Home / ಲೇಖನ / ಹಾಸ್ಯ / ಅಯ್ಯೋ! ಇಲ್ಲೇ ಇದೆಯಲ್ಲಾ ಹಾಸನ ಬಸ್ ಸ್ಟ್ಯಾಂಡ್

ಅಯ್ಯೋ! ಇಲ್ಲೇ ಇದೆಯಲ್ಲಾ ಹಾಸನ ಬಸ್ ಸ್ಟ್ಯಾಂಡ್

೧೯೭೫ ನೇ ಇಸವಿ, ನವೆಂಬರ್ ೭ನೇ ತಾರೀಖು ತಾಳಿಕೋಟೆ ಯಿಂದ ಬಸ್ ಹತ್ತಿ ೮ನೇ ತಾರೀಖು ಇಂದಿನ ಹಾಸನದ ಹಳೆ ಬಸ್ ಸ್ಟಾಂಡ್ ನಲ್ಲಿ ಇಳಿದು. ಹಳೆ ಬಸ್ ಸ್ಟಾಂಡ್ ಅರ್‍ಧ ಮಾತ್ರ ಕಟ್ಟಲಾಗಿದ್ದು, ಇನ್ನರ್ಧ ಹುಲ್ಲು ಬೆಳೆ ಕೊಳಚೆಯ ಪ್ರದೇಶವಾಗಿತ್ತು. ಮಾತ್ರವಲ್ಲ ಎಲ್ಲಿ ಅಕ್ಕಪಕ್ಕದ ಮನೆ ಕೆಲವು ಜನಗಳು ಅಲ್ಲಿಯೇ ಪಾಯಿಖಾನೆಯನ್ನು ಮಾಡುತ್ತಿದ್ದರು. ನಾನೋ.. ಮೊದಲಿನಂತೆ ಪಂಚೆ ಹಾಕಿಕೊಂಡು, ಜುಬ್ಬ ಧರಿಸಿಕೊಂಡು, ತಲೆ ಮೇಲೆ ಟೊಪಿಗೆಯನ್ನು ಇಟ್ಟುಕೊಂಡು ಬಂದಿದ್ದೆ. ಜೊತೆಗೆ ಮೊದಲಿನಿಂದಲೂ ಬಳಸ್ತ ಇದ್ದ ಪುಸ್ತಕ, ಬಟ್ಟೆ ಬರವೆ ಇದ್ದ ಟ್ರಂಕ್‍ನ್ನು ಕೈಯಲ್ಲಿ ಹಿಡಿದುಕೊಂಡು ಮಾಸಲು ಬಟ್ಟೆಯಲ್ಲಿ ಸುಸ್ತಾದ ಮುಖದೊಂದಿಗೆ ಬಸ್‍ಸ್ಟಾಂಡ್ನ ಮೇಲಕ್ಕೆ ಬಂದೆ.

