Home / ಕವನ / ಕವಿತೆ / ಸೂಳೆ

ಸೂಳೆ

ಥೂ….ಸೂಳೆ, ಹೇಸಿ ಪಾಪದ ಹೆಣ್ಣು
ಇವಳ ಬಾಳೇನಿಹುದು ಹಾಳು ಮಣ್ಣು
ಊರ ಕೇರಿಯ ಹೊಲಸು ಕೊಳಚೆಯಿಹ ಬೀದಿಯಲಿ
ದೇಹದಂಗಡಿಯಿಟ್ಟು ಯಜಮಾನಿಕೆ
ಗರತಿಯರ ಎದುರಿನಲಿ ಎದೆಗಾರಿಕೆ
ಎಂದು ಜನ ಕಂಡಂತೆ, ರಾಮ ಸೀತೆಯರಂತೆ
ಬಾಳಿ ಬದುಕುವ ತೆರದಿ ನುಡಿವ ಸೊಲ್ಲು
ತೆರೆದ ಹಲ್ಲು…..!
ಅವರಿವರ ಸಂಸ್ಕೃತಿಗೆ ಮತ್ತೆ ನಾಗರಿಕತೆಗೆ
ಇವಳ ಕಥೆ ಸರಿಯಾಗಿ ಸಾಗಬೇಕು;
ಇವಳಿಲ್ಲದೇ ಜಗದ ಬಾಳ ಗೋಳಿನ ಕಥೆಗೆ
ಯಾರು ಮುನ್ನುಡಿಯನ್ನು ಬರೆಯಬೇಕು?
ಹರಿನಾಮದ ಆಚಾರ್ಯರು
ಹಣೆಯ ತುಂಬ ವೀಭೂತಿಯ ಪಟ್ಟ ಹೊತ್ತ ಶರಣರು
ಮೂರು ಹೊತ್ತು ನೀರ ಮುಳುಗಿ ಮಂತ್ರ ತಂತ್ರ ಭಟ್ಟರು
ಹೊಟ್ಟೆ, ಹೊತ್ತ ಶೆಟ್ಟರು
ಕತ್ತಲಲ್ಲಿ ಕದ್ದು ಬಂದು ಇವಳ ಗುಡಿಯ ಭಕ್ತರು
ನೀತಿಯಿಂದ ಮುಕ್ತರು.
ಆದರೂನು ಇರುಳು ಕಳೆದು ಹಗಲು ಬರಲು ಮಾನ್ಯರು
ಮಹಾ ಶೀಲವಂತರು!
ಇವಳೋರ್ವಳೆ ಸೂಳೆಯೆಂದು
ಹೊಲಸು ಹೇಸಿ ಪಾಪಿಯೆಂದು
ಇವಳಿಂದಲೇ ಈ ಸಮಾಜ
ಅಧೋಗತಿಗೆ ಇಳಿಯಿತೆಂದು ವಿಷವ ಕಾರಿ ನುಡಿವರು
ಪಿಸಿ….ಪಿಸಿ….ಪಿಸಿ…. ನಗುವರು.
ವಿಧವೆಯ ಬಾಳ್- ಹಾಳಾಗಿದೆ ಮರಳಿ ಮದುವೆಯಾಗದೆ
ಹೇಗಾದರು ದಾಟಬೇಕು ಕಾಮಕಡಲ ದೈವವೆ
ಕಣ್ಣೀರಿನ ಆಸರೆ!
ಯಾರೊ ಕೊಟ್ಟ ಶಾಪದಲ್ಲಿ
ದೇಹದುರಿಯ ತಾಪದಲ್ಲಿ
ಹಾಗು ಹೀಗು “ಹೀಗಾಯಿತು” ಅಯ್ಯೋ ಕಾಲು ಜಾರಿತು
ದೇಹ ನೀರಿಗುರುಳಿತು!
ಮದುವೆಯಾಗಲಿಲ್ಲವೆಂದು ಸ್ಕೂಲಿನಲ್ಲಿ ಶಿಕ್ಷಕಿ
ಸೆರಗ ಸರಸಿ ಕಣ್ಣ ಬಲೆಯ ಬೀಸಿ ಬರುವ ನರ್ತಕಿ
ಹಾಸ್ಪಿಟಲ್ಲು ನರ್ಸಾಯಿತು ಬಿಳಿಯುಡಿಗೆಯ ಚಾಕರಿ
ಅಡುಗೆ ಮನೆಗೆ ಶರಣು ಹೊಡೆದು ಆಫೀಸಿನ ನೌಕರಿ
ಕಾಲೇಜಿನ ಕಥೆಯಾಯಿತು
ದೇಹ ಬೆಳೆದು ಬಂದಿತು!
ದೈವ ಕೃಪೆಯದೆಂತೊ ಏನೊ ಭ್ರೂಣಹತ್ಯವಾಯಿತು
ಬಾವಿ ಕೆರೆಯ ಪಾಲಾಯಿತು ಆಯುಷ್ಯವೆ ತೀರಿತು!
ಮಡಿವಂತರ ಮೂಲೋಕದಿ ಇದೊ ಇದೂ ನ್ಯಾಯ ನೀತಿ
ಶಿಲಕೆ ಪಂಚಾರತಿ!
ಮನೆ ಮನೆಯಲಿ ತೆರೆಯ ಮರೆಗೆ ಎಂಥದಯ್ಯೊ ನಾಟಕ
ರಾಮಾಯಣ ಭಾರತ!
ನಿನ್ನ ಮುಖದಿ ಏನಿಹುದೋ ಈಗಾದರು ನೋಡಿ ನಗು
ಹೊಲಸು ಕಪ್ಪು ಕಲೆಯನೆಲ್ಲ ಬೇಗ ಬೇಗ ಅಳಿಸಿಬಿಡು
ನಂತರ….
ಸೂಳೆ ಕಥೆಯ ಕೇಳಿ ಒಮ್ಮೆ ನೀನೂನು ಅತ್ತುಬಿಡು.
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...