೧
ಬೆಣ್ಣೆಯಿಲ್ಲದೆ ತುಪ್ಪವನು ಕಾಯ್ಸಿ ತಿಂದುಂಡು
ತೇಗುವೆನು ಎಂದೆಂಬ ಮೂರ್ಖನಂತೆ!
ಸ್ಫೂರ್ತಿಯಿಲ್ಲದೆ ಕವನ ಹೃದಯದಿಂದಲಿ ಬಂದು
ಮನವ ತೂಗುವುದೆಂಬೆ ಹುಚ್ಚನಂತೆ!
೨
ಕಾವ್ಯ ಕನ್ನಿಕೆ ಮಹಾ ಸುಂದರಿಯು ನಿನಗೆಂತು
ಒಲಿಯುವಳೊ ತಿಳಿಗೇಡಿ, ಮರುಗಬೇಡ;
ಭವ್ಯಭವನವಬಯಸಿ, ಕಾಸು ಕಾಣದೆ ತಿರುಗಿ
ಬಳಲಿ ಬೀಳುವಿ ಏಕೆ? ಚಿಂತೆದೂಡ!
೩
ಚೆಲುವುಗೆಲುವನು ಕಂಡು, ಐಸಿರಿಯ ಮನದಂದು,
ಒಲಿದು ಬರುವಾ ಕಾವ್ಯ ಕನ್ಯೆ ಬೇಡ;
ನಲವಿನಲಿ ಹೃದಯ ನೈರ್ಮಲ್ಯವನ್ನರಿದುಲಿದು
ಕೆಲಸಾರೆ ಸ್ವಾಗತವ ಗೈವೆ ನೋಡ!
* * *
ಮನಮೆಚ್ಚಿ ಮೈಗೂಡೆ ಮಾತು ಮಂತ್ರ
ಕನಸು ನನಸಾಗುವುದೆ ಕಾವ್ಯ ತಂತ್ರ
*****
ಬೆಂಗಳೂರು : ೧೯೪೪

















