“ತಂದೆ ತಾಯಿ, ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಏಕೆ”? ಎಂದು ಶಿಷ್ಯ ಗುರುಗಳಲ್ಲಿ ಕೇಳಿದ.
“ಅದು ಚೈತನ್ಯದ ಹಬ್ಬ. ಚೈತನ್ಯದ ಬೆಳವಣಿಗೆ, ವೃದ್ಧಿ ಇದರ ಸಂತೋಷವೇ ಹುಟ್ಟು ಹಬ್ಬ” ಎಂದರು ಗುರುಗಳು.
“ಅದು ಸಾವಿನಲ್ಲಿ ಕೊನೆ ಮುಟ್ಟುವುದಲ್ಲವೇ?” ಗುರುವೆ
“ಹುಟ್ಟಿಗೆ ಕೊಂಡಿ ಸಾವು. ಸಾವಿನ ಗಿಂಡಿ ಹುಟ್ಟು, ಚೈತನ್ಯಕ್ಕೆ ಸಾವಿಲ್ಲ ಅದು ಎಡವುದಿಲ್ಲ. ಬೀಳುವುದಿಲ್ಲ, ಮೃತ್ಯು ಶಯ್ಯೆಯಲ್ಲಿ ಮಲಗುವುದಿಲ್ಲ. ಚೈತನ್ಯ ಒಂದು ನಿರಂತರ ಪ್ರವಾಹ. ಅದೊಂದು ಅವಿರತ ಜೀವನದಿ. ಬತ್ತದ ಸಾಗರ, ಚೈತನ್ಯಕ್ಕೆ ಕೊಡಬೇಕಾದದ್ದು ಅಮರತ್ವದ ಪಟ್ಟ ಸಾವಿನ ಪಟ್ಟವಲ್ಲ” ಎಂದರು ಗುರುಗಳು.
“ಇದು ನಿಸರ್ಗದ ನಿಯಮವೇ ಗುರುಗಳೇ?”
“ಅಹುದು ಶಿಷ್ಯ! ಹೂವನ್ನು ನೋಡು, ಗಿಡವನ್ನು ನೋಡು, ನದಿ, ಜಲಪಾತ ಎಲ್ಲದರಲ್ಲೂ ಚೈತನ್ಯದ ಪ್ರವಾಹವಿದೆ. ಒಮ್ಮೆ ಎಲ್ಲೋ ಸಮಾಪ್ತಗೊಂಡಂತೆ ಅನಿಸಿದರು ಅದು ಮತ್ತೆ ಸಮಾವೇಶಗೊಂಡು ಮತ್ತೊಮ್ಮೆ ಎಲ್ಲೊ ಪ್ರಾದುರ್ಭವಿಸುತ್ತದೆ. ಹೂವು ಅರಳಿ ಪರಿಮಳ ಸೂಸಿ, ಬೀಜವಾಗಿ ಉದರಿ ಮತ್ತೆ ಗಿಡವಾಗಿ ಹೂ ಬಿಟ್ಟು, ಅರಳುತ್ತದೆ. ಗಂಧವಾಗುತ್ತದೆ. ಇದೊಂದು ಚೈತನ್ಯದ ಸಕ್ರಿಯ ವೃತ್ತಿ, ಚೈತನ್ಯ ನಾನಾ ರೂಪದಲ್ಲಿ ಊರ್ಧವಗಾಮಿಯಾಗಿ ಮುನ್ನಡೆಯುತ್ತದೆ.
“ಹಾಗಾದರೆ ಸಾವಿನಾಚರಣೆಯಲ್ಲಿ ನಾವು ಮಾಡುವುದೇನು ಗುರುಗಳೇ?”
“ಅದು ಸೇತುವೆ ಮೇಲೆ ಕಾಲಿಟ್ಟ ಹೆಜ್ಜೆಯಂತೆ, ದೇಹದಿಂದ ದೇಹಾತೀತಕ್ಕೆ, ಜ್ವಲಿತದಿಂದ ಉಜ್ವಲಕ್ಕೆ, ಅಂತದಿಂದ ಅನಂತಕ್ಕೆ ಸಾವಿರದೊಂದು ರಥದ ಗಾಲಿ. ಸಾವಿನಿಂದ ಚೈತನ್ಯ ಸ್ಥಗಿತವಾಗುವುದಿಲ್ಲ. ನಿಲ್ಲುವುದಿಲ್ಲ, ಅಳಿಯುವುದಿಲ್ಲ. ಅಳಿಯುವುದು ದೇಹ ಮಾತ್ರ. ಚೈತನ್ಯ ಆತ್ಮದ ನಾಗಾಲೋಟಕ್ಕೆ ಕೊನೆಯಿಲ್ಲ. ಅದು ಗಾಳಿಯಂತೆ, ಗಂಧದಂತೆ, ಕಣ್ಣಿಗೆ ಕಾಣದ ಮನದ ವೇಗದಂತೆ, ಬೆಳಕಿನ ಛಾಯೆಯಂತೆ. ನದಿಯ ಹರಿಯುವಿಕೆಯಂತೆ. ಸಾಗರದ ಮಿಲನದಂತೆ. ಅದು ಅನಂತತೆಯ ಬೆಳೆವ ಕೌಶಲ.
