ್ನು
ಅಳಿಸಬೇಕಯ್ಯ!

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...