ಅಲ್ಲಿ ಹತ್ತಾರು ಆಟೋಗಳು ನಿಂತಿದ್ದು, ಚಾಲಕರು ನನ್ನನ್ನು ಉತ್ತರಕರ್ನಾಟಕದ ಯಾವುದೋ ಹಳ್ಳಿಯ ಗಮಾರ್‌ನೆಂದು ತಿಳಿದುಕೊಂಡು “ಏ ಬಾರಯ್ಯ…. ಬಾ… ಬಾ.. ನನ್ನಾಟೋ ಇದೆ.. ನನ್ನಾಟೋ ಇದೆ” ಎಂದು ಕರೆಯಲಾರಂಭಿಸಿದರು. ಸಂಭಾವಿತ ನಂತೆ ಕಂಡ ಒಬ್ಬ ಆಟೋ ಚಾಲಕನ ಆಟೋ ಹತ್ತಿದ, ಆಟೋ ಹತ್ತಿದ್ದು ಕೂಡ ನನಗೆ ಹೊಸ ಅನುಭವವಾಗಿತ್ತು. ಆಟೋದವನಿಗೆ ಅಡ್ರೆಸ್‍ನ ಚೀಟಿ ತೋರಿಸಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ ವನ್ನು ಹುಡುಕುತ್ತಾ, ಸರ್ಕಾರಿ ಕಲಾ ಕಾಲೇಜಿನತ್ತ ಹೋದ. ಅಲ್ಲಿ ಇಳಿದು ಕೇಳಿದಾಗ, “ಅಲ್ಲೆ ಇತ್ತಲ್ಲಾ… ನೀವು ತಣ್ಣೀರುಹಳ್ಳದ ದಿಕ್ಕಿನಡೆ ಹೋಗಿ” ಅಂದರು. ಅಲ್ಲಿಂದ ಹೊಸ ಲೈನ್ ರಸ್ತೆ ಮಾರ್‍ಗವಾಗಿ ತಣ್ಣೀರಹಳಕ್ಕೆ ನನ್ನನ್ನು ಕರೆದು ಕೊಂಡು ಬಂದ. ಅಲ್ಲಿ ಇಳಿದು, ಜಿಲ್ಲಾ ಕೇಂದ್ರ ಗ್ರಂಥಾಲಯ ಎಲ್ಲಿದೆ? ಎಂದು ಯಾರನ್ನೋ ಕೇಳಿದ. ನಾನು ಕಣ್ಣರಳಿಸದೆ.. ಮೂಕನಾಗಿ ಇದನ್ನೆಲ್ಲಾ ಪಿಕಪಿಕನೆಂದು ನೋಡುತ್ತಾ ಕುಳಿತಿದ್ದೆ. “ಏನಪ್ಪಾ… ಅಲ್ಲೇ ಬಿಟ್ಟುಬಂದ್ಯಲ್ಲೋ.. ಜಿಲ್ಲಾ ಕೇಂದ್ರ ಗ್ರಂಥಾಲಯ ಜೂಬ್ಲಿ ಮೈದಾನದಲ್ಲಿದ್ಯಲ್ಲೋ.. ಅಲ್ಲಿಗೆ ಹೋಗು” ಎಂದು ಧಬಾಯಿಸಿದ.

ಜೂಬ್ಲಿ ಮೈದಾನದ ಪರಿಚಯ ಇಲ್ಲದ ಆಟೋದವನು ಜೂಬ್ಲಿ ಮೈದಾನ ಕೇಳುತ್ತಾ, ಕೇಳುತ್ತಾ, ಸಂತ ಫಿಲೋಮಿನಾ ಶಾಲೆ ಹತ್ತಿರ ಬಂದು ಸುಸ್ತಾಗಿ ಇಳಿದು ನಿಂತ. ಅಲ್ಲಿ ತಿರುಗಾಡುತ್ತಾ ನಿಂತಿದ್ದ ಒಬ್ಬ ಪೊಲೀಸ್ ಹತ್ತಿರಕ್ಕೆ ಬಂದಾಗ “ಸಾರ್ ಜೂಬ್ಲಿ ಮೈದಾನ ಎಲ್ಲಿದೆ?” ಎಂದು ಆಟೊದವ ಕೇಳಿದ. “ಎಂಥಾ ದಡ್ಡ ಶಿಖಾಮಣಿನೋ ನೀನು, ಯಾರು ನಿಂಗೆ ಆಟೋಟ್ರೈನಿಂಗ್ ಕೊಟ್ರು? ಬಸ್‌ಸ್ಟಾಂಡ್ ಪಕ್ಕದಲ್ಲೇ ಇದ್ಯಲ್ಲೋ ಬೂಬ್ಲಿ ಮೈದಾನ” ಎಂದು ಪೋಲೀಸ್‌ನವ ಧಬಾಯಿಸಿದ.

ಆಗ ಆಟೋವನ್ನು ತಿರುಗಿಸಿಕೊಂಡು, ನಾವು ಹತ್ತಿದ ಮೊದಲ ಸ್ಥಳದಲ್ಲೇ ಹಾಯ್ದು, ಇನ್ನೊಂದು ಸಲ ಮತ್ತೊಬ್ಬರಿಗೆ ಕೇಳಿದಾಗ ಅದೇ ನೋಡಿ ಜೂಬ್ಲಿ ಮೈದಾನ, ಅದೇ ಗ್ರಂಥಾಲಯ ಎಂದು ತೋರಿಸಿದರು. ಶಿವಾ… ಶಿವಾ ಎಂದು ನಾನು ಕೆಳಗಿಳಿದು ಸಮಯ ನೋಡಿದೆ.