ಚೈತನ್ಯಕ್ಕೆ ಮುಖವಿಲ್ಲದ ಸಾವಿರ ಮುಖ. ಕೈಕಾಲಿಲ್ಲದ ಸಾವಿರ ಕೈಕಾಲು, ಹೃದಯ ಬಡಿತವಿಲ್ಲದ ಸಾವಿರ ಹೃದಯಸ್ಪಂದನ. ಚೈತನ್ಯ ಜೀವನ ನಂದನವನ, ಚೈತನ್ಯ ತುಂಬಿದ ನಾವು ಅಮೃತ ಬಿಂದು. ಮಣ್ಣಿನ ಈ ಕೊಡ, ಹಾಲು ಜೇನಿನ ಕೊಡ.” ಎಂದರು ಗುರುಗಳು.
“ಹಾಗಾದರೆ ಹುಟ್ಟು, ಸಾವು ಒಂದು ಶುರು ಒಂದೆ ಕೊನೆಯಿಲ್ಲವೇ? “ಇಲ್ಲ ಶಿಷ್ಯ! ಒಂದು ಅರ್ಥದಲ್ಲಿ ಎರಡೂ ಆದಿಯೇ. ಹುಟ್ಟೊಂದು ಆದಿ, ಸಾವೊಂದು ಹಾದಿಯ ಆದಿ, ಹಾದಿಗೆ ಮತ್ತೆ ಬದುಕುಂಟು, ಬಾಳುಂಟು, ಅಂದಾಗ ಸಾವಿನ ಜೋಡಿಗೆ ಹುಟ್ಟು, ಇದೆಯೆ ವಿನಹ ಸಾವಿಗೆ ಜೋಡಿಯಾಗಿ ಸಾವಿಲ್ಲ.
ಸಾವೆಂಬ ಪದದಲ್ಲಿ ಅಂತ್ಯವಿಲ್ಲ, ಅದು ಅಂತವಿಲ್ಲದ ಅನಂತ. ಸಾವು ಸಾವಿರಕ್ಕೆ ಹೋಗುವದಾರಿ. ಸಾವು ಹೆದರುವ ದಾರಿಯಲ್ಲಿ. ಸಾವು ಚಿಗುರಿಗೆ, ಚಿನ್ಮಯಕೆ ಕೈ ಬೆರಳು, ತೋರು ಬೆರಳು, ಚಿಲುಮೆಯ ಚಿರಂತನಕ್ಕೆ ಕೈ ತೋರುವ ಕುರುಹು ಎಂದಾಗ ಶಿಷ್ಯ ಧ್ಯಾನ ಮಗ್ನನಾಗಿ ಮತ್ತೆ ಪ್ರಶ್ನಿಸಿದ.
“ಗುರುವೆ! ಹಾಗಾದರೆ ಸಾವಿಗೇಕೆ ಜನರು ಅಂಜುತ್ತಾರೆ?”
“ಕಾಣದ್ದು ಕತ್ತಲೆ. ತಿಳಿಯದ್ದು ಕಾಡುತ್ತದೆ. ಅದಕ್ಕೆ ಅಂಜುವುದು ಅಲ್ಲ ಕಿರಣ ಮೂಡಿದರೆ ಅಂಜಿಕಯಿಲ್ಲ” ಎಂದರು ಗುರುಗಳು.
“ಗುರುವರ್ಯಾ! ಹುಟ್ಟು ಸಾವು ನಮ್ಮ ಎರಡು ಕಣ್ಣು, ಎರಡು ಕೈಕಾಲು, ಎರಡು ಕಿವಿಯಂತೆ ಅಲ್ಲವೇ?”
“ಅಹುದು ಶಿಷ್ಯ! ಒಂದು ಬುದ್ಧಿ, ಒಂದು ಹೃದಯದಲ್ಲಿ ಇವೆರಡನ್ನೂ ತುಂಬಿ ಒಂದಾಗಿ ಮಾಡಿಕೋ ತಿಳಿವುತಂದುಕೋ” ಎಂದಾಗ ಶಿಷ್ಯನ ಎದೆ ತುಂಬಿ ಬಂದಿತು.
*****

