೧೧ ಗಂಟೆಯಾಗಿತ್ತು. “ಏನ್ರಿ… ಎಷ್ಟು ಕಷ್ಟ ಕೊಟ್ಬಿಟ್ರಲ್ಲಾ ನನಗೆ? ಸುಮಾರು ಒಂದಿಪ್ಪತ್ತು ಕಿ.ಮೀ. ಸುತ್ತಾಕಿಸಿದ್ರಲ್ಲಾ?” ಎಂದು ಹಣ ಕೊಡಲು ಜೋಬಿಗೆ ಕೈಹಾಕಿ ಹತ್ತು ರೂಪಾಯಿ ಹೊರತೆಗೆದೆ. ಅದಕ್ಕೆ ಅವನು ತಿರಸ್ಕರಿಸುತ್ತ, ನನ್ನ ಮೇಲೆ ಆಕ್ರಮಣ ಮಾಡುವಂತೆ ವರ್ತಿಸುತ್ತ, “ನಿನ್ನ ಜೋಬಿನಲ್ಲಿರೋ ಹಣ ತೆಗಿ, ಎಷ್ಟಿದೆ ನೋಡೋಣ?” ಎಂದು ದಭಾಯಿಸಿದ. ನಾನು ಇನ್ನೂ ಒಂದು ತಿಂಗಳಿಗೆ ಕರ್‍ಚಿಗೆಂದು ನೂರೈವತ್ತು ರೂಪಾಯಿ ಇಟ್ಟಿದ್ದೀನಿ ಎಂದು ತೆಗೆದು ತೋರಿಸಿದೆ. ಅವರು ತಕ್ಷಣ ಕೈಯಲ್ಲಿದ್ದ ಎಲ್ಲಾ ಹಣವನ್ನು ಕಿತ್ತುಕೊಂಡು, ನೂರೈವತ್ತು ರೂಪಾಯಿ ಚಾರ್‍ಜಾಗಿದ. ಪಾಪ ಊರಿಗೆ ಹೊಸಬ ಎಂದು ಐದು ರೂಪಾಯಿ ವಾಪಾಸ್ಸು ಕೊಡ್ತೀನಿ ಎಂದು ಕೈಗಿತ್ತು “ಬರ್ರ್ಽಽಽಽ…” ಎಂದು ಹೋದ. ನಾನು ಇಂಗು ತಿಂದ ಮಂಗ ನಂತಾಗಿ ಅರಿಯದ ಊರೊಳಗೆ ಅನಾಥನಾಗಿದ್ದೆ. ಗಂಟಲಿನ ತೇವಾಂಶ ಆರಿ ಹೋಗಿತ್ತು. ಮಾತನಾಡಲು ಶಕ್ತಿ ಬರಲಿಲ್ಲ. ಬೇಸರದಿಂದ ಹೀಗೆ ತಿರುಗಿ ನೋಡಿದೆ. ಅಲ್ಲೆ ಮೂಲೆಯಲ್ಲಿ ನೂರು ಮೀಟರ್ ಅಂತರದಲ್ಲಿಯೇ ಬಸ್‍ಸ್ಟಾಂಡ್ ಇತ್ತು, ಆಟೋಗಳು ನಿಂತಿದ್ದವು.

ಆಟೋ ಚಾಲಕನಿಗೆ ಜೂಬ್ಲಿ ಮೈದಾನ ಎಲ್ಲಿದೆ ಎಂದು ಗೊತ್ತಿತ್ತು ಇಲ್ಲವೋ? ಬಲ್ಲವರಾರು? ಅಂತೂ ಕೊಂಕಣ ಸುತ್ತಿಸಿ, ಮೈಲಾರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದ. ನಾನು ಐದು ರೂಪಾಯಿಯನ್ನು ಕಿಸೆಯಲ್ಲಿರಿಸಿಕೊಂಡು, ಭಾರವಾದ ಹೆಜ್ಜೆ ಯೊಂದಿಗೆ ಟ್ರಂಕ್ ಹೊತ್ತುಕೊಂಡು ಜಿಲ್ಲಾ ಕೇಂದ್ರ ಗ್ರಂಥಾಲಯ ಕ್ಕೆ ಮೊದಲ ದಿನದ ಸೇವೆಗಾಗಿ ಡ್ಯೂಟಿ ರಿಪೋರ್‍ಟ್ ಮಾಡಿಕೊಂಡೆ.
*****

ಅನುಭವದಾರತಿಯ ಬೆಳಗಿ,
ಅಜ್ಞಾನದ ಕತ್ತಲೆಯ
ಓಡಿಸಬೇಕಯ್ಯ!
ಅನುಭವದಾರತಿಯ ಬೆಳಗಿ,
ಸುಳ್ಳು ಸೊಡರುಗಳನ್ನು
ಅಳಿಸಬೇಕಯ್ಯ!

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...